ಏನಿದು ಲಾಠ್ ಮಾರ್ ಹೋಳಿ? ಇದರ ಪುರಾಣ ಹಿನ್ನೆಲೆ ಏನು?
ಬೆಂಗಳೂರು,ಮಾರ್ಚ್,21: ಕನಸು, ಭಾವನೆ, ಸ್ನೇಹ, ಸಂಬಂಧ ಈ ಎಲ್ಲವುಗಳ ಪ್ರತಿರೂಪವೇ ಹೋಳಿ ಹಬ್ಬ. ಭಾರತೀಯ ಹಬ್ಬಗಳ ಪರಂಪರೆಯಲ್ಲಿ ಇದಕ್ಕೆ ವಿಶೇಷ ಸ್ಥಾನ. ಕುಣಿದು ಕುಪ್ಪಳಿಸುತ್ತಾ, ಕೇಕೆ ಹಾಕಿ ನಗುತ್ತಾ, ಸಂತಸ ಪಡುವ ಹಬ್ಬವನ್ನು ಎಳೆಯರಿಂದ ಹಿಡಿದು ವೃದ್ಧರವರೆಗೂ ಹೋಳಿ ಹಬ್ಬವನ್ನು ಇಷ್ಟಪಡುತ್ತಾರೆ. ಬಹಳ ಉತ್ಸಾಹದಿಂದ ಭಾಗವಹಿಸುತ್ತಾರೆ ಕೂಡ.
ಹೋಳಿ ಹಬ್ಬದ ಆಚರಣೆ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ಉತ್ತರ ಪ್ರದೇಶದಲ್ಲಿ ಹೋಳಿ ಹಬ್ಬವನ್ನು ಲಾಠ್ಮಾರ್ ಹೋಳಿ ಎಂದು ಕರೆಯುತ್ತಾರೆ. ಈ ಹಬ್ಬ ಉತ್ತರ ಭಾರತದಲ್ಲಿ ಜೋರೋ ಜೋರು. ರಾಜಸ್ತಾನ, ಉತ್ತರಪ್ರದೇಶ ಹೀಗೆ ನಾನಾ ರಾಜ್ಯದ ಜನರು ಅಂದು ಹಬ್ಬದಲ್ಲಿ ಮಿಂದೇಳುತ್ತಾರೆ. ಎಲ್ಲರನ್ನು ಕಿಚಾಯಿಸುತ್ತಾ, ಬಣ್ಣ ಹಚ್ಚುತ್ತಾ ನಿಮ್ಮ ಬದುಕಲ್ಲಿ ಸದಾ ಬಣ್ಣಗಳೇ ತುಂಬಿರಲಿ, ಸುಖ ಸಂತೋಷ, ನೆಮ್ಮದಿ ತುಂಬಿ ತುಳುಕಲಿ ಎಂದು ಹೋಳಿ ಆಡುತ್ತಾರೆ.[ಕನಸುಗಳಿಗೂ ಬಣ್ಣ ಹಚ್ಚುವ ಕಾಮನಹಬ್ಬ ಹೋಳಿ]
ಈ ಹೋಳಿ ಹಬ್ಬಕ್ಕೆ ಉತ್ತರ ಪ್ರದೇಶದಲ್ಲಿ ಲಾಠ್ಮಾರ್ ಹೋಳಿ ಎಂದು ಕರೆಯುತ್ತಾರೆ. ಇದಕ್ಕೆ ತನ್ನದೇ ಆದ ಪೌರಾಣಿಕ ಹಿನ್ನೆಲೆ ಹೊಂದಿದೆ. ಕೃಷ್ಣ ರಾಧೆಯ ಕಥೆಯನ್ನು ಹೇಳುವ ಲಾಠ್ಮಾರ್ ಹೋಳಿಯ ಸಂಭ್ರಮ, ಹಿನ್ನೆಲೆ ಇಲ್ಲಿದೆ ನೋಡಿ.
ಲಾಠ್ಮಾರ್ ಹೋಳಿ ಎಲ್ಲಿ ಪ್ರಸಿದ್ಧ?
ಲಾಠ್ಮರ್ ಹೋಳಿ ಭಾರತೀಯ ಹಬ್ಬದ ಸಾಲಿನಲ್ಲಿ ಸ್ಥಾನ ಪಡೆದಿದೆ. ಲಾಠ್ಮಾರ್ ಹೋಳಿಯನ್ನು ಉತ್ತರ ಪ್ರದೇಶದ ಮಥುರಾ ಬಳಿ ಇರುವ ಬರ್ಸಾನ್ ಹಾಗೂ ನಂದ್ ಗಾವ್ ನಲ್ಲಿ ಬಹಳ ಸಡಗರದಿಂದ ಆಚರಿಸಲಾಗುತ್ತದೆ. ಇದರಲ್ಲಿ ಪ್ರವಾಸಿಗರು, ವಿದೇಶಿಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳುತ್ತಾರೆ.[ಹೋಳಿ ಹುಣ್ಣಿಮೆಯ ಪೌರಾಣಿಕ ಕಥೆ - ಭಾಗ1]
ಲಾಠ್ಮಾರ್ ಹೋಳಿಯ ವಿಶೇಷತೆ ಏನು?
