ದೇವಲೋಕದ ಚೆಲುವೆ ಊರ್ವಶಿ ಬಯೋಡೇಟ
ತಪಸ್ವಿಯೊಬ್ಬರ ಮಗಳಾದ ಕಾರಣ ಆಕೆಯ ಮಾತುಕತೆ, ವರ್ತನೆ, ನಡೆ, ನುಡಿ, ಒನಪು ವಯ್ಯಾರಗಳು ಇತರ ಅಪ್ಸರೆಯರಿಗಿಂತ ಭಿನ್ನವಾಗಿತ್ತು. ಈಕೆಯ ಬುದ್ಧಿವಂತಿಕೆ, ಪ್ರಬುದ್ಧತೆಯ ಬಗ್ಗೆ ಋಗ್ವೇದ, ದೇವಿ ಭಾಗವತ, ಮಹಾಭಾರತ ಮುಂತಾದ ಕಡೆ ಬರೆದುಕೊಂಡಿದ್ದಾರೆ. ಊರ್ವಶಿ ಪ್ರೀತಿಸುವ ಮನದ ಹುಡುಗಿ. ಅವಳು ಮನಸ್ಸನ್ನು ಎಂದೂ ಮಾರಿಕೊಂಡವಳಲ್ಲ. ಅದಕ್ಕೆ ಸಾಕ್ಷಿ ಪುರೂರವನ, ದುರ್ಜಯುವಿನ ಜೊತೆಗಿನ ಪ್ರೇಮಕಹಾನಿಗಳು! ಇದಲ್ಲದೆ ಆಕೆ ಅರ್ಜುನನನ್ನು ಪ್ರೀತಿಸಿದಳು ಆದರೆ ಆತ ಅವಳನ್ನು ತಿರಸ್ಕರಿಬಿಟ್ಟ. ಮೂರ್ಖ, ಶತಮೂರ್ಖ.
ಊರ್ವಶಿಯಲ್ಲಿ ಪ್ರೀತಿಸುವ ಹೃದಯದ ಆರ್ದ್ರತೆ ಮಡುಗಟ್ಟಿತ್ತು. ಅದರಲ್ಲಿ ಚಿಟಿಕೆ ಕಲ್ಮಷ ಇಲ್ಲ. ನನಗೆ ಪ್ರಿಯನಾದ ವ್ಯಕ್ತಿಯ ಜೊತೆಗಿನ ಆಕೆಯ ಬಾಂಧವ್ಯಗಳು ಸುಂದರ ತುಂಬಾ ಸುಂದರ! ಇಷ್ಟೆಲ್ಲಾ ಅನುಬಂಧಗಳ ನಡುವೆ ಆಕೆ ಎಲ್ಲವನ್ನು ಕೊಡವಿ ಹೇಗೆ ಕರ್ತವ್ಯದ ಕಡೆಗೆ ಗಮನ ಇಡುತ್ತ ಇದ್ದಳು ಅನ್ನುವ ಸಂಶಯ ತಮಗೆ ಗೊತ್ತಿಲ್ಲದಿರಬಹುದು. ತನ್ನನ್ನು ಪ್ರೀತಿಸಿದ ತಾನು ಪ್ರೇಮಿಸಿದ ವ್ಯಕ್ತಿಗೆ ಆಕೆ ಷರತ್ತು ಹಾಕೆ ಹಾಕ್ತಾಳೆ. "ನನ್ನಿಂದ ಸಂತಾನಪೇಕ್ಷೆ ಮಾಡಬಾರದು, ನಗ್ನವಾಗಿ ಕಾಣಿಸಿಕೊಳ್ಳಬಾರದು!".. ಈ ಎಲ್ಲ ಟರ್ಮ್ಸ್ ಅಂಡ್ ಕಂಡೀಶನ್ಸ್ ಆಕೆ ತುಂಬಾ ವ್ಯಾವಹಾರಿಕ ಮನದವಳು ಅಂತಲೂ ತೋರಿಸುತ್ತದೆ. ಆದರೆ ವಸ್ತು ಸ್ಥಿತಿ ಅದಲ್ಲ. ತಾನು ಯಾವುದೇ ಒಬ್ಬ ಗಂಡಸಿನ ಜೊತೆ ಶಾಶ್ವತವಾಗಿ ಇರುವ ಹಾಗಿಲ್ಲ, ಅದು ತನ್ನ ಬದುಕಿನ ಘೋರ ಸತ್ಯ ಎನ್ನುವುದು ಆಕೆಗೆ ತಿಳಿದಿತ್ತು. ಆ ಕಾರಣದಿಂದ ಇಂತಹ ಕಟ್ಟುಪಾಡುಗಳನ್ನು ಅವಳ ಪ್ರೇಮಿಗಳು ಎದುರಿಸಬೇಕಿತ್ತು.
ಪುರೂರವನ ಜೊತೆ ಊರ್ವಶಿ ಡೇಟಿಂಗ್ ಮಾಡಿದ್ದು ನಿಜ. ಆದರೆ ಅವನನ್ನ ಮದುವೆ ಆಗುವುದಕ್ಕೆ ಅವಳಿಗೆ ಇಷ್ಟವಿರಲಿಲ್ಲ. "ಪ್ರಜೆಗಳ ರಕ್ಷಣೆಗೆ ಹಾಗೂ ಯುದ್ಧದ ಮೂಲಕ ಲೋಕ ರಕ್ಷಣೆಗಾಗಿ ನಿನ್ನ ಜನ್ಮ ಆಗಿರೋದು ಅದನ್ನು ಮರೀಬೇಡ. ನನ್ನ ಪ್ರೀತಿ ಎಂದಿಗೂ ಶಾಶ್ವತ ಅಲ್ಲ, ನನ್ನನ್ನು ನಂಬದಿರು" ಎಂದು ಹೇಳಿ ಕ್ಯಾಬ್ ಹತ್ತಿಕೊಂಡು ದೇವಲೋಕಕ್ಕೆ ಹೊರಟು ಹೋಗ್ತಾಳೆ.
ಕೂರ್ಮ ಪುರಾಣದಲ್ಲಿ ಜಯಧ್ವಜ ಎನ್ನುವ ರಾಜ ಇದ್ದ. ಅವನ ಮಗ ದುರ್ಜಯು. ಆತನಿಗೆ ಮದುವೆ ಆಗಿರುತ್ತದೆ. ಆದರೆ ಒಮ್ಮೆ ನರ್ಮದಾ ನದಿ ತೀರದಲ್ಲಿ ತನ್ನಪಾಡಿಗೆ ತಾನು ಹಾಡಿಕೊಂಡು, ಆಡಿಕೊಂಡು ಓಡಾಡ್ತಾ ಇದ್ದ ಊರ್ವಶಿ ಕಾಣ್ತಾಳೆ. ಅವರಿಬ್ಬರಿಗೂ ಪ್ರೀತಿ ಶುರು ಆಗುತ್ತದೆ. ಸ್ವಲ್ಪ ಕಾಲ ಸವೆಯುತ್ತದೆ, ಆತನಿಗೆ ಇದ್ದಕ್ಕಿದ್ದ ಹಾಗೆ ತಾನು ಮದುವೆ ಆಗಿರುವ ಸಂಗತಿ ಜ್ಞಾಪಕಕ್ಕೆ ಬರುತ್ತದೆ. ಊರ್ವಶಿ ಹತ್ರ ತಾನು ಒಮ್ಮೆ ರಾಜ್ಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗ್ತಾನೆ. ಆದರೆ ಅಲ್ಲಿ ತನ್ನ ಪಟ್ಟದರಸಿಯನ್ನು ಕಂಡಾಗ ಪಶ್ಚಾತ್ತಾಪ ಉಂಟಾಗುತ್ತದೆ.
