ನರಭಕ್ಷಕ ಮಣಿಂದರ್ , ಸುರಿಂದರ್ ಗೆ ಮರಣದಂಡನೆ
ಗಾಜಿಯಾಬಾದ್, ಫೆ. 13 : ನಿತಾರಿ ಸರಣಿ ಕೊಲೆಯಲ್ಲಿ ಅಪರಾಧಿಯಾಗಿದ್ದ ಮಣಿಂದರ್ ಸಿಂಗ್ ಪಂಧೇರ್ ಹಾಗೂ ಸುರಿಂದರ್ ಕೊಲಿಗೆ ಇಂದು ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ಮೂಲಕ ಅನೇಕ ದಿನಗಳಿಂದ ತೀವ್ರ ಕುತೂಹಲಕ್ಕೆ ಕಾರಣ ಸರಣಿ ಹತ್ಯಾ ಪ್ರಕರಣವೊಂದು ಅಂತ್ಯಗೊಂಡಂತಾಗಿದೆ.
ನಿತಾರಿ ಸರಣಿ ಕೊಲೆಯಲ್ಲಿ ಸುರಿಂದರ್ ಕೊಲಿ ಹಾಗೂ ಮಣಿಂದರ್ ಸಿಂಗ್ ಪಂಧೇರ್ ಇಬ್ಬರು 14 ವರ್ಷ ರಿಂಪಾ ಹಲ್ದಾರ್ ಎನ್ನುವ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊನೆಗೆ ಹತ್ಯೆ ಮಾಡಿರುವುದು ಸೇರಿ ಒಟ್ಟು 19 ಪ್ರಕರಣಗಳಲ್ಲಿ ಸಿಬಿಐ ಭೇದಿಸಿತ್ತು. ಗುರುವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈ ಇಬ್ಬರು ಆರೋಪಿಗಳನ್ನು ಅಪರಾಧಿಗಳೆಂದು ಹೇಳಿತ್ತು. ಶಿಕ್ಷೆ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ಹೇಳಿತ್ತು.
ಇಂದು ಅಂತಿಮ ಹಂತದ ವಿಚಾರಣೆಯನ್ನು ಕೇವಲ ಅರ್ಧ ಗಂಟೆಯಲ್ಲಿ ಮುಗಿಸಿದ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿಗಳಾದ ರಾಮ್ ಜೈನ್ ಅವರು ಇಬ್ಬರೂ ಆಪರಾಧಿಗಳಿಗೆ ಮರಣದಂಡನೆ ಶಿಕ್ಷೆ ಘೋಷಿಸಿದ್ದಾರೆ. ಇದಕ್ಕೂ ಮುನ್ನ ಸಿಬಿಐ ಪರ ವಕೀಲ ಪಿಸಿ ಅಹ್ಲುವಾಲಿಯಾ ಅವರು, ಈ ಇಬ್ಬರು ಬದುಕಿರಲು ಯೋಗ್ಯರಲ್ಲ. 18 ಮಕ್ಕಳನ್ನು ಕೊಂದಿರುವ ಇವರು, ರಿಂಪಾ ಹಲ್ದಾರ್ ಎನ್ನುವ 14 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಅಪರಾಧಿಗಳಿಗೆ ಮರಣದಂಡನೆಯೇ ಸರಿಯಾದ ಶಿಕ್ಷೆ. ಆದ್ದರಿಂದ ಘನ ನ್ಯಾಯಾಲಯ ಅವರಿಗೆ ಉಗ್ರ ಶಿಕ್ಷೆಯನ್ನು ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಉತ್ತರ ಪ್ರದೇಶದ ನೊಯ್ಡಾದ ಬಳಿ ಇರುವ ನಿತಾರಿ ಎನ್ನುವ ಗ್ರಾಮದವನಾದ ಮಣಿಂದರ್ ಪಂಧೇರ್, ತನ್ನ ಮನೆಯಲ್ಲಿ ಈ ಕೃತ್ಯ ಎಸಗಿದ್ದ.
(ದಟ್ಸ್ ಕನ್ನಡ ವಾರ್ತೆ)