ಮಜಾವಾಣಿ ವರ್ಷದ ವ್ಯಕ್ತಿ : ರಾಮಚಂದ್ರ ಗೌಡ
ಸಚಿವ ಗೌಡರು ಇತ್ತೀಚೆಗೆ ಹಲವಾರು ಅತ್ಯಂತ ಮುಖ್ಯ ಮತ್ತು ನಿಗೂಢ ವಿಷಯಗಳನ್ನು ಬಯಲಿಗೆಳೆದಿದ್ದು, ಈ ಕಾರಣಕ್ಕಾಗಿಯೇ ಅವರಿಗೆ ಮಜಾವಾಣಿ ವರ್ಷದ ವ್ಯಕ್ತಿಯ ಗೌರವ ದೊರಕಿದೆ ಎನ್ನಲಾಗಿದೆ.
ಈ ವಿಚಾರದ ಕುರಿತು ವರದಿಗಾರರೊಂದಿಗೆ ಮಾತನಾಡಿದ ಮಜಾವಾಣಿ ಪತ್ರಿಕೆಯ ವ್ಯವಸ್ಥಾಪಕ ಪ್ರಧಾನ ಮುಖ್ಯ ಉಪಸಂಪಾದಕರು "ಸಚಿವ ಗೌಡರಿಗೆ ಈ ಗೌರವ ದೊರಕಿರುವುದು ಸೂಕ್ತವೇ ಆಗಿದೆ. ಸತ್ಯದ ವಿರುದ್ಧ ಸಮರ ನಮ್ಮ ಪತ್ರಿಕೆಯ ಧ್ಯೇಯ. ಡಾ.ಯಡಿಯೂರಪ್ಪನವರು ವಿಶ್ವದ ಶ್ರೇಷ್ಠ ಅರ್ಥಿಕ ತಜ್ಞ ಎಂಬ ವಿಚಾರವನ್ನು ಹೊರಗೆಡವಿರುವ ಸಚಿವ ಗೌಡರು ನಮ್ಮ ಪತ್ರಿಕೆಯ ಧ್ಯೇಯೋದ್ದೇಶವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅದೂ ಅಲ್ಲದೆ, ನ್ಯೂಟನ್ಗೆ ನೊಬೆಲ್ ಪ್ರಶಸ್ತಿ ದೊರೆತ ವೈಚಿತ್ರ್ಯವನ್ನೂ ಬಯಲಿಗೆಳೆದಿರುವ ಸಚಿವರು ಐತಿಹಾಸಿಕ ವಾಸ್ತವದ ದಬ್ಬಾಳಿಕೆಯ ವಿರುದ್ಧ ಕ್ರಾಂತಿಯ ಕಹಳೆಯನ್ನೇ ಮೊಳಗಿಸಿದ್ದಾರೆ." ಎಂದಿದ್ದಾರೆ.
2008ರಲ್ಲಿ ನ್ಯೂಟನ್ಗೆ ನೊಬೆಲ್ ನೀಡಿರುವ ಸಚಿವರು, ಹೊಸ ವರ್ಷದಲ್ಲಿ ಆದಿ ಕವಿ ಪಂಪನಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸುವ ಸಾಧ್ಯತೆಗಳಿದ್ದು, ಆರೋಗ್ಯ ಇಲಾಖೆಯ ಸುಧಾರಣೆಗಾಗಿ ತಲತಲಾಂತರದಿಂದ ಜನರ ಆರೋಗ್ಯದ ರಕ್ಷಣೆ ಮಾಡುತ್ತಿರುವ ಲೈಫ್ಬಾಯನ್ನು ಉಪ ಆರೋಗ್ಯಸಚಿವನನ್ನಾಗಿ ನೇಮಕ ಮಾಡುವ ಆಲೋಚನೆಯನ್ನೂ ಹೊಂದಿದ್ದಾರೆನ್ನಲಾಗಿದೆ.
***
ರಾಮಚಂದ್ರ ಗೌಡರನ್ನು ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಿರುವ ಮಜಾವಾಣಿ ಪತ್ರಿಕೆಯ ನಿರ್ಧಾರ ಆ ಪತ್ರಿಕೆಯ ಸಂಪಾದಕೀಯ ವರ್ಗದಿಂದಲೇ ಕಟು ಟೀಕೆಗೆ ಗುರಿಯಾಗಿದೆ. ಈ ಗೌರವಕ್ಕೆ ಪಾತ್ರರಾಗುವಂತಹ ಎಷ್ಟೋ ಮಂದಿ ನಾಯಕರಿದ್ದರೂ, ವರ್ಷವಿಡೀ ಸುಮ್ಮನಿದ್ದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಒಂದೇ ಒಂದು ವರದಿಯ ಆಧಾರದ ಮೇಲೆ ಗೌಡರನ್ನು ಆಯ್ಕೆ ಮಾಡಿರುವ ಮಜಾವಾಣಿ ಸಂಪಾದಕರ ಕ್ರಮವನ್ನು ಪತ್ರಿಕೆಯ ಸಂಪಾದಕೀಯ ಮಂಡಳಿ "ಸೋಮಾರಿತನದ ಪರಮಾವಧಿ" ಎಂದು ಖಂಡಿಸಿದೆ.
(ಮಜಾವಾಣಿ ಬ್ಯೂರೋ ವರದಿ)