ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗ್ಳೂರು ಒಂಥರಾ ಫ್ರೂಟ್ ಸಲಾಡ್ ಇದ್ದ ಹಾಗೆ

By Shami
|
Google Oneindia Kannada News

ನೂರಾರು ಗ್ರಾಮಗಳನ್ನು ನುಂಗಿ, ಅಕ್ಷರಶಃ ಬೋರ್ ವೆಲ್ ನೀರು ಕುಡಿಯುತ್ತ ಬೆಳೆಯುತ್ತಿರುವ ಮಹಾನಗರ ಬೆಂಗಳೂರು. ಮಹಾನಗರಗಳು ಬೆಳೆಯುವ ಪರಿಯೇ ಹೀಗೆ. ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ, ಉದ್ಯಮ, ಶಿಕ್ಷಣ, ಅಡ್ವೊಕೇಟು, ಕೋರ್ಟು, ವಿಮಾ ಏಜೆಂಟು, ನರ್ಸಿಂಗ್ ಹೋಮುಗಳಿಂದ ತುಂಬಿ ತುಳುಕುತ್ತಿರುವ ಊರೆಂಬೋ ಊರು.

ಅತಿ ಶ್ರೀಮಂತರು, ಶ್ರೀಮಂತರು, ಅಷ್ಟೇನು ಶ್ರೀಮಂತರಲ್ಲದವರು, ಇಷ್ಟರಲ್ಲೇ ತೃಪ್ತರು, ಅಷ್ಟಾದರು ಅತೃಪ್ತರು, ಬಡವರು, ಅತೀ ಬಡವರು, ಭಿಕ್ಷುಕರು, ಕಳ್ಳರು, ಕಾಕರು, ಭಯೋತ್ಪಾದಕರು, ಯೋಗಿಗಳು, ಮೇಧಾವಿಗಳು, ಸಮಾಜ ಸೇವಕರು, ನಯವಂಚಕರು, ಎಲ್ಲೋ ಕಳೆದು ಹೋದವರು, ಸಂತೆಯಲ್ಲಿ ನಿಂತಲ್ಲೆ ಕಬೀರರಾದವರು. ಎಲ್ರೂ.

ಜತೆಗೆ, ಹೋರಾಟಗಾರರು, ಖದೀಮರು, ಸಮಯ ಸಾಧಕರು, ಕಾಲಾಯ ತಸ್ಮೈನ್ನಮಃ ಎಂದುಕೊಳ್ಳುವವರು, ಬಾರುಗಳಲ್ಲಿ ರಿಪೀಟ್ ಎಂದು ಹೇಳುವವರು, ಶನಿ ಮಹಾತ್ಮನಿಗೆ ತಪ್ಪದೆ ಎಳ್ಳಿನ ದೀಪ ಹಚ್ಚಿ ಬಂದು ಅನ್ನಕ್ಕೆ ಹೆಸರಿಡುವವರು. ಫೋನನ್ನು ಚಾರ್ಜಿಗೆ ಇಟ್ಟು ಕೈಯಲ್ಲೇ ಊಟ ಮಾಡುವವರು. ನಾಳಿನ ಕೆಲಸಗಳನ್ನು ಇಂದೇ ಟಿಪ್ಪಣಿ ಮಾಡಿಟ್ಟುಕೊಂಡು, ಗುಳಿಗೆ ನುಂಗಿ ಮಲಗುವವರು.

ನಾಲ್ಕು ಗೋಡೆಗಳ ಮಧ್ಯೆ ಒರಗಿ ಕುಳಿತು ಸಮಾಜದ ಕಪಟ ನಾಟಕಗಳನ್ನು ನೋಡುವವರು, ಓದುವವರು, ಮರೆಯುವವರು. ಇಲ್ಲೂ ಮೂಲ ನಿವಾಸಿಗಳು, ವಲಸಿಗರು, ಬಂದು ಹೋಗುವವರು. ಒಂದು ಮಹಾನಗರಕ್ಕೆ ದೈತ್ಯ ಶಕ್ತಿ ಇರ್ತದೆ. [ಚಿತ್ರಗಳು : ಜಯನಗರದ ಪಟಾಲಮ್ಮ ಮಹೋತ್ಸವದ ಸಂಭ್ರಮ]


ಈ ಮಧ್ಯೆ ಮಹಾಜನತೆಗೆ ನಾನು ತಿಳಿಯಪಡಿಸುವುದೇನೆಂದರೆ ನಾನೇನು ಬೆಂಗಳೂರನ್ನು ಅರಗಿಸಿಕೊಂಡಿಲ್ಲ. ಬೆಂಗಳೂರು ನಮ್ಮನ್ನು ಅರಗಿಸಿಕೊಳ್ಳುತ್ತಿದೆ. ಬೆಂಗ್ಳೂರು ಒಂಥರಾ ಫ್ರೂಟ್ ಸಲಾಡ್ ಇದ್ದ ಹಾಗೆ. ಅಲ್ಲಿರುವ ಯಾವ ಹಣ್ಣೂ ತನ್ನತನವನ್ನು ಬಿಟ್ಟುಕೊಡುವುದಿಲ್ಲ. ಇದಕ್ಕೆ ಉದಾಹರಣೆ 198 ವಾರ್ಡುಗಳಲ್ಲಿ ಜರಗುವ ಗ್ರಾಮದೇವತೆಯ ಉತ್ಸವಗಳು.

