ಸಹನೆಯ ಸಾಕಾರ ಮೂರ್ತಿಗಿರಲಿ ನಮ್ಮದೊಂದು ಸಲಾಮ್
"ತೊಟ್ಟಿಲ್ಲನ್ನು ತೂಗುವ ಕೈ ದೇಶವನ್ನಾಳಬಲ್ಲದು". ತಾಳ್ಮೆ, ಸಹನೆಯ ಸಾಕಾರ ಮೂರ್ತಿ. ಹೌದು ಈಗ ಎಲ್ಲಾ ಕ್ಷೇತ್ರಗಳಲ್ಲೂ ತಾ ಮುಂದು ನಾ ಮುಂದು ಹೆಜ್ಜೆ ಇರಿಸುತ್ತಿರುವ ಮಹಿಳೆಯರು ಪುರುಷರಿಗೆ ಸರಿಸಮಾನರಾಗಿ ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ ಮನೆಯ ಒಳಗೂ ಹೊರಗೂ ಸಮಾಜದಲ್ಲೊಂದು ಶಕ್ತಿಯಾಗಿ ನಿಂತಿದ್ದಾರೆ. ಎಲ್ಲರಿಂದಲೂ ಸೈ ಎನಿಸಿಕೊಳ್ಳುತ್ತಿದ್ದಾರೆ.
ಮಹಿಳಾ ದಿನಾಚರಣೆ ಬಂದಾಗ ನಮಗೆ ಐಟಿ, ಬಿಟಿ ಸೇರಿದಂತೆ ಉನ್ನತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರು ಮಾತ್ರ ನೆನಪಾಗುತ್ತಾರೆ. ಆದರೆ ಹಳ್ಳಿಗಳಲ್ಲಿ ದಿನನಿತ್ಯದ ಮನೆ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ತೋಟ, ಗದ್ದೆ, ಹೊಲಗಳಲ್ಲಿ ದುಡಿಯುತ್ತಾ ಕುಟುಂಬ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರೈತ ಮಹಿಳೆಯರು ಹಾಗೂ ಮಹಿಳಾ ಕಾರ್ಮಿಕರು ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ. ನಾವ್ಯಾರು ಅವರ ಬಗ್ಗೆ ಕಿಂಚಿತ್ತೂ ಯೋಚಿಸುವುದಿಲ್ಲ.[ಕಷ್ಟದ ಬದುಕನ್ನು ಗೆದ್ದ ಸ್ವಾವಲಂಬಿಯೇ ಅನುಪಮಾ ಶೆಣೈ]
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ ವಿಡಿಯೋ ನೋಡಿ:
ದೇಶ ಅಭಿವೃದ್ಧಿಯಾಗಬೇಕಾದರೆ ಹಳ್ಳಿಗಳು ಉದ್ಧಾರವಾಗಬೇಕು. ಹಳ್ಳಿಗಳು ಉದ್ಧಾರವಾಗಬೇಕಾದರೆ ಅಲ್ಲಿನ ಮಹಿಳೆಯರು ಸುಶಿಕ್ಷಿತರಾಗಬೇಕು, ಆರ್ಥಿಕವಾಗಿ ಸದೃಢರಾಗಬೇಕು. ಹಿಂದಿನ ಕಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದೆ ಕೆಲಸಕ್ಕೆ ಹೋಗುವಂತೆ ಹೇಳಿ ತಮ್ಮ ಬದುಕಿನ ಸಂಕಷ್ಟಗಳನ್ನು ನೀಗಿಸಿಕೊಳ್ಳುತ್ತಿದ್ದರು.
ಈಗ ಪ್ರತಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಮಕ್ಕಳು ಚಂದದ ಬದುಕಿನ ರೂವಾರಿಗಳಾಗಬೇಕು. ಅವರು ಮತ್ತೊಬ್ಬರಿಗೆ ಸಹಾಯಕರಾಗಿ ನಿಲ್ಲಲ್ಲೆಂಬ ಉದ್ದೇಶದಿಂದ ಅವರನ್ನು ಸನ್ನದ್ದುಗೊಳಿಸುತ್ತಿದ್ದಾರೆ.[ಮಹಿಳಾ ದೌರ್ಜನ್ಯ ವಿರುದ್ದ ದನಿಯಾದ ವಾಮಾ ಬಲ್ದೋಟ]
ನಾಲ್ಕು ಗೋಡೆಯ ಅಡುಗೆ ಮನೆಗಷ್ಟೇ ಸೀಮಿತರಾಗಿದ್ದ ಮಹಿಳೆಯರು ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳು ಅಸ್ಥಿತ್ವಕ್ಕೆ ಬಂದ ನಂತರ ಆರ್ಥಿಕವಾಗಿ ಚೇತರಿಸಿಕೊಂಡರಲ್ಲದೇ ಬ್ಯಾಂಕ್ ವ್ಯವಹಾರ ಸೇರಿದಂತೆ ರಾಜಕೀಯವಾಗಿಯೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ.
