ವಿಶೇಷ ಲೇಖನ: ಅಕ್ಷಯತದಿಗೆಯೂ ಬಂಗಾರ ಖರೀದಿಯೂ...
ಭಾರತೀಯ ಹಬ್ಬಗಳ ಸಾಲಿನಲ್ಲಿ ಅಕ್ಷಯ ತದಿಗೆಗೆ ಶ್ರೇಷ್ಠ ಸ್ಥಾನವಿದೆ. ಅದು ಮಂಗಲ ಮುಹೂರ್ತ. ಜೀವನದ ಉತ್ಕರ್ಷದ ಬಗ್ಗೆ ಸಂಕಲ್ಪಗಳೆಲ್ಲವನ್ನೂ ಸಾಕಾರಗೊಳಿಸುವ ಮಹಾಸುದಿನದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಹತ್ವದ ಅವಲೋಕನ ಇಲ್ಲಿದೆ.
ಅಕ್ಷಯತದಿಗೆಯ ಪ್ರಮುಖ ಕಾರ್ಯ ಚಿನ್ನದ ಖರೀದಿ. ಅಂದು ಎಲ್ಲಾ ಆಭರಣದಂಗಡಿಗಳೂ ಗೋಲ್ಡ್ ರಷ್ ಡೇ ಆಗಿರುತ್ತದೆ. ಬಂಗಾರದ ಬಗ್ಗೆ ನಮಗೆ ಇಷ್ಟೊಂದು ಆಕರ್ಷಣೆ ಯಾಕೆ? ಶುದ್ಧ ಮನಸ್ಸು, ಶುದ್ಧಾತ್ಮರಿಗೆ ಅಪ್ಪಟ ಬಂಗಾರ ಎನ್ನುತ್ತಾರೆ.
ಚಿನ್ನ ಪವಿತ್ರತೆಯ ಸಂಕೇತ, ಶುದ್ಧತೆಯ ಚಿಹ್ನೆ ಸಮದ್ಧಿಯ ದ್ಯೋತಕವೂ ಹೌದು. ಮೈ ಮೇಲೆ ಧರಿಸಿದರೆ ದೇಹಾರೋಗ್ಯಕ್ಕೂ ಹಿತಕರ. ಉಳಿತಾಯ ಮತ್ತು ಹೂಡಿಕೆ ಸದುಪಯೋಗಕ್ಕೆ ಶ್ರೇಷ್ಠ ವಸ್ತುವಾಗಿದೆ.
ಮಹಿಳಾ ಸಬಲೀಕರಣಕ್ಕೆ ಒತ್ತು: ಮದುವೆಯಾದ ಕ್ಷಣದಿಂದ ವಧು ಮಡದಿಯಾಗುತ್ತಾಳೆ. ಅವಳ ಮಾನ ಪ್ರಾಣ ರಕ್ಷಣೆ ಬರೀ ಬಾಯಿ ಮಾತಿನದ್ದಾಗಬಾರದು. ಆರ್ಥಿಕ ಭದ್ರತೆ ಸೇರಬೇಕು ಎಂಬ ವಿಚಾರಧಾರೆಯ ಪ್ರತ್ಯಕ್ಷ ಆಚರಣೆ ತಾಳಿಕಟ್ಟುವ ರೂಢಿಯಲ್ಲಿದೆ. ನೋಡಲು ಧಾರ್ಮಿಕ ವಿಧಿಯಾದರೂ ಮಡದಿಯ ರಕ್ಷಣೆ ತನು, ಮನ, ಧನಗಳಿಂದ ಮಾಡಬೇಕು ಎಂಬ ಅರ್ಥಪೂರ್ಣ ಅರ್ಥಿಕ ವಿಧಿಯನ್ನು ಜೀವನದಲ್ಲಿ ಅಳವಡಿಸಿದ್ದು ನಮ್ಮವರ ಅರ್ಥಶಾಸ್ತ್ರದ ಅನ್ವಯಿಸುವಿಕೆಗೆ ಉದಾಹರಣೆ ಎನ್ನುವುದಕ್ಕೆ ಸಾಕ್ಷಿ,
ಮಾನ, ಪ್ರಾಣ ಹೋಗುವ ಪ್ರಸಂಗಗಳಲ್ಲಿ ಸ್ತ್ರೀ ತನ್ನ ಆಭರಣಗಳನ್ನು ಮತ್ತು ಕನಿಷ್ಠ ಬಂಗಾರದ್ದಾಗಿರುವ ತಾಳಿಯನ್ನು ಮಾರಿ ತನ್ನನ್ನು ತಾನು ರಕ್ಷಿಸಿಕೊಳ್ಳಲಿ ಎಂಬ ಸದೀಚ್ಛೆ ಇದೆ.
