ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಪೂ ಇನ್ನೂ ಸತ್ತಿಲ್ಲ, ಇಲ್ಲೊಂದು ಪತ್ರ ಬರೆದಿದ್ದಾರೆ ಓದಿ!

By ಮಂಜುನಾಥ ಬಾಬು ಟಿ.ಸಿ., ಸಹಾಯಕ ನಿರ್ದೇಶಕರು
|
Google Oneindia Kannada News

ದೇಶದೆಲ್ಲೆಡೆ ಇರುವ ಗಾಂಧಿ ಪ್ರತಿಮೆಗಳಿಗೆ ಸ್ನಾನ, ಫೋಟೋಗಳಿಗೆ ಹೂವಿನ ಅಲಂಕಾರ, ಪುಢಾರಿಗಳ ಅಲಂಕಾರಿಕ ಭಾಷಣ ಶುರು, ಬಾಪೂವಿನ ತತ್ತ್ವ ಆದರ್ಶಗಳಿಗೆ ಎಳ್ಳುನೀರು, ಬೊಚ್ಚುಬಾಯಿ ತಾತನಿಗೆ ಮಕ್ಕಳ ನಮನ, ವೀಕೆಂಡ್ ಸುತ್ತುವವರಿಗೆ ಬೋನಸ್ ರಜಾ! ಇದೆಲ್ಲ ಗಾಂಧೀಜಿಗೆ ಗೊತ್ತಾಗುತ್ತಿಲ್ಲ ಅಂತ ತಿಳಿದಿದ್ದೀರಾ? ಮಹಾತ್ಮಾ ಗಾಂಧಿ ಇನ್ನೂ ಸತ್ತಿಲ್ಲ. ಜನವರಿ 30ರಂದು 'ಹೇ ರಾಮ್' ಅಂದ ದಿನದಿಂದ ದೇಶದಲ್ಲಿ ಏನೇನಾಗುತ್ತಿದೆ ಎಂಬ ಕುರಿತು ಪತ್ರ ಬರೆದಿದ್ದಾರೆ - ಸಂಪಾದಕ.
***
1948ರ ಜನವರಿ 30. ಅಂದು ಎಂದಿನಂತೆ ನನ್ನ ದಿನಚರಿ ಸಾಗಿತ್ತು. ಇದ್ದಕ್ಕಿದ್ದಂತೆ ಎದುರು ಬಂದ ವ್ಯಕ್ತಿ ನನಗೆ ಗುಂಡು ಹಾರಿಸಿದ, ಅರ್ಧ ವಿಶ್ವವನ್ನೇ ಅಳುತ್ತಿದ್ದ ಬ್ರಿಟಿಷರೇ ನನ್ನ ಅಹಿಂಸೆ, ಸತ್ಯ, ಶಾಂತಿ ಮಂತ್ರಗಳಿಗೆ ಹೆದರಿರುವಾಗ ಇವನ ಹಿಂಸೆಗೆ ಹೆದರುವರಾರು? ಹೇರಾಮ ಎನ್ನುತಾ ಕಣ್ಣು ಮುಚ್ಚಿದೆ.

ಕಣ್ಣು ಬಿಟ್ಟು ನೋಡಿದರೆ ನಾನೆಲ್ಲೋ ಮೇಲಿದ್ದೇನೆ. ಸಾವಿರಾರು ಜನ ಸುತ್ತ ನೆರೆದಿರುವುದೂ ನನಗೆ ಕಾಣುತ್ತಿದೆ. ಅಯ್ಯೋ ಇದೇನಿದು ಗಾಂಧಿ ಅಮರ್ ರಹೇ ಎನ್ನುತ್ತಾ ರಘಪತಿ ರಾಘವ ರಾಜಾರಾಮ್ ಎಂದು ಭಜನೆ ಮಾಡುತ್ತಿದ್ದಾರೆ. ನನಗೆ ಎಲ್ಲರೂ ಬಂದು ಹೂವಿನ ಮಾಲೆ ಹಾಕುತ್ತಿದ್ದಾರೆ. ಅಂದರೆ . . . . ಅಂದರೆ . . . .

