ಒಳ್ಳೆ ಕೆಲ್ಸ ಮಾಡಕ್ಕೆ ಟೈಮೇಸಿಕ್ಕಲ್ಲ : ಯಡ್ಡಿ
ವಿಧಾನಸಭಾ ಉಪಚುನಾವಣೆಯ ಸಂದರ್ಭದಲ್ಲಿ ತಮ್ಮ ಸರ್ಕಾರದ ಸಾಧನೆಗಳ ಬಗೆಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿಯವರು, "ನಿಜ ಹೇಳ ಬೇಕೆಂದರೆ ಈ ನಡುವೆ ಆಫೀಸ್ ಕೆಲಸ ತುಂಬಾ ಜಾಸ್ತಿಯಾಗಿ ಬಿಟ್ಟಿದೆ. ಶನಿವಾರ-ಭಾನುವಾರ ಆಫೀಸ್ಗೆ ಬಂದ್ರೂನೂ ಮುಗಿಯದಷ್ಟು ಕೆಲಸ ಇರುತ್ತೆ. ಏನಾದ್ರೂ ಒಳ್ಳೇ ಕೆಲಸ ಮಾಡೋಣ ಅಂದ್ರೆ ಟೈಮೇ ಸಿಗೋದಿಲ್ಲ. ಜನವರಿ ಫಸ್ಟ್ ಆದಮೇಲೆ ಒಂದು ಸೊಲ್ಪನಾದ್ರೂ ಟೈಮ್ ಮಾಡಿಕೊಂಡು ಏನಾದ್ರೂ ಸಾಧಿಸಬೇಕು ಅಂತ ಯೋಚನೆ ಇದೆ. ನೋಡೋಣ ಏನಾಗುತ್ತೋ.." ಎಂದರು.
ಉಪ ಚುನಾವಣೆಗಳ ಬಗೆಗೆ ಮಾತನಾಡಿದ ಮುಖ್ಯಮಂತ್ರಿಯವರು, ಚುನಾವಣೆಯಲ್ಲಿ ಸೋಲು-ಗೆಲವು ಮತದಾರರ ಕೈಯಲ್ಲಿದೆಯಾದರೂ ಅನಂತರದ ವಿಷಯ ಬೇರೆಯದು ಎಂದರು. "ಮತದಾರರಿಗೆ ಮತ್ತೆ ಮತ್ತೆ ಉಪಚುನಾವಣೆ ನಡೆಯುವುದು ಇಷ್ಟವಿಲ್ಲದಿದ್ದರೆ ನಮ್ಮ ಪಕ್ಷಕ್ಕೆ ಮತ ಹಾಕಲಿ" ಎಂದ ಅವರು "ನಮ್ಮ ಪಕ್ಷಕ್ಕೇನೂ ಮತ್ತೆ ಮತ್ತೆ ಚುನಾವಣೆ ಎದುರಿಸುವ ಆಸಕ್ತಿ ಇಲ್ಲ. ಆದರೆ ಮತದಾರರು ಸಹಕರಿಸದಿದ್ದರೆ ಎಷ್ಟಾದರೂ ಚುನಾವಣೆಗಳನ್ನು ಎದುರಿಸಲು ನಾವು ಸಿದ್ಧ" ಎಂದು ಮತದಾರರಿಗೆ ಎಚ್ಚರಿಕೆ ನೀಡಿದರು.
***
ಜೆಡಿಎಸ್ ಪಕ್ಷದ ಮುಖಂಡ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಸೊಸೆ ಅನಿತಾ ಕುಮಾರಸ್ವಾಮಿಯವರಿಗೆ ಚುನಾವಣಾ ಟಿಕೆಟ್ ನೀಡಿರುವುದನ್ನು ಎಲೆಕ್ಷನ್ ಕಮೀಷನರ್ ಗೋಪಾಲಸ್ವಾಮಿಯವರು ತುಂಬು ಹೃದಯದಿಂದ ಶ್ಲಾಘಿಸಿದ್ದಾರೆ.
"ಚುನಾವಣೆಯ ನಂತರದ ಪಕ್ಷಾಂತರ ತಡೆಯಲು ಇದೊಂದು ಅತ್ಯುತ್ತಮ ಬೆಳವಣಿಗೆ" ಎಂದಿರುವ ಅವರು, "ಎಲ್ಲಾ ಪಕ್ಷಗಳ ನಾಯಕರೂ ಇದೇ ರೀತಿ ತಮ್ಮ ಕುಟುಂಬದವರಿಗೇ ಟಿಕೆಟ್ ಕೊಡಲು ಪ್ರಾರಂಭಿಸಿದರೆ ಪಕ್ಷಾಂತರ ನಿಷೇಧ ಕಾಯಿದೆಯ ಅವಶ್ಯಕತೆ ಕಡಿಮೆಯಾಗುತ್ತದೆ. ಉಪಚುನಾವಣೆಗಳೂ ಕಡಿಮೆಯಾಗಿ ನಮ್ಮ ಕೆಲಸವೂ ಕೊಂಚ ಹಗುರವಾಗುತ್ತದೆ" ಎಂದಿದ್ದಾರೆ.
ಈ ನಿಟ್ಟಿನಲ್ಲಿ ಬಂಗಾರಪ್ಪ ಕುಟುಂಬದ ಬಗೆಗೆ ಮಾತನಾಡಲು ಗೋಪಾಲಸ್ವಾಮಿ ನಿರಾಕರಿಸಿದರು.
(ಮಜಾವಾಣಿ ನ್ಯೂಸ್ ಬ್ಯೂರೊ)