ವಿಶ್ವಸಂಸ್ಥೆ ಮಾಜಿ ಉಪಕಾರ್ಯದರ್ಶಿ ಶಶಿ ತರೂರ್ ಸ್ಪರ್ಧೆ
ನವದೆಹಲಿ, ಮಾ. 20 : ವಿಶ್ವಸಂಸ್ಥೆಯ ಮಾಜಿ ಉಪಮಹಾಕಾರ್ಯದರ್ಶಿ ಶಶಿ ತರೂರ್ ಅವರು ತಿರುವನಂತಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ತರೂರ್ ಅವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ವೈಯಕ್ತಿಕ ಆಯ್ಕೆ ಎಂದು ಹೇಳಲಾಗಿದೆ. ಗುರುವಾರ ನಡೆದ ಎಐಸಿಸಿ ಸಭೆಯಲ್ಲಿ ತರೂರ್ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.
ಕೇರಳದ ಪಾಲಕ್ಕಾಡ್ ನವರಾದ ತರೂರ್, 2006 ರಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಭಾರತದ ಅಭ್ಯರ್ಥಿಯಾಗಿದ್ದರು. ಕೋಫಿ ಅನ್ನಾನ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ತರೂರ್ ರೂಪದಲ್ಲಿ ಭಾರತ ಭಾರಿ ಪ್ರಯತ್ನ ನಡೆಸಿತ್ತಾದರೂ ಕೊನೆ ಕ್ಷಣದಲ್ಲಿ ಭಾರತ ಸ್ಪರ್ಧೆಯಿಂದ ಹಿಂದೆ ಸರಿದಿತ್ತು.1956 ರಲ್ಲಿ ಲಂಡನ್ ನಲ್ಲಿ ಜನಿಸಿದ ತರೂರ್, ಕಳೆದ ವರ್ಷದ ವಿದೇಶಾಂಗ ವ್ಯವಹಾರ ಸಚಿವರಾಗುವ ನಿರೀಕ್ಷೆ ಇತ್ತು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಇದಕ್ಕೆ ಭಿನ್ನಮತ ಏರ್ಪಟ್ಟ ಕಾರಣ ಅದು ಕಾರ್ಯರೂಪಕ್ಕೆ ಬರಲಿಲ್ಲ.
ಕಾಂಗ್ರೆಸ್ ಪಕ್ಷ ಅವಕಾಶ ನೀಡಿದ್ದಕ್ಕೆ ಅತೀವ ಸಂತಸ ವ್ಯಕ್ತಪಡಿಸಿರುವ ತರೂರ್, ಇದೊಂದು ದೊಡ್ಡ ಸವಾಲು, ಉಳಿದಿರುವ ಕಡಿಮೆ ಅವಧಿಯಲ್ಲಿ ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡಲು ಯತ್ನಿಸುವುದಾಗಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)