ಅವಳು ತಾಳಿ ಕಟ್ಟಿದವನನ್ನು ಜೈಲ್ ಸೇರಿಸಿದಳು
ಅನುಮಾನದ ಹುತ್ತ: ಇವತ್ತು ಕೆ.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಹುಡುಗಿ ಮತ್ತು ಅವಳನ್ನು ಕಿಡ್ನಾಪ್ ಮಾಡಿ ಬಲತ್ಕಾರವಾಗಿ ತಾಳಿ ಕಟ್ಟಿದ ಆರೋಪದಡಿ ಜೈಲ್ ಸೇರಿರುವ ಆಟೋ ಡ್ರೈವರ್ ಇವರಿಬ್ಬರ ಹಿನ್ನಲೆ ಹಾಗೂ ಅವರಿಬ್ಬರು ಮದುವೆಯ ಸಂದರ್ಭ ತೆಗೆಸಿಕೊಂಡಿರುವ ಫೋಟೋಗಳನ್ನು ನೋಡಿದರೆ ಅವರಿಬ್ಬರು ಪ್ರೀತಿಸಿದ್ದು, ಮನೆಯಿಂದ ಓಡಿ ಬಂದು ಮದುವೆಯಾಗಿದ್ದು ಎಲ್ಲಾ ನಿಜ ಎಂಬುವುದು ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಆದರೆ ಹುಡುಗಿ ಒತ್ತಡಕ್ಕೆ ಮಣಿದು ಕೊನೆಗಳಿಗೆಯಲ್ಲಿ ಮನಸ್ಸು ಬದಲಾಯಿಸಿ ಪ್ರಿಯಕರ ಕಟ್ಟಿದ ತಾಳಿಯನ್ನೇ ಕಿತ್ತು ಬಿಸಾಕಿ ಆತ ನನ್ನ ಕಿಡ್ನಾಪ್ ಮಾಡಿ ಬಲತ್ಕಾರವಾಗಿ ತಾಳಿ ಕಟ್ಟಿದ ಎಂಬ ದೂರು ನೀಡಿ ಜೈಲಿಗೆ ಕಳುಹಿಸಿದ್ದಾಳೆ ಎಂಬುವುದು ಕೂಡ ಅಷ್ಟೇ ಸತ್ಯ. ಈ ಪ್ರಕರಣದ ಬಗ್ಗೆ ಕೆದಕುತ್ತಾ ಹೋದಂತೆ ಅನುಮಾನದ ಹುತ್ತ ಬೆಳೆಯುತ್ತಾ ಹೋಗುತ್ತದೆ.
ಆಟೋಡ್ರೈವರ್ ಪರಿಚಯ: ಅವಳು ಸ್ವಪ್ನಾ... ಕೆ.ಆರ್.ನಗರದ ಅರ್ಕನಾಥ ರಸ್ತೆ ನಿವಾಸಿ ನಿವೃತ್ತರಾವ್ ಹಾಗೂ ಉಮಾದೇವಿ ದಂಪತಿಗಳ ಪುತ್ರಿ. ಈಕೆ ಕೆ.ಆರ್.ನಗರದ ಪದವಿ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಎ. ವಿದ್ಯಾರ್ಥಿನಿ. ಈ ಹುಡುಗಿ ಓದುವ ವಯಸ್ಸಿನಲ್ಲಿ ಓದದೆ ಎಡವಟ್ಟು ಮಾಡಿಕೊಂಡು ಈಗ ಸುದ್ದಿಗೆ ಗ್ರಾಸವಾಗಿದ್ದಾಳೆ. ದುರಂತವೆಂದರೆ ಇವತ್ತು ಯಾರ ವಿರುದ್ಧ ಅವಳು ದೂರು ನೀಡಿದ್ದಾಳೆಯೋ ಅವರೆಲ್ಲರೂ ಆಕೆಯ ಅಣ್ಣ ಮಂಜುನಾಥನ ಸ್ನೇಹಿತರೇ ಹೊರತು ಅಪರಿಚಿತರಲ್ಲ. ಆಕೆಯ ಅಣ್ಣ ಮಂಜುನಾಥ ಕೂಡ ವೃತ್ತಿಯಲ್ಲಿ ಆಟೋ ಚಾಲಕ. ಈತನಿಗೆ ಆಟೋ ಓಡಿಸುವಾಗ ಮೋಹನ್ ಅಲಿಯಾಸ್ ಮೋಹನಕುಮಾರ್ ಎಂಬಾತ ಪರಿಚಯವಾಗಿ ಕಳೆದ ಕೆಲವು ವರ್ಷಗಳಿಂದ ಸ್ನೇಹಿತರಾಗಿದ್ದರು.
