ನನ್ನ ಹಣೆಗೆ ಗಲ್ಲಕೆ ಮುತ್ತನ್ನು ರಾಜಣ್ಣ ಕೊಟ್ಟಾಗ!
ಏಪ್ರಿಲ್ 24 ಬಂತೆಂದರೆ ನಮ್ಮ ಮನೆಯಲ್ಲಿ ಯಾರಾದ್ರದ್ದು ಹುಟ್ಟುಹಬ್ಬ ಎಂದಷ್ಟೆ ಸಹಜವಾಗಿ ರಾಜಣ್ಣನ ಹುಟ್ಟುಹಬ್ಬ ನೆನಪಿಗೆ ಬರುತ್ತದೆ ಮತ್ತು ಅಷ್ಟೇ ಸಂಭ್ರಮದಿಂದ ಖುಷಿಪಡುತ್ತೇವೆ. ಡಾ|| ರಾಜಕುಮಾರ್ ಅಷ್ಟೊಂದು ಸಹಜವಾಗಿ ನಮ್ಮ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ನೆಲೆಸಿದ್ದಾರೆ.
ಈ ನಟಸಾರ್ವಭೌಮ, ರಸಿಕರರಾಜರನ್ನು ನಾನು ಭೇಟಿ ಮಾಡಿದ್ದೆ. ಅದರ ಕಥೆ ನಾನು ಪ್ರತಿ ವರ್ಷ ಏಪ್ರಿಲ್ನಲ್ಲಿ ನೆನಪು ಮಾಡಿಕೊಳ್ಳುತ್ತೇನೆ. ಅದೇ ಈ ವಾರದ ಅಂಕಣಕ್ಕೆ ವಿಶೇಷ ಲೇಖನ.
ರಾಜಕುಮಾರ್ ನಮ್ಮ ಮನೆಯ ಸದಸ್ಯರಿದ್ದಂಗೆ. ಮನೆಯಲ್ಲಿ ಇವಾಗಲೂ ಟಿವಿಯಲ್ಲಿ ಅವರ ಸಿನೆಮಾ ಬಂದರೆ ಮನೆಮಂದಿಯೆಲ್ಲಾ ಹಾಜರ್ ಅದರ ಮುಂದೆ. ಯಾರೂ ಚಾನೆಲ್ ಬದಲಾಯಿಸುವ ಧೈರ್ಯ ಮಾಡುವುದಿಲ್ಲ. ಪ್ರತಿ ಸಿನೆಮಾದ ಸಂಭಾಷಣೆ, ಹಾಡು ಬಾಯಿಪಾಠವಾಗುವಷ್ಟು ಹುಚ್ಚು ಪ್ರೀತಿ ಅವರನ್ನು ಕಂಡರೆ.
ನನ್ನ ಅಪ್ಪ ಮೊದಲ ಬಾರಿಗೆ ಅಮೆರಿಕಾಗೆ ಹೋದಾಗ ಆವಾಗಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಎಲ್ಲಾರು ಒಳಗೆ ಹೋಗಿ ಬೀಳ್ಕೊಡಬಹುದಾಗಿತ್ತು. ಇಷ್ಟೊಂದು ಸೆಕ್ಯುರಿಟಿ ಇರುತ್ತಿರಲಿಲ್ಲ. ಮೊದಲ ಬಾರಿಗೆ ಮನೆಯಲ್ಲಿ ಒಬ್ಬರು ವಿದೇಶಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ಒಬ್ಬರನ್ನು ಬಿಡುವುದಕ್ಕೆ ಪ್ರಾಯಶಃ 20 ಜನ ಹೋಗಿದ್ದವೇನೋ. ನನಗಾಗ 7 ವರ್ಷ. ಅಪ್ಪನನ್ನು ಒಂದು ಮೂರು ತಿಂಗಳು ನೋಡುವುದಿಲ್ಲ ಎಂಬ ಆತಂಕದೊಂದಿಗೆ ನಾನು ಮನಸಲ್ಲೆ ಅಳುತ್ತಿದ್ದೆ. ಮೊಬೈಲ್, ಲ್ಯಾಂಡ್ಲೈನ್ ಸಹ ಇರಲಿಲ್ಲ ಮನೆಯಲ್ಲಿ. ಎದುರು ಮನೆಯ ಅಂಕಲ್ಗೆ ಕರೆ ಮಾಡಿ ತಿಳಿಸಬೇಕಿತ್ತು.