ಈ ಲಾಠ್ಮಾರ್ ಹೋಳಿಯಲ್ಲಿ ಒಂದು ಕೋಲು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಬಣ್ಣ ಹಚ್ಚಿಕೊಂಡ ಮಹಿಳೆಯರು ಒಂದು ಕೋಲು ಹಿಡಿದು ಸುಮ್ಮನೆ ಕಿಚಾಯಿಸಲು ಪುರುಷರಿಗೆ ಹೊಡೆಯುತ್ತಾರೆ. ಹೀಗೆ ಬಹಳ ವಿಶೇಷವಾಗಿ ಲಾಠ್ಮಾರ್ ಹಬ್ಬದ ಆಚರಣೆ ನಡೆಯುತ್ತದೆ.
ಲಾಠ್ಮಾರ್ ಹೋಳಿಯ ಹಿನ್ನೆಲೆ ಏನು?
ಲಾಠ್ಮಾರ್ ಹೋಳಿ ಹಬ್ಬ ಕೃಷ್ಣ ಮತ್ತು ರಾಧೆಯರಿಗೆ ಸಂಬಂಧಿಸಿದ ಕಥೆ. ಮಥುರಾ ಶ್ರೀ ಕೃಷ್ಣನ ಜನ್ಮ ಸ್ಥಾನ ಇದರ ದ್ಯೋತಕವಾಗಿದೆ ಈ ಹಬ್ಬ. ಇಲ್ಲಿ ಹೆಂಗಳೆಯರ ಪ್ರಿಯ ದೇವರು ಕೃಷ್ಣ ಹಾಗೂ ರಾಧೆ ಈ ಹಬ್ಬದ ಮುಖ್ಯ ಸಾರಥಿಗಳು.
ಲಾಠ್ಮಾರ್ ಹಬ್ಬದ ಬಗ್ಗೆ ಪುರಾಣ ಕಥೆ ಏನಿದೆ?
ಕೃಷ್ಣ ತನ್ನ ಊರಾದ ನಂದ್ ಗಾವ್ ನಿಂದ ಪ್ರೀತಿಪಾತ್ರಳಾದ ರಾಧೆಯ ಊರಾದ ಬರ್ಸಾನ್ ಗೆ ಲಾಥೋರ್ ಹೋಳಿ ಹಬ್ಬದಂದು ತನ್ನ ಸ್ನೇಹಿತರೊಂದಿಗೆ ಆಕೆಯನ್ನು ರೇಗಿಸಲು ಹೋಗುತ್ತಾನೆ. ಆಗ ಅಲ್ಲಿನ ಮಹಿಳೆಯರು ಆತನನ್ನು ಕೋಲಿನಿಂದ ಹೊಡೆದು ಓಡಿಸುತ್ತಾರೆ. ಹೀಗೆ ಕೃಷ್ಣ ಮತ್ತು ರಾಧೆಯ ನಡುವಿನ ಉತ್ತಮ ಬಾಂಧವ್ಯದ ಸಂದೇಶವಾಗಿ ಉತ್ತರ ಪ್ರದೇಶದಲ್ಲಿ ಈ ಆಚರಣೆ ಕೈಗೊಳ್ಳಲಾಗುತ್ತದೆ.
ಲಾಠ್ಮಾರ್ ಹೋಳಿಯ ಪದಶಃ ಅರ್ಥ ಏನು?
ಲಾಠ್ಮಾರ್ ಅಂದರೆ ಲಾಠ್ ಅಥವಾ ಲಾಠಿ ಎಂದು ಕರೆಯುತ್ತಾರೆ. ಮಹಿಳೆಯರು ಪುರುಷರಿಗೆ ಲಾಠಿಯಿಂದ ಹೊಡೆಯುತ್ತಾ ಶ್ರೀ ಕೃಷ್ಣ, ಶ್ರೀ ಕೃಷ್ಣ ಎಂದು ಜೈಕಾರ ಹಾಕುತ್ತಾ, ಕೃಷ್ಣನ ಕುರಿತಾಗಿ ಹಾಡು ಹೇಳುತ್ತಾ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ.