ಹುತಾತ್ಮರಲ್ಲೂ ನಾವು ಕೋಮುವಾದ ಹುಡುಕೋಲ್ಲ: ಭಾರತೀಯ ಸೇನೆ
ನವದೆಹಲಿ, ಅಕ್ಟೋಬರ್ 14: 'ಹುತಾತ್ಮರಲ್ಲಿ ನಾವು ಕೋಮುವಾದ ಹುಡುಕುವುದಿಲ್ಲ...' ಎನ್ನುವ ಮೂಲಕ ಎಐಎಂಐಎಂ(All India Majlis-e-Ittehad-ul Muslimeen) ಮುಖಂಡ ಅಸಾದುದ್ದಿನ್ ಓವೈಸಿ ಅವರ ಹೇಳಿಕೆಗೆ ಭಾರತೀಯ ಸೇನೆ ಖಡಕ್ ಪ್ರತಿಕ್ರಿಯೆ ನೀಡಿದೆ.
ಕಾಶ್ಮೀರದ ಸುಜ್ವಾನ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ ಅಸಾದುದ್ದಿನ್ ಓವೈಸಿ, 'ಮುಸ್ಲಿಮರನ್ನು ಪಾಕಿಸ್ತಾನಿಗಳು ಎನ್ನುವವರು ಒಮ್ಮೆ ಇಲ್ಲಿ ನೋಡಿ, ಸುಜ್ವಾನ್ ನಲ್ಲಿ ನಡೆದ ದಾಳಿಯಲ್ಲಿ ಮೃತರಾದ ಏಳು ಸೈನಿಕರಲ್ಲಿ ಐವರು ಮುಸ್ಲಿಮರು!' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಯೋಧರ ನಿಷ್ಕಾರಣ ಸಾವಿಗೆ ಭಾವುಕರಾದ ರಕ್ಷಣಾ ಸಚಿವೆ
ಈ ಕುರಿತು ಇಂದು ಪ್ರತಿಕ್ರಿಯೆ ನೀಡಿದ ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ದೇವ್ರಾಜ್ ಅಂಬು, ಹುತಾತ್ಮರ ಜಾತಿ, ಮತ ಯಾವುದು ಎಂದು ಹುಡುಕುತ್ತ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರಲ್ಲೂ ನಾವು ಕೋಮುವಾದ ಹುಡುಕುವುದಿಲ್ಲ' ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಸುಜ್ವಾನ್ ದಾಳಿಯ ಬಗ್ಗೆ ಮಾತನಾಡಿದ್ದ ಓವೈಸಿ, "ನಾವೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುತ್ತಿದ್ದೇವೆ. ಆದರೆ ಕೆಲವರು ಮುಸ್ಲಿಮರನ್ನು ಪಾಕಿಸ್ತಾನಿಗಳು ಎನ್ನುತ್ತಾರೆ. ಭಯೋತ್ಪಾದಕರು ನಮ್ಮ ಪ್ರಾಣವನ್ನೂ ತೆಗೆಯುತ್ತಾರೆ. ಅವರಿಗೆ ಮತವಿಲ್ಲ, ಇಂಥ ಮತದವರ ಪ್ರಾಣವೇ ಬೇಕೆಂದಿಲ್ಲ" ಎಂದು ಸಹ ಹೇಳಿದ್ದರು.