ಭ್ರಷ್ಟರ ವಿರುದ್ಧ ಜನಾಗ್ರಹ ವೆಬ್ ಹೋರಾಟ
ಇಂದು ಐ ಪೇಯ್ಡಬ್ರೈಬ್.ಕಾಂ ಎಂಬ ವೆಬ್ ಸೈಟ್ ಫೋರಂ ಅನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದ ಜನಾಗ್ರಹದ ಸಹಸ್ಥಾಪಕರಾದ ಸ್ವಾತಿರಾಮನಾಥನ್, ಕಳೆದ ತಿಂಗಳಿನಿಂದ ವೆಬ್ ಸೈಟ್ ಚಾಲನೆಯಲ್ಲಿತ್ತು. ಇದರಲ್ಲಿ ಸಾರ್ವಜನಿಕರ ಅನಿಸಿಕೆ, ಅಭಿಪ್ರಾಯ ಹಾಗೂ ಅನುಭವಗಳನ್ನು ಸಂಗ್ರಹವಿರುತ್ತದೆ. ಅಲ್ಲದೆ ಭ್ರಷ್ಟಾಚಾರ ಪ್ರಕರಣಗಳ ಮಾದರಿ, ಸಂಖ್ಯೆ ,ವಿಧಗಳು, ಸ್ಥಳ, ಮೌಲ್ಯಗಳು ಇತ್ಯಾದಿಯಾಗಿ ವಿಂಗಡಿಸಿ ಭ್ರಷ್ಟಾಚಾರದ ಕಥೆಯನ್ನು ನವಿರಾದ ಜನರ ಮುಂದಿಡಲಾಗುತ್ತದೆ ಎಂದರು.
ಈ ವೆಬ್ ಸೈಟ್ ಗೆ ಈಗಾಗಲೇ 35 ಸಾವಿರ ಹಿಟ್ಸ್ ಸಿಕ್ಕಿದ್ದು, ಸುಮಾರು 109 ದೇಶಗಳ ವೀಕ್ಷ ಕರನ್ನು ಹೊಂದಿದೆ. ಲಂಚ ನೀಡಿದ 535 ಪ್ರಕರಣಗಳ ವರದಿಗಳು ದಾಖಲಾಗಿವೆ. ಇದರಲ್ಲಿ ಸಾರ್ವಜನಿಕರು ಮುಕ್ತವಾಗಿ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಬಹುದು ಎಂದು ಕಾರ್ಯಕ್ರಮ ವ್ಯವಸ್ಥಾಪಕಿ ಆವಂತಿ ಹೇಳಿದರು.
2001ರಲ್ಲಿ ರಮೇಶ್ ರಾಮನಾಥನ್ ಹಾಗೂ ಸ್ವಾತಿ ರಾಮನಾಥನ್ ಅವರಿಂದ ಆರಂಭವಾದ ಜನಾಗ್ರಹ ವೇದಿಕೆ ಸಾರ್ವಜನಿಕರಿಗೆ ಆಡಳಿತದಲ್ಲಿನ ಲೋಪ ದೋಷಗಳನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದೆ. ಆಡಳಿತದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಹೆಚ್ಚು ಒತ್ತು ನೀಡುವ ಜನಾಗ್ರಹ, ಈಗ ವೆಬ್ ಸೈಟ್ [http://ipaidabribe.com/]ಮೂಲಕ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಆರಂಭಿಸಿದೆ.