ಖೇಣಿ ಜತೆ ಬಿಜೆಪಿಗೆ ಅಕ್ರಮ ಸಂಬಂಧವಿದೆ: ಎಚ್ಡಿಕೆ
ಬೆಂಗಳೂರು, ಡಿ. 22 : ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ನೈಸ್ ಕಂಪನಿಯ ಅಶೋಕ್ ಖೇಣಿ ಅವರಿಗೆ ಮಾರಾಟವಾಗಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಟೀಕಿಸಿದರು. ಅರಭಾವಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನೈಸ್ ಕಂಪನಿ ಶುಲ್ಕಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ನೈಸ್ ಭ್ರಷ್ಟಾಚಾರದಲ್ಲಿ ಯಡಿಯೂರಪ್ಪ ಮತ್ತು ಅವರ ಸಂಪುಟ ಕೆಲ ಸಚಿವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ನಾನು ಮುಖ್ಯಮಂತ್ರಿಯಾಗಿದ್ದ ಗಳಿಗೆಯಲ್ಲಿ ನೈಸ್ ಕಂಪನಿಗೆ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಮಹತ್ವದ ನಿರ್ಧಾರವನ್ನು ಸಂಪುಟದಲ್ಲಿ ಕೈಗೊಳ್ಳಬೇಕು ಎನ್ನುತ್ತಿರುವಾಗ, ಆಗ ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಸುಮಾರು 6 ಗಂಟೆ ಕಾಲ ಸಂಪುಟ ಸಭೆಯನ್ನು ಬಹಿಷ್ಕರಿಸಿದ್ದರು ಏಕೆ ಎಂದು ಕೋಪ ವ್ಯಕ್ತಪಡಿಸಿದರು.
ಅಲ್ಲಿಂದ ಇಲ್ಲಿಯವರೆಗೆ ಅಶೋಕ್ ಖೇಣಿ ಮತ್ತು ಬಿಜೆಪಿ ಸರ್ಕಾರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧ ಹೇಗಿದೆ ಎನ್ನುವುದು ಗೊತ್ತಿದೆ. ಪ್ರತಿ ಮಾತಿಗೂ ಮಾನನಷ್ಟ ಎಂದು ಬೆದರಿಕೆಯೊಡ್ಡುತ್ತಿರುವ ಯಡಿಯೂರಪ್ಪ ಅವರಿಗೆ ಮಾನವಿದ್ದರೆ ನ್ಯಾಯಾಲಯದ ಮೊರೆ ಹೋಗಲಿ ಎಂದು ಹೇಳಿರುವ ಮಾತಿಗೆ ಬದ್ಧ ಎಂದು ವಿಶ್ವಾಸದಿಂದ ನುಡಿದರು. ಸಂಪುಟ ಸಭೆ ಬಹಿಷ್ಕಾರದ ನಂತರ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಏನೆಲ್ಲಾ ನಡೆಯಿತು. ಖೇಣಿಯಿಂದ ಬಿಜೆಪಿ ಸಚಿವರಿಗೆ ಸಿಕ್ಕ ಉಡುಗೂರೆ ಏನು ಎಂಬುದು ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.
ಮರುಚುನಾವಣೆಯಲ್ಲಿ ಬಿಜೆಪಿ ಸಚಿವರು ಬಹಿರಂಗವಾಗಿ ಹಣ ಹಂಚುತ್ತಿದ್ದಾರೆ. ರಾಜ್ಯ ಚುನಾವಣೆ ಆಯೋಗ ಇದನ್ನೆಲ್ಲಾ ನೋಡಿಕೊಂಡು ಕಣ್ಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದ ಕುಮಾರಸ್ವಾಮಿ, ಬಳ್ಳಾರಿ ರಾಜಕಾರಣಿಗಳು ಅಕ್ರಮವಾಗಿ ಸಂಪಾದಿಸಿದ ಗಣಿ ಹಣದ ರಾಜಕೀಯ ರಾಜ್ಯದ ತುಂಬೆಲ್ಲಾ ಹರಡತೊಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ರಾಜ್ಯಕ್ಕೆ ಆಪತ್ತು ಕಾದಿದೆ ಎಂದು ಹೇಳಿದರು.
(ದಟ್ಸ್
ಕನ್ನಡ
ವಾರ್ತೆ)
ನೈಸ್
ಶುಲ್ಕ,
ಇಂದು
ಇಳಿಕೆ
ಸಾಧ್ಯತೆ