ವಿಶೇಷ ಲೇಖನ : ನಾಗಪಂಚಮಿ- ನಾಗಾವಲೋಕನ
ನಾಗಾರಾಧನೆ ಈ ಭೂಮಂಡಲದಲ್ಲಿ ಇಂದು- ನಿನ್ನೆಯದಲ್ಲ. ವಿಶ್ವದ ಎಲ್ಲಾ ಭಾಗಗಳ ಧರ್ಮ- ಪುರಾಣ ಮತ್ತು ಜನಪದಗಳಲ್ಲಿ ನಾಗನ ಪ್ರಾಮುಖ್ಯ ಇತ್ತೆಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ. ನಾಗಪಂಚಮಿ ನಿಮಿತ್ತ ನಾಗಾರಾಧನೆ ಕುರಿತ ಲೇಖನ ಇದಾಗಿದೆ...
ಋಷಿಮುನಿಗಳ ಕಾಲದಲ್ಲಿ ದೇವತೆ -ಗಂಧರ್ವ- ಯಕ್ಷ - ಕಿನ್ನರ -ಕಿಂಪುರುಷ- ನಾಗರಾದಿಯಾಗಿ ಎಲ್ಲರೊಳಗೂ ನಿಕಟ ಸಂಪರ್ಕವಿತ್ತು, ಮನುಷ್ಯನ ಮನಸ್ಸು ಕಿರಿದಾಗತೊಡಗಿದಾಗ ಸಂಪರ್ಕದ ಕೊಂಡಿಕಳಚಿ ಬಿತ್ತು, ಎಲ್ಲವೂ ಅಲೌಕಿಕಕ್ಕೆ ಸೇರಿಹೋಯಿತು. ಮನುಷ್ಯ ಬೇರೆಯಾಗಿ ಉಳಿದ, ಬೆಳೆದ. ಬಳಿಕ ಪ್ರಕೃತಿಯ ಶಕ್ತಿಗಳನ್ನೇ ಸಾಂಕೇತಿಕವಾಗಿ ಆರಾಧಿಸತೊಡಗಿದ.
ನಮ್ಮ ಪೂರ್ವಜರು ನಾಗನನ್ನು ದೇವತೆಗಳ ಸಾಲಿಗೆ ಸೇರಿಸಿ 'ನಾಗದೇವತೆ' ಎಂದರು. ಪರಿಸರ ಸಮತೋಲನದ ವಿಷಯದಲ್ಲಿ ಅನ್ಯ ಜೀವಜಂತುಗಳ ಜೊತೆಗೆ ನಾಗನಿಗೂ ಆದ್ಯತೆ ನೀಡಲು ಮರೆಯಲಿಲ್ಲ. ಕೃಷಿಪ್ರಧಾನ ಭಾರತದಲ್ಲಿ ನಾಗನು ಕೃಷಿಯನ್ನು ನಾಶ ಮಾಡುವ ಇತರ ಜಂತುಗಳನ್ನು ನಿಯಂತ್ರಿಸಿ ಧಾನ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಹಾವು ನಿಜವಾಗಿಯೂ ನಿರುಪದ್ರವಿ ಜೀವಿ. ಅದಕ್ಕೆ ಕಿವಿ ಕೇಳಿಸುವುದಿಲ್ಲ, ಕೇವಲ ಸಪ್ಪಳವನ್ನು ಗ್ರಹಸಿ ತನ್ನ ಬೇಟೆಯನ್ನು ಅದು ಕಂಡುಕೊಳ್ಳುತ್ತದೆ. ಅದು ತಾನಾಗಿಯೇ ಯಾರಿಗೂ ಕಚ್ಚುವುದಿಲ್ಲ, ಮೆಟ್ಟಿದಲ್ಲದೇ ಹಾವು ಕಚ್ಚದು ಎಂಬ ಮಾತು ಕೇಳಿದ್ದಿರಲ್ಲವೇ?
ಪುನರ್ಜನ್ಮದ ಸಂಕೇತ
ಹಾವು ಎಂಬುದು ಹುಟ್ಟು , ಸಾವು - ಪುನರ್ಜನ್ಮದ ಸಂಕೇತ. ಆಗಾಗ ತನ್ನ ಪೊರೆಯನ್ನು ಕಳಚಿ ಹೊಸ ಜನ್ಮವನ್ನು ಪಡೆಯುತ್ತದೆ. ನಮ್ಮ ಹಿಂದೂ ಧರ್ಮವೂ ಇದನ್ನೇ ಪ್ರತಿಪಾದಿಸುತ್ತದೆ.
ಶ್ರಾವಣಮಾಸ ಎಂದರೆ ಮಳೆ ಬೀಳುವ ಸಮಯ , ಈ ಸಮಯ ನಾಗನ ಬಿಲಗಳಲ್ಲಿ ನೀರುತುಂಬುತ್ತವೆ , ಆದ್ದರಿಂದ ನಾಗಗಳು ಬಿಲದಿಂದ ಹೊರಬರುತ್ತವೆ ,ಹೊಲಗದ್ದೆಗಳಲ್ಲಿ ಸುತ್ತಾಡುತ್ತವೆ. ಫಸಲು ಹಾಳುಮಾಡುವ ಜಂತುಗಳನ್ನು ತಿಂದು ಫಸಲು ಹಾಳಾಗದಂತೆ ನೋಡಿಕೊಳ್ಳುತ್ತವೆ. ಹೀಗಾಗಿ ಶ್ರಾವಣ ಮಾಸದಲ್ಲಿ ನಾಗಪೂಜೆಗೆ ಆದ್ಯತೆ ನೀಡುತ್ತಾ ಬಂದಿದ್ದೇವೆ.
