ಜಂಗಲ್ ಡೈರಿ: ಇವುಗಳನ್ನು ಕೊಲ್ಲುವವರೇ ಇದ್ದಾರೆ, ಕಾಯೋರೆಲ್ಲಿ?
ಭಾರತ ವಿಶಿಷ್ಟವಾದ ದೇಶ. ವಿವಿಧ ಸಂಸ್ಕೃತಿ ಹಾಗೂ ಪರಂಪರೆಯನ್ನು ಇಲ್ಲಿ ಕಾಣಬಹುದು. ಈ ನೆಲದಲ್ಲಿ ಭಾಷೆ, ಉಡುಗೆ, ಆಹಾರ, ಆಚರಣೆಗಳು ಒಂದಕ್ಕಿಂತ ಒಂದು ಜಾಗಕ್ಕೆ ಎಷ್ಟೊಂದು ವ್ಯತ್ಯಾಸ! ಇದಕ್ಕೆ ಕಾರಣವೆಂದರೆ ನಮ್ಮ ದೇಶದಲ್ಲಿರುವ ವಿವಿಧ ಭೂಗೋಳಿಕ ಪ್ರದೇಶಗಳು.
ಆ ಪ್ರದೇಶಕ್ಕೆ ಅನುಗುಣವಾಗುವಂತೆ ಅವರ ಉಡುಗೆ, ಆಹಾರ ಮತ್ತು ಜೀವನ ಶೈಲಿ ಇರುತ್ತದೆ. ಇದೇ ರೀತಿ ಆಯಾ ಭೌಗೋಳಿಕ ಪ್ರದೇಶಗಳಿಗೆ ಹೊಂದುವಂತೆ ಪ್ರಾಣಿಗಳು ಕೂಡ ವಿಕಾಸಗೊಳಿಸಿಕೊಂಡಿರುತ್ತವೆ. ಇದು ಸಾವಿರಾರು ವರ್ಷಗಳ ಕ್ರಿಯೆ. ಎಷ್ಟೋ ಬಾರಿ ನಮಗೆ ಇಂತಹ ಪ್ರಾಣಿಗಳು ನಮ್ಮ ದೇಶದಲ್ಲಿವೆ ಎನ್ನುವುದೇ ಗೊತ್ತಿರುವುದಿಲ್ಲ.[ಹುಲಿ ಕೂಡ ಹೆದರುವ ಕಾಡು ನಾಯಿ ಅಂದ್ರೆ ಸುಮ್ನೇನಾ?]
ಉದಾರಣೆಗೆ ಕಂದು ಬಣ್ಣದ ಕರಡಿಗಳು, ಹಿಮ ತೋಳಗಳು, ಕಾಡು ಕುದುರೆ, ಕೆಂಪು ಪಾಂಡ, ಸ್ನೋ ಲೆಪರ್ಡ್ಸ್.. ಅಮೆರಿಕ ಹಾಗೂ ಕೆನಡಾದಲ್ಲಿ ದೇಶಗಳು ಕಂದು ಬಣ್ಣದ ಕರಡಿಗಳಿಗೆ ಹೆಸರುವಾಸಿ. ಇದನ್ನು ಅವರು ಗ್ರಿಸ್ಲ್ಯ ಬೇಯರ್ಸ್ ಎಂದು ಕರೆಯುತ್ತಾರೆ. ಇಂತಹ ಕರಡಿಗಳು ನಮ್ಮ ದೇಶದಲ್ಲೂ ಇವೆ!
ಪೋರ್ಚುಗಲ್, ಜರ್ಮನಿ ಹಾಗೂ ಸ್ಕಾಟ್ಲೆಂಡ್ ಕಾಡುಕುದುರೆಗಳಿಗೆ ಹೆಸರುವಾಸಿ. ಇಂತಹ ಕಾಡುಕುದುರೆಗಳನ್ನು ಅಸ್ಸಾಂ ರಾಜ್ಯದ ಸೈಕೋವಾ ನ್ಯಾಷನಲ್ ಪಾರ್ಕ್ ನಲ್ಲಿ ನಾವು ಕಾಣಬಹುದು. ಇಂತಹ ಹಲವಾರು ವಿಶೇಷ ಪ್ರಾಣಿಗಳು ನಮ್ಮ ದೇಶದಲ್ಲಿದ್ದು, ಅಳಿವಿನ ಅಂಚಿನಲ್ಲಿವೆ. ಅವುಗಳ ಸಂತತಿ ತೀವ್ರವಾಗಿ ಕಡಿಮೆ ಆಗಿವೆ.
