ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣಕಥೆ: ಮೀಸಲಾತಿಗೆ ಬಲಿಯಾದ ಒಂದು ಛೊಲೋ ಪ್ರೀತಿ!

By ರಘುನಂದನ ಶರ್ಮ
|
Google Oneindia Kannada News

"ನಾನು ಛೊಲೋ ಕಾಣಿಸ್ತೀನೇನು ನಿಂಗs?" ಕೇಳಿದಳು ಸುಜಾತೆ. "ಹೂಂ" ಅಂದ ರಮೇಶ. "ನಾ ಅಂದ್ರ ಎಷ್ಟು ಪ್ರೀತಿ ನಿಂಗS?" ಮತ್ತೆ ಕೇಳಿದಳು. "ಭಾsಳ" ಎಂದ. ಭಾಳs ಅಂತಂದ್ರ ಎಷ್ಟು ಭಾಳs? ಅಂತ ಪ್ರಶ್ನೆ ಬಂತು.

ಎಲ್ಲ್ಯಂತ ಹುಡುಕ್ಲ್ಯವಾ ಅದಕ್ಕೂ ಒಂದು ಸ್ಕೇಲು? ಅಂದ ರಮೇಶ. ಸುಜಾತೆಗೆ ಪಿಚ್ಚೆನಿಸಿತು, ಆದರೂ ಕೇಳಿದಳು. "ಅಲ್ಲೋ ಸ್ಕೇಲು ಯಾಕ ಬೇಕು? ಮನಸಿನಾಗಿಂದು ಹೇಳಲಿಕ್ಕೆ? ಖರೇ ಅಂದ್ರ ಇದು ಮನಸಿನ ಮಾತು ಅಲ್ಲ, ಎದೀ ಒಳಾಗಿಂದು ಹೌದೋ ಅಲ್ಲೋ?"
ಈ ಒಂದರ ಹಿಂದೆ ಒಂದು ಬಂದ ಪ್ರಶ್ನೆಗಳು ರಮೇಶನಿಗೇನೂ ಹೊಸತಲ್ಲ. ಆತ ಸುಜಾತೆಯನ್ನು ಪ್ರೀತಿಸುವುದು ನಿಜ. ಅದು ಕಲಂಕರಹಿತವಾಗಿದ್ದುದು ಸಹ ನಿಜ.

ಸುಜಾತಳು ರಮೇಶ ತನ್ನನ್ನು ಎಷ್ಟು ಪ್ರೀತಿ ಮಾಡುತ್ತಾನೆಂದು ಮೇಲಿಂದ ಮೇಲೆ ಕೇಳಿ ಆನಂದ ಪಡುತ್ತಾಳೆಂಬುದೂ ಸಹ ಆತನಿಗೆ ಗೊತ್ತು. ಆದರೆ ಪ್ರೀತಿಯ ಆಳವನ್ನು "ಹೇಳು" "ಹೇಳು" ಎಂದು ಹೀಗೆ ಅವಳು ಪದೇ ಪದೇ ಕೇಳುವುದು ಇತ್ತೀಚೆಗೆ ಯಾಕೋ ಸ್ವಲ್ಪ ಕಿರಿ ಕಿರಿ ಮಾಡತೊಡಗಿತ್ತು.

ಸುಜಾತೆ ಜಾಣೆ ಹಾಗು ಭಾವಜೀವಿ. ಇತರರೊಂದಿಗೆ ಮಾತು ಇಲ್ಲವೇ ಇಲ್ಲ ಎನ್ನುವಷ್ಟು ಮೌನಿ. ಆದರೆ ಇತರರ ಎದುರು ಆಡದ ಆ ಎಲ್ಲ ಮಾತುಗಳನ್ನೂ ರಮೇಶನೆದುರು ಆಡಲೇ ಬೇಕು!.

Kannada Short story

ಅದರಲ್ಲಿಯೇ ಸಂತಸ. ರಮೇಶ ಅವಳಿಗಿಂತಲೂ ಸ್ವಲ್ಪ ಹೆಚ್ಚೇ ಅನ್ನುವಷ್ಟು ಭಾವುಕ, ಆದರೆ ತನ್ನಲ್ಲಿ ನಡೆಯುವ ಮಾನಸಿಕ ತುಮುಲಗಳನ್ನು ಪ್ರೇಯಸಿಯ ಎದುರಿಗೆ ಕೂಡ ಹೊರಬಿಡದ ಗಂಭೀರ. ಇದು ಸುಜಾತೆಯನ್ನು ಯಾವಾಗಲೂ ಗೊಂದಲಕ್ಕೀಡುಮಾಡುವ ಒಂದು ವಿಷಯ.

