ಟೆಕ್ ಮಹಿಂದ್ರ ಕೈಗೆ ಸತ್ಯಂ ಕಂಪ್ಯೂಟರ್ಸ್
ಬಿಡ್ ನಲ್ಲಿ ಪ್ರಮುಖ ಕಂಪನಿಗಳಾದ ಲಾರ್ಸನ್ ಅಂಡ್ ಟರ್ಬೋ, ಕಾಗ್ನಿಜೆಂಟ್, ಟೆಕ್ ಮಹಿಂದ್ರ ಕಂಪನಿಗೆ ತೀವ್ರ ಪೈಪೋಟಿ ನೀಡಿತ್ತು. ಕೊನೆಗೂ ಟೆಕ್ ಮಹಿಂದ್ರ ಕಂಪನಿ ಸತ್ಯಂ ಕಂಪನಿಯ ಪ್ರತಿ ಷೇರುಗೆ 58 ರುಪಾಯಿಯಂತೆ, ಕಂಪನಿಯ ಶೇ. 31 ರಷ್ಟು ಅಂದರೆ ಒಟ್ಟು 1757 ಕೋಟಿ ರುಪಾಯಿಗಳನ್ನು ಪಾವತಿಸಿ ಕಂಪನಿಯನ್ನು ತನ್ನದಾಗಿಸಿಕೊಂಡಿತು.
ಸತ್ಯಂ ಹಗರಣ ಬೆಳಕಿಗೆ ಬಂದ ನಂತರ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ನಾಸ್ಕಾಮ್ ಮಾಜಿ ಅಧ್ಯಕ್ಷ ಕಿರಣ್ ಕಾರ್ಣೀಕ್ ನೇತೃತ್ವದ ನೂತನ ಸಮಿತಿಯ ರಚಿಸಿ ಅವರಿಗೆ ಜವಾಬ್ದಾರಿಯನ್ನು ವಹಿಸಿತ್ತು. ಆಗ ಸತ್ಯಂ ಕಂಪನಿಯನ್ನು ಕೊಳ್ಳಲು ಅನೇಕ ಸಾಫ್ಟವೇರ್ ಕಂಪನಿ ಮುಂದೆ ಬಂದವು. ಮುಖ್ಯವಾಗಿ ಸ್ಪೈಸ್, ಕಾಗ್ನಿಜೆಂಟ್, ಐಬಿಎಂ ಕಂಪನಿಗಳು ಸೇರಿದ್ದವು. ಇಂದು ನಡೆದ ಅಂತಿಮ ಬಿಡ್ ನಲ್ಲಿ ಸ್ಪೈಸ್ ಕಂಪನಿ ಭಾಗವಹಿಸಿರಲಿಲ್ಲ ಎಂದು ಸ್ಪೈಸ್ ಚೇರ್ ಮನ್ ಬಿ ಕೆ ಮೋದಿ ಹೇಳಿದ್ದಾರೆ.
ಸತ್ಯಂ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ರಾಮಲಿಂಗರಾಜು ಮಾಡಿದ ಗೋಲ್ ಮಾಲ್ ಪ್ರಕರಣದಿಂದ ಕಂಪನಿಯ ಮುಳುಗುವ ಹಡಗಿನಂತಾಗಿತ್ತು. ರಾಮಲಿಂಗರಾಜು ಅವರು ಕಂಪನಿಯ ಸುಮಾರು 8 ಸಾವಿರ ಕೋಟಿ ರುಪಾಯಿಗಳಿಗೆ ನಾಮ ಹಾಕಿದ್ದರು. ಸದ್ಯ ಗೋಲ್ ಮಾಲ್ ರಾಜು ಕಂಬಿಗಳ ಹಿಂದೆ ಇದ್ದಾರೆ. ಸತ್ಯಂ ಕಂಪನಿಯ ಹಣಕಾಸು ಅಧಿಕಾರಿ ವದ್ಲಮಣಿ ಶ್ರೀನಿವಾಸ್ ಅವರನ್ನು ಕೂಡಾ ಬಂಧಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)