ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಟೆ

By Staff
|
Google Oneindia Kannada News


ಮನೆ ಕೊಡಿಸೋ ಬ್ರೋಕರ್‌ ಕೃಷ್ಣಸ್ವಾಮಿ, ಗಿರಾಕಿಗಳನ್ನು ಯಾಡುತ್ತಾನೆ. ಅವನಲ್ಲಿ ಯಾಡೋ ಉತ್ಸಾಹಕ್ಕಿಂತ, ಬೇರೆಯವರ ಗೆ ಬಲಿಪಶುವಾಗುವ ಆತಂಕವೇ ಹೆಚ್ಚು. ಮೊನ್ನೆ ಆಗಿದ್ದು ಸಹಾ ಅದೇ.

Bete A Kannada Short Story by Vikram Hathwarಆ ಬೀದಿಯ ತಿರುವಿನಲ್ಲಿ ಯಾರದೋ ಗೆ ಬಲಿಯಾಗದಿರಲು ಹವಣಿಸುತ್ತಿದ್ದ ಕೃಷ್ಣಸ್ವಾಮಿ, ಎದುರಿಗೆ ನಿಂತವನೊಂದಿಗೆ ಮೆಲುದನಿಯಲ್ಲಿ ಮಾತನಾಡುತ್ತಿದ್ದ. ‘ಇಲ್ಲೇ ಇದೆ ಬನ್ನಿ....’ ಎನ್ನುತ್ತ ಎದ್ದು ನಿಂತು ಎಡ ದಿಕ್ಕಿಗೆ ಹೆಜ್ಜೆ ಹಾಕಿದ.

ಕೋದಂಡರಾಮಪುರಕ್ಕೆ ಸೇರುವ ಮಲ್ಲೇಶ್ವರದ 18ನೇ ಕ್ರಾಸಿನಿಂದ ಕವಲೊಡೆದ ಹಳದಿ ಬಣ್ಣದ ನೀರಿನ ಟ್ಯಾಂಕಿ ಇರುವ ಗಲ್ಲಿಯ ತಿರುವಿನಲ್ಲಿ, ಕಟ್ಟೆಯೊಂದರ ಮೇಲೆ ಕುಳಿತಿದ್ದ ಕೃಷ್ಣಸ್ವಾಮಿಯ ಬಲಗಾಲು ಊನ ಎನ್ನುವುದು ಆಗಷ್ಟೆ ಆತನಿಗೆ ತಿಳಿಯಿತು. ಯಾವ ಅನುಕಂಪವನ್ನೂ ತೋರ್ಪಡಿಸದೆ ಬಲಗಾಲಿನ ಮೇಲೆ ಸೊಂಟ ಕುಕ್ಕಿ ಕುಣಿಸಿ ಬರಿಗಾಲಿನಲ್ಲಿ ನಡೆಯುತ್ತಿದ್ದ ಕೃಷ್ಣಸ್ವಾಮಿಯನ್ನು ಹಿಂಬಾಲಿಸಿದ.

ಅಲ್ಲಿಂದ ಎಂಟು ಹೆಜ್ಜೆಗೆ ಕೊನೆಗೊಳ್ಳುವ ಆ ಗಲ್ಲಿಯಿಂದ ಮತ್ತೆ ಎಡಕ್ಕೆ ತಿರುಗಿ ನಾಲ್ಕು ಹೆಜ್ಜೆ ನಡೆದಿರಬೇಕುಎದುರಿಗೆ ಇನ್ನೇನು ಸಂಜೆಯ ಹೊತ್ತಿಗೆ ಪೂರ ಬಾಡಿಹೋಗಲು ಸಿದ್ಧವಾಗಿರುವ ಟೊಮೋಟೋ, ಬದನೆ, ಮೂಲಂಗಿ, ಕೊತ್ತಂಬರಿಗಳನ್ನು ತನ್ನ ಎದೆಯ ಮೇಲೆ ಹಾಸಿಕೊಂಡ ತಳ್ಳೋಗಾಡಿಯನ್ನು ಅದನ್ನು ತಳ್ಳಿಕೊಂಡು ಬರುತ್ತಿದ್ದ ಹೆಂಗಸನ್ನು ಕಂಡ ಕೂಡಲೆ ಏನೋ ನೆನಪಾದವನಂತೆ ಕೃಷ್ಣಸ್ವಾಮಿ ಅಲ್ಲೇ ನಿಂತು ಬಿಟ್ಟ.

