ಒಂದೇ ದಿನದಲ್ಲಿ ಎಷ್ಟೊಂದು ಕಥೆ ಕೊಟ್ಟ ನಮ್ಮ ಮೆಟ್ರೋ!
ಅಂತೂ ಇಂತೂ ಬೆಂಗಳೂರಿನ ಮೆಟ್ರೋ ಸದ್ದು ಸ್ಪೇನ್ ನಲ್ಲಿರುವ ಬಾರ್ಸಿಲೋನಾಗೂ ಕೇಳಿಸಿ ನಾನು ಹೋಗುವಷ್ಟರಲ್ಲಿ 10 ತಿಂಗಳಾಯಿತು. ಜಯನಗರದ ಹುಡುಗಿಯ ಮನೆಗೆ 4 ಮೆಟ್ರೋ ನಿಲ್ದಾಣಗಳು ಹತ್ತಿರ, ಅಂತೂ ಮನೆಯ ಹತ್ತಿರ ಮೆಟ್ರೋ ಬಂತು, ಕಾದು ಕಾದು ಸುಸ್ತಾಯಿತು, ಇನ್ನು ಬರುವುದಿಲ್ಲ ಎಂದಂದುಕೊಂಡಿದ್ದು ಸುಳ್ಳಾಗಿದ್ದು ಖುಷಿಯಾಯಿತು.
ಕನ್ನಡಿಗರ ಹೋರಾಟ, ಮೆಟ್ರೋದ ಹಿಂದಿ ಫಲಕ ತೆರವು
ನಾನು 8 ವರ್ಷದ ಕೆಳಗೆ ಇಂಜಿನಿಯರಿಂಗ್ ಶುರು ಮಾಡಿದಾಗ ಮೆಟ್ರೋ ಬಂದೆ ಬಿಡ್ತು ಎಂಬ ಸದ್ದು ಕೇಳುತ್ತಿತ್ತು. ಆಗಲೇ ರಸ್ತೆಯನ್ನ ಧೂಳೆಬ್ಬಿಸಿ, ಅಗಲ ಕಡಿಮೆ ಮಾಡಿ, ಅಂಗಡಿಗಳನ್ನ ಎತ್ತಂಗಡಿ ಮಾಡಿದ್ದರು. ಇಷ್ಟು ಬೇಗ ಬೇಗ ಮಾಡುವುದನ್ನು ಕಂಡು, ಇನ್ನು ನಾವು ನೆಮ್ಮದಿಯಾಗಿ ಮೆಟ್ರೋದಲ್ಲಿಯೇ ಓಡಾಡಬಹುದು ನಮಗೆ ಬೇಕಾದ ಜಾಗಕ್ಕೆ ಎಂದುಕೊಂಡಿದ್ದೆ. ಆದರೆ, ನಾನು ಇಂಜಿನಿಯರಿಂಗ್ ಮುಗಿಸಿ, 2 ವರ್ಷ ಕೆಲಸ ಮಾಡಿ, ಸ್ನಾತಕೋತ್ತರ ಪದವಿ ಮುಗಿಸಿ ಬಂದಮೇಲೆ ನಮ್ಮ ಮನೆಯ ಹತ್ತಿರಕ್ಕೆ ಮೆಟ್ರೋ ಬಂತು.
ನಾನೂ ಸಹ ಖುಶಿಯಾಗಿ ಹೋಗೋಣ ಎಂದು ಹೊರಟೆ. ಅಮ್ಮ ಮತ್ತು ತಂಗಿ ಮೊದಲೇ ಎಚ್ಚರಿಸಿದ್ದರು, ಜನ ಜಾಸ್ತಿ ನೋಡಿಕೊಂಡು ಹೋಗು ಎಂದು. ಮೆಟ್ರೋ ಕಾರ್ಡ್ ಬೇರೆ ಅಮ್ಮ ಕೊಟ್ರು, ಟಿಕೆಟ್ ಗೆ ಸರದಿ ಸಾಲು ನಿಂತುಕೊಂಡು ಸಮಯ ವ್ಯರ್ಥ ಮಾಡಿ ಮನೆಗೆ ತಡ ಮಾಡಿ ಬರಬೇಡ ಎಂದು.
