ಅಭಿವೃದ್ಧಿ ನೀಲನಕ್ಷೆ ರೆಡಿ, ಅಧಿಕಾರ ಸಿಕ್ಕರೆ ಅನುಷ್ಠಾನ:ಎಚ್ಡಿಕೆ
ಬೆಂಗಳೂರು, ಫೆಬ್ರವರಿ 14: ನಗರದಲ್ಲಿ ಆಯೋಜಿಸಿದ್ದ ಆಟೋ, ಲಾರಿ ಚಾಲಕರು ಮತ್ತು ಮಾಲೀಕರೊಂದಿಗೆ ನಡೆಸಿದ ಸಂವಾದದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಸ್ಡಿ ಕುಮಾರಸ್ವಾಮಿ ಅವರು ಭಾವುಕರಾಗಿ ಕಣ್ಣೀರು ಹಾಕಿದರು.
ಕುಮಾರಸ್ವಾಮಿ ಅವರ ನೆರವಿನಿಂದ ತಮ್ಮ ಮಗುವನ್ನು ಉಳಿಸಿಕೊಂಡ ದಂಪತಿಯೊಂದು ವೇದಿಕೆ ಮೇಲೆ ಬಂದು ಕುಮಾರಸ್ವಾಮಿ ಅವರ ಸಹಾಯಕ್ಕೆ ತುಂಬು ಹೃದಯದಿಂದ ಕೃತಜ್ಞತೆ ಅರ್ಪಿಸಿ ಕಾಲಿಗೆರಗಿದಾಗ ಗದ್ಗದಿತರಾದ ಕುಮಾರಸ್ವಾಮಿ ವೇದಿಕೆ ಮೇಲೆಯೇ ಕಣ್ಣೀರು ಹಾಕಿದರು.
ನಂತರ ಸಾವರಿಸಿಕೊಂಡು ಮಾತನಾಡಿದ ಅವರು ರಾಜ್ಯದಲ್ಲಿ ತುಳಿತಕ್ಕೊಳಗಾಗಿರುವ ಶ್ರಮಿಕ ವರ್ಗದ ಪರವಾದ ಧನಿಯಾಗುವ ಇಚ್ಛೆಯಿಂದಲೇ ಈ ಬಾರಿ ಚುನಾವಣೆಯಲ್ಲಿ ಕಣಕ್ಕಿಳಿತ್ತಿದ್ದು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಇಷ್ಟು ದಿನ ಇದ್ದ ಐಪಿಎಸ್ ಅಧಿಕಾರಗಳ ಸ್ವರ್ಗ ಹೋಗಿ ರಾಜ್ಯವು ಶ್ರಮಿಕರ ಸ್ವರ್ಗವಾಗುತ್ತದೆ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಭರವಸೆಗಳ ಸುರಿಮಳೆಯನ್ನೇ ಸುರಿಸಿದ ಕುಮಾರಸ್ವಾಮಿ ಅವರು ರೈತರು, ಶ್ರಮಿಕ ವರ್ಗದವರಿಗೆ ಅತ್ಯುತ್ತಮ ಜೀವನ ಕಲ್ಪಿಸಿಕೊಡಬೇಕೆಂಬ ಮಹದಾಸೆ ನನಗಿದ್ದು, ಆ ಕಾರಣಕ್ಕಾಗಿಯೇ ನಾನು ಮತ್ತೊಮ್ಮೆ ಮುಖ್ಯಮಂತ್ರ ಆಗಲು ನಿಮ್ಮ ಆಶೀರ್ವಾದ ಕೇಳುತ್ತಿದ್ದೇನೆ ಎಂದರು.
ಆಟೋ ಚಾಲಕರು ಮತ್ತು ಲಾರಿ ಮಾಲೀಕರು ತಮ್ಮ ಸಮಸ್ಯೆಗಳನ್ನು ಕುಮಾರಸ್ವಾಮಿ ಅವರ ಬಳಿ ಹೇಳಿಕೊಂಡರು. ಪೊಲೀಸರ ಕಿರುಕುಳ, ಆರ್ಟಿಒ ಅಧಿಕಾರಿಗಳ ಕಿರುಕುಳ, ಪಾರ್ಕಿಂಗ್ ಅವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು.
ಎಲ್ಲಾ ಪ್ರಶ್ನೆಗಳನ್ನು ಸಮಾನದಿಂದ ಕೇಳಿದ ಕುಮಾರಸ್ವಾಮಿ ರಾಜ್ಯದ ಸಂಪೂರ್ಣ ಅಭಿವೃದ್ಧಿಗೆ ಜೆಡಿಎಸ್ ನೀಲಿ ನಕ್ಷೆ ತಯಾರಿಸಿದೆ. ಅಧಿಕಾರಕ್ಕೆ ಬಂದರೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ಕುಮಾರಸ್ವಾಮಿ ಅವರು ಎಲ್ಲ ವರ್ಗದ ಜನರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಹಿರಿಯ ನಾಗರೀಕರು, ವೈದ್ಯರು, ವಿದ್ಯಾರ್ಥಿಗಳೊಂದಿಗೆ ಈಗಾಗಲೇ ಸಂವಾದ ನಡೆಸಿದ್ದಾರೆ.