ಜಂಗಲ್ ಡೈರಿ: ಜಿಮ್ ಕಾರ್ಬೆಟ್ ಆ ನರಭಕ್ಷಕ ಪ್ರಾಣಿಗಳ ಕೊಲ್ಲದೆ ಇದ್ದಿದ್ದರೆ...
ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ ವಿಚಾರವಾಗಿ ಜಿಮ್ ಕಾರ್ಬೆಟ್ ಕೆಲಸ ಪ್ರಾತಃಸ್ಮರಣೀಯವಾದದ್ದು. ಮೊದಲಿಗೆ ಬೇಟೆಗಾರರೆಂದೇ ಗುರುತಿಸಿಕೊಂಡ ಕಾರ್ಬೆಟ್, ನಂತರ ವನ್ಯಪ್ರಾಣಿಗಳ ಸಂರಕ್ಷಣೆಗೆ ಮಾಡಿದ ಕೆಲಸ ಅದ್ಭುತವಾದದ್ದು. ಅವರ ಪರಿಚಯ ಲೇಖನ ಇಲ್ಲಿದೆ
'ನರಭಕ್ಷಕ' ಎಂಬ ಪದವೇ ಸಾಕು, ಎದೆ ಝಲ್ ಎನ್ನಿಸುವಂತೆ ಮಾಡುತ್ತದೆ. ಇಡೀ ದೇಶದಲ್ಲೇ ಕತೆಯಂತೆ ಈಗಲೂ ಹರಿದಾಡುವ ನರಭಕ್ಷಕ ಪ್ರಾಣಿಗಳ ಬಗ್ಗೆ ಕಳೆದ ವಾರ ತಿಳಿಸಿದ್ದೆ. ಈಗ ಅಂತಹ ಪ್ರಾಣಿಗಳನ್ನು ಬೇಟೆಯಾಡಿದ ಜಿಮ್ ಕಾರ್ಬೆಟ್ ಬಗ್ಗೆ ಒಂದಿಷ್ಟು ಮಾಹಿತಿ ನಿಮಗೆ.
ಅವರನ್ನು ಬೇಟೆಗಾರ ಅಂದರೆ ತಪ್ಪಾಗುತ್ತದೆ. ಜಿಮ್ ಕಾರ್ಬೆಟ್ ಮಾನವೀಯ ಅಂತಃಕರಣವುಳ್ಳ ವನ್ಯಜೀವಿ ಪ್ರೇಮಿ ಆಗಿದ್ದರು. ಮನುಷ್ಯರ ಬಗ್ಗೆಯೂ ಕಾಳಜಿ, ಪ್ರಾಣಿಗಳ ಬಗ್ಗೆಯೂ ಅಕ್ಕರೆ ಇರುವವರು ಸಿಗುವುದೇ ವಿರಳ. ಅಂಥ ವಿರಳ ವ್ಯಕ್ತಿತ್ವದವರಾಗಿದ್ದರು ಜಿಮ್ ಕಾರ್ಬೆಟ್.[ಪ್ರಾಣಿಗಳು ಮನುಷ್ಯರನ್ನು ತಿನ್ನುವುದೇಕೆ? ಜಂಗಲ್ ಡೈರಿಯ ಪುಟಗಳು]
ಭಾರತದ ಮೊದಲ ಹುಲಿ ಸಂರಕ್ಷಿತ ಪ್ರದೇಶದ ಸ್ಥಾಪನೆಗೆ ದುಡಿದವರು ಕಾರ್ಬೆಟ್. ಬ್ರಿಟಿಷ್ ಆಳ್ವಿಕೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದ ಕ್ರಿಸ್ಟೋಫರ್ ವಿಲಿಯಂ ಅವರ ಎಂಟನೇ ಮಗ ಜಿಮ್ ಕಾರ್ಬೆಟ್. ಅವರು ಹುಟ್ಟಿದ್ದು ನೈನಿತಾಲ್ ನಲ್ಲಿ. 1875ರ ಜುಲೈ 25ರಂದು. ತುಂಬ ಚಿಕ್ಕವಯಸ್ಸಿನಲ್ಲೇ ಕಾರ್ಬೆಟ್ ಗೆ ವನ್ಯಜೀವಿಗಳ ಬಗ್ಗೆ ವಿಪರೀತ ಆಸಕ್ತಿ.
