ಕನ್ನಡಿಗರ ಹುಟ್ಟಡಗಿಸುತ್ತೇವೆ ಎಂದ ಮುದಿಹುಲಿ
ಮುಂಬೈ ಮತ್ತು ಪೂಣೆದಲ್ಲಿ ಬಹಳಷ್ಟು ಮಂದಿ ಕನ್ನಡಿಗರಿದ್ದಾರೆನ್ನುವ ವಿಷಯವನ್ನು ನಾವು ಅರಿತಿದ್ದೇವೆ. ಈ ಎರಡೂ ನಗರಗಳಲ್ಲಿ ಹೋಟೆಲ್ ಉದ್ಯಮ ಬಹುಪಾಲು ನಡೆಸುತ್ತಿರುವುದು ಕನ್ನಡಿಗರು. ನಮ್ಮ ತಂಟೆಗೆ ಬಂದರೆ ನಿಮ್ಮ ಹುಟ್ಟಡಗಿಸಿಬಿಡುತ್ತೇವೆ, ಅಲ್ಲದೆ ನಿಮ್ಮನ್ನು ಕರ್ನಾಟಕಕ್ಕೇ ಓಡಿಸಿ ಬಿಡುತ್ತೇವೆ ಎಂದು ಕನ್ನಡಿಗರನ್ನು ಎಚ್ಚರಿಸಿದ್ದಾರೆ.
ಬೆಳಗಾವಿ ಮತ್ತು ಗಡಿ ಭಾಗದಲ್ಲಿ ನಮ್ಮವರ ಮೇಲೆ ನಿಮ್ಮ ಪುಂಡಾಟಿಕೆ ಮುಂದುವರಿಯುತ್ತಿದೆ. ನಾವೇನೂ ಅಶಕ್ತರಲ್ಲ, ನಮ್ಮವರ ರಕ್ಷಣೆಗೆ ಮರಾಠಿಗರೆಲ್ಲಾ ಒಂದಾಗುತ್ತೇವೆ. ಬೆಳಗಾವಿ ನಗರವನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಇಲ್ಲವಾದಲ್ಲಿ ಅದನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ ಎಂದು ಠಾಕ್ರೆ ತಮ್ಮ ಪಕ್ಷದ ಮುಖ ವಾಹಿನಿ ಸಾಮ್ನಾದಲ್ಲಿ ಹೇಳಿಕೆ ನೀಡಿದ್ದರು.
ಕಾರ್ಪೊರೇಟರ್ ಪತಿಗೆ ಮಸಿ : ಬೆಳಗಾವಿ ಮಹಾನಗರ ಪಾಲಿಕೆಯ ಅನುಮೋದನೆ ಮಂಡನೆ ವಿಚಾರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಬೆಂಬಲಿಸಲಿಲ್ಲ ಎನ್ನುವ ಕೋಪದಿಂದ ಎಂಇಎಸ್ ಸದಸ್ಯರು ಮತ್ತು ಅವರ ಪುಂಡಪೋಕರಿ ಸಹಚರರು ಮಹಿಳಾ ಕಾರ್ಪೊರೇಟರ್ ಅವರ ಮನೆಗೆ ನುಗ್ಗಿ ಅವರ ಮುಂದೆಯೇ ಅವರ ಪತಿಗೆ ಮಸಿ ಬಳಿದು ಅವಮಾನ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಮ್ಮ ಶಕ್ತಿ ಕುಂದುತ್ತಿದೆ ಎಂದು ಅರಿತ ಎಂಇಎಸ್ ಮರಾಠಿಗರನ್ನು ಕನ್ನಡಿಗರ ಮೇಲೆ ಎತ್ತಿ ಕಟ್ಟುವ ಕೆಲಸಕ್ಕೆ ಕೈ ಹಾಕುತ್ತಿದೆ. ತಮ್ಮ ಬೇಳೆ ಬೇಯುತ್ತಿಲ್ಲ ಎಂದು ಇಲ್ಲಸಲ್ಲದ ಕಿರಿಕಿರಿ ನಡೆಸುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಘಟಕದ ಅಧ್ಯಕ್ಷರು ಈ ಸಂದರ್ಭದಲ್ಲಿ ಹೇಳಿಕೆ ನೀಡಿ ಎಂಇಎಸ್ ಗೆ ಸಡ್ಡು ನೀಡಿದ್ದರು.