ಹೀಗಾಗಿ ಮೋಹನ್ಕುಮಾರನ್ನು ಆಗಾಗ್ಗೆ ಮಂಜುನಾಥ ತನ್ನ ಮನೆಗೆ ಕರೆದುಕೊಂಡು ಬರುತ್ತಿದ್ದನು. ಅಣ್ಣನ ಫ್ರೆಂಡ್ ಅಂದ ಮೇಲೆ ತಂಗಿ ಸ್ವಪ್ನಾಳಿಗೂ ಪರಿಚಯವಾಗಿ ಒಂದಷ್ಟು ಸಲುಗೆಯೂ ಬೆಳೆದಿತ್ತು. ಇಬ್ಬರು ಒಬ್ಬರನೊಬ್ಬರು ಮಾತನಾಡಿಕೊಳ್ಳುವುದು ನಡೆಯುತ್ತಿತ್ತು. ಅಷ್ಟೇ ಅಲ್ಲ ಮೋಹನ್ ಕುಮಾರ್ ತನ್ನ ಫ್ರೆಂಡ್ಸ್ ಜೊತೆಯಲ್ಲಿ ಕೂಡ ನಾನು ಅವಳನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ ಎನ್ನಲಾಗಿದೆ. ಈ ನಡುವೆ ಮೋಹನ್ಕುಮಾರ್ ತನ್ನ ಇನ್ನಿಬ್ಬರು ಸ್ನೇಹಿತರಾದ ಕಿಶೋರ್ ಹಾಗೂ ದಿಲೀಪ್ ಎಂಬುವರನ್ನು ಪರಿಚಯ ಮಾಡಿಕೊಟ್ಟಿದ್ದ ಎನ್ನಲಾಗಿದೆ. ಇವರಿಬ್ಬರ ಪೈಕಿ ಕಿಶೋರ್ನ ಪರಿಚಯ ಸ್ವಪ್ನಾಳಿಗೆ ಮೊದಲಿನಿಂದಲೇ ತನ್ನ ಅಣ್ಣ ಮಂಜುನಾಥನ ಕಡೆಯಿಂದ ಇತ್ತು ಎಂದು ಆಕೆಯೇ ಹೇಳಿಕೊಂಡಿದ್ದಾಳೆ.
ಮನೆಯಲ್ಲಿ ವಿರೋಧ: ಒಂದು ಮೂಲದ ಪ್ರಕಾರ ಇವರಿಬ್ಬರ ಲವ್ ಸ್ಟೋರಿ ಸ್ವಪ್ನಾಳ ಮನೆಯವರಿಗೆ ಗೊತ್ತಾಗಿ ಅದನ್ನೆಲ್ಲಾ ಬಿಟ್ಟು ಓದಿನ ಕಡೆಗೆ ಗಮನ ಹರಿಸಲು ಹೆತ್ತವರು ಗದರಿಸಿದ್ದರು ಎನ್ನಲಾಗುತ್ತಿದೆ. (ಮೋಹನ್ಕುಮಾರ್ ಅಕ್ಕ ನೇತ್ರಾವತಿ ಹೇಳುವ ಪ್ರಕಾರ ಇವರಿಬ್ಬರ ಲವ್ ಪ್ರಕರಣ ಮೋಹನ್ಕುಮಾರನ ಮನೆಯವರಿಗೂ ತಿಳಿದು ಹುಡುಗಿಯ ಸಹವಾಸಕ್ಕೆ ಹೋಗದಂತೆ ಹಿರಿಯರ ಸಮ್ಮುಖದಲ್ಲಿ ಆತನಿಗೆ ತಾಕೀತು ಮಾಡಲಾಗಿತ್ತಂತೆ.
ಅದರಂತೆ ಕೆಲವು ಸಮಯಗಳವರೆಗೆ ಅವಳಿಂದ ದೂರ ಇದ್ದ ಆತ ಮನಸ್ಸು ತಡೆಯದೆ ಮತ್ತೆ ಅವಳ ಹಿಂದೆ ಬಿದ್ದಿದ್ದನಂತೆ) ಇದಕ್ಕೆ ಕಾರಣವೂ ಇತ್ತು. ಮೋಹನ್ಕುಮಾರ್ಗೆ ಸ್ವಂತ ಮನೆಯಾಗಲೀ, ಆರ್ಥಿಕವಾಗಿಯೂ ಆತ ಸಬಲನಾಗಿರಲಿಲ್ಲ. ಅಂತಹವನಿಗೆ ಮಗಳನ್ನು ಕೊಟ್ಟು ಮದುವೆ ಮಾಡಲು ಸ್ವಪ್ನಾಳ ಹೆತ್ತವರಿಗೆ ಇಷ್ಟ ಇರಲಿಲ್ಲ.
ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಆಕೆ ಪ್ರೀತಿಸೋದನ್ನು ಮುಂದುವರೆಸಿದ್ದಳು ಎನ್ನಲಾಗಿದೆ. ಈ ಮಧ್ಯೆ ಮನೆಯವರ ಒತ್ತಡ ಹೆಚ್ಚಾಗುತ್ತಿದ್ದಂತೆ ಎಲ್ಲಾದರು ಹೋಗಿ ಮದುವೆ ಮಾಡಿಕೊಳ್ಳುವ ತೀರ್ಮಾನಕ್ಕೆ ಇವರಿಬ್ಬರು ಬಂದಿದ್ದಾರೆ. ಅದಕ್ಕೆ ಗೆಳೆಯರ ಸಹಕಾರವನ್ನು ಪಡೆದಿದ್ದಾರೆ. ಸಂಜೆ ಹಾಲು ತರಲೆಂದು ಹೊರ ಹೋದವಳು ಮರಳಿ ಮನೆಗೆ ಹೋಗಿಲ್ಲ. ಅವಳು ಉಟ್ಟ ಬಟ್ಟೆಯಲ್ಲಿಯೇ ಮೋಹನ್ಕುಮಾರ್ನೊಂದಿಗೆ ಹೊರಟು ಬಂದಿದ್ದಾಳೆ.
ಹಾಗೆ ಬಂದವಳನ್ನು ಎಲ್ಲಿಗೆ ಕರೆದುಕೊಂಡು ಹೋಗೋದು ಎಂದು ಆತನಿಗೆ ಗೊತ್ತಾಗದೆ ನೇರವಾಗಿ ಮೈಸೂರಿನ ಮೇಟಗಳ್ಳಿಯಲ್ಲಿರುವ ತನ್ನ ಅಕ್ಕ ನೇತ್ರಾವತಿ ಮನೆಗೆ ಕರೆತಂದಿದ್ದಾನೆ. ದಿಢೀರ್ ಹುಡುಗಿ ಜೊತೆ ತಮ್ಮ ಬಂದಿದ್ದನ್ನು ನೋಡಿದ ಆಕೆ ಹೌಹಾರಿದ್ದಾಳೆ. ಇವರಿಬ್ಬರ ಲವ್ ಸ್ಟೋರಿ ಮೊದಲೇ ಗೊತ್ತಿದ್ದ ಆಕೆ ನಾನು ವಿರೋಧ ಮಾಡಿದರೆ ಎಲ್ಲಿ ಆತ್ಮಹತ್ಯೆ ಮಾಡಿಕೊಂಡರೋ ಎಂಬ ಭಯದಿಂದ ಊಟ, ಬಟ್ಟೆ ಕೊಟ್ಟು ಮನೆಯಲ್ಲಿಟ್ಟು ಕೊಂಡಿದ್ದಾಳೆ. ಹಾಗೆ ಎರಡು ದಿನಗಳ ಕಾಲ ಅಲ್ಲಿ ಕಳೆದಿದ್ದಾರೆ.
ಪೊಲೀಸ್ ಠಾಣೆಗೆ ದೂರು: ಇತ್ತ ಮಗಳು ಮನೆಗೆ ಬಾರದೆ ಹೋದಾಗ ಹೆತ್ತವರು ಆತಂಕಗೊಂಡಿದ್ದಾರೆ. ಅಲ್ಲದೆ ಮಗಳು ಮೋಹನ್ಕುಮಾರ್ ಜೊತೆಯಲ್ಲಿಯೇ ಹೋಗಿದ್ದಾಳೆ ಎಂಬುವುದು ಅರಿವಾಗಿದೆ. ಹಾಗಾಗಿ ನೇರವಾಗಿ ಕೆ.ಆರ್.ನಗರ ಪೊಲೀಸ್ ಠಾಣೆಗೆ ಹೋಗಿ ತನ್ನ ಮಗಳನ್ನು ಮೋಹನ್ಕುಮಾರ್ ಅಪಹರಿಸದ್ದಾಗಿ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿರುವುದು ಗೆಳೆಯರಿಗೆ ಗೊತ್ತಾಗಿದ್ದು, ಅವರು ಮೋಹನ್ಕುಮಾರ್ಗೆ ತಿಳಿಸಿದ್ದಾರೆ.
