ಮತ್ತೆ ವಿವಾದಿತ ಹೇಳಿಕೆ ನೀಡಿದ ಅನಂತ್ಕುಮಾರ್ ಹೆಗಡೆ
ಶಿರಸಿ, ಫೆಬ್ರವರಿ 14: 'ಜಾತ್ಯಾತೀತರಿಗೆ ತಮ್ಮ ರಕ್ತದ ಗುರುತೇ ಇಲ್ಲ' ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದ ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಮತ್ತೆ ಅದೇ ರೀತಿಯ ಮತ್ತೊಂದು ಹೇಳಿಕೆ ನೀಡಿದ್ದಾರೆ. ಈ ಬಾರಿ ಅವರು ಸಿದ್ದರಾಮಯ್ಯ, ರಾಹುಲ್ ಗಾಂಧಿಯ ರಕ್ತದ ಹಿಂದೆ ಬಿದ್ದಿದ್ದಾರೆ.
ಆಗ ಜಾತ್ಯಾತೀತರ ಜಾತಿ ಕೆದಕಲು ಹೊರಟಿದ್ದ ಅನಂತ್ಕುಮಾರ್ ಹೆಗಡೆ ಈಗ ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರ ರಕ್ತ ಪರೀಕ್ಷೆ ಮೂಲಕ ಅವರ ಜಾತಿ, ಧರ್ಮದ ಮೂಲ ಕೆದಕುವ ಪ್ರಯತ್ನ ಮಾಡಿದ್ದಾರೆ.
ಮತ್ತೆ ಜಾತ್ಯಾತೀತರ ಬಗ್ಗೆ ಕುಹುಕವಾಡಿದ ಅನಂತ್ಕುಮಾರ್ ಹೆಗಡೆ
ಶಿರಸಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ರಾಹುಲ್ ಗಾಂಧಿ ಆಗಮನದ ವೇಳೆ ದೇವಸ್ಥಾನಗಳಿಗೆ ಭೇಟಿ ಕೊಟ್ಟ ಬಗ್ಗೆ ವ್ಯಂಗ್ಯವಾಡುವ ಭರದಲ್ಲಿ 'ರಕ್ತದ ಪರಿಚಯ ವಿಲ್ಲದವರಿಗೆ ಈಗ ರಕ್ತದ ಪರಿಚಯವಾಗಲು ಶುರುವಾಗಿದೆ' ಎಂದು ಹೇಳಿದ್ದಾರೆ. ಆ ಮೂಲಕ ರಾಹುಲ್ ಅವರಿಗೆ ಅವರ ಮೂಲದ ಬಗ್ಗೆಯೇ ತಿಳಿದಿಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿ ಅವರ ಧರ್ಮದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿರುವ ಅನಂತ್ಕುಮಾರ್ ಹೆಗಡೆ ಅವರ ಧರ್ಮವನ್ನು ಹುಡುಕುವ ಕಾರ್ಯವನ್ನು ಸಿದ್ದರಾಮಯ್ಯ ಮಾಡಬೇಕು ಎನ್ನುವ ಅರ್ಥ ಬರುವಂತೆ 'ರಾಹುಲ್ ಗಾಂಧಿ ಯಾರು ಎಂಬುದಕ್ಕೆ ಅವರ ರಕ್ತವನ್ನ ಸಿದ್ದರಾಮಯ್ಯ ಟೆಸ್ಟ್ ಮಾಡಬೇಕು' ಎಂದಿದ್ದಾರೆ.
ಸಿದ್ದರಾಮಯ್ಯ ವೋಟಿನಾಸೆಗೆ ಬೂಟು ನೆಕ್ತಾರೆ ಎಂದು ನಾಲಿಗೆ ಹರಿಬಿಟ್ಟ ಹೆಗಡೆ
ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರನ್ನು 'ನಕಲಿ ಹಿಂದೂ' ಎಂದು ಕರೆದಿರುವ ಕೇಂದ್ರ ಸಚಿವ 'ರಾಹುಲ್ ಕರ್ನಾಟದಲ್ಲಿ ಓಡಾಡಿದಷ್ಟು ಜನರಿಗೆ ಮನರಂಜನೆ ಸಿಗಲಿದೆ' ಎಂದಿದ್ದಾರೆ.