ರಾಜಸ್ಥಾನದಲ್ಲಿ ವೀರ ಮರಣ ಅಪ್ಪಿದ ದಾವಣಗೆರೆ ಸೈನಿಕ ಜಾವೇದ್
ದಾವಣಗೆರೆ, ಫೆಬ್ರವರಿ 13: ನಗರದ ಯೋಧ ಜಾವೇದ್ (33) ರಾಜಸ್ಥಾನದ ಪೋಖ್ರಾನ್ನಲ್ಲಿ ವೀರ ಮರಣ ಅಪ್ಪಿದ್ದಾನೆ.
ರಾಜಸ್ಥಾನದ ಪೊಖ್ರಾನ್ನ ಆರ್ಮಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ನಲ್ಲಿ ತರಬೇತಿ ಪಡೆಯುವ ವೇಳೆ ಆಕಸ್ಮಿಕವಾಗಿ ಬಾಂಬ್ ಸಿಡಿದು ಜಾವೇದ್ ಮೃತ ಪಟ್ಟಿದ್ದು, ಆತನ ಜೊತೆಗಿದ್ದ ಮತ್ತೊಬ್ಬ ಯೋಧ ತೀವ್ರವಾಗಿ ಗಾಯಗೊಂಡಿದ್ದಾರೆ.
ದಾವಣಗೆರೆಯ ಹರಿಹರ ನಗರದ ನಿವಾಸಿ ಅಬ್ದುಲ್ ಖಾದರ್ ಸಾಬ್ ಅವರ ಮಗ ಜಾವೇದ್ 2004ರಲ್ಲಿ ಸೇನೆ ಸೇರಿದ್ದರು. ಇವರು 5 ವರ್ಷಗಳ ಹಿಂದೆ ಮದುವೆ ಆಗಿದ್ದರು. ಇಬ್ಬರು ಮುದ್ದಾದ ಹೆಣ್ಣುಮಕ್ಕಳನ್ನು ಜಾವೇದ್ ಅಗಲಿದ್ದಾರೆ.
ಒಂದೂವರೆ ತಿಂಗಳ ಹಿಂದಷ್ಟೆ ದಾವಣಗೆರೆಗೆ ಬಂದು ಹೋಗಿದ್ದ ಯೋಧ ಜಾವೇದ್ ಈಗ ಶವವಾಗಿ ಬರುತ್ತಿದ್ದಾರೆ. ಬುಧವಾರ ಬೆಳಿಗ್ಗೆ ಜೋಧಪುರದಿಂದ ಜಾವೇದ್ ಕಳೆಬರ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಬರಲಿದೆ. ಗುರುವಾರ ಬೆಳಿಗ್ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ವೀರಯೋಧನ ಮರಣಕ್ಕೆ ದಾವಣಗೆರೆ ಜನತೆ ಕಂಬನಿ ಮಿಡಿದಿದ್ದು, ನಗರದಾದ್ಯಂತ ಜಾವೇದ್ ನೆನಪಿನಲ್ಲಿ ಭಾವಚಿತ್ರಗಳನ್ನು ಹಾಕಿ ಶ್ರದ್ಧಾಂಜಲಿ ಕೋರಲಾಗಿದೆ.