ಬದುಕಿಗೆ ಬೇಕಷ್ಟು ಲಂಚ ತಿಂದ್ರೆ ತಪ್ಪೇನಿಲ್ಲ : ಮಾಸ್ಟರ್ ಹಿರಣ್ಣಯ್ಯ ಸಂದರ್ಶನ
(ಮಾಸ್ಟರ್ ಹಿರಣ್ಣಯ್ಯ (85) ಇನ್ನಿಲ್ಲ. ನಮ್ಮ ದೇಹದ ಒಂದು ಭಾಗ ಕಿತ್ತರೆ ಎಷ್ಟು ನೋವಾಗುತ್ತದೋ, ಅಷ್ಟೇ ನೋವು ಕನ್ನಡ ರಂಗಭೂಮಿಗೆ, ರಂಗಕರ್ಮಿಗಳಿಗೆ ಇಂದು ಆಗಿದೆ. 85 ವರ್ಷದ ಅಭಿನಯ ಚತುರ ಕನ್ನಡ ಕಲಾರಸಿಕರನ್ನು ಬಿಟ್ಟು ಅಗಲಿದ್ದಾರೆ. ಅವರಿಗೆ 80 ವರ್ಷ ಸಂದಿದಾಗ ನಡೆಸಿದ್ದ ಸಂದರ್ಶನ ಇಲ್ಲಿದೆ.)
ಕೈಯಲ್ಲಿ ಮೈಕನ್ನು ಹಿಡಿದುಕೊಂಡು ಮಾತಿಗೆ ಕುಳಿತರೆ ಕೇಳುಗರಲ್ಲಿ ನಗೆಗ್ರಂಥಿಗಳು ಉತ್ತೇಜನಗೊಂಡು ರಸೋತ್ಪತ್ತಿಯಲ್ಲಿ ತೊಡಗುತ್ತವೆ, ಆ ಸಭೆಯಲ್ಲಿ ಭ್ರಷ್ಟ ರಾಜಕಾರಣಿಯೇನಾದರೂ ಕುಳಿತಿದ್ದರೆ ನಗುನಗುತ್ತಲೇ ಬೆವರಲು ಪ್ರಾರಂಭಿಸುತ್ತಾನೆ, ಹಾಗೆಯೆ, ಆ ಮಾತಿನ ಮಲ್ಲರ ಕೈಗೆ ಮೈಕನ್ನು ಕೊಟ್ಟವರೂ ಕೂಡ 'ಯಾವಾಗ ಮಾತು ನಿಲ್ಲಿಸ್ತಾರೋ' ಅಂತ ಶತಪಥ ಶುರುವಿಟ್ಟುಕೊಳ್ಳುತ್ತಾರೆ. ಯಾಕಂದ್ರೆ ಇವರು ಮಾತನ್ನು ನಿಲ್ಲಿಸುವುದೇ ಇಲ್ಲ. ಅವರಿಗೆ ಮಾತಂದ್ರೆ ಪಂಚಪ್ರಾಣ.
ಅವರೇ ನಟರತ್ನಾಕರ, ಮಾತಿನಮಲ್ಲ, 'ಲಂಚಾವತಾರ'ದ ಜನಕ ಮಾಸ್ಟರ್ ಹಿರಣ್ಣಯ್ಯ. ಬೇರೆಯವರಾಗಿದ್ದರೆ ತಮ್ಮ 80ನೇ ಹುಟ್ಟುಹಬ್ಬ(ಫೆಬ್ರವರಿ 15)ವನ್ನು ಹೇಗೆ ಆಚರಿಸಿಕೊಳ್ಳುತ್ತಿದ್ದರೋ? ಮಾಸ್ಟರ್ ಹಿರಣ್ಣಯ್ಯ ಮಾತ್ರ ತಮ್ಮ ಸಹಸ್ರಾರು ಅಭಿಮಾನಿಗಳ ನಡುವೆ, ರಂಗಭೂಮಿಯ ಮೇಲೆ, ಹಲವಾರು ನಾಟಕಗಳನ್ನಾಡುತ್ತ, ಹಿರಿಯ ಕಲಾವಿದರನ್ನು ಗೌರವಿಸುತ್ತ, ಇಡೀ ಕುಟುಂಬದ ಜೊತೆ ವಿಶಿಷ್ಟ ರೀತಿಯಲ್ಲಿ 80ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರಂಗಭೂಮಿಗಾಗಿಯೇ ತಮ್ಮಿಡೀ ಜೀವನವನ್ನು ಸಮರ್ಪಿಸಿಕೊಂಡಿರುವ ನರಸಿಂಹಮೂರ್ತಿ ಅಲಿಯಾಸ್ ಮಾಸ್ಟರ್ ಹಿರಣ್ಣಯ್ಯ ಅವರ ಉಸಿರಿರುವುದೇ ರಂಗಭೂಮಿಯಲ್ಲಿ. ಮಾಸ್ಟರ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಇಂಥ ವಿಶೇಷ ಸಂದರ್ಭದಲ್ಲಿ ಒನ್ಇಂಡಿಯಾ ಜೊತೆ ಮಾಸ್ಟರ್ ಹಿರಣ್ಣಯ್ಯ ಅವರು ತಮ್ಮ ಜೀವನದ ಬಗ್ಗೆ ಮುಚ್ಚುಮರೆಯಿಲ್ಲದೆ ವಸ್ತುನಿಷ್ಠವಾಗಿ ಮಾತಿನ ಹೊಳೆ ಹರಿಸಿದರು. ಅರ್ಧಗಂಟೆ ಅಷ್ಟೇ ಇರೋದು, ಇನ್ನೊಂದು ಕಾರ್ಯಕ್ರಮಕ್ಕೆ ಹೋಗಬೇಕಾಗಿದೆ ಎಂದು ಹೇಳುತ್ತಲೇ ಗಂಟೆಗಟ್ಟಲೆ ಲಂಚಾವತಾರ ನಾಟಕ ಹುಟ್ಟಿದ ಬಗ್ಗೆ, ರಾಜಕೀಯದಲ್ಲಿನ ಲಂಚಾವತಾರದ ಬಗ್ಗೆ, ಸಮಾಜದ ರಾಜಕೀಯದ ಸೂತ್ರ ಹಿಡಿದಿರುವ ಮಾಠಾಧಿಪತಿಗಳ ಬಗ್ಗೆ ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಅಷ್ಟೇ 'ಗೌರವ'ಯುತವಾಗಿ ಮಾತನಾಡಿದರು. ಅವರೊಂದಿಗೆ ಆಡಿದ ಮಾತುಕತೆಯ ಸಾರಾಂಶ ಇಲ್ಲಿದೆ. [ಹಿರಣ್ಣಯ್ಯ ಹುಟ್ಟುಹಬ್ಬ : ಶುಭ ಹಾರೈಸಿ]
ಒನ್ಇಂಡಿಯಾ : ಲಂಚಾವತಾರ ಶುರುವಾಗಿ 50 ವರ್ಷಗಳಾಗಿವೆ. ಲಂಚಾವತಾರ ಶುರುವಾಗುವ ಮುನ್ನ ಮತ್ತು ಈ ಪಯಣದ ಸಮಯದಲ್ಲಿ ಯಾವುದಾದರೂ ಕನಸು ಕಂಡಿದ್ದಿರಾ, ಆ ಕನಸು ನನಸಾಗಿದೆಯಾ?