ನನಗೆ ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಹೋದಾಗಲೆಲ್ಲ ಅಲ್ಲಿನ ಕಥೆಗಳನ್ನ ಕೇಳೋದು ನನ್ನ ಬಹು ಇಷ್ಟದ ಕೆಲಸ. ಭಾರತದ ಎಲ್ಲಾ ಭಾಷೆಗಳು ನಮ್ಮ ಬೆಂಗಳೂರಿನಲ್ಲಿ ಕೇಳಲು ಸಿಗುವುದರಿಂದ ಇದೊಂಥರ ಮಜವಾದ ಕೆಲಸ. ಒಮ್ಮೊಮ್ಮೆ ಅಲ್ಲೆ ಕಥೆಗಳು ಹುಟ್ಟಿಕೊಳ್ಳೋದು. ಜೀವನವನ್ನು ನೋಡುವ ಪರಿ ನನಗೆ ವಿಶೇಷವಾಗಿ ಕಾಣಿಸುತ್ತೆ.
ಸ್ವಿಟ್ಜರ್ಲೆಂಡಲ್ಲಿ ನಾ ಕಂಡ ಐನ್ಸ್ಟೀನ್ ಎಂಬ ಕೌತುಕ!
ತ್ರಿಭಾಷಾ ನೀತಿಯನ್ನು ವಿರೋಧಿಸಿದ್ದ ಕಾರಣವೋ ಏನೋ ಹೊಸ ಫಲಕಗಳು ಕನ್ನಡ ಮತ್ತು ಇಂಗ್ಲಿಷಿನಲ್ಲಿ ರಾರಾಜಿಸುತ್ತಿದ್ದವು. ಆದರೂ ರೈಲಿನಲ್ಲಿ ಎಮೆರ್ಜೆನ್ಸಿ ಫಲಕಗಳು ಮೂರು ಭಾಷೆಯಲ್ಲಿ ಇದ್ದವು. ಗಾಜನ್ನು ಮುಟ್ಟಬೇಡಿ ಎಂಬುದು ಸಹ. ಸಹ ಪ್ರಾಯಣಿಕರಲ್ಲಿ ಸುಮಾರು ಜನ ಇದನ್ನು ಬಯ್ಯುವುದಕ್ಕೆ ಮೀಸಲಿರಿಸಿದ್ದರು. ಈ ಸೌಲಭ್ಯವನ್ನ ಅವರು ಒಂದೇ ಬಾರಿ 3 ದಿವಸ ಹೋಗಿದ್ದ ಸಿಂಗಪುರದ ಮೆಟ್ರೋಗೆ ಹೋಲಿಸಿ ನಗು ತರಿಸಿದ್ದರು. ನನಗೆ ಕನ್ನಡ ಬರುವವರು ಆಂಗ್ಲ ಭಾಷೆಯಲ್ಲಿ ಮಾತಾಡುವಾಗ ಬರುವಷ್ಟು ನಗು ಇನ್ನು ಯಾವುದಕ್ಕೂ ಬರುವುದಿಲ್ಲ.
ಹೊಸ ಸೌಲಭ್ಯವಾದುದ್ದರಿಂದ ಜನರ ಗೊಣಗಾಟವು ಹೆಚ್ಚೆ. ಇಷ್ಟೊಂದು ಜನ ಯಾಕೆ ಮೆಟ್ರೋದಲ್ಲಿ ಬರುತ್ತಾರೆ, ಎಲ್ಲರಿಗೂ ಆಸನಗಳಿಲ್ಲ, ಮೇಲೆ ಮೇಲೆ ಬೀಳುತ್ತಾರೆ ಎಂಬುದು. ಇದೊಂಥರಾ ರಸ್ತೆಯಲ್ಲಿ ಯಾಕೆ ಎಲ್ಲಾರೂ ಕಾರಿನಲ್ಲಿ ಬರುತ್ತಾರೆ ಎಂದು ಗೊಣಗುವ ಜನರ ಹಾಗೆ. ಅವರು ಸಹ ಕಾರಿನಲ್ಲಿ ಹೋಗಿದ್ದರೂ ಬೇರೆಯವರು ಕಾರಿನಲ್ಲಿ ಬರಬಾರದೆಂಬ ಆಸೆ ಇರುವ ಹಾಗೆ.
'ನಮ್ಮ ಮೆಟ್ರೋ'ದಿಂದಾಗಿ ಬಿಎಂಟಿಸಿ ಆದಾಯ ಇಳಿಕೆ!