ನಮ್ಮಿಬ್ಬರಲ್ಲಿ ಯಾರು ಹೆಚ್ಚು ಪ್ರೀತಿಸುತ್ತಾರೆ ಅನ್ನುವ ಒಂದು ಚಿಂತೆಯೇ ಅವಳ ಬೆಳಗು ಮತ್ತು ರಾತ್ರಿಯ ಚಟುವಟಿಕೆಯಾಗಿ ಹೋಗಿತ್ತು. ತಾನೇ ಹೆಚ್ಚು ಪ್ರೀತಿ ಮಾಡುವುದು, ಅವನಿಗೆ ನನ್ನಷ್ಟು ಪ್ರೀತಿ ಇಲ್ಲ ಎನ್ನುವ ಅನಗತ್ಯವಾದ ಕೊರಗಿನಲ್ಲಿಯೇ ನಿದ್ರಿಸುತ್ತ ಅದೇ ಕೊರಗಿನಲ್ಲಿ ಏಳುತ್ತಿದ್ದಳು. ಇಂದು ಮಾಡಿದ ಪ್ರಶ್ನೆಯು ಕೂಡ ಆ ಕೊರಗಿನದ್ದೇ ಒಂದು ಭಾಗ!

ಇಂದಿರಾ ಗಾಜಿನ ಮನೆಯ ಬಳಿಯ ಹುಲ್ಲಿನ ಮೇಲೆ ಅಂಗಾತ ಮಲಗಿದ್ದ ಆತ ಒಂದೊಂದೇ ಹುಲ್ಲನ್ನು ತಿರುಗಿಸಿ ತಿರುಗಿಸಿ ಕಿತ್ತುತ್ತಾ ಇನ್ನೇನೋ ಯೋಚನೆಯಲ್ಲ್ಲಿತೊಡಗಿದ್ದ. ಅವನ ತಲೆಯ ಬಳಿ ಕೂತು ಸುಜಾತೆ ಈ ಆಳಸಮುದ್ರದ ಮೀನುಗಾರಿಕೆಯಲ್ಲಿ ತೊಡಗಿದ್ದಳು. ಇಬ್ಬರೂ ಓದಿಕೊಂಡವರು. ಕಾಲೇಜಿನ ಓದಿಗೆ ತಮ್ಮ ಲೆವೆಲ್ಲನ್ನು ಸೀಮಿತಗೊಳಿಸದೆ ತಮ್ಮ ಜ್ಞಾನವನ್ನು ನಿರಂತರವಾಗಿ ಸಾಣೆ ಹಿಡಿಯುವುದು ಇಬ್ಬರಿಗೂ ಖುಷಿ ಕೊಡುವ ಸಂಗತಿ. ಇಷ್ಟರಲ್ಲಿಯೇ ತಮ್ಮದೇ ಆದ ಕಂಪನಿಯೊಂದನ್ನು ಪ್ರಾರಂಭಿಸುವ ಹಂತದಲ್ಲಿದ್ದರು.

ಆಕೆ ಹುಬ್ಬಳ್ಳಿಯಲ್ಲಿಯೇ ಭೂಮರಡ್ಡಿ ಕಾಲೇಜಿನ ಇಂಜಿನಿಯರಿಂಗ್ ಪದವೀಧರೆ, ಮುಂದೆ ಅಹಮದಾಬಾದಿನ ಮ್ಯಾನೇಜ್ಮೆಂಟ್ ಕಾಲೇಜಿನಿಂದ ಎಂಬಿಎ ಪದವಿಯನ್ನು ಸಹ ಪಡೆದವಳು. ಈತ ಕಾಮರ್ಸ್ ಪದವೀಧರ. ಸೀಯೇ ಮಾಡಬೇಕೆಂದು ಕೊಂಡಿದ್ದವನು ದಿಕ್ಕುಬದಲಿಸಿ ಪುಣೆಯಲ್ಲಿ ಎಂಬಿಎ ಪದವಿ ಪಡೆದ, ಮಾರ್ಕೇಟಿಂಗಿನಲ್ಲಿ ಮಿನುಗುವ ಕನಸು ಕಾಣತೊಡಗಿದ್ದ.