ನಾಗಾರಾಧನೆ ಸಮಾನವಾಗಿ ಬಳಕೆ
ಶಿವನು ನಾಗಾಭರಣನಾದರೆ, ನಾರಾಯಣನು ಶೇಷಶಯನ. ಗಣಪತಿಯು ನಾಗನನ್ನು ಜನಿವಾರವಾಗಿ ಧರಿಸುತ್ತಾನೆ,ಸುಬ್ರಹ್ಮಣ್ಯನು ಕೆಲಕಾಲ ಶಾಪದಿಂದಾಗಿ ಸರ್ಪರೂಪ ಧರಿಸಿದ್ದನು. ಶ್ರೀದೇವಿಯು ನಾಗಗಳನ್ನು ಆರಾಧಿಸಿ ಮಗನನ್ನು ಮರಳಿ ಮೂಲರೂಪದಲ್ಲಿ ಪಡೆದಳು. ಇದರಿಂದ ಶೈವರಾಗಲಿ, ವೈಷ್ಣವರಾಗಲಿ, ಶಾಕ್ತರಾಗಲಿ ನಾಗಾರಾಧನೆ ಸಮಾನವಾಗಿ ಬಳಕೆಯಲ್ಲಿದೆ.
ನಾಗಕುಲದವರು
ಇಂದ್ರಾದಿ ದೇವತೆಗಳಂತೆ ನಾಗಕುಲದವರು ಕಶ್ಯಪ ಮುನಿಗಳಿಂದ ಕದ್ರೂ ಎಂಬ ನಾಗಮಾತೆಯಿಂದ ಜನಿಸಿದೆ. ಹೀಗಾಗಿ ಜ್ಞಾನಿಗಳು ದೇವತೆಗಳನ್ನು ಗೌರವಿಸಿದಂತೆ ನಾಗಗಳನ್ನು ಗೌರವಿಸುತ್ತಾರೆ. ಗೀತೆಯಲ್ಲಿ ಹೇಳಿದಂತೆ ನಮಗೆ ತಿಳಿಯದಿದ್ದರೂ ಈ ಪೂಜೆ ಭಗವಂತನ ಪೂಜೆಯೇ ಆಗುತ್ತದೆ. ತಿಳಿದು ಪೂಜಿಸಿದರಂತೂ ಅದು ಅತ್ಯಂತ ವಿಶೇಷ.
ಜ್ಯೋತಿಷ್ಯದಲ್ಲಿ ರಾಹುವಿಗೂ ನಾಗನಿಗೂ ಅನ್ಯೋನ್ಯ ಸಂಬಂಧವಿರುವುದರಿಂದ ಅನೇಕ ರೀತಿಯಾಗಿ ನಾಗಾನುಗ್ರಹ ಹಾಗೂ ನಾಗ ದೋಷಗಳ ಬಗ್ಗೆ ಪರಿಕಲ್ಪನೆಯಿದೆ. ದೋಷಗಳನ್ನು ಅತಿಶಯೋಕ್ತಿ ಮಾಡದೆ ಸಣ್ಣ - ಪುಟ್ಟ ಪ್ರಾಯಶ್ಚಿತ್ತದಿಂದಲೇ ನಿವೃತ್ತಿ ಮಾಡಿಸಿ, ನಿರ್ಭೀತಿಯಿಂದಲೇ ಜೀವನ ಮಾಡುವುದಕ್ಕೆ ಜ್ಯೋತಿಷಿಗಳೇ ಮಾರ್ಗದರ್ಶಕರಾಗಬೇಕು.
ಸಂಬಂಧವನ್ನು ಬೆಳಸಲಿಕ್ಕೆ
ಹಬ್ಬಗಳು ಬರುವುದು ಮನುಷ್ಯ ಮನುಷ್ಯರ ಸಂಬಂಧವನ್ನು ಬೆಳಸಲಿಕ್ಕೆ ಮತ್ತು ಗಟ್ಟಿಗೊಳಿಸಲಿಕ್ಕೆ. ನಾಗಪಂಚಮಿ ಬಂತೂ ಎಂದರೆ ಹಬ್ಬಗಳು ಆರಂಭವಾದಂತೆ , ನಾಗನಕಟ್ಟೆಗೆ ಹೋಗಿ ನಾಗನಿಗೆ ಹಾಲು ಎಳನೀರು ಆಭಿಷೇಕ ಮಾಡಿ ಬರುವುದೆಂದರೆ ಎಲ್ಲಿಲ್ಲದ ಸಂಭ್ರಮ . ದೊಡ್ಡ ದೊಡ್ಡ ಮರಗಳ ನಡುವೆ ಬುಡದಲ್ಲಿ ನಾಗನ ಕಲ್ಲುಗಳೂ ,ಪಕ್ಕದಲ್ಲಿ ಕೆರೆ ಅಬ್ಬಬ್ಬಾ ಆ ಪರಿಸರವೇ ನಮ್ಮಲ್ಲಿ ಭಯ ಭಕ್ತಿ ಹುಟ್ಟಿಸುತ್ತಿತ್ತು! ಆದರೆ ಇಂದು ಅದಕ್ಕೆ ಗುಡಿಯನ್ನು ಕಟ್ಟಿಸಿ ಮೂಲ ಸ್ವರೂಪವೇ ಮಾಯವಾಗಿ ಸಿಮೆಂಟ್ ಗೋಡೆಗಳ ನಡುವೆ ಬಂಧಿಸಲ್ಪಟ್ಟಿವೆ.