ಮಹಿಳೆಯರು ಶ್ರಮಜೀವಿಗಳು
ಮಲೆನಾಡಿನ ಕಾಫಿ, ಟೀ, ಅಡಿಕೆ, ತೆಂಗು ತೋಟಗಳಲ್ಲಿ, ಬಯಲುಸೀಮೆಯ ಹೊಲ, ಗದ್ದೆಗಳಲ್ಲಿ ಗಂಡು ಮಕ್ಕಳಿಗೆ ಸಮಾನವಾಗಿ ದುಡಿಯುವ ಮಹಿಳೆಯರು.. ತಲೆಮೇಲೆ ಸೌದೆ, ಇಟ್ಟಿಗೆ ಹೊತ್ತು ಸಾಗುವ ಮಹಿಳಾ ಕಾರ್ಮಿಕರು ಅಲ್ಲಲ್ಲಿ ಕಣ್ಣಿಗೆ ಬೀಳುತ್ತಾರೆ. ಇವರು ನಿಜಕ್ಕೂ ಶ್ರಮಜೀವಿಗಳೇ...
ಸ್ವ-ಉದ್ಯೋಗದತ್ತ ಹೆಜ್ಜೆ:
ಮೊದಲೆಲ್ಲಾ ಗಂಡ ದುಡಿದು ತಂದಿರುವುದನ್ನು ಬೇಯಿಸಿ ಹಾಕುತ್ತಾ ಮಕ್ಕಳನ್ನು ನೋಡಿಕೊಂಡರೆ ಬದುಕು ಮುಗಿಯಿತು ಎಂಬ ಮನೋಭಾವದಿಂದ ಮಹಿಳೆಯರು ಕಳಚಿಕೊಳ್ಳುತ್ತಿದ್ದಾರೆ. ಕೆಲವರು ಮನೆಯಲ್ಲಿಯೇ ಕುಳಿತು ಟೈಲರಿಂಗ್, ಮೇಣದ ಬತ್ತಿ, ಊದಿನಕಡ್ಡಿ ತಯಾರಿಕೆಯಂತಹ ವೃತ್ತಿ ನಿರ್ವಹಿಸುತ್ತಿದ್ದರೆ, ಇನ್ನು ಕೆಲವರು ಬ್ಯೂಟಿಪಾರ್ಲರ್, ವ್ಯಾಪಾರ, ಹೈನುಗಾರಿಕೆ ಇನ್ನಿತರ ಉದ್ಯಮಗಳತ್ತ ಆಸಕ್ತಿ ವಹಿಸಿ ದುಡಿಯುತ್ತಾ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಕುಟುಂಬ ನಿರ್ವಹಣೆಯ ಜವಾಬ್ದಾರಿಯೊಂದಿಗೆ ತನ್ನ ಉದ್ಯೋಗವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
ಮಹಿಳೆಯರಿಗೆ ತಪ್ಪಿಲ್ಲ ತೊಂದರೆ-ತಾಪತ್ರಯಗಳು
ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ತಮ್ಮ ಛಾಪು ಮೂಡಿಸಿದ್ದರೂ ಎಲ್ಲರೂ ಸುಖಿಗಳಾಗಿದ್ದಾರೆ ಎನ್ನಲಾಗುತ್ತಿಲ್ಲ. ಅಲ್ಲಲ್ಲಿ ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ ಕಿರುಕುಳದಂತಹ ಅಮಾನವೀಯ ಕೃತ್ಯಗಳು ಮಹಿಳೆಯರ ಮೇಲೆ ನಡೆಯುತ್ತಲೇ ಇದೆ. ಧೈರ್ಯವಂತ ಕೆಲವು ಮಹಿಳೆಯರು ಎಲ್ಲವನ್ನೂ ಎದುರಿಸಿ ನಿಂತಿದ್ದಾರೆಯಾದರೂ ಕೆಲವರು ಆತ್ಮಹತ್ಯೆಯಂತಹ ಕೃತ್ಯಗಳಿಗೆ ಕೈಹಾಕುತ್ತಿರುವುದು ದುರಂತ.
ಧೈರ್ಯಗೆಡಬೇಡಿ, ಮುನ್ನುಗ್ಗಿ
ಧೈರ್ಯಗೆಡಬೇಡಿ: ಇವತ್ತು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅನ್ಯಾಯಗಳಿಗೆ ಇತಿಶ್ರೀ ಹಾಡಲು ಸರ್ಕಾರ ಕಾನೂನು ಕ್ರಮ ಜಾರಿಗೆ ತಂದಿದೆಯಲ್ಲದೆ, ನೆರವಿಗೆ ಹಲವಾರು ಸಂಘಟನೆಗಳಿವೆ. ಹೀಗಿರುವಾಗ ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯಗಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗುವುದನ್ನು ಮರೆತುಬಿಡಿ. ನಿಮ್ಮನ್ನು ನಂಬಿ ಒಂದಷ್ಟು ಜೀವಗಳಿವೆ ಎಂಬುದನ್ನು ಮರೆಯಬೇಡಿ.