ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿವಿಜಿ ಮಂಕುತಿಮ್ಮನ ಕಗ್ಗಕ್ಕೆ ಸರಳ ಕನ್ನಡದ ಸ್ಪರ್ಶ

|
Google Oneindia Kannada News

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು|
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೇ||
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ|
ಎಲ್ಲರೊಳಗೊಂದಾಗು ಮಂಕುತಿಮ್ಮ||

ಡಿ.ವಿ.ಗುಂಡಪ್ಪ ಅವರ ಕಗ್ಗಗಳ ಬಗ್ಗೆ ಹೇಳಲೇ ಬೇಕಿಲ್ಲ. ಅಪಾರ ಜೀವನದ ಅರ್ಥವನ್ನು ಕೆಲವೇ ವಾಕ್ಯದಲ್ಲಿ ಹೇಳಿರುವ ಮಂಕುತಿಮ್ಮನ ಕಗ್ಗವನ್ನು ಮತ್ತಷ್ಟು ಸರಳ ಮಾಡಿದರೆ? ಹೌದು ಅಂಥದ್ದೊಂದು ಪ್ರಯತ್ನ ಮಾಡಿದ್ದ ಲೇಖಕ ಯು ವಿ ಸೂರ್ಯನಾರಾಯಣ ಅವರ 'ಕಗ್ಗ ನಾ ಕಂಡಂತೆ' ಕೃತಿ ಮರು ಮುದ್ರಣಗೊಂಡಿದ್ದು ಕಗ್ಗದ ಅಭಿಮಾನಿಗಳ ಮಾತ್ರವಲ್ಲದೇ ಸಾಮಾನ್ಯ ಜನರ ಪ್ರೀತಿಗೆ ಪಾತ್ರವಾಗಿದೆ.[ಡಿವಿಜಿ ಜೀವನ ಸಾಧನೆ ತಿಳಿದುಕೊಳ್ಳಿ]

ಕವಿ ಎಚ್ ಎಸ್ ಲಕ್ಷ್ಮೀ ನಾರಾಯಣ ಭಟ್ಟ, ಸಾಹಿತಿ ಎಚ್ ಆರ್ ಚಂದ್ರಶೇಖರ್, ಡಾ. ನಾ ಗೀತಾಚಾರ್ಯ, ಪ್ರೊ. ಜಿ ಅಶ್ವತ್ಥನಾರಾಯಣ, ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಪಿ ವಿ ನಾರಾಯಣ ಸೇರಿದಂತೆ ಅನೇಕ ಮಹನೀಯರು ಕೃತಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

book

'ಕಗ್ಗ ನಾ ಕಂಡಂತೆ ಕೃತಿಯಲ್ಲಿ 945 ಮುಕ್ತಕಗಳಿವೆ. ಒಂದಕ್ಕಿಂತ ಒಂದು ಭಿನ್ನವಾಗಿದೆ ಮತ್ತು ಸುಲಭವಾಗಿದೆ. ಡಿವಿಜಿಯವರ ಕಗ್ಗದಲ್ಲಿನ ಹಳೆಗನ್ನಡದ ಪದಗಳು ಸಾಮಾನ್ಯರಿಗೆ ಅರ್ಥವಾಗದೇ ಹೋಗಬಹುದು, ಆದರೆ ಇಲ್ಲಿ ಎಲ್ಲವೂ ಸರಳ ಮತ್ತು ಸುಂದರ.

ಯಾವ ಮುಕ್ತಕಗಳಿಗೂ ಭಾವಾರ್ಥ ನೀಡಲಾಗಿಲ್ಲ. ಅದರ ಅಗತ್ಯವೂ ಇಲ್ಲ. 2008ರಲ್ಲಿ ಹೊರ ಬಂದ ಕೃತಿ ಇದೀಗ ಮತ್ತೆ ಪುನರ್ ಮುದ್ರಣಗೊಂಡಿದೆ. ಡಿವಿಜಿಯವರ ಕಗ್ಗಗಳ ಬಗ್ಗೆ ಅದೆಷ್ಟೋ ವಿಮರ್ಶೆಗಳು, ಟೀಕೆ ಟಿಪ್ಪಣಿಗಳು ಬಂದು ಹೋಗಿವೆ. ಆದರೆ ಕಗ್ಗ ನಾ ಕಂಡಂತೆ ಹಾಗಲ್ಲ. ಇಲ್ಲಿ ಡಿವಿಜಿಯವರ ಕಗ್ಗವನ್ನೇ ಸೂರ್ಯನಾರಾಯಣರು ಸರಳ ಕನ್ನಡಕ್ಕೆ ಇಳಿಸಿದ್ದಾರೆ.