ಹೀಗೆ ಬೇಜಾರಲ್ಲಿದ್ದಾಗ, ಅಪ್ಪ ನನ್ನ ಕೈ ಹಿಡಿದುಕೊಂಡು ಕರೆದುಕೊಂಡು ಹೋಗಿದ್ದು ಅಲ್ಲಿನ ವಿಐಪಿ loungeಗೆ. ಅಲ್ಲಿ ಬಿಳಿ ಪಂಚೆ, ಬಿಳಿ ಶರ್ಟ್ ತೊಟ್ಟು ನಗು ಮುಖದೊಂದಿಗೆ ಅವರ ಶ್ರೀಮತಿಯವರ ಜೊತೆಗೆ ಕುಳಿತಿದ್ದರು ನಮ್ಮ ಅಣ್ಣಾವ್ರು. ನಾನು ಚಿಕ್ಕವಳಾದ ಕಾರಣ ನನನೆ ಯಾವ ನಾಚಿಕೆಯೂ ಇಲ್ಲದೆ ಆ ರೂಮಿಗೆ ಓಡಿಹೋದೆ. ಅವರು ನಾನು ಓಡುವುದನ್ನು ನೋಡಿ ನನ್ನನ್ನ ಎತ್ತಿಕೊಂಡು ಹಣೆಗೆ, ಕೆನ್ನೆಗೆ ಮುತ್ತು ಕೊಟ್ಟು 'ಏನು ಕಂದ ನಿನ್ನ ಹೆಸರು?' ಎಂದು ಕೇಳಿದ್ದರು. ನಾನು ನಾಚಿಕೆಯಿಂದ ನನ್ನ ಹೆಸರು ತಿಳಿಸಿದ ಮೇಲೆ, 'ಎಷ್ಟು ಮುದ್ದಾಗಿದೆ' ಎಂದು ಮತ್ತಷ್ಟು ಮುತ್ತು ಕೊಟ್ಟಿದ್ದರು.
ಅಷ್ಟ್ರಲ್ಲಿ ಅಪ್ಪ ಬಂದು 'ಕ್ಷಮಿಸಿ ಸಾರ್' ಅಂದಾಗ, ಅವರು 'ಮಕ್ಕಳು ದೇವರ ಸಮಾನ, ಎಷ್ಟು ಮುದ್ದು ಮಗು' ಎಂದೆಲ್ಲ ಹೇಳಿ ನಗುತ್ತಿದ್ದರು. ಅಪ್ಪನ ಕೆಲ್ಸ, ಹುದ್ದೆ ಎಲ್ಲವನ್ನು ಕೇಳಿ ತಿಳಿದುಕೊಂಡು, 'ದೇಶ ಸೇವೆ ಮಾಡುತ್ತಾಇದ್ದೀರ' ಎಂದು ಕೈ ಮುಗಿದು ನಮಸ್ಕರಿಸಿದರು. ತಾತ ಸಹ ನನ್ನ ಈ ಹುಚ್ಚಾಟವನ್ನು ಕಂಡು, ಹಾಗೆ ಬರುವಾಗ ಅವರಿಗು ನಮಸ್ಕರಿಸಿ ಅಪ್ಪನಿಗೆ, ನಿಮ್ಮ ತಂದೆಯನ್ನು ಸಹ ಕರೆದುಕೊಂಡು ಹೋಗಿ ಎಂದು ಕಿವಿ ಮಾತು ಹೇಳಿ ಅಲ್ಲಿಂದ ನಿರ್ಗಮಿಸಿದರು.
