ನಾಚಿಕೆಯಿಂದ ತಲೆ ತಗ್ಗಿಸುತ್ತಿದೆ ಜಾನಪದ
ಜಾನಪದ ಇಂದು ಅನೇಕ ಅವಕಾಶ, ಅನುಕೂಲಗಳನ್ನು ಕಲ್ಪಿಸುವ ಕಾಮಧೇನು ಆಗಿದೆ. ಧ್ವನಿಯಡಕ(ಸಿಡಿ), ಪೇಟೆಗಾಯಕರು ಮಾಧ್ಯಮಗಳಲ್ಲಿ ಪ್ರಚಾರಕ್ಕೆ ತಂದವುಗಳನ್ನು (ಕೃತಕ ಹಾಗೂ ಪಾಲಿಶ್ ಮಾಡಿ) 'ತಪ್ಪು'ಗಳೊಂದಿಗೆ ಎಗ್ಗಿಲ್ಲದೆ ಸ್ವೀಕರಿಸಿ ಜಾನಪದ ಹಾಡುಗಾರರಾಗುತ್ತಿರುವುದಕ್ಕೆ ನಿಜ ಜಾನಪದ ನಾಚಿಕೆಯಿಂದ ತಲೆ ತಗ್ಗಿಸುತ್ತಿದೆ.
ಸಾವಿರಾರು ಹಾಡುಗಳು ಹಾಡುವ ಕೊರಳುಗಳಿದ್ದೂ 'ಮರುಗುನಾಗ' (ಮರೆಯಲ್ಲಿ) ಮೂಕವಾಗಿವೆ. ಕೋಲಾರ-ಚಿಕ್ಕಬಳ್ಳಾಪುರದಂಥ ದ್ವಿಭಾಷಿಕ ಜಿಲ್ಲೆಗಳಲ್ಲಿನ ಜಾನಪದ ಹಾಡುಗಳಂತೂ ಅನಾಥವೇ. ಇಲ್ಲಿನವು 'ಅನುವಾದ ಜಾನಪದ'ವಾಗಿ ಕನ್ನಡ ಜಾನಪದದೊಂಗಿಗೆ ಬೆರೆಯಬೇಕಿದೆ. ಈ ಮಾತನ್ನು ಅಸಮಂಜಸವನ್ನುವುದು ಅಕಾರಣ ಅಭಿಪ್ರಾಯವೇ ಆಗುವುದು.
ಕ್ಷಣಾರ್ಧದಲ್ಲಿ ಬಾಯಲ್ಲಿ ನೀರೂರಿಸುವ ಹುಣಸೆರಾಯನ ಮಹಾತ್ಮೆ!
ಏಕೆಂದರೆ ಇಂಥ ಪ್ರದೇಶದ ಜಾನಪದ ಸಾಹಿತ್ಯ ಕಲೆಗಳು ಹುಟ್ಟಿದ್ದು ಈ ನೆಲದಲ್ಲಿಯೇ, ಕನ್ನಡ ನೆಲದಲ್ಲಿಯೇ.
ಈ ಪ್ರದೇಶದ ಕನ್ನಡ ಇಲ್ಲಿಯ ತೆಲುಗು ಜಾನಪದ ಗೀತೆಗಳ ಅನುವಾದಕ್ಕೆ ಒಗ್ಗಿ, ಬಾಗಿ, ಬಳುಕುತ್ತದೆ. ಈ ನೆಲದ ಹಲವು ಜಾನಪದ ಗೀತೆಗಳು ಪರಸ್ಪರ ಕನ್ನಡಕ್ಕೆ, ತೆಲುಗಿಗೆ ಅನುವಾದಗೊಂಡುದುಂಟು. ಅವುಗಳಲ್ಲಿ ಹಲವು ಒಳ್ಳೆಯ ಗೀತೆಗಳಾಗಿ ಇನಿದಾಗಿ ಕನ್ನಡ - ತೆಲುಗು ಜಾನಪದ ಗೀತೆಗಳಂತೆ ಮುದ ನೀಡುತ್ತವೆ.
ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿದ ಮಹಾತಾಯಿ ಪದ್ಮಸಾಲಿ ಲಕ್ಷ್ಮೀದೇವಮ್ಮ
ಆದರೆ ಸಂಪ್ರಬಂಧಗಳಲ್ಲಿ ಸೇರಿದ ಅನೇಕವಕ್ಕೆ ಈ ಚೆಲುವು, ಒನಪು, ಸೊಗಡಿಲ್ಲ. ಕೆಲವು ಸಂಪ್ರಬಂಧಗಳಲ್ಲಿನ ಅನುವಾದವನ್ನು ಅಂತೂ ಓದಲೇ ಕಷ್ಟ. ಶಬ್ದವೇ ತಿಳಿಯದೆ ಅರ್ಥವೆಲ್ಲಿ? ಇನ್ನು ಹಾಡುವುದೆಲ್ಲಿ? ಹಾಗೆ ಹಾಡಬೇಕೆಂದರೆ ಗದ್ಯವನ್ನೂ ಹಾಡಾಗಿಸಿ ಹಾಡುತ್ತಿದ್ದ ಮೈಸೂರು ಅನಂತಸ್ವಾಮಿಯವರಂಥ ಸಂಗೀತ ಪ್ರತಿಭೆ ಕೋಲಾರದಲ್ಲಿ ಹುಟ್ಟಿಬರಬೇಕು.
ಕೋಲಾರದ ಜಾನಪದವೇ ಅಲ್ಲ
ಇನ್ನು ಕೆಲವು ಅನುವಾದಗಳು ಹಾಡಾಗಿದ್ದರೂ ಮೂಲವನ್ನೇ ತಿಂದು ಹಾಕಿವೆ. ಇದು ಕನ್ನಡ ನಾಡಿನ 'ಕನ್ನಡಗಳಂ'ತೆ ಕನ್ನಡವೇ ಆಗಿದ್ದರೂ ಬಳಕೆಯ ಅಸಡ್ಡೆಗೆ ಗುರಿಯಾಗಿ ಸೊರಗುತ್ತಿದೆ. ಕೋಲಾರದ ಜಾನಪದವೇ ಅಲ್ಲ, ಕನ್ನಡ ನಾಡಿನ ಅನೇಕ ಜಾನಪದಗಳು ಇಷ್ಟು ಕಾಲದ ನಂತರವೂ ಸಂಪೂರ್ಣವಾಗಿ ನಮಗೆ ದಕ್ಕಿಲ್ಲ.
ವಿಶ್ವವಿದ್ಯಾಲಯಗಳ ಸಂಶೋಧನಾ ಸೂತ್ರ, ತತ್ವ, ಮಾರ್ಗದರ್ಶನಗಳು ಬದಲಾಗಬೇಕಿದೆ ಅಥವಾ ಪರಿಷ್ಕರಣೆಗೆ ಒಳಪಡಬೇಕಿದೆ. ಜಾನಪದ ಸಂಶೋಧನೆಯೆಂದರೆ ಸಿಕ್ಕಿದ ಪರಿಕರ (ಸಾಹಿತ್ಯ ಇತ್ಯಾದಿ)ಗಳನ್ನು ಗುರುತು ಹಾಕಿಕೊಂಡು ಸಿದ್ಧ ಮಾರ್ಗಸೂಚಿಗೆ ಮೆತ್ತುತ್ತ (ಕಟ್ ಅಂಡ್ ಪೇಸ್ಟ್) ಹೋಗುವುದಾಗಬಾರದು. ಇದರಿಂದೇನು ಜಾನಪದ ಉಳಿಯದು.
ಟಿಪ್ಪಣಿಗಳು ಮಾತ್ರವಲ್ಲ
ಕ್ಷೇತ್ರ ಕಾರ್ಯವೆಂದರೆ ಓಡಾಟ, ರಿಮೋಟ್ ಆದ ಕಡೆಗಳಲ್ಲಿ ಹುದುಗಿರುವ ವಸ್ತುಸಂಗ್ರಹ, ವ್ಯಕ್ತಿ ಸಂದರ್ಭಸೂಚಿ ಟಿಪ್ಪಣಿಗಳು ಮಾತ್ರವಲ್ಲ. ಅಂತಹ ವ್ಯಕ್ತಿ ತನ್ನ ಸಂಪನ್ಮೂಲ ವ್ಯಕ್ತಿಯ ಉಕ್ತಿಶೈಲಿಯಂತೆ ತಾನೊಂದಿಷ್ಟು ಕಲಿತು, ತನ್ನ ತರಗತಿಯಲ್ಲಿ ಕಲಿಸುವವನಾದರೆ ಅದು ಉಳಿದೀತು.