ಭಾನುವಾರದ ನಿರ್ಜನ ಮಧ್ಯಾಹ್ನದಲ್ಲಿ ಮಳೆ-ಬಿಸಿಲು ನೆಕ್ಕಿ ಉಳಿಸಿರುವ ಗಣೇಶ್‌ ಸ್ಟೋರ್ಸ್‌ ಎಂಬ ತಲೆಬರಹವಿದ್ದ ಸಣ್ಣದೊಂದು ದಿನಸಿ ಅಂಗಡಿ ಮಾತ್ರ ಅರೆನಿದ್ದೆಯಲ್ಲಿ ವಿರಮಿಸಿತ್ತು. ದಿನಸಿ ಅಂಗಡಿಯೆಂದರೆ ಬರೀ ದಿನಸಿ ಅಂಗಡಿಯಲ್ಲ. ಅಂಗಡಿಯ ಮುಂಭಾಗದಲ್ಲಿ ಮೂರ್ನಾಲ್ಕು ಎಣ್ಣೆ ಮೆತ್ತಿರುವ ಡ್ರಮ್ಮುಗಳು, ಮೇಲೆ ತೂಗು ಬಿದ್ದಿರುವ ಮ್ಯಾಗಿ, ಶ್ಯಾಂಪೂ, ಜಾಮ್‌, ಕೆಚ್ಚ್‌ಅಪ್‌ ಪ್ಯಾಕೆಟುಗಳು, ಒಳಗೆ ಹಲಗೆಗಳ ಮೇಲೆ ಜೋಡಿಸಿಟ್ಟಿರುವ ಸಾಬೂನು-ಬಿಸ್ಕೆಟ್ಟು-ಚಿಪ್ಸ್‌ ಪ್ಯಾಕೆಟ್‌ಗಳು, ಎಲ್ಲ ಬ್ರಾಂಡಿನ ಸಿಗರೇಟು-ಬೀಡಿ ಪೊಟ್ಟಣ, ಬಗೆ ಬಗೆ ಮಿಕ್ಸರ್‌ ತುಂಬಿರುವ ಬಾಟಲಿಗಳು, ಬಾಳೆ ಗೊನೆ, ಕೊತ್ತಂಬರಿ-ಕರಿಬೇವು-ಈರುಳ್ಳಿ ಎಲ್ಲ ಸೇರಿ ಅಲ್ಲೊಂದು ಕಾಸ್ಮೋಪೋಲಿಟನ್‌ ವಾತಾವರಣ ನಿರ್ಮಿಸಿದ್ದವು.

ಮನೆಯು ಅಂಗಡಿಯೊಳಗೋ ಅಂಗಡಿಯು ಮನೆಯೊಳಗೋ ಎನ್ನುವಂತಿತ್ತು ಅ ಅಂಗಡಿ; ಅದರೊಳಗಿರುವವರ ಬದುಕು. ಅಂಗಡಿಯೊಳಗಿದ್ದವನು ಕೃಷ್ಣಸ್ವಾಮಿಯನ್ನು ನೋಡಿ ಅತ್ತ ನಮಸ್ಕಾರವೂ ಅಲ್ಲದ ಇತ್ತ ಸಲ್ಯೂಟೂ ಅಲ್ಲದ ಭಂಗಿಯಲ್ಲಿ ಬಲಗೈ ಮೇಲೆತ್ತಿದ. ತನಗೆ ದೊರೆತಿರುವ ಆ ಅಂತಾರ್ರಾಷ್ಟ್ರೀಯ ಗೌರವವನ್ನು ಮನ್ನಿಸುವವನಂತೆ ಕೃಷ್ಣಸ್ವಾಮಿಯೂ ಕೈ ಎತ್ತಿದ.

‘ನಿಮ್ಮ ಹೆಸರೇನು ಸಾರ್‌?’ ಅಂತ ಕೇಳಿದ.

‘ರಮೇಶ್‌.’

‘ಎಲ್ಲಿ ಸಾರ್‌ ಕೆಲ್ಸ?’ ಕೃಷ್ಣಸ್ವಾಮಿಯ ಕಣ್ಣುಗಳು ಆಚೀಚೆ ಚಲಿಸಿ ಏನನ್ನೋ ಪರೀಕ್ಷಿಸಿದವು. ಕೃಷ್ಣಸ್ವಾಮಿಯೇ ಏನಾದರು ಹೊಂಚು ಹಾಕುತ್ತಿದ್ದಾನೋ ಅಥವಾ ಯಾರದಾದರು ಹೊಂಚಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೋ ಎನ್ನುವುದು ರಮೇಶ್‌ಗೆ ತಿಳಿಯಲಿಲ್ಲ. ‘ಇಲ್ಲೇ ಪೀಣ್ಯ ಹತ್ರ ಒಂದು ಕಂಪನಿಯಲ್ಲಿ’ ಎಂದ.

‘ಸರಿ ಸರಿ, ಈ ಕಡೆ ಬನ್ನಿ’ ಎಂದು ಮತ್ತೆ ಅದೇ ನೀರಿನ ಟ್ಯಾಂಕಿಯ ಗಲ್ಲಿಗೆ ಕರೆತಂದ. ಯಾವ ಕಡೆ? ಅಂತ ರಮೇಶ್‌ ಕೇಳಿದ್ದಕ್ಕೆ ಇಲ್ಲೇ ಇಲ್ಲೇ ಬನ್ನಿ ಎಂದು ಮುನ್ನಡೆದು ಟ್ಯಾಂಕಿಯ ಎದುರು ರಮೇಶನನ್ನು ನಿಲ್ಲಿಸಿಕೊಂಡ. ಆ ಟ್ಯಾಂಕಿಯಿಂದ ಯಾರಾದರು ಮನೆಗೆ ಕುಡಿಯಲು ನೀರು ತುಂಬಿಸಿಕೊಂಡು ಹೋಗಬಹುದೆಂಬ ಕಲ್ಪನೆ ರಮೇಶನಿಗೆ ಇರಲಿಲ್ಲ.