ಆದರೆ ಓದಬೇಕೆಂದುಕೊಂಡಿದ್ದು ಮತ್ತು ಓದಿದ್ದು ಒಂದಕ್ಕೂ ತಾಳಮೇಳವಿಲ್ಲದಂತೆ ರೈಲ್ವೇ ಪರೀಕ್ಷೆ, ಬ್ಯಾಂಕಿನ ಪರೀಕ್ಷೆಗಳನ್ನು ಒಂದರ ಹಿಂದೆ ಒಂದರಂತೆ ಬರೆದು ವಿಫಲನಾಗತೊಡಗಿದ.

ಈ ಹಂತದಲ್ಲಿ ಸುಜಾತಳು ಅವನನ್ನು ಹತ್ತಿರ ಕೂಡಿಸಿಕೊಂಡು "ಅಲ್ಲೋ ತಲ್ಯಾಗ ವಿದ್ಯಾಬುದ್ಧಿ, ಎದೀ ವಳಾಗ ಆಸೀ ಇಟಗೊಂಡವ, ಈ ಸರ್ಕಾರೀ ನವಕರೀ ಸಲುವಾಗಿ ಯಾಕ ತಲಿ ವಡಕೊಳ್ಳೀಕತೀ? ನಾವs ಒಂದು ಹೊಸಾದು ಕಂಪನಿ ಚಾಲೂ ಮಾಡಿದ್ರ ಆತು, ಹೆಂಗಂದ್ರೂ ಈಗ ಮೋದಿ ಗವರ್ನ್ಮೆಂಟಿನಾಗ ಮುದ್ರಾ, ಸ್ಟಾರ್ಟಪ್ಪು ಅವು ಇವು ಅಂತ ಹೇಳಿ ಭಾಳ ಸ್ಕೀಮು ಇದ್ದs ಇದ್ದಾವಲ್ಲೋ? ನನಕಿಂತ ಶಾಣೇತ ಇದ್ದೀಯಪ, ಡಲ್ ಯಾಕ ಅಗ್ತೀ? ನಂಗ ಭಾಳ ಸಂಗ್ಟ ಆಗ್ತದೋ ಅಪ್ಪೀ, ಪ್ಲೀಸ್ ಸಪ್ಪನೆ ಮಾರಿ ಮಾಡಕೋಬ್ಯಾಡೋ ಪ್ಚು ಪ್ಚು ಪ್ಚು ಅಂತ ಮುತ್ತಿನ ಮಳೆಗೆರೆದು ಇನಿಯನನ್ನು ಡಿಪ್ರೆಶನ್ನಿನಿಂದ ಹೊರತರಲು ಹರಸಾಹಸ ನಡೆಸಿದ್ದಳು. "ಏ ಇಲ್ಲೇ!, ಹಂಗೇನೂ ಇಲ್ಲ, ಆರಾಮನ ಇದ್ದೇನಿ ನಾನು" ಎಂಬ ರಮೇಶನ ಮಾತು ಸಂಪೂರ್ಣ ಸತ್ಯವಲ್ಲ ಎಂದು ಸುಜಾತೆ ಬಲ್ಲಳು.

ಅಂತೂ ನಲ್ಲೆಯ ಮುತ್ತಿನ ಪ್ರಭಾವವೋ ಅಥವಾ "ನಾನು ಹಿಂಗs ಹಿಂದ ಬಿದ್ರ ಮುಂದ ಶಗಣೀ ತಿನಬೇಕಾಗ್ತದs" ಎನ್ನುವ ವಾಸ್ತವಪ್ರಜ್ಞೆಯೋ ಗೊತ್ತಿಲ್ಲ, ರಮೇಶ ಸ್ವಲ್ಪ ಚೈತನ್ಯಭರಿತನಾದ.

English summary
Short Story: Reservation in jobs, education system has claimed a aspiring youth belonging to General Category. Though suicide is not the solution to the crisis but it has sent a message to his lover and fellow friend about the failure in the system of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X