ಅವರು ಇಡೀ ಕರ್ನಾಟಕಕ್ಕೆ ದೇವರ ಸಮಾನ, ಇವರು ನನ್ನಂತ ಸಣ್ಣ ಮಗುನ ಎತ್ತಿ ಮಾತಾಡಿಸುವ ಅವಶ್ಯಕತೆ ಇಲ್ಲದ್ದಿದ್ದರೂ ಸಹ, ಅವರ ವಿನಯವನ್ನು ಎಲ್ಲೂ ಬಿಡಲಿಲ್ಲ. ನನ್ನ ಅಪ್ಪನನ್ನು ಸಹ ನೀವು ಎಂದೇ ಸಂಭೋಧಿಸಿ ಮಾತಾಡಿಸುತ್ತಿದ್ದರು. ಪ್ರಾಯಶಃ ದೊಡ್ಡವರು ಎನ್ನಿಸಿಕೊಳ್ಳುವುದು ಬರಿ ವಯಸ್ಸಿನ ಕಾರಣದಿಂದಲ್ಲ ಹೊರತಾಗಿ ಅವರ ಗುಣಗಳಿಂದ ಎಂಬುದು ನಾನು ಯಾವಾಗಲೂ ಕಂಡುಕೊಂಡ ಸತ್ಯ. ಅದಕ್ಕೆ ತಕ್ಕ ಉದಾಹರಣೆ ನಮ್ಮ ರಾಜಣ್ಣ. ಒಂದು 7 ವರ್ಷದ ಹುಡುಗಿಗೆ ತನ್ನ ಜೀವಮಾನದಲ್ಲಿಯ ಮರೆಯಲಾರದ ಅನುಭವವಿತ್ತ ಮಹಾನುಭಾವ ಈ ಯುಗ ಪುರುಷ.
ಅವರ ಕನ್ನಡ, ಅವರ ಹಾವಭಾವ ಎಲ್ಲವೂ ಅನುಕರಣನೀಯ. ಕನ್ನಡಕ್ಕೆ ಕುತ್ತು ಬಂದಾಗ ಮುಂಚೂಣಿಯಲ್ಲಿ ನಿಂತು ಎಲ್ಲವನ್ನೂ ನಿಭಾಯಿಸುತ್ತಿದ್ದರು. ಅವರ ಸಿನೆಮಾ ನೋಡಿದ ನಾನು, ಅವರೇ ಸಾಕ್ಷಾತ್ ದೇವರು, ಅವರೇ ರಾಜ ಮಹಾರಾಜ ಎಂದುಕೊಂಡಿದ್ದೆ. ಯಾವ ತರಹ ಎಂದರೆ, ನಮ್ಮ ಚರಿತ್ರೆಯ ಪರೀಕ್ಷೆಯಲ್ಲಿ ವಿಜಯನಗರದ ಅರಸರ ಬಗ್ಗೆ ಬರಿ ಎಂಬ ಪ್ರಶ್ನೆಗೆ, ಇಡಿ ಶ್ರೀ ಕೃಷ್ಣದೇವರಾಯ ಸಿನೆಮಾದ ಕಥೆ ಬರೆದು ಬಂದಿದ್ದೆ. ನನಗೆ ಬರುತಿದ್ದ ಆಂಗ್ಲ ಭಾಷೆಗೆ ತರ್ಜುಮೆ ಮಾಡಿ 4 ಪುಟಗಳ ಉತ್ತರ ಬರೆದು ಚೆನ್ನಾಗಿ ಬೈಸಿಕೊಂಡಿದ್ದೆ. ಒಮ್ಮೊಮ್ಮೆ ಸಿನೆಮಾದಲ್ಲಿ ಅನಾವಶ್ಯಕ ಹಾಡು, ದೃಶ್ಯಗಳನ್ನ ಸೇರಿಸಿದ್ದರಿಂದೇನೋ ನನಗೆ ಚರಿತ್ರೆಯ ಪರೀಕ್ಷೆಗಳು ಅಷ್ಟು ಪ್ರಿಯವಾಗಿದ್ದವು. ನಮ್ಮ ಗುರುಗಳಿಗೆ ವಿಪರೀತ ಸಿಟ್ಟು, 3 ಮಾರ್ಕಿನ ಉತ್ತರಕ್ಕೆ ಇಡಿ ಸಿನೆಮಾವನ್ನೆ ಬರೆಯುತ್ತಾಳೆ ಎಂದು. ನಿಮಗೀಗ ಅರಿವಾಗಿರಬಹುದು ನನಗೆ ರಾಜ್ ಸಿನೆಮಾ ಹುಚ್ಚು ಎಷ್ಟಿತ್ತೆಂದು!
