ಕಾರ್ಲಟನ್ ಅಗ್ನಿ ದುರಂತದಲ್ಲಿ 9 ಜನರ ಸಾವು
ಹತ್ತಿರದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಸುಮಾರು 60 ಜನರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. 19 ಜನರನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿದೆ. ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಹಲವರು ಉಸಿರುಗಟ್ಟಿ ಅಸ್ವಸ್ಥರಾಗಿದ್ದಾರೆ. ಹಲವರಿಗೆ ಸುಟ್ಟ ಗಾಯಗಳಾಗಿವೆ. ಸತ್ತವರಲ್ಲಿ 6 ಪುರುಷರು 6 ಮತ್ತು 3 ಸ್ತ್ರೀಯರಿದ್ದಾರೆ. ಹೆಚ್ಚಿನವರು ಉಸಿರುಗಟ್ಟಿ ಸತ್ತಿದ್ದಾರೆ. ಆಸ್ಪತ್ರೆಯ ಮೂಲಗಳ ಪ್ರಕಾರ ಸಾವಿನ ಸಂಖ್ಯೆ ಹೆಚ್ಚುವ ಸಂಭವವಿದೆ.
ಸತ್ತವರ ಹೆಸರುಗಳು : ಸವಿತಾ, ಅಖಿಲ್ ಉದಯ್, ರಾಜೇಶ್ ಸುಬ್ರಹ್ಮಣ್ಯ, ಬೇನ್ ಜಿ ಕುಮಾರ್, ಸುರಭಿ ಜೋಶಿ, ಪುರೋಹಿತ್ ಮದನ್ ಸಿಂಗ್, ಸುನೀಲ್ ಅಯ್ಯರ್, ಫಯಾಜ್ ಪಾಶಾ, ಸಿದ್ಧಾರ್ಥ್ ಕದಂ ಎಂದು ಗುರುತಿಸಲಾಗಿದೆ.
ಸಾಯಂಕಾಲ ನಾಲ್ಕು ಗಂಟೆಗೆ ಬೆಂಕಿ ಆಕಸ್ಮಿಕ ಸಂಭವಿಸಿದೆ. ಸುಮಾರು 4 ಮುಕ್ಕಾಲಿಗೆ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ. ದಾರಿಹೋಕರೆಲ್ಲ ಕಟ್ಟಡದ ಮುಂದೆ ಜಮಾಯಿಸಿದ್ದರಿಂದ ಮತ್ತು ತೀವ್ರ ವಾಹನ ದಟ್ಟಣೆ ಆಗಿದ್ದರಿಂದ ಅಗ್ನಿಶಾಮಕ ದಳ ಬರುವುದು ತಡವಾಗಿದೆ.
ಕಟ್ಟಡದ ಮೇಲಿಂದ ಪ್ರಾಣ ಉಳಿಸಿಕೊಳ್ಳಲು ಜಿಗಿದಿದ್ದರಿಂದ ಅನೇಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಜಿಗಿದವರಲ್ಲಿ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆ ಸೇರಿದ್ದಾರೆ. ಅಗ್ನಿ ಶಾಮಕ ದಳ ಬರುವ ಮೊದಲೇ ಹೆದರಿಕೆಯಿಂದ ಮಹಿಳೆ ಜಿಗಿದಿದ್ದಾರೆ. ಅಗ್ನಿಶಾಮಕ ದಳ ಬಂದ ನಂತರ ಕೆಳಗಡೆ ಬಲೆಯನ್ನು ಹಿಡಿಯಲಾಗಿತ್ತು. ಅದರ ಮೇಲೆ ಜಿಗಿಯುವ ಪ್ರಯತ್ನದಲ್ಲಿ ಬಲೆಯ ಮೇಲೆ ಜಿಗಿಯದೆ ಪಕ್ಕದಲ್ಲಿ ಬಿದ್ದು ಓರ್ವ ಸತ್ತಿದ್ದಾನೆ ಎನ್ನಲಾಗಿದೆ.
ಹೊಟೇಲು, ಸಾಫ್ಟ್ ವೇರ್ ಸಂಸ್ಥೆ, ಕ್ಲಿನಿಕಲ್ ಸಂಶೋಧನಾ ಸಂಸ್ಥೆ ಸೇರಿದಂತೆ ಅನೇಕ ಕಂಪನಿಗಳು ಇರುವ ಏಳು ಮಹಡಿಗಳ ಕಟ್ಟಡದಲ್ಲಿ ರಕ್ಷಣಾ ಹೊರದಾರಿ ತಿಳಿದಿಲ್ಲದ್ದರಿಂದ ಲಿಫ್ಟ್ ನತ್ತ ಎಲ್ಲರೂ ಧಾವಿಸಿದ್ದಾರೆ. ಲಿಫ್ಟ್ ಕೂಡ ಕೈಕೊಟ್ಟಿದ್ದರಿಂದ ತೀವ್ರ ಆತಂಕಕ್ಕೊಳಗಾದ ಜನ ಗೊಂದಲಕ್ಕೀಡಾಗಿದ್ದಾರೆ. ಕೆಲವರು ಗೋಡೆಯ ಪೈಪ್ ಲೈನ್ ಬಳಸಿ ಇಳಿಯಲು ಪ್ರಯತ್ನಿಸಿದ್ದಾರೆ. ಒಂದಿಬ್ಬರು ಹಗ್ಗಕ್ಕೆ ಜೋತುಬಿದ್ದಿದ್ದು ಪಾರಾಗಲು ಯತ್ನಿಸಿದ್ದಾರೆ.
ಅಗ್ನಿ ಆಕಸ್ಮಿಕ ಸಂಭವಿಸಿದ ಸ್ಥಳಕ್ಕೆ ಮತ್ತು ಮಣಿಪಾಲ್ ಆಸ್ಪತ್ರೆಗೆ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಗ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭೇಟಿ ನೀಡಿದರು. 9 ಜನ ಸತ್ತಿರುವುದನ್ನು ಸಿಂಗ್ ಕೂಡ ದೃಢಪಡಿಸಿದ್ದಾರೆ.
ಆಪತ್ತು ನಿರ್ವಹಣೆ : ನಮ್ಮಲ್ಲೆಷ್ಟಿದೆ ಜಾಗೃತಿ?