ಮಕ್ಕಳು ಅಪ್ಪ ಅಮ್ಮನಿಗೆ ತರಲೆ ಪ್ರಶ್ನೆ ಕೇಳೋದು ತೀರ ಸಹಜವಾಗಿತ್ತು. ಒಬ್ಬರಿಗೆ ಒಂದೇ ಟೋಕನ್ ಇದ್ಯಲ್ಲ, ಇಬ್ಬರು ಹೋದರೆ ಏನಾಗತ್ತೆ, ಅಕಸ್ಮಾತ್ ನನ್ನ ಕೈ ಬಾಗಿಲಿಗೆ ಸಿಕ್ಕಿ ಹಾಕಿಕೊಂಡರೆ ಏನಾಗತ್ತೆ, ಇವರಿಗ್ಯಾಕೆ ಟೋಕನ್, ಕಾರ್ಡ್ ಹೀಗೆಲ್ಲಾ ಕೇಳಿ ಅವರಪ್ಪನಿಗೆ ಸುಸ್ತು ಹೊಡೆಸುತ್ತಿದ್ದ ಪೋರ ಕಾಣಿಸಿದ.
ಅಜ್ಜಿ ಒಬ್ಬರಿಗೆ ವಿಪರೀತ ಹಶಿವಾಗಿ "ಮೆಟ್ರೊದಲ್ಲಿ ತಿನ್ನುವಂತಿಲ್ಲ" ಫಲಕ ಕಂಡು ತಾತನಿಗೆ ಚೆನ್ನಾಗಿಯೇ ಬಯ್ಯುತ್ತಿದ್ದರು. "ಸುಮ್ನೆ ನಮ್ ಬಸ್ಸಲ್ಲಿ ಹೋಗಿದ್ರೆ, ಇವೆಲ್ಲ ಆಗ್ತಿತ್ತ. ಮೊದಲೇ ನನಗೆ ಗಾಸ್ಟ್ರಿಕ್ , ಡಬ್ಬಿಲಿ ಇರೋದು ತಿನ್ನುವಂತಿಲ್ಲ" ಅಂತ ಸಿಕ್ಕಾಪಟ್ಟೆ ಗೊಣಗಾಡುತ್ತಿದ್ದರು. ಅದಾಗಿಯೂ ಸಹ ಅಲ್ಲೇ ನಿಂತಿದ್ದ ಅಂಕಲ್ "ಆರಾಮಪ್ಪ, ನನಗೆ ವಿಧಾನಸೌಧಕ್ಕೆ ಹೋಗೋದು, ಬೇಗ ಬೇಗ ಮನೆಗೆ ಹೋಗಬಹುದು, ಆ ಬಸ್ಸಲ್ಲಿ, ಟ್ರಾಫಿಕ್ ಅಲ್ಲಿ ಇರೋದು ಸಿಕ್ಕಾಪಟ್ಟೆ ಕಷ್ಟ" ಎಂದು ಇದನ್ನು ಹೊಗಳುತ್ತಿದ್ದರು.
"La
siguiente
parada
es
glorias"
ಎಂದು
ಕೇಳುತ್ತಿದ್ದ
ನನಗೆ
ಅಚ್ಚಗನ್ನಡದಲ್ಲಿ
'ಮುಂದಿನ
ನಿಲ್ದಾಣ
ನಾಡಪ್ರಭು
ಕೆಂಪೆಗೌಡ
ನಿಲ್ದಾಣ'
ಎಂದಾಗ
ಆದ
ಖುಷಿ
ಅಷ್ಟಿಷ್ಟಲ್ಲ.
ಕನ್ನಡವನ್ನು
ಬಲವಂತವಾಗಿಯೋ
ಅಥವಾ
ಅವರಾಗವರೆಯೋ
ಅಳವಡಿಸಿಕೊಂಡಿದ್ದು
ತುಂಬಾ
ಸಂತಸ
ತರುವ
ವಿಚಾರ.
ನೀವೇನೇ ಸಾಧನೆ ಮಾಡಿದ್ರೂ, ನೀವು ಕಥೆ ಹೇಳುವ ತಾತನೆ!