ಐಯುಸಿಎನ್ ಎಂಬ ವಿಶ್ವ ಸಂಸ್ಥೆಯು ಭಾಗವಾಗಿರುವ ಇಲಾಖೆಯಿಂದ ಮಾಹಿತಿ ಪಡೆದು, ವನ್ಯ ಜೀವಿಗಳ ಸಂತತಿ ಯಾವ ಪ್ರಮಾಣದಲ್ಲಿದೆ ಎಂಬುದನ್ನು ರೆಡ್ ಡೇಟಾ ಬುಕ್ ಎಂಬ ಪುಸ್ತಕದಲ್ಲಿ ಕೊಡುತ್ತಾರೆ. ರೆಡ್ ಅಂದರೆ ಕೆಂಪು. ಕೆಂಪು ಅಪಾಯದ ಸೂಚನೆ. ಯಾವ ಜೀವಿಗಳು ಅಪಾಯದಲ್ಲಿವೆ ಎಂದು ಈ ಪುಸ್ತಕ ತಿಳಿಸುತ್ತದೆ. ಅವುಗಳ ಮುಖ್ಯ ವಿಂಗಡಣೆಗಳು ಹೀಗಿವೆ.
ಪೂರ್ತಿ ಗತಿಸಿಹೋದ ಪ್ರಾಣಿಗಳು
ಯಾವ ಪ್ರಾಣಿಯ ಸಂತತಿ ಪೂರ್ತಿಯಾಗಿ ಗತಿಸಿಹೋಗಿದೆಯೋ ಅದನ್ನು ಎಸ್ಟ್ರಿನ್ಕ್ಟ್ ಎಂದು ಕರೆಯುತ್ತಾರೆ. ನಮ್ಮ ದೇಶದಲ್ಲಿ ಇಂಡಿಯನ್ ಚೀತಾ ಪೂರ್ತಿಯಾಗಿ ಗತಿಸಿಹೋಗಿದೆ. ಬ್ರಿಟಿಷರ ಕಾಲದಲ್ಲಿ ಇವುಗಳನ್ನು ಬೇಟೆಯಾಡಲಾಗಿತ್ತು. ರಾಜಸ್ತಾನದ ಭಾಗಗಳಲ್ಲಿ ಇವುಗಳು ಹಿಂದೆ ಇದ್ದವು. ನೋಡಲು ಚಿರತೆ ರೀತಿ ಇರುತ್ತವೆ. ಆದರೆ ಗಾತ್ರ ಚಿಕ್ಕದು. ಇವುಗಳು ಅತಿ ವೇಗದ ಪ್ರಾಣಿಗಳು. ಆಫ್ರಿಕಾದಲ್ಲಿ ಮಾತ್ರ ಈಗ ನಾವು ಇವುಗಗಳನ್ನು ನೋಡಬಹುದು.
10 ವರ್ಷದಲ್ಲಿ ಗತಿಸಿ ಹೋಗುವ ಸಾಧ್ಯತೆ
ಯಾವುದೇ ಪ್ರಾಣಿಗಳ ಸಂತತಿ ಪ್ರಪಂಚದಲ್ಲಿ 50ಕ್ಕೂ ಕಡಿಮೆ ಅಥವಾ 10 ವರ್ಷದಲ್ಲಿ ಶೇ 90ರಷ್ಟು ಇಳಿಕೆ ಆಗಿದ್ದಲ್ಲಿ ಅವುಗಳನ್ನು ಕ್ರಿಟಿಕಲಿ ಎಂಡೇಂಜರ್ಡ್ ಎಂದು ಕರೆಯಲಾಗುತ್ತದೆ. ಅವುಗಳು ಗತಿಸಿ ಹೋಗುವ ಸಾಧ್ಯತೆ ತುಂಬ ಹೆಚ್ಚಿರುತ್ತದೆ. ಅವುಗಳ ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ಮುಂದಿನ 10 ವರ್ಷದಲ್ಲಿ ಗತಿಸಿ ಹೋಗುವ ಸಾಧ್ಯತೆ ಇರುತ್ತದೆ. ಅರುಣಾಚಲ ಪ್ರದೇಶದಲ್ಲಿನ ನಂದಪ ಹಾರುವ ಅಳಿಲುಗಳು ಈ ವಿಂಗಡಣೆಗೆ ಬರುತ್ತದೆ. ಇದನ್ನು ಆಹಾರಕ್ಕಾಗಿ ಕೊಲ್ಲಲಾಗುತ್ತಿತ್ತು. ಪ್ರಪಂಚದ ಅತಿ ಚಿಕ್ಕ ಘೇಂಡಾಮೃಗಗಳಾದ ಸುಮಾತ್ರಾನ್ ಘೇಂಡಾಮೃಗಗಳು ಬೆರಳೆಣಿಕೆ ಪ್ರಮಾಣಕ್ಕೆ ಬಂದುಬಿಟ್ಟಿವೆ. ಹಿಮಾಲಯದ ಭಾಗಗಳಲ್ಲಿ ಇವುಗಳು ಕಂಡುಬರುತ್ತವೆ. ಅಂದಹಾಗೆ ರಣಹದ್ದುಗಳು ಕೂಡ ಈಗ ಕ್ರಿಟಿಕಲಿ ಎಂಡೇಜರ್ಡ್.
