ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ನೆಟ್ ಕಿಂಡಿಯಿಂದ ಭಕ್ತ ಕನಕದಾಸರಿಗೊಂದು ನಮನ

By Prasad
|
Google Oneindia Kannada News

ಕನಕ ದಾಸರು(1509-1609) ಕರ್ನಾಟಕದ ಹರಿದಾಸ ಸಾಹಿತ್ಯದ ಶ್ರೇಷ್ಠ ಕವಿಪುಂಗವರೆಂದೇ ಕರೆಸಿಕೊಂಡ ದಾಸವೇಣ್ಯರು. ಕುರುಬ ಜನಾಂಗದಲ್ಲಿ ಹುಟ್ಟಿ ಸೈನಿಕನಾಗಿ ಕೆಲಸ ಮಾಡುತ್ತಿದ್ದ ಕನಕದಾಸರು ಜೀವನದಲ್ಲಿ ವೈರಾಗ್ಯವನ್ನು ಪಡೆದು ಭಕ್ತಿ ಪಥವನ್ನು ಅನುಸರಿಸಿ ಹಲವಾರು ಕೀರ್ತನೆಗಳನ್ನು ಭಜನೆಗಳನ್ನು ರಚಿಸಿ ದಾಸಶೇಷ್ಠರೆಂದು ಹೆಸರಾದವರು. ಕನಕ ಜಯಂತಿ ನಿಮಿತ್ತ ಉಡುಪಿಯ ಕೃಷ್ಣ ದೇವಾಲಯದಲ್ಲಿರುವ ಅವರ ಮೂರ್ತಿಗೆ ನಮಿಸೋಣ.

ಕನಕದಾಸರ ಮೊದಲನೆಯ ಹೆಸರು ತಿಮ್ಮಪ್ಪನಾಯಕ. ಹುಟ್ಟೂರು ಹಾವೇರಿ ಜಿಲ್ಲೆಯಲ್ಲಿರುವ ಬಾಡ ಎಂಬ ಗ್ರಾಮ. ಅವರ ತಂದೆ ಮತ್ತು ತಾಯಿ ಹೆಸರು, ಬೀರಪ್ಪ ಮತ್ತು ಬಚ್ಚಮ್ಮ. ತಮ್ಮ ಊರಿನ ಹತ್ತಿರದ ಕಾಗಿನೆಲೆಯ ಆದಿಕೇಶವನನ್ನು ಆರಾಧ್ಯ ದೈವವಾಗಿ ಸ್ವೀಕರಿದ ಕನಕದಾಸರು ತಮ್ಮ ಭಕ್ತಿ ಸಾಧನೆಗಾಗಿ ಊರೂರು ಅಲೆಯುತ್ತಾ ಹಂಪಿಯಲ್ಲಿ ವ್ಯಾಸರಾಜರನ್ನು ಭೇಟಿಯಾದರು. ಅಲ್ಲಿ ವ್ಯಾಸರಾಯರಿಂದ ಪ್ರಭಾವಿತರಾದ ಕನಕದಾಸರು ಅವರನ್ನು ಗುರುವಾಗಿ ಸ್ವೀಕರಿಸಿ ವೇದ ಉಪನಿಶತ್ತು, ವೈಷ್ಣವ ಧರ್ಮ ಮುಂತಾದವುಗಳ ಬಗ್ಗೆ ಜ್ಞಾನ ಸಂಪಾದಿಸಿದರು. ಮುಂದೆ ನಾಡಿನ ತುಂಬೆಲ್ಲ ಸಂಚರಿಸುತ್ತ ತಾವು ಸಂಪಾದಿಸಿದ ಜ್ಞಾನದಿಂದ ಕೀರ್ತನೆಗಳು, ಉಗಾಭೋಗಗಳು ಮತ್ತು ಮುಂಡಿಗೆಗಳನ್ನು ರಚಿಸಿ ಆ ಮೂಲಕ ಜನತೆಯಲ್ಲಿ ಜಾಗ್ರತಿಯನ್ನು ಉಂಟುಮಾಡಿದರು. ಜಾತಿಯ ಮೇಲುಕೀಳುಗಳನ್ನು ಹೋಗಲಾಡಿಸುವುದರೊಂದಿಗೆ ಜನತೆಯಲ್ಲಿ ಸಾಮಾಜಿಕ ಚಿಂತನೆಯನ್ನು ಉದ್ದೀಪಿಸಿದ ಕನಕದಾಸರು ದಾಸ ಸಾಹಿತ್ಯ ಮತ್ತು ಸಂಗೀತಕ್ಕೆ ಮಹತ್ತರವಾದ ಕಾಣಿಕೆ ಸಲ್ಲಿಸಿದರು.

