ವರುಣ್ ವಿವಾದಾತ್ಮರ ಹೇಳಿಕೆ ನಕಲಿ ಅಲ್ಲ : ವರದಿ
ನವದೆಹಲಿ, ಜೂ. 21 : ಲೋಕಸಭೆ ಫಲಿತಾಂಶದ ನಂತರ ಜರ್ಜರಿತಗೊಂಡಿರುವ ಬೆನ್ನಲ್ಲೇ ಬಿಜೆಪಿಗೆ ಮತ್ತೊಂದು ಹೊಡೆತ ಬಿದ್ದಿದೆ. ಪಿಲಿಭೀತ್ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವರುಣ್ ಗಾಂಧಿ ಹೇಳಿಕೆ ನಕಲಿ ಅಲ್ಲ ಹಾಗೂ ಭಾಷಣವನ್ನು ತಿರುಚಿಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ವರದಿ ನೀಡಿದ್ದಾರೆ.
ಹೈದರಾಬಾದ್ ನ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ತಮ್ಮ ವರದಿಯನ್ನು ಪಿಲಿಭೀತ್ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವರುಣ್ ಗಾಂಧಿ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಇದರಿಂದ ಮಾಯಾವತಿ ನೇತೃತ್ವದ ಉತ್ತರ ಪ್ರದೇಶ ಸರಕಾರ ರಾಷ್ಟ್ರೀಯ ರಕ್ಷಣಾ ಕಾಯ್ದೆಯಡಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು.
ವರುಣ್ ಗಾಂಧಿ ಅವರು ಆರೋಪಿಸಿದಂತೆ ಭಾಷಣದ ಸಿಡಿಗಳು ನಕಲಿ ಅಲ್ಲ. ಅವುಗಳನ್ನು ತಿರುಚಲಾಗಿಲ್ಲ ಎಂದು ವಿಧಿ ವಿಜ್ಞಾನ ತಜ್ಞರು ಸ್ಪಷ್ಟಪಡಿಸಿದ್ದಾರೆ. ತಮ್ಮ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದ್ದರಿಂದ ವರುಣ್ ಗಾಂಧಿ, ನನ್ನ ಭಾಷಣದ ಸಿಡಿಗಳನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದರು. ವರುಣ್ ಗಾಂಧಿ ಪಿಲಿಭಿತ್ ಲೋಕಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.
(ಏಜನ್ಸೀಸ್)