ಬರೀ ಶಬ್ದದಿಂದಲೇ ಇಂಥದ್ದೇ ಪ್ರಾಣಿ ಅಥವಾ ಪಕ್ಷಿ ಎಂದು ಗುರುತಿಸುವಷ್ಟರ ಮಟ್ಟಿಗೆ ಪರಿಣತಿ ಪಡೆದಿದ್ದರು. ತಮ್ಮ ಹದಿನಾರನೇ ವಯಸ್ಸಿನಲ್ಲಿ ಶಿಕ್ಷಣ ನಿಲ್ಲಿಸಿ, ಬಂಗಾಳದ ರೈಲ್ವೇಸ್ ನಲ್ಲಿ ಇಂಧನ ಪರೀಕ್ಷಕರಾಗಿ ಕೆಲಸಕ್ಕೆ ಸೇರಿದರು.[ಭಲೇ ನಿಗೂಢ ಪ್ರಾಣಿ ಚಿರತೆಯ ಕುರಿತು ರೋಚಕ ಮಾಹಿತಿ]
ಜನರ ರಕ್ಷಣೆಗಾಗಿ ಬೇಟೆ
ಆರಂಭದಲ್ಲಿ ಕುಶಾಲಿಗಾಗಿ ಬೇಟೆಯಾಡುತ್ತಿದ್ದವರು ಜಿಮೆ ಕಾರ್ಬೆಟ್. ಆ ನಂತರ ಜನರ ರಕ್ಷಣೆಗಾಗಿ ನರಭಕ್ಷಕ ಪ್ರಾಣಿಗಳನ್ನಷ್ಟೇ ಕೊಲ್ಲುತ್ತಿದ್ದರು. ಬೇಟೆಗೆ ಹೊರಡುತ್ತಿದ್ದ ಕಾರ್ಬೆಟ್ ಅವರ ಜತೆಯಲ್ಲಿ ರಾಬಿನ್ ಅನ್ನೋ ಹೆಸರಿನ ನಾಯಿ ಇರುತ್ತಿತ್ತು. ತುಂಬ ಚುರುಕಾಗಿದ್ದ ಆ ರಾಬಿನ್ ನ ಬಗ್ಗೆ ತಮ್ಮ ಲೇಖನಗಳನ್ನು ಕಾರ್ಬೆಟ್ ಬರೆದಿದ್ದಾರೆ.
400 ಮಂದಿಯನ್ನು ಕೊಂದಿತ್ತು ಗಂಡು ಚಿರತೆ
ಕಾರ್ಬೆಟ್ ಅವರು ಬೇಟೆಯಾಡಿದ ನರಭಕ್ಷಕಗಳೆಲ್ಲದರ ಒಟ್ಟು ಲೆಕ್ಕ ಹೇಳುವುದಾದರೆ, ಅವುಗಳೆಲ್ಲವೂ ಕೊಂದ ಮಂದಿಯ ಸಂಖ್ಯೆ 1200ಕ್ಕೂ ಹೆಚ್ಚು. ಹಿಮಾಚಲದ ಪೆನ್ನಾರ್ ಎಂಬ ಜಾಗದಲ್ಲಿದ್ದ ಗಂಡು ಚಿರತೆಯೊಂದೇ 400 ಮಂದಿಯನ್ನು ಕೊಂದಿತ್ತು. ಮನೆಗಳಿಗೆ ನುಗ್ಗಿ ಮಕ್ಕಳನ್ನು ಹೊತ್ತೊಯ್ಯುತ್ತಿತ್ತು. ಯಾವ ಪಳಗಿದ ಬೇಟೆಗಾರನ ಕಣ್ಣಿಗೂ ಬೀಳುತ್ತಿರಲಿಲ್ಲ.
ಚಿರತೆ ಕೊಂದರು
ಕಾರ್ಬೆಟ್ ಪೆನ್ನಾರ್ ಗೆ ಹೋದಾಗ ಕಂಡಿದ್ದು ಬಿಕೋ ಎನ್ನುವ ಗ್ರಾಮ. ಈ ಚಿರತೆಯಿಂದಾಗಿ ಜನ ಮನೆಯಿಂದ ಆಚೆ ಬರಲು ಸಹ ಹೆದರುತ್ತಿದ್ದರು. ಹತ್ತು ವಾರಗಳ ಹುಡುಕಾಟದ ಬಳಿಕ ಜಿಮ್ ಕಾರ್ಬೆಟ್ ಈ ಚಿರತೆಯನ್ನು ಕೊಂದರು.
