ಎಲ್ಲರ ಕಾಡುತ್ತಿರುವ ಸಕ್ಕರೆ ರೋಗ ಒದ್ದೋಡಿಸುವುದು ಹೇಗೆ?
"ಸಕ್ಕರೆ ರೋಗವನ್ನು ಹೊಡೆದೋಡಿಸಿ!". ಈ ವರುಷದ ಏಪ್ರಿಲ್ 7ರ ವಿಶ್ವ ಆರೋಗ್ಯ ದಿನಾಚರಣೆಯ ಘೋಷಣೆ ಇದು. ಬಲುಪ್ರೀತಿ, ಅಕ್ಕರೆಯಿಂದ ತಿನ್ನುವೆವು ನಾವು ಸಕ್ಕರೆ. ಎಲ್ಲೆ ಮೀರಿದರೆ ತಗಲುವದು ಸಕ್ಕರೆ ರೋಗ. ಆಂಗ್ಲ ಭಾಷೆಯಲ್ಲಿ ಇದನ್ನು ಡಯಾಬಿಟಿಸ್ ಎಂದು ಸಂಬೋಧಿಸುವರು.
ಈ ಕಾಯಿಲೆಯು ಇಲ್ಲಿಯವರೆಗೆ ಬರೀ ಶ್ರೀಮಂತರಿಗಷ್ಟೇ ಕಾಡುತ್ತಿತ್ತು. ಈಗ ಕಾಲ ಬದಲಾಗಿದೆ. ಪಾಪ, ಕಡು ಬಡವರ ಮೇಲೂ ಈ ರೋಗಕ್ಕೆ ಕರುಣೆ ಬರಲಿಲ್ಲ, ಬಡವರು, ಆರ್ಥಿಕವಾಗಿ ದುರ್ಬಲರು, ಹಳ್ಳಿ ಹೈದರು, ರೈತರು-ಊಹೂಂ! ಯಾರನ್ನೂ ಬಿಡದಂತೆ ಡಯಾಬಿಟಿಸ್ ರೋಗ ಕಾಡ್ಗಿಚ್ಚಿನಂತೆ ಹಬ್ಬಿಕೊಳ್ಳುತ್ತಲಿದೆ!
ಸಕ್ಕರೆ ರೋಗವನ್ನು ನಾವು ನಿಜವಾಗಿಯೂ ಹೊಡೆದೋಡಿಸಬಹುದೇ? ಅದು ನಮಗೆ ತಾಗದಂತೆ ನಾವು ಮುಂಜಾಗ್ರತೆ ವಹಿಸಬಹುದೇ? ನಾವು ನಮ್ಮ ವಂಶವಾಹಿನಿಗಳನ್ನು ಬದಲಾವಣೆ ಮಾಡಬಹುದೇ? ಕಾಯಿಲೆಯ ಸ್ವರೂಪ, ಭೀಕರತೆ, ಅದರ ಎಡವಟ್ಟುಗಳನ್ನು ತಡೆಗಟ್ಟಬಹುದೇ? [ವೈನ್ ಕುಡಿಯಿರಿ ಮಧುಮೇಹದಿಂದ ದೂರವಿರಿ!]
ಇವೇ ಮೊದಲಾದ ಸಂದೇಹಗಳಿಗೆ, ಉತ್ತರಿಸಲು ವೈದ್ಯಲೋಕ ಹರಸಾಹಸ ಪಡುತ್ತಲಿದೆ. ನಿಯಮಿತವಾದ ಹಿತ, ಮಿತ ಆಹಾರ ಸೇವನೆ, ತಂಬಾಕು, ಮಧ್ಯಪಾನಗಳನ್ನು ದೂರ ಇಡುವದು, ಪ್ರತಿದಿನ ಒಂದು ಗಂಟೆಯಾದರೂ ರಭಸವಾದ ವ್ಯಾಯಾಮ, ಅಥವಾ ಕಾಲ್ನಡಿಗೆ, ದೇಹದ ತೂಕದ ಸಮತೋಲತೆ, ಚಿಂತೆ ರಹಿತ ಸಹಜೀವನ - ಇವುಗಳಿಂದ ಡಯಾಬಿಟಿಸ್ ಬರದಂತೆ ಮುನ್ನೆಚ್ಚರಿಕೆ ವಹಿಸಬಹುದು.
