ಬಂಗಾರಪ್ಪ ಮೊಮ್ಮಕ್ಕಳೊಂದಿಗೆ ಆಡಿಕೊಂಡಿರಲಿ : ಕುಮಾರ್
ಬಂಗಾರಪ್ಪ ಅವರು ಕಾಂಗ್ರೆಸ್ ತೊರೆದು ಜಾತ್ಯತೀತ ಜನತಾದಳ ಸೇರುತ್ತಿರುವ ಹಿನ್ನೆಲೆಯಲ್ಲಿ ನವದೆಹಲಿಗೆ ಧಾವಿಸಿರುವ ಕುಮಾರ್ ಬಂಗಾರಪ್ಪ ಪಕ್ಷದ ಹಿರಿಯರನ್ನು ಭೇಟಿ ಮಾಡಿ ಸದ್ಯದ ರಾಜಕೀಯ ಬೆಳವಣಿಗಳ ಬಗ್ಗೆ ವಿವರಿಸಿದ್ದಾರೆ.
ಬಂಗಾರಪ್ಪನವರು ಹಿಂದುಳಿದ ಜನಾಂಗದ ನಾಯಕರೆಂದು ಗುರುತಿಸಿಕೊಂಡಿದ್ದರು. ಈಗ ಪಕ್ಷಾಂತರ ಮಾಡುತ್ತಿರುವುದು ಹಿಂದುಳಿದ ಯುವಜನತೆಗೆ ಮಾಡುತ್ತಿರುವ ಅನ್ಯಾಯ ಎಂದು ಕುಮಾರ್ ಖಾರವಾಗಿ ನುಡಿದಿದ್ದಾರೆ. ಜೆಡಿಎಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವವೆನ್ನುವುದೇ ಇಲ್ಲ. ಕುಮಾರಸ್ವಾಮಿ ರಾಜ್ಯಾಧ್ಯಕ್ಷ, ಅವರಪ್ಪ ದೇವೇಗೌಡ ರಾಜ್ಯಾಧ್ಯಕ್ಷ, ರೇವಣ್ಣ ಕಾರ್ಯದರ್ಶಿಯಾಗಿದ್ದಾರೆ. ಉಳಿದವರಿಗೆ ಸ್ಥಾನವೂ ಇಲ್ಲ ಮಾನವೂ ಇಲ್ಲ. ಪರಿಸ್ಥಿತಿ ಹೀಗಿರುವಾಗ ಬಂಗಾರಪ್ಪನವರು ಜಾತ್ಯತೀತ ರಾಜಕಾರಣ ಮಾಡುತ್ತೇನೆ ಎಂದು ಹೇಳುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಕುಮಾರ್ ನುಡಿದರು.
ಬಂಗಾರಪ್ಪನವರು ಬೇರೆ ಪಕ್ಷ ಕಟ್ಟಿ ಅಥವಾ ಪಕ್ಷಾಂತರ ಮಾಡಿದ ನಂತರ ಬರೀ ಸೋಲುಂಡಿದ್ದಾರೆ. ಕರ್ನಾಟಕ ವಿಕಾಸ ಪಕ್ಷ ಕಟ್ಟಿ ಅವರು ಸಾಧಿಸಿದ್ದು ಅಷ್ಟರಲ್ಲೇ ಇದೆ. ಬಿಜೆಪಿ ಸೇರಿದ್ರು, ಸಮಾಜವಾದಿ ಪಕ್ಷ ಸೇರಿದ್ರು, ಮತ್ತೆ ಕಾಂಗ್ರೆಸ್ಸಿಗೆ ಬಂದ್ರು. ಈಗ ಮತ್ತೆ ಜೆಡಿಎಸ್ ಗೆ ಸೇರುತ್ತಿದ್ದಾರೆ. ಈ ತರಹದ ಪಕ್ಷಾಂತರ ಅವರಂಥ ಹಿರಿಯ ನಾಯಕರಿಗೆ ಶೋಭೆ ತರುವುದಿಲ್ಲ. ಕಿರಿಯರಿಗೆ ಅವರು ಮಾರ್ಗದರ್ಶನ ನೀಡಬೇಕು. ರಾಜಕೀಯ ಸನ್ಯಾಸ ಪಡೆದು ಮನೆಯಲ್ಲಿ ಮೊಮ್ಮಕ್ಕಳೊಂದಿಗೆ ಆಡಿಕೊಂಡಿರಲಿ ಎಂದು ತಂದೆಗೆ ಕುಮಾರ್ ಸಲಹೆ ನೀಡಿದರು.
ಜೆಡಿಎಸ್ ಸೇರ್ಪಡೆ - ಬಂಗಾರಪ್ಪ ದೃಢ : ಬಂಗಾರಪ್ಪ ಯಾವುದೇ ಕಾರಣಕ್ಕೂ ಕಾಂಗ್ರೆಸ್ ತ್ಯಜಿಸುವುದಿಲ್ಲ ಎಂದು ಕರ್ನಾಟಕದಲ್ಲಿ ರಾಜ್ಯ ನಾಯಕರು ಪುಂಖಾನುಪುಂಖವಾಗಿ ಹೇಳಿಕೆ ನೀಡುತ್ತಿರುವ ನಡುವೆಯೇ ತಾವು ಜೆಡಿಎಸ್ ಸೇರುತ್ತಿರುವುದು ಖಚಿತ ಎಂದು ಬಂಗಾರಪ್ಪ ದೃಢವಾಗಿ ಹೇಳಿದ್ದಾರೆ. ಈ ಕುರಿತು ದೇವೇಗೌಡರೊಡನೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಏಕೆ ತೊರೆಯುತ್ತೇನೆಂಬ ಬಗ್ಗೆ ವಿವರಣೆ ನೀಡುತ್ತೇನೆ ಎಂದು ಬಂಗಾರಪ್ಪ ಹೇಳಿದ್ದಾರೆ.