ಕ್ಯಾಮೆರಾ ಖರೀದಿಸಿ
ಯಾವಾಗ ಜಿಮ್ ಕಾರ್ಬೆಟ್ ಅವರಿಗೆ ಫೋಟೋಗ್ರಫಿ ಬಗ್ಗೆ ಆಸಕ್ತಿ ಬಂತೋ ಆಗಿನಿಂದ ವನ್ಯಜೀವಿ ಸಂರಕ್ಷಣೆ ಬಗ್ಗೆಯೂ ಒಲವು ಮೂಡಿತು. ತಮ್ಮ ಮಿತ್ರರಿಂದ ಸ್ಫೂರ್ತಿಗೊಂಡ ಕಾರ್ಬೆಟ್ 1920ರಲ್ಲಿ ಒಂದು ಕ್ಯಾಮೆರಾ ಖರೀದಿಸಿದರು. ಹುಲಿಗಳ ಫೋಟೋಗಳನ್ನು ತೆಗೆಯಲು ಆರಂಭಿಸಿದರು. ಅದರೆ ಅದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ.
ಪಾಠ ಮಾಡಿದ್ದರು
ಕಾಡುಗಳ ಬಗ್ಗೆ ಆಳವಾದ ಜ್ಞಾನ ಇದ್ದರೂ ನಾಚಿಕೆ ಸ್ವಭಾವದ ಹುಲಿಯ ಫೊಟೋಗಳನ್ನು ತೆಗೆಯೋದು ಬಹಳ ಸವಾಲಿನ ಸಂಗತಿಯಾಗಿತ್ತು. ಅದನ್ನು ಮೀರುವಲ್ಲಿ ಕಾರ್ಬೆಟ್ ಯಶಸ್ವಿಯಾದರು. ಅಂದಹಾಗೆ, ಶಾಲೆಗಳಲ್ಲಿ ಕಾಡಿನ ವೈವಿಧ್ಯ ಮತ್ತು ಸಂರಕ್ಷಣೆ ಬಗ್ಗೆ ಕೂಡ ಕಾರ್ಬೆಟ್ ಪಾಠ ಮಾಡಿದ್ದಾರೆ.
ಮೊದಲ ನ್ಯಾಷನಲ್ ಪಾರ್ಕ್ ಸ್ಥಾಪನೆ
ಜಿಮ್ ಕಾರ್ಬೆಟ್ ಪರಿಶ್ರಮದಿಂದ ದೇಶದ ಪ್ರಪ್ರಥಮ ನ್ಯಾಷನಲ್ ಪಾರ್ಕ್ ಉತ್ತರಾಖಂಡ್ (ಈಗಿನ) ನಲ್ಲಿ ಬ್ರಿಟಿಷರ ಕಾಲದಲ್ಲಿ (1936) ಸ್ಥಾಪನೆ ಮಾಡಲಾಯಿತು. ಇದಕ್ಕೆ ಹೈಲೇ ನ್ಯಾಷನಲ್ ಪಾರ್ಕ್ ಎಂದು ಹೆಸರಿಡಲಾಯಿತು. ಆ ನಂತರ 1957ರಲ್ಲಿ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ಎಂದು ಮರು ನಾಮಕರಣ ಮಾಡಲಾಯಿತು.
ಪುಸ್ತಕ ಹಾಗೂ ಸಿನಿಮಾ
ಕಾರ್ಬೆಟ್ ಉತ್ತಮ ಬರಹಗಾರರಾಗಿದ್ದರು. ಕಾಡಿನ ಅನುಭವ ಮತ್ತು ಕೊಂದ ನರಭಕ್ಷಕ ಪ್ರಾಣಿಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಕೂಡ ಬರೆದರು. ಅವರು ಬರೆದ ಮ್ಯಾನ್ ಈಟರ್ಸ್ ಆಫ್ ಕುಮಾವ್ನ್ ಎಂಬ ಪುಸ್ತಕ 2.5 ಲಕ್ಷ ಪ್ರತಿಗಳು ಮಾರಾಟಗೊಂಡಿವೆ. ಈ ಪುಸ್ತಕದ ಆಧಾರದ ಮೇಲೆ 1948ರಲ್ಲಿ ಹಾಲಿವುಡ್ ಚಿತ್ರ ಮಾಡಲಾಯಿತು. 2002ರಲ್ಲಿ 'ಕಿಂಗ್ಡಮ್ ಆಫ್ ಟೈಗರ್ಸ್' ಎಂಬ ಸಿನಿಮಾ ಮಾಡಲಾಯಿತು.
