ನಾಗನನ್ನು ಪೂಜಿಸುವುದು ಮೂಢನಂಬಿಕೆಯಾಗಲು ಸಾಧ್ಯವೇ?
ನಾಗರಗಳಳಿದಾವು | ಗೂಗೆ ಹೆಮ್ಮರವನೇರಿ | ಕಾಗೆಗಳೆದ್ದು ಬಡಿದಾವು ಜನವೆಲ್ಲ| ಹೇಗಿಹರು ಎಂಬುದು ಸರ್ವಜ್ಞನ ಭವಿಷ್ಯವಾಣಿ. ಸರ್ಪಗಳೆಲ್ಲಾ ಅಳಿದು ಗೂಗೆ ಮರವನ್ನೇರಿದಾಗ ಕಾಗೆಗಳೆಲ್ಲಾ ಸೇರಿ ಅವನ್ನು ಬಡಿಯತೊಡಗುವುವು. ಆಗ ಪ್ರಪಂಚವೇ ನಶಿಸಿ ಹೋಗುವುದು ಎಂದರ್ಥ.
ನಾಗರಗಳ ಅಳಿವು ಎಂದರೆ ಮನುಕುಲದ ಅಳಿವು ಎಂದಿರುವಾಗ ನಾಗನನ್ನು ದೇವರೆಂದು ಪೂಜಿಸುವುದು ಮೂಢನಂಬಿಕೆಯಾದೀತೇ ? ನಮ್ಮ ಜೀವನಕ್ಕೂ ಪ್ರಕೃತಿಗೂ ಎಡೆಬಿಡದ ನಂಟಿದೆ.
ವೈಜ್ಞಾನಿಕವಾಗಿ ಗುರುತ್ವಾಕರ್ಷಣೆಯಿಂದಾಗಿಯೇ ಭೂಮಿ ತನ್ನ ಕಕ್ಷೆಯಲ್ಲಿ ಬೀಳದೇ ನಿಂತಿರಲು ಕಾರಣವೆನ್ನುವುದನ್ನು ಒಪ್ಪುವ ನಾವು ಭೂಮಿಯನ್ನು ವಾಸುಕಿ ತನ್ನ ಹೆಡೆಗಳಿಂದ ಎತ್ತಿ ಹಿಡಿದುಕೊಂಡಿದ್ದಾನೆ ಎಂದು ಪೌರಾಣಿಕವಾಗಿಯೂ ಅರಿತಿದ್ದೇವೆ. ಈ ಶಕ್ತಿ ಭಗವಂತನಲ್ಲದೇ ಬೇರೇನಾಗಿರಲು ಸಾಧ್ಯ?
ನಾಗರ ಪಂಚಮಿ ದ್ರಾವಿಡ ಸಂಸ್ಕೃತಿಯ ಒಂದು ಶ್ರೇಷ್ಠ ಹಬ್ಬ. ಮಾನವ ಬದುಕಿಗೆ ಉಪಕಾರಿಯಾಗಿರುವ ಪ್ರಕೃತಿಯ ಈ ಆರಾಧನೆ ಹಿರಿಯರು ನಡೆಸಿಕೊಂಡು ಬಂದ ಸತ್ಸಂಪ್ರದಾಯ.
ಹುತ್ತಗಳನ್ನು ರಕ್ಷಿಸುವ ಉಪಾಯವೂ ಹೌದು. ಇಲಿಗಳನ್ನು ನಿಯಂತ್ರಿಸಿ ರೈತರಿಗೆ ಮಿತ್ರನಂತಿರುವ ನಾಗರ ಹಾವುಗಳನ್ನು ಪೂಜಿಸುವುದು ನಮ್ಮ ಸಂಪ್ರದಾಯವಾಗಿದೆ.ಭಾರತದ ವಿವಿಧೆಡೆ ಈ ಹಬ್ಬ ಆಚರಿಸಲ್ಪಡುತ್ತದೆ. (ಶ್ರಾವಣದ ಸಂಭ್ರಮಕ್ಕೆಒಂದಿಷ್ಟು ರುಚಿಕರ ತಿನಿಸುಗಳು)
ಮಲೆನಾಡಿನ ಪ್ರದೇಶಗಳಲ್ಲಿ ಪ್ರಕೃತಿಯ ಮಡಿಲಲ್ಲೇ ಈ ಹಬ್ಬಆಚರಿಸುತ್ತಾರೆ. ಶ್ರಾವಣ ಮಾಸದ ಆಹ್ಲಾದಕರ ವಾತಾವರಣದಲ್ಲಿ ಬರುವ ಮೊದಲ ವಿಶೇಷ ಹಬ್ಬವಿದು. ಶ್ರಾವಣ ಮಾಸದ ಐದನೇ ದಿನ ಅಂದರೆ ದಕ್ಷಿಣ ಕನ್ನಡದಲ್ಲಿ ಆಟಿ ನಂತರದ ಸೋಣ (ತುಳು ತಿಂಗಳು ) ಸಿಂಹ ಮಾಸದಲ್ಲಿ ವರ್ಷ ಋತುವಿನ ಐದನೇ ದಿನ ನಾಗರ ಪಂಚಮಿ.
