ಸೌಹಾರ್ದಯುತ ಭಟ್ಕಳ ಹನುಮ ರಥೋತ್ಸವಕ್ಕೆ ಸಿದ್ಧತೆ
ಈ ಸಂದರ್ಭದಲ್ಲಿ ಮಾತನಾಡಿದ ತ್ರಿಲೋಕಚಂದ್ರ ಅವರು, ಭಟ್ಕಳದಲ್ಲಿ ಜನರು ಒಗ್ಗಟ್ಟಾದರೆ ಮಾತ್ರ ಸದಾ ಶಾಂತಿ ನೆಲಸಲು ಸಹಕಾರಿಯಾಗುತ್ತದೆ. ಭಟ್ಕಳದ ಬಗ್ಗೆ ಇರುವ ಕಳಂಕವನ್ನು ದೂರಾಗಿಸಲು ಇಲ್ಲಿನ ಜನರು ಮುಂದಾಗಬೇಕು ಎಂದ ಅವರು ಮಾರ್ಚ್ 24ರಂದು ನಡೆಯುವ ರಥೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ಸಮುದಾಯದವರ ಸಹಕಾರ ಅಗತ್ಯ ಎಂದರು.
ಡಿವೈಸ್ಪಿ ವೇದಮೂರ್ತಿ ಮಾತನಾಡಿ, ಜಾತ್ರೆಯಲ್ಲಿ ಈ ಸಲ ಪೊಲೀಸ್ ಬಂದೋಬಸ್ತ್ ಕಡಿಮೆ ಮಾಡಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಏನೇ ಸಮಸ್ಯೆಯಾದರೂ ಸಹ ತಕ್ಷಣ ಇಲಾಖೆಯ ಗಮನಕ್ಕೆ ತರಬೇಕು ಎಂದು ಅವರು ತಿಳಿಸಿದರು.
ಸೇವಾವಾಹಿನಿ ಅಧ್ಯಕ್ಷ ಹಾಗೂ ದೇವಸ್ಥಾನದ ಟ್ರಸ್ಟಿ ಸುರೇಂದ್ರ ಶ್ಯಾನುಭಾಗ ಅವರು ಜಾತ್ರೆಯ ಇತಿಹಾಸವನ್ನು ತಿಳಿಸಿ ಮೂರು ದಿನ ಮುಖ್ಯರಸ್ತೆಯಲ್ಲಿನ ಏಕಮುಖ ಸಂಚಾರ ಸ್ಥಗಿತಗೊಳಿಸಿದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು. ಅದರಂತೆ ಅವರು ಎಲ್ಲಾ ಸಮುದಾಯದವರಲ್ಲೂ ಜಾತ್ರೆಗೆ ಬರುವಂತೆ ಆಹ್ವಾನಿಸಿದರು.
ಮುಂಡಳ್ಳಿ ಚರ್ಚನ ಫಾದರ್ ಅಲ್ಪೆನ್ಸೋ ಸಹ ಭಟ್ಕಳ ರಥೋತ್ಸವ ಯಶಸ್ವಿಯಾಗಿ ನಡೆಯಲು ತಮ್ಮೆಲ್ಲಾ ಸಹಕಾರ ಇದೆ ಎಂದರು. ಚರ್ಕಿನ್ ಕುಟುಂಬದ ಸದಸ್ಯ ಮಹ್ಮದ್ ಅನ್ಸಾರ ಶಾಬಂದ್ರಿ ಭಟ್ಕಳ ಚೆನ್ನಪಟ್ಟಣ ಹನುಮಂತ ದೇವರ ಜಾತ್ರೆ ಸೌಹಾರ್ದತೆಯ ಸಂಕೇತವಾಗಿದೆ ಎಂದರು. ತಂಜೀಂ ಪರವಾಗಿ ಮಾತನಾಡಿದ ಇನಾಯತುಲ್ಲಾ ಶಾಬಂದ್ರಿ, ಜಾತ್ರಾ ಯಶಸ್ವಿಗೆ ಸಹಕಾರ ನೀಡುವುದಾಗಿ ಹೇಳಿದರು. ಸಿಪಿಐ ಗುರು ಮಾಥೂರು ಮೂರು ದಿನಗಳ ಕಾಲ ಮುಖ್ಯ ರಸ್ತೆಯಲ್ಲಿನ ಏಕ ಮುಖ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗುವುದು ಹಾಗೂ ಜಾತ್ರಾ ದಿನ ವೈನ್ ಶಾಪ್ ಹಾಗೂ ಬಾರ್ಗಳನ್ನೂ ಮುಚ್ಚಿಸಲಾಗುವುದು ಎಂದರು.
ಸಭೆಯಲ್ಲಿ ಜಿಪಂ ತಹಶೀಲ್ದಾರ ಎಸ್ಎಂ ನಾಯ್ಕ,ಜಿಪಂ ಸದಸ್ಯ ಎಂಎಂ ನಾಯ್ಕ, ಪುರಸಭಾ ಮುಖ್ಯಾಧಿಕಾರಿ ಕೃಷ್ಣಪ್ಪ, ರಿಕ್ಷಾ ಸಂಘದ ಅಧ್ಯಕ್ಷ ನಾಗರಾಜ ಹೆಗಡೆ, ಕಾರ್ಯದರ್ಶಿ ವೆಂಕಟೇಶ ನಾಯ್ಕ, ಬಿಜೆಪಿ ಅಧ್ಯಕ್ಷ ಕೃಷ್ಣಾ ನಾಯ್ಕ, ಅಬ್ದುಲ್ ರಕೀಬ್, ಟಿ ಡಿ ನಾಯ್ಕ, ಹೆಬಳೆ ಗ್ರಾಪಂ ಅಧ್ಯಕ್ಷ ಪುಂಡಲೀಕ ಹೆಬಳೆ ಮುಂತಾದವರು ಉಪಸ್ಥಿತರಿದ್ದರು.