ಕಂದಹಾರ್ ಅಪಹರಣ;ಮಾಸೂದ್ ಅಜರ್ ಸೆರೆ
ಇಸ್ಲಾಮಾಬಾದ್, ಡಿ. 9 : ಕಂದಹಾರ್ ವಿಮಾನ ಅಪಹರಣ ಪ್ರಕರಣದ ಪ್ರಮುಖ ರೂವಾರಿ, ಜೈಷ್ ಇ ಮೊಹ್ಮದ್ ಸಂಘಟನೆ ಮುಖಂಡ ಮೌಲಾನ ಮಾಸೂದ್ ಅಜರ್ ನನ್ನು ಬಂಧಿಸಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಪಡೆ ನಡೆಸಿದ ಕಾರ್ಯಚರಣೆಯಲ್ಲಿ ಮಾಸೂದ್ ಅಜರ್ ನನ್ನು ಬಹವಾಲ್ ಪುರ್ ದ ಮನೆಯೊಂದರಲ್ಲಿ ಭದ್ರತಾ ಪಡೆ ವಶಕ್ಕೆ ತೆಗೆದುಕೊಂಡಿದೆ ಎನ್ನಲಾಗಿದೆ. ಭಾರತಕ್ಕೆ ಬೇಕಿರುವ ಮೊಸ್ಟ್ ವಾಂಟೆಡ್ ಪಟ್ಟಿಯಲ್ಲಿ ಮಾಸೂದ್ ಅಜರ್ ನ ಹೆಸರು ಪ್ರಮುಖವಾಗಿದೆ.
ಭಾರತ ಮತ್ತು ಅಮೆರಿಕದ ತೀವ್ರ ಒತ್ತಡಕ್ಕೆ ಮಣಿದು ಉಗ್ರರ ಸಂಘಟನೆಗಳ ವಿರುದ್ಧ ಸಮರ ಸಾರಿರುವ ಪಾಕಿಸ್ತಾನ ಭದ್ರತಾ ಪಡೆ ದಾಳಿಯನ್ನು ಮುಂದುವರೆಸಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮುಜಫರಬಾದ್ ನಲ್ಲಿ ನೆಲೆಸಿರುವ ಉಗ್ರ ಸಂಘಚನೆಗಳ ಮೇಲೆ ದಾಳಿ ನಿರಂತರವಾಗಿದೆ. ಸೋಮವಾರ ದಾಳಿ ಪಾಕ್ ಪಡೆ ಮುಂಬೈ ಭಯೋತ್ಪಾದನೆ ಪ್ರಮುಖ ಆರೋಪಿ ಝಾಕೀರ್ ರೆಹೆಮಾನ್ ಲಖ್ವಿ ಸೇರಿದಂತೆ 20 ಮಂದಿಯನ್ನು ವಶಕ್ಕೆ ತೆಗೆದುಕೊಂಡಿತ್ತು.
ಇಂದು ಮಹತ್ವದ ಬೆಳವಣಿಗೆಯಲ್ಲಿ ಮುಂದುವರೆದಿರುವ ಪಾಕ್ ಪಡೆ ಕಾರ್ಯಾಚರಣೆಯಲ್ಲಿ ಕಂದಹಾರ್ ವಿಮಾನ ಅಪಹರಣದ ಪ್ರಮುಖ ಆರೋಪಿ ಮಾಸೂದ್ ಅಜರ್ ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. 1999ರಲ್ಲಿ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಜೈಷ್ ಇ ಮೊಹ್ಮದ್ ಸಂಘಟನೆಯ ಉಗ್ರರು ಭಾರತಕ್ಕೆ ಸೇರಿದ ವಿಮಾನವನ್ನು ಕಠ್ಮಂಡುವಿನಲ್ಲಿ ಅಪಹರಣ ಮಾಡಿ ಕಂದಹಾರನಲ್ಲಿ ನಿಲ್ಲಿಸಿತ್ತು.
ಭಾರತದ ವಶದಲ್ಲಿರುವ ಜೈಷ್ ಇ ಮೊಹ್ಮದ್ ಸಂಘಟನೆಯ ಮುಖಂಡ ಮಾಸೂದ್ ಅಜರ್ ನನ್ನು ಬಿಡುಗಡೆ ಮಾಡಬೇಕು ಎಂದು ಸುಮಾರು 147 ಮಂದಿಯನ್ನು ಒತ್ತೆಯಾಳು ಮಾಡಿಕೊಂಡು ಉಗ್ರರ ತಂಡ ಭಾರತ ಸರ್ಕಾರಕ್ಕೆ ಷರತ್ತು ವಿಧಿಸಿತ್ತು. ಅಜರ್ ನನ್ನು ಬಿಡುಗಡೆ ಮಾಡದಿದ್ದರೆ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆಯನ್ನು ಸಹ ಒಡ್ಡಿತ್ತು. ಉಗ್ರರಿಗೆ ಬೆದರಿಕೆ ಮಣಿದ ಭಾರತದ ಅಂದಿನ ಬಿಜೆಪಿ ಸರ್ಕಾರ ವಿಶೇಷ ವಿಮಾನವೊಂದರಲ್ಲಿ ಮಾಸೂದ್ ಅಜರ್ ನನ್ನು ಕರೆದುಕೊಂಡು ವಿಮಾನವನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸಲು ಸಫಲವಾಗಿತ್ತು. ಆದರೆ ಮಾಸೂದ್ ಸೇರಿ ನಾಲ್ಕು ಭಯೋತ್ಪಾದಕರನ್ನು ಬಿಟ್ಟು ಬಂದಿದ್ದು, ಭಾರತದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
(ದಟ್ಸ್ ಕನ್ನಡ ವಾರ್ತೆ)