ಹಣೆಯಲಿ ಕುಂಕುಮ ನಗುತಿದೆ ಏನೇನೊ ಕಥೆಯಾ ಹೇಳುತಿದೆ
ನಮ್ಮ ಹಿಂದೂ ಧರ್ಮದಲ್ಲಿ ಕುಂಕುಮಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಈ ಕುಂಕುಮವನ್ನು ಹೇಗೆ ತಯಾರಿಸುತ್ತಾರೆ. ಇದನ್ನು ಯಾವಾಗಲೂ ಹಣೆಯಲ್ಲಿ ಹಚ್ಚಿಕೊಳ್ಳಬೇಕು ಏಕೆ? ಮುಂದೆ ಓದಿ...
ನಮ್ಮ ಹಿಂದೂ ಧರ್ಮದಲ್ಲಿ ಕುಂಕುಮಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಈ ಕುಂಕುಮವನ್ನು ಪ್ರತ್ಯೇಕವಾಗಿ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಬಳಸಲಾಗುತ್ತದೆ. ಈ ಕುಂಕುಮವನ್ನು ಅರಿಷಿಣ ಅಥವಾ ಖಾವಿಯಿಂದ ತಯಾರಿಸುತ್ತಾರೆ.
ಅರಿಷಿಣ ಕೊಂಬುಗಳನ್ನು ಚೆನ್ನಾಗಿ ಒಣಗಿಸಿ, ಅದನ್ನು ಪುಡಿಮಾಡಿ, ಅದಕ್ಕೆ ನೀರೂಡಿಸಿದ ಸುಣ್ಣ ಬೆರೆಸಿದಾಗ ಹಳದಿ ಬಣ್ಣದಲ್ಲಿದ್ದದ್ದು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಆಗ ಕುಂಕುಮ ತಯಾರಾಗುತ್ತದೆ.
ಕುಂಕುಮವನ್ನು ಸಾಮಾನ್ಯವಾಗಿ ಹಣೆಯ ಮೇಲೆ ಹಚ್ಚಿಕೊಳ್ಳುತ್ತಾರೆ. ಕುಂಕುಮವನ್ನು ಹಣೆ ಮೇಲೆ ಇಟ್ಟುಕೊಳ್ಳಲು ಕಾರಣವೇನೆಂದರೆ ಯೋಗ ವಿಜ್ಞಾನದ ಪ್ರಕಾರ ಮಾನವ ದೇಹ ಏಳು ಶಕ್ತಿ ಕೇಂದ್ರಗಳಾಗಿ ವಿಭಜಿಸಲ್ಪಟ್ಟಿದೆ. ಬೆನ್ನು ಮೂಳೆಯ ಮೂಲದಿಂದ ಪ್ರಾರಂಭವಾಗಿ ತಲೆಯ ತುದಿಯವರೆಗೆ ಹರಡಿದೆ. ಈ ಶಕ್ತಿ ಕೇಂದ್ರಗಳಲ್ಲಿ ಆರನೆಯ ಚಕ್ರವು ಮೂರನೆಯ ಕಣ್ಣು ಎಂದೂ ಹೇಳಲಾಗುತ್ತದೆ.
ಇದು ಕಣ್ಣುಗಳ ಹುಬ್ಬುಗಳ ನಡುವೆ ಇರುವ ಬಿಂದು. ಈ ಬಿಂದುವಿನ ಮೂಲಕ ಮಾನವ ಆಧ್ಯಾತ್ಮಿಕವಾಗಿ ದೈವಿಕತೆಗೆ ತೆರೆಯುವ ಸ್ಥಳ ಎಂದೂ ನಂಬಲಾಗಿದೆ. ಆದ್ದರಿಂದ ಕುಂಕುಮವನ್ನು ದೇಹದ ಅತ್ಯಂತ ಪವಿತ್ರವಾದ ಸ್ಥಳದಲ್ಲಿ ಅಂದರೆ ಹಣೆಯ ಮೇಲೆ ಇಡಲಾಗಿದೆ ಎಂದು ಹೇಳಲಾಗುತ್ತದೆ.
ಮನೆಗೆ ಹೆಣ್ಣು ಮಗು ಅಥವಾ ಮದುವೆಯಾದ ಮಹಿಳೆ ಬಂದರೆ ಅವರಿಗೆ ಗೌರವ ಸೂಚಕದಂತೆ ಕುಂಕಮವನ್ನು ನೀಡುತ್ತಾರೆ. ಭಾರತದ ಬಹುಪಾಲು ಪ್ರದೇಶಗಳಲ್ಲಿ ವಿವಾಹಿತ ಮಹಿಳೆಯರು ಪ್ರತಿ ದಿನ ತಮ್ಮ ತಲೆಯ ಬೈತಲೆಯ ಭಾಗದಲ್ಲಿ ಕುಂಕುಮವನ್ನು ಇಟ್ಟುಕೊಳ್ಳುತ್ತಾರೆ.
ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುವುದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡ ಬಂದು ಮುಖದ ಮೇಲಿನ ಸ್ಮಾಯುಗಳಿಗೆ ರಕ್ತದ ಪೂರೈಕೆಯಾಗುತ್ತದೆ.
ಆಗ ಹಣೆಯ ಮೇಲಿನ ಸ್ನಾಯುಗಳ ಒತ್ತಡ ಕಡಿಮೆಯಾಗಿ ಮುಖ ಪ್ರಕಾಶ ಮಾನವಾಗಿ ಕಂಗೊಳಿಸುತ್ತದೆ. ಮಹಿಳೆಯರು ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ಅವರ ಆತ್ಮಶಕ್ತಿ ಜಾಗೃತಗೊಳ್ಳುತ್ತದೆ.
ಆದರೆ, ಭಾರತದಲ್ಲಿ ವಿಧವೆಯರು ಈ ಕುಂಕುಮವನ್ನು ಹಣೆಗೆ ಹಚ್ಚುವುದಿಲ್ಲ. ಇದಕ್ಕೆ ಶಾಸ್ತ್ರಗಳು ನೀಡುವ ಕಾರಣವೆಂದರೆ, ಗಂಡನ ಮರಣಾನಂತರ ಆತನ ಹೆಂಡತಿ ಹಣೆಯಲ್ಲಿ ಕುಂಕುಮವನ್ನು ಧರಿಸುವಾಗ ಆಕೆಯು ತನ್ನ ಗಂಡನನ್ನು ನೆನೆಸಿಕೊಳ್ಳುತ್ತಾಳೆ. ಇದರಿಂದ ಆಕೆಯ ಗಂಡನ ಶರೀರವು ಮತ್ತೆ ಭೂಲೋಕಕ್ಕೆ ಬರುವ ಅನಿವಾರ್ಯ ಸನ್ನಿವೇಶವುಂಟಾಗಬಹುದು ಎಂದು ಹೇಳಲಾಗಿದೆ.