ಮತ್ತೆ ಗಳಗಳನೆ ಅತ್ತ ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಜೂ.25: ನಗರದ ಅರಮನೆ ಮೈದಾನದಲ್ಲಿ ನಡೆದಿರುವ ಬಿಜೆಪಿ ಸರ್ಕಾರದ 2ನೇ ವರ್ಷ ಆಡಳಿತ ಪೂರೈಸಿದ ಸಂಭ್ರಮಾಚರಣೆಯ 'ಸಾಧನಾ ಸಮಾವೇಶ'ದಲ್ಲಿ ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಅವರು ಮತ್ತೆ ಕಣ್ಣೀರಿಟ್ಟಿದ್ದಾರೆ.
ಯಾವ ತಪ್ಪಿಗಾಗಿ ನನಗೆ ಈ ಶಿಕ್ಷೆ? ನಮ್ಮ ಆಡಳಿತದ ಪ್ರತಿ ಹಂತದಲ್ಲೂ ವಿರೋಧ ಪಕ್ಷಗಳ ಅಭಿಮತಕ್ಕೆ ಬೆಲೆ ನೀಡಿದ್ದೇವೆ. ಆದರೆ, ಟೀಕೆ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿರುವ ಪ್ರತಿಪಕ್ಷಗಳ ನಡೆ, ನಾಡಿನ ಜನತೆಯ ದಿಕ್ಕು ತಪ್ಪಿಸುತ್ತದೆ ಎಂದು ಸಿಎಂ ಕಣ್ಣೀರು ಸುರಿಸಿದರು.
ನಮ್ಮ ಬುದ್ಧಿವಂತಿಕೆಯ ಪ್ರದರ್ಶನ ಮಾಡಲು ಇರುವ ವೇದಿಕೆ ಇದಲ್ಲ. ಜನರ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕಾಗಿದೆ. ದೆಹಲಿಗೆ ಸರ್ವಪಕ್ಷ ನಿಯೋಗ ಹೋಗುವ ಸಂದರ್ಭವಿರಲಿ, ಬಂಡವಾಳ ಹೂಡಿಕೆ ಸಮಾವೇಶ ಇರಲಿ ಯಾವುದಕ್ಕೂ ಪ್ರತಿಪಕ್ಷಗಳು ಸಹಕಾರ ನೀಡಲಿಲ್ಲ.
ರಾಜ್ಯದಲ್ಲಿರುವ ಪ್ರತಿಪಕ್ಷಗಳಿಗೆ ನಮ್ಮಿಂದಆಗಿರುವ ತೊಂದರೆಯಾದರು ಏನು ಎಂದು ಭಾವುಕರಾಗಿ ಪ್ರಶ್ನಿಸಿದ ಸಿಎಂ, ನನಗೆ ಹೆಚ್ಚು ಅವಕಾಶ ನೀಡಿ ಅಂತ ನಾನು ಕೇಳುತ್ತಿಲ್ಲ, ಜನರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ನಾವು ನಡೆದುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಮೂರು ವರ್ಷಗಳ ಕಾಲ ನನಗೆ ಸಹಕಾರ ನೀಡಿ ಎಂದು ಪ್ರತಿಪಕ್ಷಗಳಲ್ಲಿ ಮನವಿ ಮಾಡಿಕೊಂಡರು.