ನುಡಿ ಸಮಾನತೆ ಮತ್ತು ಹಕ್ಕಿಗಾಗಿ ಚಳವಳಿ
ಭಾರತದಲ್ಲಿನ ತಾಯ್ನುಡಿ ಪರವಾದ ಚಳವಳಿಗಾರರು ಕೂಡಿಕೊಂಡು "ನುಡಿ ಸಮಾನತೆ ಮತ್ತು ಹಕ್ಕಿಗಾಗಿ ಚಳವಳಿ" ಎಂಬ ನ್ಯಾಸ ಸಂಸ್ಥೆಯನ್ನು ರಚಿತಗೊಂಡಿದೆ. ಈ ಸಂಸ್ಥೆಯು ಕಲಿಕೆ, ಸರ್ಕಾರಿ ಸೇವೆಗಳು, ಆಡಳಿತ, ಸಂಸ್ಕೃತಿ ಮತ್ತಿತರ ಭಾಷಾ ಆಯಾಮಗಳಲ್ಲಿ ತಾಯ್ನುಡಿಯ ಬಳಕೆಯ ಮಹತ್ವವನ್ನು ಪ್ರಚುರಪಡಿಸಿ ಜಾಗೃತಿ ಮೂಡಿಸಲು ಬದ್ಧವಾಗಿರುತ್ತದೆ.
ಭಾರತೀಯ ಸಂವಿಧಾನದ ಎಂಟನೇ ಅನುಚ್ಛೇದದಲ್ಲಿ ಸೂಚಿಸಲಾಗಿರುವ ಎಲ್ಲಾ ಭಾಷೆಗಳಿಗೆ ಭಾರತದ ಆಡಳಿತ ಭಾಷೆಯ ಸ್ಥಾನಮಾನ ಕೊಡಿಸುವಲ್ಲಿಯೂ, ಎಲ್ಲ ಭಾರತೀಯ ಭಾಷೆಗಳಿಗೂ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶ ದೊರಕಿಸಿಕೊಡುವಲ್ಲಿಯೂ ಮತ್ತು ಎಲ್ಲಾ ಭಾರತೀಯ ಭಾಷಿಕರಿಗೆ ಸಮಾನ ಭಾಷಿಕ ಹಕ್ಕುಗಳನ್ನು ಒದಗಿಸಿಕೊಡುವದೂ ಸೇರಿದಂತೆ ಅನೇಕ ಗುರಿಗಳನ್ನು ಹೊಂದಿದೆ.
ಭಾರತದ ಇಂದಿನ ಭಾಷಾನೀತಿಯು ಸಂಪೂರ್ಣವಾಗಿ ಹಳಿತಪ್ಪಿದೆ. ಈ ವಿಷಯದಲ್ಲಿ ತಮಗೆ ತೋಚಿದಂತೆ ರೀತಿನೀತಿಗಳನ್ನು ರೂಪಿಸಿರುವ ಭಾರತದ ಆಡಳಿತಗಾರರು ಪ್ರಪಂಚದ ನಾನಾಕಡೆಗಳಲ್ಲಿ ನಡೆಸಲಾದ ಅಧ್ಯಯನಗಳನ್ನಾಗಲೀ, ವೈಜ್ಞಾನಿಕವಾದ ಸಂಶೋಧನೆಗಳ ಫಲಿತವನ್ನಾಗಲಿ, ತಜ್ಞರುಗಳ ಸಲಹೆಯನ್ನಾಗಲೀ ಪರಿಗಣಿಸಿಲ್ಲವಷ್ಟೇ ಅಲ್ಲದೆ ಸ್ವಾತಂತ್ರ್ಯಾನಂತರ ನಮ್ಮ ದೇಶದಲ್ಲೇ ಅನೇಕ ಸಮಿತಿಗಳು ನೀಡಿರುವ ಸಲಹೆಗಳನ್ನೂ ಕಡೆಗಣಿಸಿದ್ದಾರೆ. ಈ ಕಾರಣದಿಂದಲೇ ಭಾರತದಲ್ಲಿ ಕಲಿಕೆ, ಸಂಸ್ಕೃತಿ ಹಾಗೂ ನುಡಿಗಳು ಅವನತಿಯ ಹಾದಿಯನ್ನು ಹಿಡಿದಿವೆ. [ವಿಶ್ವ ತಾಯ್ನುಡಿ ದಿನ ಇತರ ಭಾಷೆಯ ದನಿಯೂ ಕೇಳಲಿ]
ಇವಿಷ್ಟೇ ಅಲ್ಲದೆ ಭಾರತದ ಈ ಹುಳುಕಿನ ಭಾಷಾನೀತಿಯ ಪರಿಣಾಮ ಆಡಳಿತ, ಎಲ್ಲರ ಒಳಗೊಳ್ಳುವಿಕೆ ಹಾಗೂ ನ್ಯಾಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ನಿಜವಾದ ಒಕ್ಕೂಟ ವ್ಯವಸ್ಥೆ ಮತ್ತು ರಾಷ್ಟ್ರೀಯ ಏಕತೆಯ ಮೇಲೆ ತನ್ನ ಕರಾಳ ನೆರಳನ್ನು ಚಾಚಿದೆ. ಭಾರತೀಯರಲ್ಲಿ ಭಾಷೆಯ ಕುರಿತಾಗಿರುವ ಕೆಲವು ಹುಸಿನಂಬಿಕೆಗಳೇ ಇಂದಿನ ದುಃಸ್ಥಿತಿಗೆ ಮೂಲಕಾರಣ.
ವಿಶ್ವದಲ್ಲಿ ತಾಯ್ನುಡಿಯನ್ನು ತಮ್ಮ ನಾಡಿನ ಎಲ್ಲಾ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಹಾಗೂ ವಿಸ್ತೃತವಾಗಿ ಬಳಸುತ್ತಿರುವ ನಾಡುಗಳೇ ಇಂದು ಕಲಿಕೆ, ವಾಣಿಜ್ಯ, ವ್ಯಾಪಾರ ವಹಿವಾಟು, ವಿಜ್ಞಾನ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿರುವುದನ್ನು ನಾವು ಕಾಣಬಹುದಾಗಿದೆ. ಆದರೆ ತಾಯ್ನುಡಿಗಳನ್ನು ಕಡೆಗಣಿಸುತ್ತಿರುವ ಭಾರತ, ಈ ಎಲ್ಲಾ ಕ್ಷೇತ್ರಗಳಲ್ಲಿ ಬಹಳಷ್ಟು ಹಿಂದುಳಿದಿದೆ. ಇದು ಭಾರತೀಯರಿಗೆ ತಮ್ಮ ಬದುಕಿನ ಬಹುತೇಕ ಕ್ಷೇತ್ರಗಳಲ್ಲಿ ತೀರದ ತೊಡಕಿಗೆ ಕಾರಣವಾಗಿದೆ, ಇವೆಲ್ಲಾ ಕಾರಣಗಳಿಂದಾಗಿ ಭಾರತದಲ್ಲಿ, ಪ್ರಪಂಚವೇ ಒಪ್ಪುತ್ತಿರುವ, ವೈಜ್ಞಾನಿಕವಾಗಿ ಸಾಬೀತಾಗಿರುವ, ತಜ್ಞರು ಅನುಮೋದಿಸುತ್ತಿರುವ ಭಾಷಾನೀತಿಯನ್ನು ಜಾರಿಗೊಳಿಸಬೇಕಾಗಿದೆ. [ಮೂಲ ಅಮೆರಿಕಾ ಜನಾಂಗದ ಭಾಷೆಯಲ್ಲಿ ಕನ್ನಡದ ಪ್ರಭಾವ]
ಇದಕ್ಕಾಗಿ ನಾವು ಎಲ್ಲಾ ಕ್ಷೇತ್ರಗಳಲ್ಲಿಯೂ ಜನರ ತಾಯ್ನುಡಿಗೆ ಮೊದಲ ಆದ್ಯತೆಯನ್ನು ನೀಡುವಂಥಾ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ. ಇದಕ್ಕಾಗಿಯೇ ಭಾರತದ ನಾನಾ ಭಾಗಗಳಲ್ಲಿರುವ ತಾಯ್ನುಡಿ ಪರವಾದ ಚಳವಳಿಗಾರರು ಒಗ್ಗೂಡಿ "ಕ್ಯಾಂಪೇನ್ ಫಾರ್ ಲಾಂಗ್ವೇಜ್ ಈಕ್ವಾಲಿಟಿ ಅಂಡ್ ರೈಟ್ಸ್ (ನುಡಿ ಸಮಾನತೆ ಮತ್ತು ಹಕ್ಕು ಚಳವಳಿ") ಎಂಬ ನ್ಯಾಸ ಸಂಸ್ಥೆಯನ್ನು ರಚಿತಗೊಂಡಿದೆ.