ಕರ್ಕಾಟಕ ಮಾಸದಲ್ಲಿ ಭೂಮಿಯ ಮೇಲೆ ಮಳೆ ಬಿದ್ದರೂ ಒಳಗೆ ವಿಪರೀತ ಉಷ್ಣಮಯವಾಗಿರುವ ಸಿಂಹ ಮಾಸದ ಈ ದಿನಗಳಲ್ಲಿ ಉರಗಗಳೂ ತಂಪು ಪ್ರದೇಶಕ್ಕೆ ಸಂಚರಿಸತೊಡಗುತ್ತವೆ.
ಸರ್ಪಗಳನ್ನು ಕಂಡರೂ ಜನರು ಭಯ ಭಕ್ತಿಯಿಂದ ನಾಗಾರಾಧನೆಯಲ್ಲಿ ತೊಡಗುವುದು ರೈತವರ್ಗಕ್ಕೆ ಬಂಧುವಾಗಿರುವ ಹಾವುಗಳಿಗೆ ಸಲ್ಲಿಸುವ ಕೃತಜ್ಞತೆ ಮತ್ತು ಆ ಮೂಲಕ ಮಾನಸಿಕ ನೆಮ್ಮದಿ, ಸ್ಥೈರ್ಯಕ್ಕಾಗಿಯೂ ಇರಬಹುದು.
ತುಳುನಾಡಿನಲ್ಲಿ ನಾಗಾರಾಧನೆ ವಿಶಿಷ್ಠವಾದುದು. ನಾಗರ ಹಾವೇ..ಹಾವೊಳು ಹೂವೇ ಎಂದಿದ್ದಾರೆ ಕನ್ನಡದ ಕವಿ ಪಂಜೆ ಮಂಗೇಶರಾಯರು. ಹೆಡೆ ಬಿಚ್ಚಿದ ಸರ್ಪ ನೋಡಲು ಸುಂದರ. ನಾಗರ ಹಾವು ಹೆಡೆ ಬಿಚ್ಚುವುದು ಮತ್ತು ಕಚ್ಚುವುದು ಆತ್ಮರಕ್ಷಣೆಗಾಗಿ ಮಾತ್ರ.
ಪ್ರಕೃತಿಯೇ ಚಿತ್ರ ಬಿಡಿಸಿದಂತೆ ಕಾಣುವ ಆಕಾರ, ಬಣ್ಣವಿರುವ ನಾಗರ ಹಾವಿನಷ್ಟು ಸುಂದರವಾದ ಹಾವುಗಳಿಲ್ಲ. ನಾಗರ ಹಾವಿನ ಸುಂದರವಾದ ರಂಗೋಲಿ ಬಿಡಿಸಿ ನಾಗಮಂಡಲ ಸೇವೆಯನ್ನು ಮಾಡುತ್ತಾರೆ. ಬಹುಸಂಖ್ಯೆಯಲ್ಲಿ ಜನರೆಲ್ಲಾ ಒಟ್ಟಾಗಿ ನಾಗನಿಗೆ ವಿಶೇಷವಾಗಿ ಆಶ್ಲೇಷ ಬಲಿ, ನಾಗಮಂಡಲ, ಢಕ್ಕೆಬಲಿ ನಡೆಸುತ್ತಾರೆ.
ಸೌಂದರ್ಯೋಪಾಸನೆಯೊಡನೆ ಕಲೋಪಾಸನೆಯೂ ನಾಗರ ಪಂಚಮಿಯ ವಿಶೇಷತೆ. ನಾಗಮಂಡಲವೆಂದರೆ ಒಂದು ಜಾನಪದ ನೃತ್ಯ. ನಾದಕ್ಕೆ ಒಲಿಯದ ಮನಸ್ಸು ಹಾಗೂ ಜೀವಗಳೇ ಇಲ್ಲವೆಂಬಂತೆ ನಾಗಗಳೂ ಕಿವಿಯಿಲ್ಲದಿದ್ದರೂ ನಾದವನ್ನು ತಮ್ಮ ಸ್ಪರ್ಶೇಂದ್ರಿಯದ ಮೂಲಕ ಅನುಭವಿಸಿ ಒಲಿಯುವುದನ್ನು ನೋಡಿದ್ದೇವೆ.