[ಗಾಂಧೀಜಿ ಬಗ್ಗೆ ಓದಲು ಪುರುಸೊತ್ತಿದೆಯಾ?]

An open letter by Mahatma Gandhi to Indian citizen on his Jayanti

ಸರಿ, ಆಗಿದ್ದು ಆಗಿಹೋಯಿತು, ದೇಶ ಸುತ್ತೋಣವೆಂದು ಹೊರಟೆ. ದೇಶದ ಎಲ್ಲಾ ನಗರ ಪಟ್ಟಣ, ಗ್ರಾಮ, ಊರು-ಕೇರಿ ಪೇಟೆ ಎಲ್ಲೆಡೆ ನನ್ನದೇ ಮಾತು. ದುಃಖಿಸುತ್ತಿದ್ದ ಜನ, ನೋವಿನಿಂದ ಗೋಳಿಡುತ್ತಿದ್ದವರು ಎಷ್ಟೋ ಮಂದಿ. ನನ್ನ ಪ್ರಿಯ ಶಿಷ್ಯರು, ಅನುಯಾಯಿಗಳು, ನನ್ನ ತತ್ವ್ವಾರಾಧಕರು, ನನ್ನ ಹಿಂಬಾಲಕರು ತಾತ್ವಿಕವಾಗಿ ವಿರೋಧಿಸಿದರು, ಮಾನಸಿಕ ಹಾಗೂ ದೈಹಿಕವಾಗಿ ನನ್ನೊಂದಿಗೆ ಇದ್ದವರು, ಎಲ್ಲಾ ದೇಶ ಬಾಂಧವರು ಚಿಂತೆ, ದುಃಖ, ನೋವುಗಳಲ್ಲಿದ್ದಾರೆ.

ದಿನಕಳೆದಂತೆ, ನನ್ನ ಚಿತಾಭಸ್ಮ ದೇಶದ ವಿವಿಧ ನದಿಗಳಲ್ಲಿ ವಿರ್ಸಜಿಸಿದರೂ ಲೆಕ್ಕವಿಲ್ಲದಷ್ಟು ರಸ್ತೆಗಳಿಗೆ ನನ್ನ ಹೆಸರಿಟ್ಟರು, ಕಟ್ಟಡಗಳಿಗೆ ನನ್ನ ನಾಮಕರಣ ಮಾಡಿದರು. ಬಹಳಷ್ಟು ಊರುಗಳಲ್ಲಿನನ್ನ ಪುತ್ಥಳಿ ಸ್ಥಾಪಿಸಿದರು. ನನ್ನ ಹೆಸರಿನಲ್ಲಿ ಏನ್ನೆಲ್ಲಾ ನಡೆದವು. ನನ್ನ ಚಿತ್ರಗಳಿರುವ ನೋಟುಗಳ ಚಲಾವಣೆಗೆ ಬಂದವು. ದೇಶ ಬಾಂಧವರ ಮನದಾಳದಲ್ಲಿ ಕುಳಿತಿದ್ದೆ, ನಾನು ಮತ್ತು ನನ್ನ ತತ್ವಗಳು ಬೀದಿಗೆ ಬಿದ್ದವು.

ಹೌದು, ನಾನು ಸಾರ್ವಜನಿಕ ಶುಚಿತ್ವಕ್ಕೆ ಕರೆಕೊಟ್ಟೆ.. ಮನ, ಮನೆ, ಊರು-ಕೇರಿ, ಸ್ವಚ್ಛ ಇಡಲು ಹೇಳಿದೆ. ಇದರಿಂದ ನಮ್ಮಗಳ, ಊರಿನ, ದೇಶದ ಅನಾರೋಗ್ಯ ನಿವಾರಣೆಯಾಗುತ್ತದೆ- ಎಂದು ಹೇಳಿದರೆ ಆ ಕೆಲಸಗಳಿಗೆ ನನ್ನ ಅನುಯಾಯಿಗಳಾಗಿದ್ದ ಬಡಜನರನ್ನು ದೂಡಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಯೇ ವಿನಃ ಸ್ವಯಂ ನೈರ್ಮಲ್ಯಕ್ಕೆ ಇಳಿಯಲು ಮನಸ್ಸು ಮಾಡಲೇ ಇಲ್ಲ.

