ಪತ್ರಿಕೋದ್ಯಮದವರಿಗೆ ನೀತಿ ಸಂಹಿತೆ ಅಗತ್ಯ: ಹಾಲ್ದೊಡ್ಡೇರಿ
ಬೆಂಗಳೂರು, ಮೇ 1: ಪತ್ರಿಕೋದ್ಯಮದಲ್ಲಿರುವವರಿಗೆ ಸಮಕಾಲೀನ ತಂತ್ರಜ್ಞಾನದ ಅರಿವಿರಬೇಕು. ನೀತಿಸಂಹಿತೆ ಜೊತೆ ಸುತ್ತಮುತ್ತಲಿನ ಸಮಾಜದ ಆಗುಹೋಗುಗಳ ಅರಿವಿರಬೇಕು, ಜೊತೆಗೆ ಸಾಮಾಜಿಕ ಕಾಳಜಿಯೂ ಅತ್ಯವಶ್ಯಕ ಎಂದು ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ದೊಡ್ಡೇರಿ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಕನ್ನಡ ಸಾಹಿತ್ಯ ಪರಿಷತ್ ಆವರಣದ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಶನಿವಾರ (ಏ 30) ಏಕಂ ಪ್ರಕಾಶನ ಹೊರತರುತ್ತಿರುವ, ಚಿದಂಬರಂ ಬೈಕಂಪಾಡಿ ರಚಿಸಿರುವ 'ಪ.ಗೋ ಪ್ರಪಂಚ' ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹಾಲ್ದೊಡ್ಡೇರಿ ಮಾತನಾಡುತ್ತಿದ್ದರು. (ಸಾಹಿತಿ ಪಗೋ ಕುರಿತು ಪುಸ್ತಕ ಬಿಡುಗಡೆ)
ಸ್ವಾತಂತ್ರ್ಯಪೂರ್ವದಲ್ಲಿ ಪತ್ರಿಕೋದ್ಯಮಕ್ಕೆ ದೇಶದ ಬಿಡುಗಡೆಯೇ ಆದ್ಯತೆಯಾಗಿತ್ತು. ಆದರೆ, ಈಗ ಪತ್ರಿಕೋದ್ಯಮವನ್ನು ಅನುಮಾನಿಸುವ ಸಂದಿಗ್ದತೆಯಲ್ಲಿ ಸಮಾಜವಿದೆ ಎಂದು ಹಾಲ್ದೊಡ್ಡೇರಿ, ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೃತಿ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದ ಹಿರಿಯ ಪತ್ರಕರ್ತ ಕೆ ಸತ್ಯನಾರಾಯಣ, ಪತ್ರಕರ್ತರಿಗಬೇಕಾದ ಜವಾಬ್ದಾರಿಯನ್ನು ಪದ್ಯಾಣ ಗೋಪಾಲಕೃಷ್ಣ (ಪ.ಗೋ) ಸರಿಯಾಗಿ ನಿರ್ವಹಿಸಿದ್ದರು. ಚುರುಕು ವ್ಯಕ್ತಿಯ ಪದ್ಯಾಣ ಗೋಪಾಲಕೃಷ್ಣ ಅವರಿಗೆ ಎಲ್ಲಾ ಕ್ಷೇತ್ರದಲ್ಲಿ ಜ್ಞಾನವಿತ್ತು ಎಂದು ಸತ್ಯನಾರಾಯಣ ಹೇಳಿದ್ದಾರೆ.
ಕನ್ನಡನಾಡು ನುಡಿಯ ಏಳಿಗೆಗಾಗಿ ದುಡಿದ ಪತ್ರಕರ್ತರಲ್ಲಿ ಪ.ಗೋ ಕೂಡಾ ಒಬ್ಬರು. ಅವರ ಸ್ಮರಣೆಯನ್ನು ಪುಸ್ತಕರೂಪದಲ್ಲಿ ಹೊರತರುತ್ತಿರುವ ಏಕಂ ಪ್ರಕಾಶನ ಮತ್ತು ರಂಗಸ್ವಾಮಿ ಮೂಕನಹಳ್ಳಿಯವರಿಗೆ ಅಭಿನಂದನೆ ಸಲ್ಲಬೇಕೆಂದು ಸುಧೀಂದ್ರ ಹಾಲ್ದೊಡ್ಡೇರಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ವೈದ್ಯ ಸಾಹಿತಿ ಡಾ. ಎಂ ಬಿ ಮರಕಿಣಿ, ಕೃತಿಯ ಲೇಖಕ ಚಿದಂಬರಂ ಬೈಕಂಪಾಡಿ, ಏಕಂ ಪ್ರಕಾಶನದ ರಂಗಸ್ವಾಮಿ ಮೂಕನಹಳ್ಳಿ, ಪತ್ರಕರ್ತ ಚೈತನ್ಯ ಹೆಗ್ಡೆ, ಪದ್ಯಾಣ ರಾಮಚಂದ್ರ ಮುಂತಾದವರು ಭಾಗವಹಿಸಿದ್ದರು.