ನಾಗಬನಗಳಲ್ಲಿ ಆಚರಿಸುವ ಈ ಹಬ್ಬದ ಹಿಂದಿರುವ ನಾಗಗಳ ಸರಂಕ್ಷಣೆಯ, ಬನಗಳನ್ನು ಉಳಿಸುವ ಹಿರಿಯರ ಉದ್ದೇಶ ಮೆಚ್ಚಲೇಬೇಕಾದುದು. ಸೂರ್ಯೋದಯಕ್ಕೂ ಮೊದಲು ಅಶ್ವತ್ಥ ಮರದಡಿಯಲ್ಲಿ ವಿಪುಲವಾದ ಆಮ್ಲಜನಕ ದೊರೆಯುವ ಕಾರಣ ಹಬ್ಬದ ದಿನಗಳಲ್ಲಾದರೂ ಈ ಮರದಡಿ ನಾಗನಿಗೆ ಪೂಜೆ ಸಲ್ಲಿಸಿದರೆ ನಷ್ಟವೇನಿಲ್ಲದಿದ್ದರೂ ಮನಸ್ಸು ಪ್ರಪುಲ್ಲಿತವಾಗಿ ಉತ್ತಮ ಆರೋಗ್ಯ ಲಾಭವಾಗದಿರದು.
ನಾಗಾರಾಧನೆಗೂ ಸಂತತಿಗೂ ಇರುವ ವೈಜ್ಞಾನಿಕ ಸಂಬಂಧವೆಂದರೆ ನಮ್ಮ ಮೆದುಳು ಹಾವಿನ ಹೆಡೆಯ ಆಕಾರದಲ್ಲಿದೆ. ಪಿಟ್ಯುಟರಿ ಗ್ರಂಥಿಗಳು ತಲೆಯ ಬುಡ ಭಾಗದಲ್ಲಿವೆ. ಗರ್ಭೋತ್ಪತ್ತಿಗೂ ಮತ್ತು ಪಿಟ್ಯುಟರಿ ಗ್ರಂಥಿಗಳಿಂದ ಉತ್ಪತ್ತಿಯಾಗುವ ಹಾರ್ಮೋನುಗಳಿಗೂ ನೇರ ಸಂಬಂಧವಿದೆಯೆನ್ನುತ್ತಾರೆ. (ನಾಗರ ಪಂಚಮಿ ಮಾಡುತ್ತಾ, ಹಬ್ಬದಲ್ಲೆಲ್ಲಾ ನಲಿಯುತ್ತಾ)
ಅಶ್ವತ್ಥ ಮರದ ಬೇರಿನಿಂದ ಹೊರಬರುವ ಆಮ್ಲಜನಕದಿಂದಾಗಿ ಪಿಟ್ಯುಟರಿ ಗ್ರಂಥಿಗಳು ಸರಿಯಾಗಿ ಕೆಲಸ ನಿರ್ವಹಿಸಿ ಗರ್ಭೋತ್ಪತ್ತಿಗೆ ಸಹಕರಿಸುವ ಬಗ್ಗೆ ಸಂಶೋಧನೆಗಳಾಗಿವೆ. ನಾಗರ ಪಂಚಮಿ ಕೆಲವು ಭಾಗಗಳಲ್ಲಿ ಸಹೋದರತೆಯ ಸಂಕೇತವಾಗಿದೆ.
ಅಣ್ಣ ಮದುವೆಯಾದ ತಂಗಿಯನ್ನು ತವರಿಗೆ ಕರೆದೊಯ್ಯುವ, ಜೋಕಾಲಿಯಲ್ಲಿ ಜೀಕುತ್ತಾ, ತಂಬಿಟ್ಟು ಮೆಲ್ಲುತ್ತಾ ಸಂತೋಷವಾಗಿ ತವರಿನ ತಂಪನ್ನು ಸವಿಯುವ , ಜೀವನದಲ್ಲಿ ಸಮರಸವನ್ನು ಹೆಚ್ಚಿಸುವ ಹಬ್ಬವೂ ಆಗಿದೆ. ಪ್ರಕೃತಿಯನ್ನು ಉಳಿಸಿ ಎಂಬ ಸಂದೇಶ ಸಾರುವ ಇಂತಹ ಆಚರಣೆಗಳನ್ನು ಉಳಿಸುತ್ತಾ ಪ್ರಾಕೃತಿಕ ಸಮತೋಲನ ಕಾಪಾಡಿಕೊಳ್ಳುವುದರೊಂದಿಗೆ ಮನುಕುಲದ ಸರಂಕ್ಷಣೆ ನಮ್ಮೆಲ್ಲರ ಕರ್ತವ್ಯ.