[ಮಹಾತ್ಮ ಮತ್ತು ಮನುಬೆನ್ : ಬೆಚ್ಚಿಬೀಳಿಸುವ ನಗ್ನ ಸತ್ಯಗಳು]

ನನ್ನ ಆಸೆ ಒಂದಿತ್ತು-ಅದು ಸ್ವಯಂ ನೇಯ್ದ, ಶುದ್ಧ ಹತ್ತಿಯಿಂದ ಮಾಡಿದ ಖಾದಿ ಬಟ್ಟೆಗಳನ್ನು ಎಲ್ಲರೂ ತೊಡಬೇಕೆಂಬುದಾಗಿತ್ತು. ಈ ಶುದ್ಧ ಬಟ್ಟೆಗಳನ್ನು ತೊಡುವುದರಿಂದ ಆರೋಗ್ಯ ಮತ್ತು ದೇಹದ ಮೇಲೆ ಯಾವುದೇ ತೊಂದರೆ ಇರುತ್ತಿರಲಿಲ್ಲ. ದೇಹದ ಬೆವರನ್ನು ಹೀರುವಂತಹ ಬಟ್ಟೆಯಾಗಿತ್ತು. ಅಲ್ಲದೆ, ಸ್ವಯಂ ನೇಯ್ಗೆಯಿಂದ ದೇಶದ ಬಟ್ಟೆ ಸಮಸ್ಯೆ ನೀಗಬಹುದಾಗಿತ್ತು. ಅಲ್ಲದೆ, ಗೃಹ ಉದ್ಯಮಗಳನ್ನು ಉತ್ತೇಜಿಸುವುದು ಆಗಿತ್ತು.

ಆದರೆ, ಅದು ಕ್ರಮೇಣ ಯಾಂತ್ರಿಕತೆ, ಸಣ್ಣ ಕೈಗಾರಿಕೆಗಳಾಗಿ ಮಾರ್ಪಾಡುತ್ತದೆ ಎಂದು ನಾನು ಎಣಿಸಿರಲಿಲ್ಲ. ಇಂದು ನನ್ನ ಅಕಾಂಕ್ಷೆಯ ಖಾದಿ ಬಟ್ಟೆ ಧರಿಸುವವರು ದೇಶದಲ್ಲಿ ವಿರಳವಾಗಿದ್ದಾರೆ. ಬೆಲೆಯೂ ದುಬಾರಿಯಾಗಿದೆ. ನನ್ನ ಮೇಲಿನ ಪ್ರೀತಿ ಗೌರವಗಳಿಗಾಗಿ ಬೆರಳಣಿಕೆಯ ಮಂದಿ ಇಂದಿಗೂ ನನ್ನ ಬಯಕೆಯ ಖಾದಿ ಬಟ್ಟೆ ತೊಡುತ್ತಿದ್ದರೆ, ನನ್ನ ತತ್ವವನ್ನೇ ಅರಿಯದ ಇಂದಿನ ಯುವ ಜನಾಂಗದ ಕೆಲವರು ಶೋಕಿಗಾಗಿ ಖಾದಿ ಬಟ್ಟೆ ತೊಡುತ್ತಿದ್ದಾರೆ!