‘ನೀವು ಬ್ರಾಮಿನ್ಸಾ?’ ಎಂದು ಕೇಳಿ ಮತ್ತೆ ಆಚೀಚೆ ನೋಡಿದ. ರಮೇಶ್‌ ಹೌದು ಎಂದಾಗ ‘ನಾವೂ ಬ್ರಾಮಿನ್ಸೇ ಸಾರ್‌. ನನಗೆ ಗೊತ್ತಾಗುತ್ತೆ ನಿಮ್‌ ಟೇಸ್ಟ್‌ ಏನು ಅಂತ. ನಾನು ಮೊದ್ಲು ಹೆಚ್‌ಎಎಲ್‌ನಲ್ಲಿ ಕೆಲ್ಸ ಮಾಡ್ತಿದ್ದೆ. ಈಗ ರಿಟೈರ್ಡ್‌ ಆದಮೇಲೆ ಇದೇ ಕಸಬು. ಏಳು ಸಾವಿರ ಆದ್ರೆ ಪರ್ವಾಗಿಲ್ವಾ?’.

ಕೃಷ್ಣಸ್ವಾಮಿ ಏನೇನೋ ಅನವಶ್ಯ ಮಾತು ಎಳೆಯಲು ಶುರುಮಾಡಿದಾಗ ಏನೋ ಮೋಸವಿದೆ ಎನ್ನುವ ಗುಮಾನಿ ರಮೇಶನಿಗೆ ಬಂತು. ಯಾವ ಕಡೆಯಿಂದ ನೋಡಿದರೂ ಕೃಷ್ಣಸ್ವಾಮಿ ಬ್ರಾಹ್ಮಣನಂತೆ ಹೆಚ್‌ಎಎಲ್‌ನ ರಿಟೈರ್ಡ್‌ ನೌಕರನಂತೆ ಕಾಣಿಸಲಿಲ್ಲ. ಐದಡಿ ಉದ್ದದ ಕೃಷ್ಣಸ್ವಾಮಿಯ ಕ್ಷೀಣ ದೇಹ ಮುಚ್ಚಿದ್ದ ಅಂಗಿಯನ್ನು ಎರಡೋ ಮೂರೋ ಪಿನ್ನುಗಳು ಹಿಡಿದಿಟ್ಟಿದ್ದವು. ಕತ್ತಿನಲ್ಲೊಂದು ಕರೀ ದಾರದಲ್ಲಿ ಯಾವುದೋ ಬಾಬಾವಿನ ಚಿತ್ರವಿರುವ ಪ್ಲಾಸ್ಟಿಕ್‌ ಪೆಂಡೆಂಟ್‌ ಮುರುಟಿತ್ತು.

‘ಈಗ, ಯಾವುದೋ ಇದೆ ಅಂದ್ರಲ್ಲ- ಅದನ್ನ ತೋರ್ಸಿ. ನಂಗೆ ಮೂರೂವರೆಗೆ ಬೇರೆ ಕಡೆ ಕೆಲ್ಸ ಇದೆ.’ ಅಂತ ಗಂಭೀರವಾಗಿ ಹೇಳಿದ್ದನ್ನು ಕೃಷ್ಣಸ್ವಾಮಿ ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ‘ಇಲ್ಲೇ ಇದೆ ಸಾರ್‌, ನಿಮಗೆ ಖಂಡಿತ ಲೈಕ್‌ ಆಗುತ್ತೆ. ಚೀಪಾಗಿರೋದು ಸಿಗುತ್ತೆ, ಆದ್ರೆ ನೀಟಾಗಿರಬೇಕಲ್ವಾ?. ಯಾಕಂದ್ರೆ ಬ್ರಾಮಿನ್ಸ್‌ ಟೇಸ್ಟ್‌ ಏನು ಅಂತ ನಮಗೂ ಐಡಿಯಾ ಇರುತ್ತಲ್ವಾ?’ ಎಂದು ಮುನ್ನಡೆದು ಸುತ್ತಮುತ್ತ ತನ್ನ ಪರಿಚಯದ ಹದ್ದುಗಳು ಯಾವುದೂ ಇಲ್ಲವೆನ್ನುವುದು ಸಂಪೂರ್ಣವಾಗಿ ಮನವರಿಕೆಯಾದ ಮೇಲೆ ‘ಬನ್ನಿ ಬನ್ನಿ. ಇಲ್ಲಿ ಸ್ವಲ್ಪ ಸೂಕ್ಷ್ಮ ಇದೆ.’ ಎಂದು ಹಲ್ಲುಗಿಂಜಿ ಹೇಳಿದ. ಆ ಸೂಕ್ಷ್ಮದ ಸುಳಿವು ಸಿಕ್ಕವನಂತೆ ರಮೇಶ್‌, ‘ಗೊತ್ತಾಯ್ತು, ಬೇಗ ತೋರ್ಸಿ’ ಎಂದ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X