ಹಿರಣ್ಣಯ್ಯ : 1959, ಡಿಸೆಂಬರ್ 30ನೇ ತಾರೀಖು ಶನಿವಾರ ಶಿವಮೊಗ್ಗದಲ್ಲಿ ಲಂಚಾವತಾರ ನಾಟಕ ಆರಂಭವಾಯಿತು. ಅವತ್ತಿನಿಂದ ಇಲ್ಲಿಯವರೆಗೆ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಇದು ಹ್ಯಾಗಾಯಿತೆಂದರೆ, ಇದು ಬರೆದದ್ದು 1954ನೇ ಇಸ್ವಿ. ಆಗ ನನ್ನ ತಂದೆ ಸತ್ತು ಕೆಲವೇ ತಿಂಗಳಾಗಿತ್ತು. ಬಳ್ಳಾರಿಯಲ್ಲಿದ್ದ ಬೀಚಿಯವರನ್ನು ನೋಡಲು ಹೋಗಿದ್ದೆ. ಅಲ್ಲಿಯೇ ನಮ್ಮ ತಂದೆಯವರೊಡನೆ ಹನ್ನೆರಡು ವರ್ಷ ಜೊತೆಗಾತಿಯಾಗಿ, ನಮ್ಮ ಕಂಪನಿಯ ಯಶಸ್ವಿಗೆ ಕಾರಣೀಭೂತಳಾಗಿದ್ದ ಲಲಿತಮ್ಮ ಎಂಬುವವರನ್ನು ಭೇಟಿ ಆಗಲು ಹೋಗಿದ್ದೆ. [ಸಂತೋಷ್ ಹೆಗ್ಡೆ ಸಂದರ್ಶನ]
ಆಕೆಯ ಅಣ್ಣ ದೊಡ್ಡ ವ್ಯಾಪಾರಿ, ನಮಗೆ ನಾಟಕ ಆಡಿ ಎಂಬ ಸಲಹೆ ಇತ್ತರು. ಆದರೆ, ಬಿಟ್ಟುಹೋಗಿದ್ದ ಜನರನ್ನು ಕರೆದುಕೊಂಡು ಬರಬೇಕಲ್ಲ? ಎಲ್ಲವನ್ನೂ ನಾವೇ ಮಾಡಬೇಕಾಗಿತ್ತು. ಅದಕ್ಕೆ ಸ್ವಲ್ಪ ಸಮಯ ಬೇಕಾಯಿತು. ಒಂದು ದಿನ ಹೈಕೋರ್ಟ್ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಅವರ ತಂದೆ ಭೀಮಪ್ಪ ಶೆಟ್ಟರ್ ಅವರನ್ನು ನಾನು ಬೀಚಿ ನೋಡಲು ಹೋಗಿದ್ದೆವು. ಅವರು ಸುಮ್ನೆ ಕೂತ್ಕೊಂಡು ಏನು ಮಾಡ್ತೀಯಾ, ಏನಾದರೂ ಬರಿ ಅಂತ ಉತ್ತೇಜಿಸಿದರು. ಅವರೇ ಗುಮಾಸ್ತನ ಕಥೆ ಹೇಳಿದರು.
ಆ ಕಥೆಯ ನಾಯಕ ರಾಮಣ್ಣ. ಆತನ ಸಹಚರರೆಲ್ಲ ಶೋಕಿಲಾಲರು. ಸಂಬಳ ಸಾಕಾಗುತ್ತಿರಲಿಲ್ಲ, ಗಿಂಬಳ ಬೇಕಾಗುತ್ತಿತ್ತು. ಅದಕ್ಕೆ ಆಗ ಲಂಚ ಅಂತ ಹೆಸರಿರಲಿಲ್ಲ, ಮೇಲುತ್ಪತ್ತಿ ಅಂತ ಕರೆಯುತ್ತಿದ್ದರು. ಈ ಮೇಲುತ್ಪತ್ತಿಗೆ ಆ ನಾಟಕದ ಹೀರೋ ಗುಮಾಸ್ತ ಕೊಕ್ಕೆ ಹಾಕುತ್ತಿದ್ದ. ಅವನನ್ನೇ ಲಂಚದ ಗುಂಡಿಗೆ ಕೆಡವಿದರೆ ಸಲೀಸು ಎಂದುಕೊಂಡ ಸಹಚರರು ಆತನನ್ನೂ ಕೆಡವಿಬಿಡುತ್ತಾರೆ. ಇದರಿಂದ ಬೇಸತ್ತ ಆತನ ಹೆಂಡತಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂಥ ದುರಂತ ಕಥೆಗೆ ತಿರುವು ನೀಡಬೇಕಾಗಿತ್ತು. ಅದಕ್ಕೆ ಭೀಮಪ್ಪ ಶೆಟ್ಟರ್ ಅವರು 'ಲಂಚ ತಗೊಳ್ಳೋವ್ನು' ಅಂತ ಹೆಸರಿಡಲು ಹೇಳಿದರು. ಸೂಳೆ ಸಮಸ್ಯೆ ಸಾಯಲ್ಲ, ನಿನ್ನ ನಾಟಕ ಸಾಯಲ್ಲ ಅಂತ ಅವರು ಹೇಳಿದ ಮಾತು ಇಲ್ಲಿಯತನಕ ಸತ್ಯವಾಗಿದೆ. ಅಲ್ಲಿಂದ ಶುರುವಾಯಿತು ನೋಡಿ ಲಂಚಾವತಾರ.