Saint Kanakadasa birthday


ಕಾಗಿನೆಲೆಯ ಆದಿಕೇಶವನಂತೆ ಉಡುಪಿಯ ಶ್ರೀಕೃಷ್ಣನಿಗೂ ಕನಕದಾಸರಿಗೂ ಅವಿನಾಭಾವ ಸಂಬಂಧ. ಒಮ್ಮೆ ಕನಕದಾಸರು ಶ್ರೀಕೃಷ್ಣ ದರ್ಶನಕ್ಕೆ ಉಡುಪಿಗೆ ಹೋದಾಗ ಕರ್ಮಠ ಪೂಜಾರಿಗಳು ಅವರನ್ನು ಒಳಗೆ ಬಿಡಲಿಲ್ಲವಂತೆ. ಆಗ ಕನಕದಾಸರು ದೇವಸ್ಥಾನದ ಹಿಂದಿನಿಂದ ಶ್ರೀಕೃಷ್ಣನ ಕೀರ್ತನೆಯನ್ನು ಹಾಡಲಾಗಿ ಶ್ರೀಕೃಷ್ಣ ಹಿಂದೆ ತಿರುಗಿ ಗೊಡೆಯ ಕಿಂಡಿ ಮೂಲಕ ದರ್ಶನ ನೀಡಿದನಂತೆ. ಆ ಕಿಂಡಿ ಇಂದಿಗೂ ಕನಕನ ಕಿಂಡಿ ಎಂದೆ ಪ್ರಸಿದ್ಧವಾಗಿದೆ. ಇದು ನಿಜವಿರಬಹುದು ಅಥವಾ ದಂತಕಥೆ ಇರಬಹುದು. ಆದರೆ ಭಕ್ತಿ, ಕವಿತ್ವ ಮತ್ತು ಸಂಗೀತದಲ್ಲಿಯ ಸಾಧನೆಗೆ ಜಾತಿ ಎಂದೂ ತೊಡಕಾಗುವುದಿಲ್ಲ ಎನ್ನುವುದಕ್ಕೆ ಕನಕದಾಸರ ಜೀವನ ಒಂದು ಜ್ವಲಂತ ಉದಾಹರಣೆ.

"ನಾನು ಹೋದರೆ ಹೊದೇನು" ಎನ್ನುವದು ಕನಕದಾಸರ ಪ್ರಸಿದ್ಧ ಉಕ್ತಿ. ಇದನ್ನು ಅವರು ಒಂದು ಪಂಡಿತರ ಸಭೆಯಲ್ಲಿ ಯಾರು ಸ್ವರ್ಗಕ್ಕೆ ಹೋಗಬಹುದು ಎನ್ನುವ ಪ್ರಶ್ನೆ ಎದ್ದಾಗ ಹಾಗೆ ಹೇಳಿದ್ದರು. ಅದನ್ನು ಕೇಳಿದ ಕರ್ಮಠ ಪಂಡಿತರೆಲ್ಲ ಕನಕದಾಸರಿಗೆ ಬಹಳ ಗರ್ವವಿದೆ ಎಂದು ಭಾವಿಸಿದರು. ಆದರೆ ಕನಕದಾಸರು ಆ ಮಾತಿನ ಅರ್ಥ "ಯಾರು ನಾನು, ನನ್ನಿಂದ ಎನ್ನುವ ಅಹಂ ಅನ್ನು ಬಿಡುತ್ತಾರೊ ಅವರು ಮಾತ್ರ ಸ್ವರ್ಗಕ್ಕೆ ಹೋಗಬಲ್ಲರು" ಎಂದು ಹೇಳಿ ಎಲ್ಲರನ್ನು ಬೆರಗು ಗೊಳಿಸಿದರು.

ಕನಕದಾಸರ ಕೃತಿಗಳಲ್ಲಿ ಹರಿಭಕ್ತಸಾರ, ನಳಚರಿತೆ, ರಾಮಧಾನ್ಯಚರಿತೆ ಮತ್ತು ಮೋಹನ ತರಂಗಿಣಿ ಮುಂತಾದವು ಪ್ರಸಿದ್ಧವಾದವು. ಇವಲ್ಲದೆ ಕರ್ನಾಟಕ ಸಂಗೀತದಲ್ಲಿ ಹಾಡಬಲ್ಲಂತಹ ಸುಮಾರು ಇನ್ನೂರ ನಲವತ್ತು ಕೀರ್ತನೆ, ಉಗಾಭೋಗಗಳನ್ನು ರಚಿಸಿದ್ದಾರೆ. ಕನಕರ ಇನ್ನೊಂದು ಮೂರ್ತಿ ಶೃಂಗೇರಿಯ ಚಪ್ಪರದ ಆಂಜನೇಯ ದೇವಸ್ಥಾನದಲ್ಲಿದೆ. (ಸ್ನೇಹಸೇತು : ಮೂರ್ತಿ ಪೂಜೆ)

English summary
November 24 is celebrated as birthday of saint of Bhakta Kanakadasa (1509-1609). A view at the life and compositions of Kanakadasa. Haribhaktasara, Mohana Tarangini, Nalacharite are some of his great compositions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X