ಅಲ್ಲಿ ಸ್ವಲ್ಪ ಕಾಲ ಹರಣ ಮಾಡ್ತಾನೆ. ಹಾಳಾದ ಮೋಹಕ್ಕೆ ಒಳಗಾಗಿ ಮತ್ತೆ ಊರ್ವಶಿ ಹತ್ತಿರ ಬರ್ತಾನೆ, ಆಗ ಆಕೆಗೆ ತಿಳಿಯೋದು ಈತನಿಗೆ ತನ್ನ ಮೇಲೆ ಇರುವುದು ಪ್ರೀತಿ ಅಲ್ಲ ಮೋಹ ಅಂತ! ತಕ್ಷಣ ತನ್ನ ಅಪರೂಪದ ರೂಪವನ್ನು ಕುರೂಪವಾಗಿ ಮಾಡಿಕೊಂಡು ಇವನ ಮುಂದೆ ಬಂದು ನಿಲ್ತಾಳೆ... ಹೀಗೆ ಇವರ ಪ್ರಣಯ ಕಥೆಯು ಮುಕ್ತಾಯ ಆಗಲ್ಲ, ಬರೆಯುತ್ತಾ ಹೋದರೆ ಇಂಟರ್ನೆಟ್ಟಿಗೂ ಬೇಜಾರಾಗುತ್ತದೆ.
ಓಹ್, ಬೈದ ವೇ ಅರ್ಜುನ ಊರ್ವಶಿಯ ಪ್ರೀತಿಯನ್ನು ತಿರಸ್ಕಾರ ಮಾಡಿದ್ದು ಗೊತ್ತುಂಟಾ ನಿಮಗೆ? ಭೂಮಿಯಲ್ಲಿ ಅಪ್ಸರೆಯರನ್ನು ಹೇಗೆ ಕಾಣ್ತಾರೆ ಎಂದು ಸವಿಸ್ತಾರವಾಗಿ ವಿವರಿಸಿ ಹೇಳುವುದರ ಮೂಲಕ ಆಕೆಯ ಮನವನ್ನು ಒಡೆಯುತ್ತಾನೆ ಅರ್ಜುನ. ತಾನು ಬೇಕಾದಷ್ಟು ಸ್ತ್ರೀ ಸಂಗ ಮಾಡಿದ್ದರೂ, ಅನೇಕ ರಾಜ ಕುವರಿಯರನ್ನು ಪ್ರೇಮಿಸಿ ಮದುವೆಯಾಗಿ ಅವರನ್ನು ಮರೆತಿದ್ದರೂ ತಂದೆ ಇಂದ್ರ ಆಸ್ಥಾನದಲ್ಲಿ ಇರುವುದರಿಂದ ಹಾಗೂ ಪುರೂರವನ ಮನದರಸಿ ಆದ ಕಾರಣ ನೀನು ನನಗೆ ತಾಯಿ ಸಮಾನ ಎಂದು ಹೇಳಿಬಿಡ್ತಾನೆ. ಈ ಮೂಲಕ ಹೊಸದೊಂದು ಅಧ್ಯಾಯವನ್ನು ತನ್ನ ಬದುಕಲ್ಲಿ ತೆರೆಯುತ್ತಾನೆ. ಒಟ್ಟಾರೆ ಪ್ರೀತಿಯ ವಿಷಯದಲ್ಲಿ ಊರ್ವಶಿ, ಎಲ್ಲೋ ಮರೆಯಾಗಿದ್ದರೂ, ಎಂದಿಗೂ ಮರೆಯಲಾಗದ ಹುಡುಗಿ ಇವತ್ತು ನೆನಪಾದಳು.
ವಯ್ಯಾರಿ ಊರ್ವಶಿಯ ಪ್ರೇಮ ಪ್ರಸಂಗಳು