ಬೇರೆ ದಾರಿ ಕಾಣದೆ ಮೇಟಗಳ್ಳಿಯ ಗಣಪತಿ ದೇವಾಲಯದಲ್ಲಿ ಆತನ ಅಕ್ಕ ನೇತ್ರಾವತಿ ತನ್ನ ಖರ್ಚಿನಲ್ಲಿಯೇ ಮದುವೆ ಮಾಡಿಸಿದ್ದಾಳೆ. ಮದುವೆ ಬಳಿಕ ಸ್ವಪ್ನ ಹಾಗೂ ಮೋಹನ್ಕುಮಾರ್ ಮೇಟಗಳ್ಳಿಯ ನೇತ್ರಾವತಿ ಮನೆಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಅವರಿಬ್ಬರನ್ನು ಹುಡುಕುತ್ತಿದ್ದ ಪೊಲೀಸರಿಗೆ ಮೇಟಗಳ್ಳಿಯಲ್ಲಿರುವುದು ಗೊತ್ತಾಗಿ ಅವರನ್ನು ವಶಕ್ಕೆ ತೆಗೆದುಕೊಂಡು ಜ.೧೫ರಂದು ಕೆ.ಆರ್.ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ತಾಳಿ ಕಿತ್ತು ಎಸೆದಳು: ಅದೇನಾಯಿತೋ ಗೊತ್ತಿಲ್ಲ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆಯೇ ತಾಳಿಯನ್ನು ಕಿತ್ತು ಎಸೆದ ಸ್ವಪ್ನಾ ತನ್ನ ತಂದೆ ತಾಯಿಯ ಎದುರು ಮೋಹನ್ಕುಮಾರ್ ನನ್ನನ್ನು ಅಪಹರಿಸಿ ಬಲತ್ಕಾರವಾಗಿ ತಾಳಿ ಕಟ್ಟಿದ್ದಾಗಿಯೂ ಈತನಿಗೆ ದಿಲೀಪ್, ಕಿಶೋರ್ ಸಹಕರಿಸಿದ್ದಾಗಿ ದೂರು ನೀಡಿದ್ದಾಳೆ. ಅವಳು ನೀಡಿದ ದೂರಿನಂತೆ ಸೆಕ್ಷನ್ 366, 506, 34 ರಂತೆ ಪೊಲೀಸರು ಮೋಹನ್ಕುಮಾರ್ನನ್ನು ಬಂಧಿಸಿ ಜೈಲ್ಗೆ ಕಳಿಸಿದ್ದಾರೆ. ಇದಕ್ಕೆ ಸಹಕರಿಸಿದ ಆರೋಪದ ಮೇರೆಗೆ ಆತನ ಸ್ನೇಹಿತರಾದ ಕಿಶೋರ್ ಹಾಗೂ ದಿಲೀಪ್ ಮೇಲೆಯೂ ಪ್ರಕರಣ ದಾಖಲಿಸಿಕೊಂಡು ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಲವ್ ಮಾಡಿದ್ರೆ ಜೈಲಿಗೆ ಕಳಿಸ್ತಿದ್ನಾ: ಇದು ಸ್ವಪ್ನಾ ಕೇಳೋ ಪ್ರಶ್ನೆ. ನಾನು ಅವನನ್ನು ಲವ್ ಮಾಡ್ಲಿಲ್ಲ. ಅವನೇ ಹಾಗೆ ತಿಳಿದುಕೊಂಡಿದ್ರೆ ಅದು ಅವನ ಕರ್ಮ. ಅವನು ಚಾಕು ತೋರಿಸಿ ಬಲತ್ಕಾರವಾಗಿ ಜೀಪಿಗೆ ಹತ್ತಿಸಿಕೊಂಡು ಹೋಗಿ ತಾಳಿ ಕಟ್ಟಿದ್ದಾನೆ ಅದಕ್ಕೆ ತಾಳಿ ಕಿತ್ತು ಎಸೆದು ಅವನನ್ನು ಜೈಲಿಗೆ ಕಳಿಸಿದ್ದೇನೆ ಎಂಬುವುದಾಗಿ ಸ್ವಪ್ನಾ ಪಟಪಟಾಂತ ಒಂದೇ ಸಮನೆ ಉಸುರುತ್ತಿದ್ದಾಳೆ.
ಆದರೆ ಅವತ್ತು ದೇವಸ್ಥಾನಕ್ಕೆ ಕರೆದೊಯ್ದು ಆತ ಬಲತ್ಕಾರವಾಗಿ ತಾಳಿ ಕಟ್ಟಿದಾಗಲೇ ಸಾರ್ವಜನಿಕರ ಮುಂದೆಯೇ ಅದನ್ನು ವಿರೋಧಿಸ ಬಹುದಿತ್ತಲ್ಲವೆ? ಅದ್ಯಾಕೆ ಮಾಡಿಲ್ಲ ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆ...[ಕ್ರೈಂ]