ಡಿವಿಜಿಯವರ ಕಗ್ಗದಲ್ಲಿ ಬರುವ ಮಂಕುತಿಮ್ಮ ಇಲ್ಲಿ ತಿಮ್ಮ ಗೆಳೆಯನಾಗಿದ್ದಾನೆ. ಅರ್ಥವಾಗದ ಹಳೆಗನ್ನಡದ ಗಟ್ಟಿ ಪದಗಳು ಇಲ್ಲಿ ಸವಿಗನ್ನಡದ ಸರಳ ಪದಗಳಾಗಿ ಎದುರಿಗೆ ನಿಲ್ಲುತ್ತವೆ.

book

ದರ ನಮೂದಿಸಿಲ್ಲ
ಕಗ್ಗ ಬೆಲೆಕಟ್ಟಲಾಗದ ಚಿಂತನೆಗಳ ಗುಚ್ಛ. ಸೂರ್ಯನಾರಾಯಣ ಅವರ ಕಗ್ಗ ನಾ ಕಂಡಂತೆ ನಿಮೆಗೆ ಮಾರುಕಟ್ಟೆಯಲ್ಲಿ ಸಿಗಲಾರದು. ಕೃತಿಗೆ ಬೆಲೆಯನ್ನು ನಿಗದಿ ಮಾಡಲಾಗಿಲ್ಲ. ಕಗ್ಗದ ಅಭಿಮಾನಿಗಳು ಲೇಖಕರಿಗೆ ಕರೆ ಮಾಡಿ ಪುಸ್ತಕವನ್ನು ಪಡೆದುಕೊಳ್ಳಬಹುದು. ಕಗ್ಗ ನಾ ಕಂಡಂತೆ ಪುಸ್ತಕ ಓದುವ ಮನಸ್ಸಾಗಿದ್ದರೆ 080 2241 3042ಕ್ಕೆ ಕರೆ ಮಾಡಿದರೆ ಸಾಕು.[ಅಭಿವೃದ್ಧಿಯ ಪುಸ್ತಕ ಅರ್ಧ ಬರೆದು ಹೊರಟ ಅಬ್ದುಲ್ ಕಲಾಂ]

ನಿರೂಪಣೆ ಹೇಗಿದೆ?
ಸರಳ ಕನ್ನಡದಲ್ಲಿ ಕಗ್ಗದ ನಿರೂಪಣೆ ಹೇಗಿದೆ ಎಂಬುದಕ್ಕೆ ಉತ್ತರ ಇಲ್ಲಿದೆ.
ಡಿವಿಜಿಯವರ ಮೂಲ ಕಗ್ಗ
ಸುಮ್ಮನಿರಲೊಲದೆ ತನಗೊಡನಾಡಿಯೊರ್ವಳನು ।
ನಿರ್ಮಿಸಿ ನಿಜಾಂಶದಿಂ ಮಾಯೆಯೆಂಬವಳಿಂ ॥
ದುಣ್ಮಿದ ಜಗಜ್ಜಾಲಗಳಲ್ಲಿ ವಿಹರಿಸುತಿರುವ ।
ಬೊಮ್ಮನಾಟವ ಮೆರೆಸೊ - ಮಂಕುತಿಮ್ಮ||

ಇದೇ ಕಗ್ಗವನ್ನು ಸೂರ್ಯನಾರಾಯಣರು ಸರಳವಾಗಿ ಹೇಳಿದ ರೀತಿ
ಸುಮ್ಮನಿರಲಾರದೆ ಸಂಗಾತಿಯನು ಬಯಸಿ|
ತನ್ನ ಅಂಶದಿಂ ಮಾಯೆಯ ನಿರ್ಮಿಸಿ||
ಹರುಷದಿ ಅವಳೋಳಗೂಡಿ ಜಗದ ನಾಟಕದಿ|
ವಿಹರಿಸುತಿಹ ಬೊಮ್ಮನಾಟಕದಿ ಒಂದಾಗಿ ಮೆರೆಸದನು-ತಿಮ್ಮ ಗೆಳೆಯ||

ಇದೇ ಬಗೆಯಲ್ಲಿ ಸೂರ್ಯನಾರಾಯಣರು ಮುಕ್ತಗಳನ್ನು ಹೇಳಿಕೊಂಡು ಹೋಗುತ್ತಾರೆ. ಸಾಹಿತ್ಯ ಪ್ರೇಮಿಗೆ, ಓದುಗನಿಗೆ ಎಲ್ಲಿಯೂ ಕ್ಲಿಷ್ಟ ಎಂದು ಅನಿಸುವುದೇ ಇಲ್ಲ. ಕನ್ನಡದ ಕಂಪನ್ನು ತನ್ನ ಕೆಲವೇ ಪದಗಳಲ್ಲಿ ಪಸರಿಸುವ ಕಗ್ಗದ ತಾಕತ್ತೇ ಅಂಥದ್ದು. ಅದನ್ನು ಸರಳೀಕರಣ ಮಾಡಿರುವುದು ಸಾಹಿತ್ಯ ಪ್ರೇಮಿಗೆ ಹಲಸಿನ ಹಣ್ಣನ್ನು ಬಿಡಿಸಿ ನೀಡಿದಂತಾಗಿದೆ. ಉದಯೋನ್ಮುಖ ಕವಿಗಳಿಗೆ, ಬರಹಗಾರರ ಹಾದಿಗೆ ಗುರಿ ತೋರಿಸುವ ಗುರುವಾಗಿ ನಿಂತಿದೆ.

English summary
Book Talk : Manku Timmana Kagga, a treatise in Old Kannada by D V Gundappa brought to you in modern Kannada by U V Suryanarayana. Published by Vinayaka prakashana, Shankarapuram, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X