ಪಾಕ್ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ:ಪ್ರಣಬ್
ನವದೆಹಲಿ. ಡಿ. 22 : ಭಯೋತ್ಪಾದನೆ ದಮನಕ್ಕೆ ಭಾರತ ತನ್ನ ಬಿಗಿಪಟ್ಟನ್ನು ಮುಂದುವೆರೆಸಿದೆ. ಪಾಕ್ ನಲ್ಲಿ ನೆಲೆಸಿರುವ ಉಗ್ರರನ್ನು ಶಿಕ್ಷಿಸಿ ಇಲ್ಲವೇ ಭಾರತಕ್ಕೆ ಹಸ್ತಾಂತರಿಸಿ ಎಂದು ಕೇಂದ್ರ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಮತ್ತೊಂದು ಬಾರಿ ಪಾಕಿಸ್ತಾನ ಸರ್ಕಾರವನ್ನು ಆಗ್ರಹಿಸಿದ್ದಾರೆ. ಉಗ್ರರನ್ನು ಮಟ್ಟ ಹಾಕುವ ವಿಷಯದಲ್ಲಿ ಭಾರತ ಪಾಕಿಸ್ತಾನಕ್ಕೆ ಎಲ್ಲ ನೆರವನ್ನು ನೀಡಲಿದೆ. ಆದರೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ನೇರವಾಗಿ ಪಾಕ್ ಗೆ ಎಚ್ಚರಿಕೆ ನೀಡಿದರು.
ಇಂದು ನವದೆಹಲಿಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ಭಾರತೀಯ ರಾಯಭಾರಿಗಳ ಮಹತ್ವದ ಸಭೆಯ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾಕ್ ನಲ್ಲಿ ಅಡಗಿರುವ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸುವವರೆಗೂ ಬಿಗಿಪಟ್ಟು ಸಡಿಲಿಸುವ ಮಾತೇ ಇಲ್ಲ ಎಂದರು. ಭಾರತದೊಂದಿಗೆ ಯುದ್ಧ ಮಾಡಲು ಪಾಕ್ ರೆಡಿ ಎನ್ನುವ ಹೇಳಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಣಬ್, ಭಾರತ ಈಗಾಗಲೇ ಹೇಳಬೇಕಾಗಿದ್ದನ್ನೆಲ್ಲಾ ಹೇಳಿಯಾಗಿದೆ. ಮುಂದಿನ ಕ್ರಮವನ್ನು ಶೀಘ್ರದಲ್ಲಿ ಕೈಗೊಳ್ಳಲಿದ್ದೇವೆ ಎಂದು ತೀಕ್ಷ್ಣವಾಗಿ ಪಾಕ್ ಗೆ ತಿರುಗೇಟು ನೀಡಿದರು.
ಗಡಿ ಪ್ರದೇಶದಲ್ಲಿ ಭಾರತೀಯ ಯುದ್ಧ ವಿಮಾನಗಳು ಯುದ್ಧಕ್ಕೆ ಸನ್ನದ್ಧವಾಗಿ ನಿಂತಿವೆ ಎನ್ನುವ ಜಾಗತಿಕ ಗುಪ್ತಚರ ಇಲಾಖೆ ಬಹಿರಂಗಗೊಳಿಸಿರುವ ಮಾಹಿತಿಗೆ ಉತ್ತರಿಸಿದ ಅವರು, ಅದನ್ನೆಲ್ಲಾ ಮಾಧ್ಯಮದ ಮುಂದೆ ಹೇಳುವ ವಿಷಯವಲ್ಲ ಎಂದಷ್ಟೇ ಹೇಳಿ ಜಾಣತನದಿಂದ ಜಾರಿಕೊಂಡರು. ಒಂದೇ ಮಾತಿನಲ್ಲಿ ಹೇಳುವುದಾದರೆ, ಪಾಕಿಸ್ತಾನ ತಾನು ಕೊಟ್ಟ ಮಾತು ಹಾಗೂ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಮುಂಬೈ ದಾಳಿಗೆ ಸಂಬಂಧಿಸಿದ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಿಬೇಕು ಎನ್ನುವುದು ಭಾರತದ ಮನವಿ ಹಾಗೂ ಆದೇಶವಾಗಿದೆ. ತಪ್ಪಿದಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಖಾರವಾಗಿ ಹೇಳಿದರು.
(ದಟ್ಸ್
ಕನ್ನಡ
ವಾರ್ತೆ)
ದಿಲ್ಲಿಯಲ್ಲಿ
ಭಾರತೀಯ
ರಾಯಭಾರಿಗಳ
ಸಭೆ