10 ಜಿಲ್ಲೆಗಳಲ್ಲಿ ಅಧಿಕ ಮಳೆ, ಕೆಲವೆಡೆ ಹಾನಿ
ಬೆಂಗಳೂರು :ಅಕ್ಟೋಬರ್ ಒಂದರಿಂದ ಇಲ್ಲಿಯವರೆಗೆ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಮುಂಗಾರು ಚುರುಕಾಗಿದೆ. ಈ ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತಲೂ ಅಧಿಕ ಮಳೆ ಬಿದ್ದಿದೆ. ಕಳೆದ ಮೂರು ದಿನಗಳಿಂದ ಬಿದ್ದ ಭಾರಿ ಮಳೆಯಂತೂ ಹತ್ತು ಜನರನ್ನು ಬಲಿ ತೆಗೆದುಕೊಂಡಿದೆ.
ಮಾಸದ ಮೊದಲ ಮೂರು ದಿನ ಬೆಂಗಳೂರು ನಗರ, ಗ್ರಾಮಾಂತರ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಅಧಿಕ ಮಳೆ ಸುರಿದಿದ್ದರೆ, ಕೋಲಾರ, ಚಾಮರಾಜನಗರ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಾಮೂಲು ಮಳೆ ಬಿದ್ದಿದೆ.
ದಾವಣಗೆರೆ, ಕೊಪ್ಪಳ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಸಾಧಾರಣವಾಗಿ ಮಳೆ ಬಿದ್ದಿದೆ. ರಾಜ್ಯದ 175 ತಾಲೂಕುಗಳ ಪೈಕಿ 67 ತಾಲೂಕುಗಳಲ್ಲಿ ಅಧಿಕ ಮಳೆ ಆಗಿದ್ದರೆ 33 ತಾಲೂಕುಗಳಲ್ಲಿ ಮಳೆ ಆಗಿಲ್ಲ. 19 ತಾಲೂಕುಗಳಲ್ಲಿ ಮಾಮೂಲಿನಂತೆಯೂ, 21 ತಾಲೂಕುಗಳಲ್ಲಿ ಸಾಧಾರಣವಾಗಿಯೂ ಹಾಗೂ 22 ತಾಲೂಕುಗಳಲ್ಲಿ ಅಲ್ಪ ಪ್ರಮಾಣದಲ್ಲಿಯೂ ಮಳೆ ಬಿದ್ದಿದೆ.
ಕಳೆದ ವರ್ಷದ ಮುಂಗಾರಿಗೆ ಹೋಲಿಸಿದರೆ, ಈಬಾರಿಯ ಮುಂಗಾರು ಉತ್ತಮವಾಗಿದೆ. ಆದರೆ, ಭಾರಿ ಪ್ರಮಾಣದ ನಷ್ಟ ಉಂಟುಮಾಡದಿದ್ದಿದ್ದರೆ, ಈ ವರ್ಷ ಇನ್ನೂ ಸುಭಿಕ್ಷವಾಗಿರುತ್ತಿತ್ತು. ಹಿಂಗಾರಿನ ಬಿತ್ತನೆ ಕಾರ್ಯ ಈಗ ಆರಂಭಗೊಂಡಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಚದುರಿದಂತೆ ಮಳೆ ಆಗಿದೆ. ಭಾನುವಾರದ ಮಳೆಯ ಆರ್ಭಟ ಇಲ್ಲವಾಗಿದೆ. ಉತ್ತರ ಒಳನಾಡು, ಕರಾವಳಿಯ ಕೆಲವೆಡೆ ಅಲ್ಲಲ್ಲಿ ಮಳೆ ಬಿದ್ದಿದೆ. ಬಾಗೇಪಲ್ಲಿಯಲ್ಲಿ ಅತಿ ಹೆಚ್ಚು ಎಂದರೆ 7 ಸೆಂಟಿ ಮೀಟರ್ ಮಳೆ ಆಗಿದೆ. ಚನ್ನರಾಯ ಪಟ್ಟಣದಲ್ಲಿ 6, ಯಲಹಂಕದಲ್ಲಿ 5, ನುಗ್ಗೇಹಳ್ಳಿಯಲ್ಲಿ 4, ಚಿಂತಾಮಣಿಯಲ್ಲಿ 3 ಹಾಗೂ ಮಧುಗಿರಿಯಲ್ಲಿ 2 ಸೆಂಟಿ ಮೀಟರ್ ಮಳೆ ಆಗಿದೆ.
ಮುನ್ಸೂಚನೆಯಂತೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಚದುರಿದಂತೆ ಮಳೆ ಆಗುವ ನಿರೀಕ್ಷೆ ಇದೆ. ಎಚ್ಚರಿಕೆ ನೀಡುವಂತಹ ಬದಲಾವಣೆಗಳ ಸೂಚನೆ ಇಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ತಾಪಮಾನ ಗುಲ್ಬರ್ಗಾ (32ಡಿ.ಸೆ)ದಲ್ಲೂ ಕನಿಷ್ಠ ಉಷ್ಣಾಂಶ ಮೈಸೂರು (19.2 ಡಿ.ಸೆ) ನಲ್ಲೂ ದಾಖಲಾಗಿದೆ.
ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ಒಂದೆರಡು ವರಸೆ ಮಳೆ ಆಗುವ ಸಂಭವ ಇದೆ.