ಮೆಟ್ಟಿನಿಲ್ಲಲು ಸಾಧ್ಯ : ಡಯಾಬಿಟಿಸ್, ದುರ್ದೈವಶಾತ್ ತಗುಲಿದರೂ, ಅದರ ಮುಂದಿನ ಅವಘಡಗಳನ್ನು, ಈ ಮೇಲೆ ತಿಳಿಸಿದ ಕ್ರಮಗಳಿಂದ ಮೆಟ್ಟಿ ನಿಲ್ಲಬಹುದು. ಸಕ್ಕರೆ ರೋಗ ಇತ್ತೀಚೆಗೆ ಮಕ್ಕಳಲ್ಲಿ, ಗರ್ಣಿಣಿಯರಲ್ಲಿ, ಮಾನಸಿಕ ರೋಗಿಗಳಲ್ಲಿ ಕಂಡು ಬರುತ್ತಿರುವದು ಕಳವಳಕರವಾದ ಬೆಳವಣಿಗೆ. [ಪ್ರಮೇಹ ಮೋಕ್ಷಂ ಸೇವಿಸಿ ಮಧುಮೇಹದಿಂದ ಮುಕ್ತಿ]
ಈ ಬಲಿಷ್ಠ ರೋಗ, ಕನಿಷ್ಠ ಒಂದು ಅಂಗಾಂಗವನ್ನಾದರೂ, ಅಷ್ಟಕ್ಕಷ್ಟೇ ಕಾರ್ಯ ಮಾಡುವಂತೆ ಊನ ಮಾಡಬಹುದು. ಪ್ರಮುಖ ಅಂಗಾಂಗಳಾದ ಮೆದುಳು, ಹೃದಯ, ಕಿಡ್ನಿ ಹಾಗೂ ಕಣ್ಣುಗಳಿಗೆ ಈ ಕಾಯಿಲೆಯ ಬಿಸಿ ತಟ್ಟಬಹುದು. ಮನಸ್ಸಿನ ಖುಷಿಯನ್ನು ಕಸಿದುಕೊಂಡು ಕಸಿವಿಸಿ ಉಂಟು ಮಾಡಬಹುದು. ಆದ್ದರಿಂದಲೇ ಈ ವರುಷದ ವಿಶ್ವ ಆರೋಗ್ಯ ದಿನಾಚರಣೆಯಂದು 'ಸಕ್ಕರೆ ರೋಗವನ್ನು ಹೊಡೆದೋಡಿಸಿ' ಎಂಬುದರ ಬಗ್ಗೆ ನಾವೆಲ್ಲರೂ ಜಾಗ್ರತರಾಗಬೇಕು.
ಸಕ್ಕರೆ ಕಾಯಿಲೆ ಆರಂಭವಾಗಲು, ಉಲ್ಬಣಗೊಳ್ಳಲು, ಹತೋಟಿಯಲ್ಲಿ ಬರಲು, ನಮ್ಮ ಮನಸ್ಸಿನ ಪಾತ್ರ ಬಹಳ ಮುಖ್ಯ. ಮಾನಸಿಕ ಒತ್ತಡ ಮಿತಿಮೀರಿದರೆ, ಸಿಟ್ಟು, ಆಕ್ರೋಶ, ಹತಾಶೆ ಮೊದಲಾದ ಭಾವನೆಗಳು ಎಲ್ಲೆ ಮೀರಿದರೆ, ಇಂತಹ ಮನಸ್ಥಿತಿ ಡಯಾಬಿಟಿಸ್ ಕಾಯಿಲೆಗೆ ಪ್ರಚೋದನೆ ನೀಡಬಹುದು. [ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]
ಆದ್ದರಿಂದಲೇ, ಡಯಾಬಿಟಿಸ್ ರೋಗಿಗಳು, ಕಾಲಕಾಲಕ್ಕೆ, ಪರಿಣಿತ ಮನೋವೈದ್ಯರಿಂದ ಕೌನ್ಸೆಲಿಂಗ್ ಪಡೆಯುವದು ಅತ್ಯಂತ ಅವಶ್ಯಕ. ಹಲವು ಬಾರಿ, ಅಗತ್ಯ ಬಿದ್ದರೆ, ಮನೋವೈದ್ಯರು ಈ ಡಯಾಬಿಟಿಸ್ ರೋಗಿಗಳಿಗೆ, ಖಿನ್ನತೆ ನಿವಾರಣೆಯ ಔಷಧಿಗಳನ್ನು ನೀಡಬಹುದು. ಇಂತಹ ಚಿಕಿತ್ಸೆಯಿಂದ ಸಕ್ಕರೆ ರೋಗವನ್ನು ಆಶ್ಚರ್ಯಕರವಾದ ರೀತಿಯಲ್ಲಿ ಹತೋಟಿಗೆ ಬರುತ್ತದೆ.
ನೆನಪಿಡಿ, ಈ ರೋಗವನ್ನು ತಡೆಗಟ್ಟಬಹುದು. ಸೂಕ್ತ ಸಮಯದಲ್ಲಿ, ಯುಕ್ತಿಯುಳ್ಳ ಸೂಕ್ತ ಚಿಕಿತ್ಸೆ ನಿಮ್ಮನ್ನು ಈ ರೋಗದಿಂದ ಮುಕ್ತ ಮಾಡಬಲ್ಲದು. ಏಪ್ರಿಲ್ 8 ಯುಗಾದಿ ಹಬ್ಬದ ಸಂಭ್ರಮ. ಚೆನ್ನಾಗಿ ಹೋಳಿಗೆ, ಒಬ್ಬಟ್ಟು ತಿನ್ನಿರಿ. ಆದರೆ, ತಕ್ಕಂತೆ ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ಯುಗಾದಿ ಹಬ್ಬದ ಶುಭಾಶಯಗಳು.
ಲೇಖಕರು : ಡಾ. ವಿನೋದ ಕುಲಕರ್ಣಿ, ಹಿರಿಯ ಮನೋರೋಗ ತಜ್ಞರು, ಅಧ್ಯಕ್ಷರು ಐಎಂಎ ಹುಬ್ಬಳ್ಳಿ.