ಬಾಬ್ರಿ ಧ್ವಂಸ ಮುಂಬೈ ದಾಳಿ ಕಾರಣ, ಅನಂತಮೂರ್ತಿ
ಬೆಂಗಳೂರು, ಡಿ. 22 : ಜ್ಞಾನಪೀಠ ಪುರಷ್ಕೃತ ಸಾಹಿತಿ ಡಾ ಯು ಆರ್ ಅನಂತಮೂರ್ತಿ ಅವರಿಗೂ ವಿವಾದಕ್ಕೂ ವಿಶೇಷ ನಂಟು. ಈ ಹಿಂದೆ ಅನೇಕ ವಿವಾದಾತ್ಮಕ ಹೇಳಿಕೆ ನೀಡಿ ಟೇಕೆಗೆ ಗುರಿಯಾಗಿದ್ದ ಅನಂತಮೂರ್ತಿ ಇದೀಗ ತಮ್ಮ ಬತ್ತಳಿಕೆಯಿಂದ ಮತ್ತೊಂದು ಬಾಂಬ್ ಸ್ಫೋಟಿಸಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಭಯೋತ್ಪಾದನೆಗೆ ಆಯೋಧ್ಯ ಧ್ವಂಸವೇ ಕಾರಣ ಎಂದು ಪ್ರತಿಪಾದಿಸಿದ್ದಾರೆ.
ಅಂಕಿತ ಪುಸ್ತಕ ಪ್ರಕಟಿಸಿರುವ ಸದ್ಯ ಮತ್ತು ಶಾಶ್ವತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾನುವಾರ ಅವರು ಮಾತನಾಡಿದರು. ಕೇವಲ 20-22 ವರ್ಷದ ಮುಸ್ಲಿಂ ಯುವಕರು ಗನ್ ಹಿಡಿದು ಸಮುದ್ರದ ಮೂಲಕ ಬಂದು ನಮಗೆ ಗುಂಡು ಹಾರಿಸುತ್ತಾರೆ ಎಂದರೆ ಅವರಲ್ಲಿ ಅಂತಹ ದ್ವೇಷ ಭಾವನೆ ಹುಟ್ಟಿದ್ದಾದರೂ ಹೇಗೆ ಅದನ್ನು ಮೊದಲು ನಾವು ವಿಶ್ಲೇಷಿಸಬೇಕು ಎಂದು ಹೇಳಿದರು.
ಭಯೋತ್ಪಾದನೆ ತಡೆಗೆ ಕೇಂದ್ರ ಸರ್ಕಾರ ಉಗ್ರರನ್ನು ನಿಗ್ರಹಿಸಲು ವಿಶೇಷ ಕಾನೂನು ತಂದಿರುವುದು ಉತ್ತಮ ಬೆಳವಣಿಗೆಯೇ, ಆದರೆ ಈ ಕಾನೂನಿನಡಿ ಕೋಮುವಾದಿ ಸಮಸ್ಯೆ ಹುಟ್ಟುಹಾಕುವವರೂ ಒಳಪಡಬೇಕು. ಇವೆಲ್ಲವುಗಳ ನಡುವೆ ನಮ್ಮ ದೇಶವನ್ನು ಮೊದಲು ಧರ್ಮಾಧಾರಿತ ಸರ್ವಾಧಿಕಾರಿ ಶಕ್ತಿಗಳಿಂದ ಪಾರು ಮಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂಬೈ ಭಯೋತ್ಪಾದನೆ ಸಂದರ್ಭದಲ್ಲಂತೂ ನಮ್ಮ ಇಲೆಕ್ಟ್ರಾನಿಕ್ ಮಾಧ್ಯಮಗಳು ರಾಜಕಾರಣಿಗಳನ್ನು ಮಾತ್ರ ಟೀಕಿಸಲಿಲ್ಲ. ಅವರ ದೃಷ್ಟಿಯಲ್ಲಿ ರಾಜಕಾರಣಿಗಳಿಗಿಂತ ಇನ್ಫೋಸಿಸ್ ಅಧ್ಯಕ್ಷರು ನಮ್ಮ ದೇಶದ ಅಧ್ಯಕ್ಷರಾಗಬೇಕಿತ್ತು ಎನ್ನುವಷ್ಟು ತಿಳುವಳಿಕೆ ರಹಿತ ಸುದ್ದಿಯನ್ನು ಬಿತ್ತರಿಸಿದರು ಎಂದು ಲೇವಡಿ ಮಾಡಿದರು.
(ದಟ್ಸ್ ಕನ್ನಡ ವಾರ್ತೆ)