ನನ್ನ ಪ್ರಿಯ ಮತ್ತೊಂದು ಕಾರ್ಯ ಗ್ರಾಮ ಸ್ವರಾಜ್ಯದ ಕಲ್ಪನೆ. ಸ್ವಾತಂತ್ರ್ಯ ನಂತರ ಇದು ಜಾರಿಯಾಗುತ್ತದೆ ಎಂದು ನಿರೀಕ್ಷೆ ಇಟ್ಟಿದೆ. ಇದನ್ನು ನನ್ನ ಕೆಲವು ಅನುಯಾಯಿಗಳು ಸರ್ಕಾರದ ಮೂಲಕ ಜಾರಿಗೆ ತಂದರು. ಆದರೆ ಆದದ್ದೇನು, ನನ್ನ ಉದ್ದೇಶ ಮರೆತ ಬಹಳಷ್ಟು ಕಡೆಗಳಲ್ಲಿ ಗ್ರಾಮ ಸ್ವರಾಜ್ಯ ಹೋಗಿ, ಗ್ರಾಮ ಭ್ರಷ್ಟಚಾರ ನಡೆಯುತ್ತಿದೆ. ಇಂದು ದೇಶದಲ್ಲಿ ನಿಮ್ಮ ಬಾಪುವಿನ ಕನಸನ್ನು ನನಸಾಗಿಸುವ ಬದಲು ಶಾಶ್ವತ ಕನಸಾಗಿಯೇ ಮಾಡಲು ಕೆಲವರು ಹವಣಿಸುತ್ತಿದ್ದಾರೆ.

ರಸ್ತೆ, ಕಟ್ಟಡಗಳು, ಯೋಜನೆಗಳಿಗೆ ನನ್ನ ನಾಮಕರಣ ಮಾಡುವ ಬದಲು ನನ್ನ ಆಸೆಯ ಸತ್ಯ, ಅಹಿಂಸೆ, ಶಾಂತಿ, ನೈರ್ಮಲ್ಯ, ಖಾದಿ ಗ್ರಾಮೋದ್ಯೋಗಗಳಿಗೆ ಒತ್ತುಕೊಡಿ. ಕೆಲವೆಡೆ ಮಾತ್ರ ಇರುವ ಗ್ರಾಮಾಡಳಿತ, ದೇಶದ ಎಲ್ಲೆಡೆ ಬರಲಿ. 'ಬಾಪು ಅಮರ್ ರಹೇ' ಎಂದು ಹೇಳುವ ಬದಲು ಬಾಪುವಿನ ತತ್ತ್ವ ಸಿದ್ಧಾಂತ ಆಚರಣೆ ಮಾಡುವ ಮೂಲಕ ಅವುಗಳನ್ನು ಅಮರ ಮಾಡಿ. ಅಳಿದುಳಿದಿರುವ ನನ್ನ ಪ್ರೀತಿಯ ತ್ಯಾಗಜೀವಿ ಅನುಯಾಯಿಗಳು ಇಂದು ನನ್ನನ್ನು ಮರೆತ್ತಿರುವ ಯುವ ಜನಾಂಗವನ್ನು ಎಚ್ಚರಿಸುವ ಪ್ರಯತ್ನ ಮಾಡಿ, ನನ್ನ ಜನ್ಮ ದಿನದ ಬದಲು ವರ್ಷವಿಡೀ ನನ್ನ ತತ್ತ್ವ ಆಚರಿಸಿದರೆ ಅದೇ ನನಗೆ ಖುಷಿ, ಅದೇ ನೀವು ನನಗೆ ಕೊಡುವ ಗೌರವ.

ಉಳಿಸಿಕೊಳ್ಳಿ ಹಿರಿಯ ನಡತೆ, ಗಳಿಸಿಕೊಳ್ಳಿ ಮಾನ್ಯತೆ.. ಸತ್ಯವಾದ ಘನತೆ ಸೋಲೇ ಕಾಣದಂತೆ.

[ನೂರು ವರ್ಷಗಳ ಹಿಂದೆ ಬಾಪು ಕನ್ನಡ ನಾಡಿಗೆ ಕಾಲಿಟ್ಟ ಆ ಕ್ಷಣ!]

ಇಂತಿ ತಮ್ಮ ಪ್ರೀತಿಯ

ಮೋಹನದಾಸ ಕೆ. ಗಾಂಧಿ

English summary
Mahatma Gandhi is not dead. He is alive and observing what is happening in his beloved country India after his death on January 30, 1948. Are the dreams visualized by Gandhiji realized? An imaginary letter by Gandhiji addressing the nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X