ಎಂಜಿ ರೋಡ್ನ ರಂಗೋಲಿ ಆರ್ಟ್ ಸೆಂಟರ್ ನಲ್ಲಿ ಪ್ರತಿ ತಿಂಗಳ ಮೊದಲ ಭಾನುವಾರದ ಸಂಜೆ ಕನ್ನಡ ಹೇಳಿಕೊಡುವ ಕಾರ್ಯಕ್ರಮ 'ನಮ್ಮ ಕನ್ನಡ ಗೊತ್ತಿಲ್ಲ' ತಂಡದಿಂದ ನಡೆಯುತ್ತದೆ, ಅಲ್ಲಿಗೆ ಅದೇ ರೈಲಿನಲ್ಲಿ ಬಂದ ಕೆಲವಾರು ವಿದ್ಯಾರ್ಥಿಗಳು ಹೋಗುವಾಗ ಹಿಂದಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾತಾಡಿ ಬರುವಾಗ ತುಂಬಾ ಚೆನ್ನಾಗಿತ್ತಲ್ವ ಕಾರ್ಯಕ್ರಮ ಎಂದು ಕನ್ನಡದಲ್ಲಿ ಹೇಳಿಕೊಂಡು ಬಂದಿದ್ದು ಖುಷಿಯಾದ ವಿಷಯವೇ.
6, 7 ದೇಶದ ಮೆಟ್ರೋ ಹಾಗೂ ದೆಹಲಿಯ ಮೆಟ್ರೋದಲ್ಲಿ ಓಡಾಡಿದ ನನಗೆ ನಮ್ಮೂರಲ್ಲಿ ಇದು ಬಂದಿದ್ದು ತುಂಬಾ ನೆಮ್ಮದಿ ತರುವ ವಿಷಯ. ಮೊದಲು ಮೆಟ್ರೋ ಬಂದಾಗ ಜಯನಗರ ಮಲ್ಲೇಶ್ವರ ಅಂತರ ಕಡಿಮೆಯಾಗಿ ಸಾಯಿ ರಾಮ್ ಚಾಟ್ಸ್ ಹಾಗೂ ಸಿ ಟಿ ಆರ್ ದೋಸೆ ಹತ್ತಿರವಾಯಿತೆಂದು ಬಹಳ ಖುಷಿ ಪಟ್ಟೆ. ಅಯ್ಯೋ ಪೀಣ್ಯಾಗೆ ಹೋಗಬೇಕು, ಮಲ್ಲೇಶ್ವರಕ್ಕೆ ಹೋಗಬೇಕು ಎಂಬ ಕಾರಣವನ್ನು ಕೊಡುವ ಅವಶ್ಯಕತೆ ಕಂಡು ಬರುವುದಿಲ್ಲ. ಬೆಂಗಳೂರು ದಕ್ಷಿಣ ಹಾಗೂ ಉತ್ತರದವರನ್ನ ಬೆಸೆದಿದ್ದು ಮೆಟ್ರೊ ಎಂದರೆ ತಪ್ಪಾಗುವುದಿಲ್ಲ.
ಸಾಲಿನಲ್ಲಿ ನಿಂತು ನುಗ್ಗದೆ ಇರುವುದನ್ನು ನಾವಿನ್ನು ಕಲಿಯಬೇಕಿದೆ. ಆದಷ್ಟು ಸ್ವಚ್ಛತೆಯನ್ನು ಕಾಪಾಡಬೇಕೆಂಬುದನ್ನು ನಾವು ಕಲಿಯಬೇಕು. ಟೋಕನ್ ಸಮಸ್ಯೆಗಳು, ನಿಂತಿರುವ ಸೆಕ್ಯೂರಿಟಿ ಇನ್ನು ಮಾತಾಡುವ ಶೈಲಿ ಕಲಿಯಬೇಕು, ತೀರ ನಿಮಗೆ ಕಣ್ಣು ಕಾಣಿಸುವುದಿಲ್ಲವಾ ಎಂದು ವಯಸ್ಸಾದವರಿಗೆ ಒರಟಾಗಿ ಮಾತಾಡುವುದನ್ನು ಬಿಡಬೇಕು. ಒಂದು ದಿವಸದಲ್ಲಿ ಇಷ್ಟೆಲ್ಲಾ ಕಥೆಗಳನ್ನು ಕೊಟ್ಟ ನಮ್ಮ ಮೆಟ್ರೋಗೆ ಸರಿಸಾಟಿ ಯಾವುದು ಇಲ್ಲ. ಖುಷಿಯಾದದ್ದದ್ದು ಅದೇ ವಿಷಯವೇ.