ಪೇಜಾವರ ಶ್ರೀಗಳಿಗೆ ವಿಪರೀತ ಬೆನ್ನು ನೋವು, 15 ದಿನ ವಿಶ್ರಾಂತಿ ಸೂಚನೆ
ಉಡುಪಿ, ಜನವರಿ 20 : ಇಲ್ಲಿನ ಹೈಟೆಕ್ ಆಸ್ಪತ್ರೆಯಲ್ಲಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಅವರನ್ನು ಎಲುಬು ಹಾಗೂ ಕೀಲು ತಜ್ಞರು ಪರೀಕ್ಷಿಸಿದ್ದು, ಸಿಟಿ ಸ್ಕ್ಯಾನ್ ಮಾಡಲಾಗಿದೆ. ಹದಿನೈದು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಉಡುಪಿ ಪೇಜಾವರ ಹಿರಿಯ ಶ್ರೀಗಳಿಗೆ 'ಯತಿಕುಲ ಚಕ್ರವರ್ತಿ' ಬಿರುದು
ಜನವರಿ ಹದಿನೇಳರಂದು ತಮ್ಮ ಪರ್ಯಾಯದ ಅವಧಿಯನ್ನು ಪೂರ್ತಿ ಮಾಡಿದ್ದ ಪೇಜಾವರ ಶ್ರೀಗಳು ಸಂಚಾರದಲ್ಲಿ ತೊಡಗಿದ್ದರು. ಸೋಂದಾ, ಗದಗ ಹಾಗೂ ಮಂತ್ರಾಲಯಕ್ಕೆ ತೆರಳಿದ್ದರು. ಮಂತ್ರಾಲಯದಿಂದ ಹೈದರಾಬಾದ್ ಮಾರ್ಗವಾಗಿ ಹಿಂತಿರುಗುವಾಗ ಮಾರ್ಗಮಧ್ಯ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು.
ಮಾರ್ಗ ಮಧ್ಯ ಅಂದರೆ ಕರ್ನೂಲ್ ನಲ್ಲಿ ಕಾರಿಗೆ ಬ್ರೇಕ್ ಹಾಕುವಾಗ ಬೆನ್ನಿನಲ್ಲಿ ಉಳುಕು ಕಾಣಿಸಿಕೊಂಡು, ನೋವು ವಿಪರೀತವಾಗಿತ್ತು. ಆ ನಂತರ ಅನಿವಾರ್ಯವಾಗಿ ಪೇಜಾವರ ಶ್ರೀಗಳು ವಿಮಾನದಲ್ಲಿ ವಾಪಸಾಗಿದ್ದರು. ಇದೀಗ ವೈದ್ಯರು ಆರೋಗ್ಯ ತಪಾಸಣೆ ಮಾಡಿದ್ದು, ಸಂಚಾರ ಮಾಡದಂತೆ ಸೂಚನೆ ನೀಡಿದ್ದಾರೆ. ಕೆಲ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆಯೂ ತಿಳಿಸಿದ್ದಾರೆ.