ಕಾಡು ನಾಯಿಗಳು, ಹುಲಿ ಹಾಗೂ ಆನೆಗಳು ಅಳಿವಿನಂಚಿನಲ್ಲಿವೆ
ಯಾವ ಪ್ರಾಣಿಯ ಸಂತತಿ ಪ್ರಪಂಚದಲ್ಲಿ 250ಕ್ಕೂ ಕಡಿಮೆ ಅಥವಾ 10 ವರ್ಷದಲ್ಲಿ ಶೇ 70ರಷ್ಟು ಇಳಿಕೆ ಆಗಿದ್ದಲ್ಲಿ ಅವುಗಳನ್ನು ಎಂಡೇಂಜರ್ಡ್ ಎಂದು ಕರೆಯಲಾಗುತ್ತದೆ. ಅವುಗಳು ಗತಿಸಿ ಹೋಗುವ ಸಾಧ್ಯತೆ ಹೆಚ್ಚಿದ್ದು, ಅವುಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ. ಕಾಡು ಕಟ್ಟೆಗಳು ಈ ಸಂತತಿಯಲ್ಲಿದ್ದು ಗುಜರಾತಿನ ರಣ್ ಆಫ್ ಕಚ್ ನ್ಯಾಷನಲ್ ಪಾರ್ಕ್ ನಲ್ಲಿ ಇವುಗಳನ್ನು ಸಂರಕ್ಷಿಸಲಾಗುತ್ತಿದೆ. ಹಿಮಾಲಯನ್ ಕಂದು ಬಣ್ಣದ ಕರಡಿಗಳು ಹಾಗೂ ಹಿಮ ತೋಳಗಳು ಕೂಡ ಅಳಿವಿನಂಚಿನ ಪ್ರಾಣಿಗಳು. ಕಾಡು ನಾಯಿಗಳು, ಹುಲಿ ಹಾಗೂ ಆನೆಗಳು ಕೂಡ ಈ ಪರಿಸ್ಥಿತಿಯಲ್ಲಿವೆ. ಘೇಂಡಾಮೃಗಗಳು ಎಂಡೇಂಜರ್ಡ್ ಆಗಿದ್ದು, ಅಸ್ಸಾಮಿನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಸಂರಕ್ಷಿಸಲಾಗುತ್ತಿದೆ.
