ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(1798-1831)
ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುಟ್ಟುಹಬ್ಬ ಆಗಸ್ಟ್ 15ರಂದು ಎಂದು ಎಷ್ಟು ಜನರಿಗೆ ಗೊತ್ತಿದೆ? ಕಾಕತಾಳೀಯವೆಂಬಂತೆ, ಸಂಗೊಳ್ಳಿ ರಾಯಣ್ಣ ಮರಣ ಹೊಂದಿದ್ದು ಕೂಡ ಭಾರತದ ಗಣರಾಜ್ಯೋತ್ಸವದಂದೆ.
ಕಿತ್ತೂರು ಚೆನ್ನಮ್ಮನ ಬಲಗೈ ಬಂಟನಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಿರುಪರಿಚಯ ನೀಡುವಂಥ ಲೇಖನವಿದು.
ಸಂಗೊಳ್ಳಿ ರಾಯಣ್ಣ (ಜನನ: ಆಗಸ್ಟ್ 15, 1798; ಮರಣ: ಜನವರಿ 26, 1831)
ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಿತ್ತೂರಿನ ರಾಣಿ ಚೆನ್ನಮ್ಮಳ ಬಲಗೈ ಬಂಟ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿರುವ ಗಣೇಶವಾಡಿ ಗ್ರಾಮವು ರಾಯಣ್ಣನ ತಾಯಿ ಕೆಂಚವ್ವನ ತವರುಮನೆ. ಗಣೇಶವಾಡಿ ಹಾಗೂ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ಬೆಳೆದ ರಾಯಣ್ಣ, ಕುರುಬ ಜನಾಂಗದ ವೀರ. ಸಾಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧ ಸಾರಿದ. ಭಾರತದಲ್ಲಿ ಗೆರಿಲ್ಲಾ ಯುದ್ಧ ಪರಿಣತಿ ಹೊಂದಿದ್ದ ಪ್ರಪ್ರಥಮ ಯೋಧ ಎಂಬ ಕೀರ್ತಿ ರಾಯಣ್ಣನಿಗೆ ಸಲ್ಲುತ್ತದೆ.
ಹಣದಾಹಿ ಜಮೀನ್ದಾರರಿಗೆ, ಭೂ ಮಾಲೀಕರಿಗೆ ಸಿಂಹಸ್ವಪ್ನವಾಗಿದ್ದ ಸಂಗೊಳ್ಳಿ ರಾಯಣ್ಣ, ಸರ್ಕಾರಕ್ಕೆ ಸೇರಿದ್ದ ಅನೇಕ ದಾಖಲೆಗಳನ್ನು ನಾಶ ಮಾಡಿ, ಬಡವರಿಂದ ದೋಚಿದ್ದ ಹಣವನ್ನು ಕಸಿದುಕೊಳ್ಳತೊಡಗಿದ್ದನು. ಇದರಿಂದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಪಾರ ತೆರಿಗೆ ಹಾನಿಯಾಯಿತು. ಆತನನ್ನು ನೇರವಾಗಿ ಹಿಡಿಯಲು ಅಸಮರ್ಥವಾದ ಬ್ರಿಟಿಷ್ ಸರ್ಕಾರ, ಆತನ ಮಾವ ಲಕ್ಷ್ಮಣರಾಯನ ಸಹಾಯ ಪಡೆದು, ಮೋಸದಿಂದ ಆತನನ್ನು ಸೆರೆಹಿಡಿದರು.
ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಚೆನ್ನಮ್ಮ ಕೂಡಾ ಮೋಸದಿಂದ ಸೆರೆಯಾಳಾದರು. ಬ್ರಿಟಿಷರು ಚೆನ್ನಮ್ಮನನ್ನು ಬೈಲಹೊಂಗಲದಲ್ಲಿ ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಜನವರಿ 26,1831ರಂದು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡದಲ್ಲಿ ಗಲ್ಲಿಗೇರಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನಾಂಕ (ಆಗಸ್ಟ್ 15) ಹಾಗೂ ಸಂಗೊಳ್ಳಿ ರಾಯಣ್ಣನ ಜನ್ಮದಿನಾಂಕ ಎರಡು ಒಂದೇ ಆಗಿದೆ. ಹಾಗೂ ರಾಯಣ್ಣ ಹುತಾತ್ಮನಾದ ದಿನಾಂಕ(ಜ.26) ಹಾಗೂ ಭಾರತ ಗಣರಾಜ್ಯ ಎಂದು ಘೋಷಿಸಿದ ದಿನಾಂಕ ಕೂಡಾ ಒಂದೇ ಆಗಿರುವುದು ಕಾಕತಾಳೀಯ.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನು ಗಲ್ಲಿಗೇರುವ ಮುನ್ನ ಹೇಳಿದ ಕೊನೆಯ ಮಾತು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.
"ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ, ಈ ಪುಣ್ಯ ಭೂಮಿಯಿಂದ ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರಿಸುವುದು".
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