ಈ ಸಂಸ್ಥೆಯನ್ನು ಕಟ್ಟುವ ಆಲೋಚನೆಯು ಹುಟ್ಟಿದ್ದು ಕಳೆದ ಸೆಪ್ಟೆಂಬರ್ 2015ರಲ್ಲಿ ಚೆನ್ನೈನಲ್ಲಿ ತಮಿಳು ಭಾಷಿಕರು ಏರ್ಪಡಿಸಿದ್ದ ಒಂದು ಕಾರ್ಯಕ್ರಮದಲ್ಲಿ. ಎಂಟು ಬೇರೆ ಬೇರೆ ನುಡಿಯಾಡುವ ದೊಡ್ದಸಂಖ್ಯೆಯ ಜನರು ಆ ಕಾರ್ಯಕ್ರಮದಲ್ಲಿ ಸೇರಿದ್ದರು. ಬರಿಯ ಆರು ತಿಂಗಳ ಅವಧಿಯಲ್ಲಿಯೇ ಅಂದರೆ 21ನೇ ಫೆಬ್ರವರಿ 2016ರಂದು ದೆಹಲಿಯಲ್ಲಿ ಸಂಸ್ಥೆಯು ಏರ್ಪಡಿಸಿದ್ದ ವಿಶ್ವ ತಾಯ್ನುಡಿ ದಿನಾಚರಣೆಯ ಹೊತ್ತಿಗೆ ಸಂಸ್ಥೆಯಲ್ಲಿ ನಲವತ್ತು ಭಾಷೆಗಳ ಪ್ರತಿನಿಧಿಗಳು ಸೇರಿದ್ದು ಸದರಿ ಚಳವಳಿಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ. ಅಲ್ಲಿ "ದೆಹಲಿ ಹಕ್ಕೊತ್ತಾಯ" ಎಂಬ ಹೆಸರಿನಲ್ಲಿ ಒಂದು ಘೋಷಣಾ ಪತ್ರವನ್ನು ಕೂಡಾ ಬಿಡುಗಡೆಗೊಳಿಸಲಾಗಿದೆ. [ಪ್ರತಿಯೊಂದೂ ಕನ್ನಡದಲ್ಲೇ ಸಿಗಲಿ - ಆನಂದ್ ಜಿ]
ಪಂಜಾಬಿನ ಡಾ. ಜೋಗಾಸಿಂಗ್ ಅವರನ್ನು ಅಧ್ಯಕ್ಷರನ್ನಾಗಿಯೂ, ತಮಿಳುನಾಡಿನ ತಿರು ಸೆಂತಿಲ್ ನಾಥನ್ ಅವರನ್ನು ಕಾರ್ಯದರ್ಶಿಗಳಾಗಿಯೂ, ಕರ್ನಾಟಕದ ಆನಂದ್ ಜಿ ಅವರನ್ನು ಉಪಾಧ್ಯಕ್ಷರನಾಗಿಯೂ, ಪಂಜಾಬಿನ ಡಾ. ರವೈಲ್ ಸಿಂಗ್ ಅವರನ್ನು ಖಜಾಂಜಿಯಾಗಿಯೂ ನೇಮಕಮಾಡಲಾಗಿದ್ದು, ಮಹಾರಾಷ್ಟ್ರದ ಡಾ. ದೀಪಕ್ ಪವಾರ್, ಕೇರಳದ ಡಾ. ಪವಿತ್ರನ್, ಪಶ್ಚಿಮ ಬಂಗಾಳದ ಡಾ. ಗೊರ್ಗೋ ಚಟರ್ಜಿ, ಒಡಿಸ್ಸಾದ ಸಾಕೇತ್ ಸಾಹು ಹಾಗೂ ಕರ್ನಾಟಕದ ಕೆ.ಎಸ್. ಪ್ರಿಯಾಂಕ್ ಅವರುಗಳು ಸದರಿ ನ್ಯಾಸದ ಇನ್ನಿತರ ಸ್ಥಾಪಕ ಸದಸ್ಯರುಗಳಾಗಿದ್ದಾರೆ.