ಚಿನ್ನಾಭರಣ ಖರೀದಿಸುವ ಮೊದಲು ಅವುಗಳ ಪರಿಶುದ್ಧತೆ, ಮಳಿಗೆಗಳು ವಿಧಿಸುವ ಮಜೂರಿ, ಸವಕಳಿ ಶುಲ್ಕ ಕೆಡಿಎಂ ಮೊದಲಾದವುಗಳನ್ನು ಗಮನದಲ್ಲಿಟ್ಟುಕೊಂಡರೆ ಒಳಿತು, ಖರೀದಿಗೆ ತೆರಳುವ ಮುನ್ನ ಕೆಲವು ಎಚ್ಚರಿಕೆಗಳನ್ನು ಗಮನದಲ್ಲಿರಿಸಿಕೊಳ್ಳುವುದು ಒಳ್ಳೆಯದು. ಚಿನ್ನದ ಕ್ಯಾರೆಟ್, ಬಿಐಎಸ್ ಹಾಲ್ಮಾರ್ಕ್ ಮೊದಲಾದವುಗಳ ಬಗ್ಗೆ ವಿವರವಾಗಿ ಅಲ್ಲದಿದ್ದರೂ ಕೆಲಮಟ್ಟಿಗಾದರೂ ತಿಳಿದುಕೊಂಡಿರುವುದು ಅಗತ್ಯ.
ಕಂಜೂಸು ಪತಿ, ಪ್ರಿಯಕರನಿಗೆ ಬುದ್ಧಿ ಕಲಿಸಲು ಕಾಯುತ್ತಿರುವ ವನಿತೆಯರಿಗೆ ಅಕ್ಷಯ ತದಿಗೆ ಬಂದರೆ ಬಲು ಖುಷಿ. ಇನಿಯಾ, ಉಳಿದ ದಿನ ಬದಿಗಿರಲಿ, ಅಕ್ಷಯ ತದಿಗೆಗಾದರೂ ಬಂಗಾರದ ಒಡವೆ ಕೊಡಿಸೆಯಾ ಎಂದು ನಯವಾಗಿ ಅವರನ್ನು ಪೇಚಿಗೆ ಸಿಲುಕಿಸಲು ಈ ದಿನ ಅವರ ಪಾಲಿನ ಸುದಿನ.
ಚಿನ್ನದ ಬೆಲೆಯು ಒಂದರ್ಥದಲ್ಲಿ ಮಾಯಾ ಜಿಂಕೆ ಯಂತಿದೆ. ಚಿನ್ನಾಭರಣ ಪ್ರಿಯರು, ಸಂಗ್ರಹಕಾರರು, ಹಣ ಹೂಡಿಕೆದಾರರು, ನಿರಂತರವಾಗಿ ಅದರ ಬೆನ್ನ ಹಿಂದೆ ಬಿದ್ದಿದ್ದಾರೆ. ಮಾಯಾ ಜಿಂಕೆ ಮಾತ್ರ ಇವರ ಅಂಕೆಗೆ ಸಿಗದೆ ಓಡುತ್ತಲೆ ಇದೆ. ಚಿನ್ನದ ಬೆಲೆ ಈ ಪರಿ ದಾಖಲೆ ಮಟ್ಟಕ್ಕೆ ತಲುಪಲು ಸ್ಥಳೀಯ ಕಾರಣಗಳೇನೂ ಪ್ರಭಾವ ಬೀರಿಲ್ಲ. ಸಾಗರೋತ್ತರ ಮಾರಕmಯಲ್ಲಿನ ವಿದ್ಯಮಾನಗಳೇ ಇದಕ್ಕೆ ಕಾರಣ.