ಜೂನ್ ಮಾಹೆ ಬಂತೆಂದರೆ ಜಾತ್ರೆಗಳು ಗರಿಕೆದರಿಕೊಳ್ಳುವ ಕಾಲ. ಮುಂಗಾರು ಮಳೆ ಅಮರಿಕೊಳ್ಳುವ ಮೊದಲು ಜಾತ್ರೆಗಳು ಮುಗಿಯಬೇಕು. ಚಿತ್ರಗಳು ಉಳಕೊಂಡರೆ ಉಳೀಬೇಕು.

ಬಾಲ್ಯ, ಹದಿಹರೆಯದಲ್ಲಿ ಚಿತ್ರದುರ್ಗದಲ್ಲಿ ನಡೆಯುವ ಏಕನಾಥೇಶ್ವರಿ ಉತ್ಸವ, ಸಿಡಿ, ಬರಗೇರಮ್ಮ - ತಿಪ್ಪಲಘಟ್ಟಮ್ಮನ ಭೇಟಿ, ಊರಾಚೆಯ ವೆಂಕಟರಮಣನ ಗುಡಿಯಲ್ಲಿ ವಿಜಯದಶಮಿಯಂದು ಜರುಗುವ ತೇರಿಗೆ ಹೋಗುತ್ತಿದ್ದನ್ನು ಬಿಟ್ಟರೆ ಮತ್ಯಾವ ದೇವತೆಯ ಜಾತ್ರೆಗಳಿಗೆ ನಾನು ಹೋಗಲಾಗಿಲ್ಲ.

ನಿನ್ನೆ ಏನಾಯಿತೆಂದರೆ, ಈ ಕಡೆ ಆನೆಬಂಡೆ ರಸ್ತೆ, ಈ ಕಡೆ ಮಾಧವನ್ ಪಾರ್ಕ್, ಇನ್ನೊಂದ್ಕಡೆ ಜಯನಗರ ನಾಲಕ್ಕನೇ ಬ್ಲಾಕ್, ಮತ್ತೊಂದು ದಿಕ್ಕಿನಲ್ಲಿ ಸೌತ್ ಎಂಡ್ ರಸ್ತೆಯ ನಡುವೆ ತಣ್ಣಗಿರುವ ಪ್ರದೇಶದಲ್ಲಿ ಒಂದು ಮಸೀದಿ ಇದೆ. ಅದರ ಎದುರಿಗೆ ಪಟಾಲಮ್ಮನ ಗುಡಿ. ಇವೆರಡರ ನಡುವೆ ನಮ್ಮ ಒನ್ಇಂಡಿಯಾ ಕನ್ನಡ ವೆಬ್ ಸೈಟ್ ಕಚೇರಿ ಇದೆ. Pure Digital.


ಅವತ್ತು ಪಟಾಲಮ್ಮನ ಊರ ಹಬ್ಬ. ಅವಳು ಕನಕನ ಪಾಳ್ಯ, ಸಿದ್ದಾಪುರ, ಯಡಿಯೂರು, ಭೈರಸಂದ್ರ ಹಾಗೂ ನಾಗಸಂದ್ರ ಗ್ರಾಮಗಳ ಅಧಿದೇವತೆ. ಅಮ್ಮನನ್ನು, ಅಮ್ಮನ ಭಕ್ತಕೋಟಿಯನ್ನು ನೋಡಲು ಎರಡು ಕಣ್ಣುಗಳು ಸಾಲವು.

ನಾನು ಜಾತ್ರೆಗಳಿಗೆ ಹೋಗದಿದ್ದರೆ ಏನಂತೆ. ಜಾತ್ರೆಯೇ ನಮ್ಮ ಆಫೀಸಿನ ಮನೆ ಬಾಗಿಲಿಗೆ ಬಂದಿತ್ತು. ಅದರ ಕೆಲವು ಚಿತ್ರಗಳ ಮೆರವಣಿಗೆ ಇಲ್ಲಿದೆ.

English summary
Brand Bengaluru. A cosmopolitan city carved out of hundreds of villages. Each village has its own distinct identity and has a festival of its own. An overview of Patalamma Devi village fest 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X