ಈ ಮನೋಧರ್ಮವನ್ನು ದಾಟುವುದು ಅಗತ್ಯ
ಈಗಿನ ಆಧ್ಯಯನದ ಹಿಂದಿನ ಉದ್ದೇಶ, ಕ್ರಮಗಳೇ ಬೇರೆ. ಅದು ಪದವಿಯನ್ನು ಅರ್ಜಿಸುವುದಕ್ಕೆ ಮಾತ್ರ. ಈ ಮನೋಧರ್ಮವನ್ನು ದಾಟುವುದು ಅಥವಾ ಬದಲಿಸಿಕೊಳ್ಳುವುದು ವರ್ತಮಾನದ ಅಗತ್ಯವೂ ತುರ್ತೂ ಆಗಿದೆ. ಈ ಮಾತಿಗೆ 'ಕೂಗೋ ಕೋಳಿಗೇನು ಕುಂಡೆ ನೋಯೋದು, ಎದ್ದು ರಾಗಿ ಬೀಸೋಳಿಗಲ್ಲವೆ ನೋಯೋದು' ಎಂಬ ಗಾದೆಯನ್ನು ಹೇಳುವವರು ಇದ್ದಾರು.
ನಿಜವಾದ ಅಕ್ಕರೆ ಇದ್ದರೆ ಏನಾದರೊಂದನ್ನು ನೋಯಿಸಿಕೊಳ್ಳಲೇ ಬೇಕಾಗುತ್ತದೆ. ಇಲ್ಲವೆಂದರೆ ಮುನಿಸು ತೋರುವುದು ಇದ್ದದ್ದೇ. ಇಂಥ ಮುನಿಸಿಗೆ ಶ್ರದ್ಧಾಳುಗಳು ಹೆದರಬೇಕಿಲ್ಲ.
‘ಲೈಬ್ರರಿ ಪುಸ್ತಕದ ಧೂಳಿನ ವಾಸನೆ ಬಡಿಯುತ್ತಿದೆ, ಕ್ಷೇತ್ರಾನುಭವದ ಪರಿಮಳವಿಲ್ಲ’
ಇಂಥ ಮುನಿಸನ್ನು ಒಮ್ಮೆ ನಾನು ಎದುರಿಸಿರುವೆ. ಒಬ್ಬ ಮಹನೀಯರು ತಾವು ಬರೆದಿದ್ದ ಪ್ರಬಂಧವನ್ನು ಕೊಟ್ಟು ಓದಿ ಅಭಿಪ್ರಾಯ ತಿಳಿಸಲು ಒತ್ತಾಯಿಸಿದರು. ನನ್ನ ಮಿತಿಯಲ್ಲಿ ಓದಿ ಅರ್ಥ ಮಾಡಿಕೊಂಡೆ. 'ನಿಮ್ಮ ಪ್ರಬಂಧದಲ್ಲಿ ಲೈಬ್ರರಿ ಪುಸ್ತಕದ ಧೂಳಿನ ವಾಸನೆ ಬಡಿಯುತ್ತಿದೆ, ಕ್ಷೇತ್ರಾನುಭವದ ಪರಿಮಳವಿಲ್ಲ' ಎಂದು ತಿಳಿಸಿದೆ.
ಅವರು ಸಿಟ್ಟು ಮಾಡಿಕೊಂಡು ಅವೊತ್ತಿನಿಂದ ನನ್ನಿಂದ 'ಠೂ ಬಳೆ' ಮಾಡಿಕೊಂಡರು. ಇನ್ನೊಮ್ಮೆ ಒಬ್ಬರು 'ಜಾನಪದದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಮಾತ್ರ ಜಾನಪದ ವಿದ್ವಾಂಸರು' ಎಂದು ಅಪ್ಪಣೆ ಕೊಟ್ಟರು. ಹಾಗಾದರೆ ಈ ಪದವಿ ಪಡೆಯದ ಅನೇಕರು ಏನು ಅನ್ನುವ ಪ್ರಶ್ನೆಯನ್ನು ಕೇಳಿದೆ. ಅವರು ಜಾನಪದ ಲೇಖಕರು, ಸಂಗ್ರಹಕಾರರು ಅಂದರು. ಭಾವ ಅರ್ಥವಾದ ಮೇಲೆ ಮಾತು ಏಕೆ?
ಮುಗಿಯಿತು