ನಮ್ಮ ಕನ್ನಡ ಹೇಳಿಕೊಡುವ ಗುಂಪಿನಲ್ಲಿಯೂ ಸಹ ಮೊದಲು ನಾವು ಹೇಳುವುದು ಯಾವಾಗಲೂ ರಾಜಣ್ಣನವರ ಸಿನೆಮಾ ನೋಡುವುದಕ್ಕೆ. ಎಂದಿಗೂ ಸಹ ಅವರ ಬಗ್ಗೆ ಒಂದು ಕೆಟ್ಟ ಮಾತು ಹೊರನಾಡಿನವರಾದ ನನ್ನ ವಿದ್ಯಾರ್ಥಿಗಳು ಹೇಳಿಲ್ಲ.
ದೇವರಾಗಿ ಅವರು ಪಾತ್ರ ಮಾಡಿದರಂತೂ ಅಜ್ಜಿ ಕೈ ಮುಗಿದು ಟಿವಿಯ ಮುಂದೆ ನಿಂತಿರುತ್ತಿದ್ದರು. ಹವಾರು ವರ್ಷಗಳವರೆಗೆ ಶ್ರೀನಿವಾಸ ದೇವರು ಎಂದರೆ ರಾಜಕುಮಾರ್ ಎಂದುಕೊಂಡಿದ್ದೆ. ಇದು ನನ್ನ ನೆನಪು ಅಣ್ಣಾವ್ರ ಬಗ್ಗೆ.
ಅವರು ಸತ್ತಾಗ ಅರಿವಿಲ್ಲದೆ ನನ್ನ ಕಣ್ಣಲ್ಲಿಯೂ ನೀರು ಬಂದಿತ್ತು. ಮತ್ತೆಂದು ಈ ಮಹಾ ಚೇತನವನ್ನು ನೊಡೋದಕ್ಕೆ ಆಗುವುದಿಲ್ಲವೆಂಬ ಕೊರಗಿದ್ದರೂ ಅವರ ಸಿನೆಮಾವನ್ನು ಪದೆ ಪದೆ ನೋಡುವ ಅವಕಾಶವಿದೆಯಲ್ಲ ಎಂದು ಸಮಧಾನ ಮಾಡಿಕೊಳ್ಳುತ್ತೇನೆ.
ಮೊನ್ನೆ ಕ್ರಿಸ್ಮಸ್ ರಜಾ ಸಮಯದಲ್ಲಿ ಬೆಲ್ಜಿಯಂ-ಫ್ರಾನ್ಸ್ ಗಡಿಯ ಛಳಿ ಬೆಟ್ಟ ಹತ್ತುವಾಗ ಆ ಬೆಟ್ಟಕ್ಕೆ ಡ್ರೈವ್ ಮಾಡಿಕೊಂಡು ಹೋಗುವಾಗ ನಾನು ನನ್ನ ಅಣ್ಣ ಜೋರಾಗಿ ಬಭ್ರುವಾಹನ ಸಿನೆಮಾದ ಪ್ರತಿ ಸಂಭಾಷಣೆಯನ್ನು ಗಿಳಿತರಹ ಹೇಳಿದ್ದನ್ನು ಕಂಡು ನಮ್ಮ ಜೊತೆಗೆ ಯಾತ್ರೆ ಬಂದವರು ನಮ್ಮ ಹುಚ್ಚಿಗೆ ನಮ್ಮನ್ನು ಆಚೆ ತಳ್ಳೋದೊಂದು ಬಾಕಿ ಇತ್ತು.
ಈಗಲೂ ಸಿನೆಮಾ ಅಂತ ಆಸೆ ಪಟ್ಟುಕೊಂಡು ನೋಡುವುದು ಅವರ ಸಿನೆಮಾವನ್ನೆ. FrankFurt ವಿಮಾನ ನಿಲ್ದಾಣದಲ್ಲಿ 4 ಘಂಟೆ ಕಳೆಯಬೇಕಾಗಿ ಬಂದಾಗ ಆರಾಮಾಗಿ ನೋಡಿದ್ದು ಇದೇ ಬಭ್ರುವಾಹನ ಸಿನೆಮಾವನ್ನೆ. ವಿಮಾನದಲ್ಲಿ ಬರುವಾಗಲೂ ಸಹ ಲುಪ್ಥಾನ್ಸ ವಿಮಾನ ಸಂಸ್ಥೆಗೆ ಕೇಳಿದ್ದು ಅದೇ ಪ್ರಶ್ನೆಯನ್ನೆ.