ಕಿರಾತಾರ್ಜುನ ಮೂರ್ತಿಯ ಕಥೆ: ಮರಳು ಲಿಂಗದಲ್ಲಿ ಶಿವ
ಅಂತೆಯೇ, ಮರಳ ಲಿಂಗವನ್ನು ಮಾಡಿ ಕಾಡು ಪುಷ್ಪಗಳಿಂದ ಪೊಜಿಸಿ, ಪ್ರಾರ್ಥನೆ ಮಾಡಿ, ಬೇಡನನ್ನು ನೋಡಿದರೆ ಅವನು ಶಿವನಿಗೆ ಅರ್ಪಿಸಿದ ಕುಸುಮಗಳೆಲ್ಲವೂ ಬೇಡನ ಮೇಲಿರುತ್ತದೆ. ಆಗ ಅವನಿಗೆ ಜ್ಞಾನೋದಯವಾಗುತ್ತದೆ.
ತನ್ನ ಎದುರಿಗೆ ನಿಂತಿರುವವನು, ಹುಲು ಬೇಡನಲ್ಲ. ಯಾರನ್ನ ನಿಷ್ಠೆಯಿಂದ ಪೂಜಿಸಿ ತಪಗೈದನೋ ಆ ಮಹೇಶ್ವರನು ಇವನು ಎಂದು ಕೂಡಲೇ ತನ್ನ ಗರ್ವದಿಂದ ಅವನೊಂದಿಗೆ ಯುದ್ದ ಮಾಡಿದ್ದಕ್ಕೆ ವ್ಯಸನ ಪಡುತ್ತಾ, ದುಃಖಿಸುತ್ತಾ, ಶಿವನ ಕಾಲಿಗೆರಗಿ ಕ್ಷಮೆ ಯಾಚಿಸಿ, ಪೂರ್ಣ ಹೃದಯದಿಂದ ಪ್ರಾರ್ಥನೆ ಮಾಡುತ್ತಾನೆ.
ಆಗ ದಯಾಳುವಾದ ಶಿವನು ಅವನನ್ನು ಸಂತೈಸಿ, ಅಪ್ಪಿಕೊಂಡು ಹರಸಿ ನಿನ್ನನ್ನು ಪರೀಕ್ಷಿಸುವುದಕ್ಕಾಗಿ ನಾನು ಈ ವೇಷದಿಂದ ಬಂದೆ ಎಂದು ಹೇಳಿ ತನ್ನ ಐದು ಮುಖಗಳಿಂದ ಗಿರಿಜಾ ಸಹಿತನಾಗಿ ಕಾಣಿಸಿ ಕೊಳ್ಳುತ್ತಾನೆ. ಹಾಗೂ ಅವನಿಗೆ ಪಾಶುಪತಾಸ್ತ್ರವನ್ನು ಕೊಟ್ಟು ನಿನಗೆ ಗೆಲುವಾಗಲಿ ಎಂದು ಹರಸುತ್ತಾನೆ. ಪಾರ್ವತಿಯೂ ಅರ್ಜುನನ್ನು ಹರಸಿ ಅಂಜನಾಸ್ತ್ರವನ್ನು ಕೊಡುತ್ತಾಳೆ.
ಗಣಪತಿ, ಷಣ್ಮುಖ ಎಲ್ಲರೂ ಒಂದೊಂದು ಅಸ್ತ್ರಗಳನ್ನು ಅರ್ಜುನನಿಗೆ ಕೊಡುತ್ತಾರೆ ಮತ್ತು ಅಂತರ್ದಾನರಾಗುತ್ತಾರೆ. ಈಶ್ವರನ ಕೃಪೆಯಿಂದ ಅರ್ಜುನನು ಧನ್ಯನಾಗುತ್ತಾನೆ. ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು, ಸನ್ಮಂಗಳವಾಗಲಿ.
ಲೇಖಕರ ಕುರಿತು : ಬಿಡುವಿನ ಸಮಯದಲ್ಲಿ ಕನ್ನಡ ಸಣ್ಣಕಥೆ ಬರೆಯುವ ಮತ್ತು ಓದುವ ಹವ್ಯಾಸ ಇಟ್ಟುಕೊಂಡಿರುವ ಶಾಂತಾ ಪಾಟೀಲ ಅವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ, ಬೆಳೆದದ್ದು ಗದಗ ಜಿಲ್ಲೆಯ ಕುರ್ತಕೋಟಿಯಲ್ಲಿ. ಅವರ ತಂದೆ ಮೈಲಾರ ಎಂ. ಪಾಟೀಲ ಅವರು ಜಮೀನುದಾರರಾಗಿದ್ದರು ಮತ್ತು ಕನ್ನಡ ಮತ್ತು ಸಂಸ್ಕೃತ ಪಂಡಿತರಾಗಿದ್ದರು. ಹಲವಾರು ಪುಸ್ತಕಗಳನ್ನು ಮೈಲಾರ ಅವರು ಬರೆದಿದ್ದು, ಸಂಸ್ಕೃತದ ಅನೇಕ ಗ್ರಂಥಗಳನ್ನು ಹಳೆಗನ್ನಡಕ್ಕೆ ಭಾಷಾಂತರಿಸಿದ್ದಾರೆ.
ಶಾಂತಾ ಅವರ ತುಂಬಿದ ಮನೆಯಲ್ಲಿ ಯಾವತ್ತೂ ಸಾಹಿತ್ಯದ ವಾತಾವರಣ ಮನೆಮಾಡಿರುತ್ತದೆ. ಸಾಹಿತ್ಯ ಕೃತಿಗಳ ಕುರಿತು ಚರ್ಚೆ ನಡೆಯುತ್ತಲೇ ಇರುತ್ತದೆ. ಶಾಂತಾ ಅವರು ಸಹಜವಾಗಿ ಇದರಿಂದ ಉತ್ತೇಜಿತರಾಗಿದ್ದಲ್ಲದೆ, ಈ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ. ಕುಮಾರವ್ಯಾಸ ಭಾರತದ ಕುರಿತು ಶಾಂತಾ ಅವರು ಅಪಾರ ಆಸಕ್ತಿ ಹೊಂದಿದ್ದಾರೆ.