ದಕ್ಷಿಣ ಭಾರತದಲ್ಲಿ ಕಂಡುಬರುವ ಕಾಡೆಮ್ಮೆಗಳು
ಯಾವ ಪ್ರಾಣಿಯ ಸಂತತಿ ಪ್ರಪಂಚದಲ್ಲಿ 10 ಸಾವಿರಕ್ಕೂ ಕಡಿಮೆ ಅಥವಾ 10 ವರ್ಷದಲ್ಲಿ ಶೇ 50ರಷ್ಟು ಇಳಿಕೆ ಆಗಿದ್ದಲ್ಲಿ ಅವುಗಳನ್ನು ವಲ್ನರಬಲ್ ಎಂದು ಕರೆಯಲಾಗುತ್ತದೆ. ಹುಲ್ಲೇಕರ, ದಕ್ಷಿಣ ಭಾರತದಲ್ಲಿ ಕಂಡು ಬರುವ ಕಾಡೆಮ್ಮೆಗಳು, ನಾಲ್ಕು ಕೊಂಬಿನ ಜಿಂಕೆ, ಕಪ್ಪು ಕರಡಿ, ಕೆಂಪು ಪಾಂಡ ಇವೆಲ್ಲವೂ ಈ ವಿಂಗಡಣೆ ಅಡಿಯಲ್ಲಿ ಬರುತ್ತವೆ. ಕೆಂಪು ಪಾಂಡಗಳನ್ನು ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶಗಳಲ್ಲಿ ಕಾಣಬಹುದು. ಇವುಗಳ ಚರ್ಮಕ್ಕಾಗಿ ಕೊಲ್ಲಲಾಗುತ್ತಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ
ವನ್ಯಜೀವಿಗಳ ಸಂರಕ್ಷಣೆಗೆಂದು ಕೇಂದ್ರ ಸರಕಾರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ನು 1972ರಲ್ಲಿ ಜಾರಿ ಮಾಡಿತು. ಅದರಲ್ಲಿ 6 ಶೆಡ್ಯೂಲ್ ಗಳಿವೆ. ಯಾವ ಪ್ರಾಣಿಗಳು ಅಳಿವಿನ ಅಂಚಿನಲ್ಲಿವೆಯೋ ಅವೆಲ್ಲವನ್ನು ಶೆಡ್ಯೂಲ್ 1ರಲ್ಲಿ ತರಲಾಯಿತು. ಹುಲಿ, ಸಿಂಹ, ಘೇಂಡಾಮೃಗ, ಹುಲ್ಲೇಕರ ಇವೆಲ್ಲ ಶೆಡ್ಯೂಲ್ 1ರ ಅಡಿ ಬರುತ್ತದೆ. ಇವುಗಳನ್ನು ಕೊಂದಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿರುತ್ತದೆ. ಅಂದಹಾಗೆ ಹುಲ್ಲೇಕರವನ್ನು ಕೊಂದರೆ ಹುಲಿ ಕೊಂದಷ್ಟೇ ಗಂಭೀರವಾದ ಅಪರಾಧ.
ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ
ಸರ್ಕಾರವು ವನ್ಯಜೀವಿಗಳ ಸಂರಕ್ಷಣೆಗೆಂದು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳನ್ನು ಮಾಡಿದೆ. ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳಿಗೆ ಇರುವ ವತ್ಯಾಸ ಏನೆಂದರೆ, ಅಭಯಾರಣ್ಯದಲ್ಲಿ ಮನುಷ್ಯರ ಯಾವುದೇ ಚಟುವಟಿಕೆಗೆ ಅನುಮತಿ ಇಲ್ಲ. ಸ್ಥಳೀಯರಿಗೂ ಕೂಡ ಇಲ್ಲಿ ನಿರ್ಬಂಧವಿರುತ್ತದೆ. ರಾಷ್ಟ್ರೀಯ ಉದ್ಯಾನಗಳಲ್ಲಿ ಸ್ಥಳೀಯರು ತಮ್ಮ ಚಟುವಟಿಕೆ ನಡೆಸಲು ಅನುಮತಿ ಇರುತ್ತದೆ. ಅಂದಹಾಗೆ ಸರಕಾರ ಪ್ರಾಜೆಕ್ಟ್ ಟೈಗರ್, ಪ್ರಾಜೆಕ್ಟ್ ಎಲಿಫೆಂಟ್ ಹೀಗೆ ಅನೇಕ ಯೋಜನೆಗಳನ್ನು ತಂದಿದೆ. ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಕೂಡ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿವೆ.
ಸಂರಕ್ಷಣೆ ಹಾಗೂ ಸಂಶೋಧನೆ
ಯುನೆಸ್ಕೋದವರು ನಮ್ಮ ಮಲೆನಾಡು, ನೀಲಗಿರಿಯನ್ನು ಬಿಒಎಸ್ ಫೆರಿಕಾಲ್ ರಿಸರ್ವ್ ಅನ್ನಾಗಿ ಗುರುತಿಸಿದೆ. ಇದು ಅವರು ಗುರುತಿಸಿರುವ ದೇಶದ ಪ್ರಪ್ರಥಮ ಬಿಒಎಸ್ ಫೆರಿಕಾಲ್ ರಿಸರ್ವ್. ಇಲ್ಲಿ ವನ್ಯಜೀವಿಗಳ ಸಂರಕ್ಷಣೆ, ಕಾಡು ಜನರ ಬೆಳವಣಿಗೆ, ವೈಜ್ಞಾನಿಕ ಸಂಶೋಧನೆ ಇವೆಲ್ಲವೂ ನಡೆಯಲಿದೆ. .