ಸಮಾಜಮುಖಿ ವ್ಯಕ್ತಿತ್ವ
ಕಾರ್ಬೆಟ್ ಅವರಿಗೆ ಸಾಮಾಜಿಕ ಕಳಕಳಿ ಕೂಡ ಹೆಚ್ಚಿತ್ತು. ಅವರಿದ್ದ ಊರಿನವರು 'ಕಾರ್ಪೆಟ್ ಸಾಹಿಬ್' ಎಂದು ಕರೆಯುತ್ತಿದ್ದರು. ಊರಿನ ಜನರಿಗೆ ನೆಗಡಿ ಮತ್ತು ಕೆಮ್ಮಿಗೆ ಔಷಧ ನೀಡುತಿದ್ದರು. ನರಭಕ್ಷಕ ಪ್ರಾಣಿಗಳಿಂದ ಹೆದರಿ ಬಂದ ಜನರಿಗೆ ಮನೆಯಲ್ಲೇ ಆಶ್ರಯ ನೀಡುತ್ತಿದ್ದರು.
ಅಂತಃಕರಣದ ಮನುಷ್ಯ
ರೈಲ್ವೆ ಇಲಾಖೆಯಲ್ಲಿ ಕಾರ್ಬೆಟ್ ಕೆಲಸ ಮಾಡುವಾಗ ಕಾಲರಾದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಮನೆಗೆ ಕರೆದೊಯ್ದು ಪಾಲನೆ- ಪೋಷಣೆ ಮಾಡಿದ್ದರು. ಪತಿಯನ್ನು ಕಳೆದುಕೊಂಡಿದ್ದ ಹೆಣ್ಣುಮಗಳೊಬ್ಬಳಿಗೆ ಮನೆಯಲ್ಲಿ ಆಶ್ರಯ ನೀಡಿದ್ದರು. ಜೀತ ಮಾಡುತ್ತಿದ್ದ ಬುದು ಎಂಬ ವ್ಯಕ್ತಿಯ ತಾತ 1 ರುಪಾಯಿ ಊರಿನ ಜಮೀನ್ದಾರನ ಹತ್ತಿರ ಸಾಲ ಮಾಡಿರುತ್ತಾನೆ. ಆ ಸಾಲದ ಬಡ್ಡಿ ನೂರಾರು ರೂಪಾಯಿಯಾಗಿ ಆ ಕುಟುಂಬದವರು ತಲತಲಾಂತರವಾಗಿ ಜೀತ ಮಾಡುತ್ತಿರುತ್ತಾರೆ. ಈ ವಿಚಾರ ಗೊತ್ತಾದ ಕಾರ್ಬೆಟ್, ಆ ಕುಟುಂಬವನ್ನು ಜೀತದಿಂದ ಮುಕ್ತಿಗೊಳಿಸುತ್ತಾರೆ. ಈ ಬಗ್ಗೆ ಅವರ "ಮೈ ಇಂಡಿಯಾ" ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.
ಕೆನ್ಯಾದಲ್ಲಿ ಕೊನೆ ದಿನ
ಭಾರತ ಸ್ವತಂತ್ರಗೊಂಡ ನಂತರ ಕಾರ್ಬೆಟ್ ಕೆನ್ಯಾಗೆ ಹೋಗಿ, ಅಲ್ಲಿ ಅವರ ಕೊನೆಯ ದಿವಸಗಳನ್ನು ಕಳೆಯುತ್ತಾರೆ. 79ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ತೀರಿಕೊಳ್ಳುತ್ತಾರೆ. ಉತ್ತರಾಖಂಡ್ ನಲ್ಲಿ ಇರುವ ಜಿಮ್ ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸದ್ಯ 160 ಹುಲಿ ಹಾಗೂ 700 ಆನೆಗಳಿವೆ. ಸಫಾರಿಗೆ ವ್ಯವಸ್ಥೆ ಕೂಡ ಇದೆ. ಜಿಮ್ ಕಾರ್ಬೆಟ್ ವಾಸವಿದ್ದ ಮನೆಯನ್ನು ಸಂಗ್ರಹಾಲಯ ಮಾಡಲಾಗಿದೆ. ಇಲ್ಲಿಗೆ ಪ್ರತಿವರ್ಷ ದೇಶ- ವಿದೇಶದ ಸಾವಿರಾರು ಮಂದಿ ಭೇಟಿ ನೀಡುತ್ತಾರೆ.