ರಾಘವೇಂದ್ರ ಮಹಿಮೆ ಕುರಿತ ಸತ್ಯ ಕಥೆ
ಒಂದು ಸತ್ಯ ಕತೆ :
ನನ್ನ ಮಾತಾಮಹಿ ತುಳಸಾಬಾಯಿ ಗುರುರಾಯರ ಪರಮ ಭಕ್ತಳಾಗಿದ್ದಳು. ನಾನು ಅಜ್ಜಿಯ ಮನೆಯಲ್ಲಿ (ವಿಜಾಪುರ ಜಿಲ್ಲೆಯ ಗ್ರಾಮ ಡೊಮನಾಳದಲ್ಲಿ) ಗುರುವಾರ ಹುಟ್ಟಿದೆನೆಂದು ನನ್ನ ಹೆಸರು 'ಗುರುರಾಜ" ಎಂದು ಇಡಲು ನಮ್ಮ ಅಜ್ಜಿ ಹೇಳಿದ್ದಳಂತೆ. (ನಂತರ ಸಂಘಮಿತ್ರರ ಸಹವಾಸದಲ್ಲಿ ಅದು 'ಗುರುನಾಥ" ಆಯಿತು.)
ನಮ್ಮ ಅಜ್ಜಿಗೆ ಐದು ಮಕ್ಕಳು. ಅವರಲ್ಲಿ ಒಬ್ಬನೇ ಮಗ (ಬಾಬೂರಾಯ). ಅವನು ಮೆಟ್ರಿಕ್ ಪರೀಕ್ಷೆಗೆ ಕುಳಿತಾಗ 'ಫಿಟ್ಸ್" ಬಂದು ಶಿಕ್ಷಣ ಪೂರ್ತಿಯಾಗಲಿಲ್ಲ. ಯಾವ ಡಾಕ್ಟರರೂ ಗುಣಪಡಿಸಲಿಲ್ಲ. ದಿನಕ್ಕೊಮ್ಮೆ ಮೂರ್ಛೆಹೋದಾಗ ಬಾಯಲ್ಲಿ ಬುರುಗು ಬರುತ್ತಿತ್ತು, ಎಲ್ಲಿ ಬೇಕಲ್ಲಿ ಬಿದ್ದುಬಿಡುತ್ತಿದ್ದ. ಕೊನೆಯ ಉಪಾಯವೆಂದು ನನ್ನ ಅಜ್ಜಿ ಅವನನ್ನು ಮಂತ್ರಾಲಯಕ್ಕೆ ಕರೆದುಕೊಂಡು ಹೋಗಿ ಶ್ರೀಗುರುರಾಯರ ಪಾದದಲ್ಲಿ ಹಾಕಿದರು. ಅಲ್ಲಿ ರೋಗ ಮಾಯವಾಯ್ತು.
ವರ್ಷದ ಮೇಲೆ ಹಳ್ಳಿಗೆ ಕರೆತಂದರು, ಹೊಲದ ಮೇಲ್ವಿಚಾರಣೆಯ ಕೆಲಸಕ್ಕೆ ಹಚ್ಚಿದರು. ಮತ್ತೆ ರೋಗ ಉಲ್ಬಣಗೊಂಡಿತು. ರಾಯರ ಅಪ್ಪಣೆಯಾಗದೇ ಮರಳಿ ಕರೆತರುವುದಿಲ್ಲ ಎಂದು ಸಂಕಲ್ಪ ಮಾಡಿ ಮತ್ತೆ ಮಂತ್ರಾಲಯದಲ್ಲಿ ಬಿಟ್ಟು ಬಂದರು. ಮಂತ್ರಾಲಯದಲ್ಲಿ ರೋಗ ಮಾಯವಾಗುತ್ತಿತ್ತು. 19 ವರ್ಷಗಳ ಮೇಲೆ ರಾಯರ ಅಪ್ಪಣೆ ದೊರೆಯಿತು, ಹಳ್ಳಿಗೆ ವಾಪಸ್ ಬಂದರು. ಮತ್ತೆ ರೋಗಬಾಧೆ ಆಗಲಿಲ್ಲ.
ಇವರು ಮಂತ್ರಾಲಯದಲ್ಲೇ ಸೇವೆ ಮಾಡಿಕೊಂಡಿದ್ದ ಕಾಲಾವಧಿಯಲ್ಲೇ ಅವರ ತಾಯಿ ಮತ್ತು ತಂದೆ (ನಮ್ಮ ಅಜ್ಜಿ ಮತ್ತು ಅಜ್ಜ) ಸ್ವರ್ಗಸ್ಥರಾದರು. ಆ ಸುದ್ದಿ ಇವರಿಗೆ ತಲುಪುವ ಮೊದಲೇ ರಾಯರು ಇವರ ಸ್ವಪ್ನದಲ್ಲಿ ಬಂದು ಅವರು ಮೃತರಾದ ವಿಚಾರ ತಿಳಿಸಿ, ಕ್ರಿಯಾಕರ್ಮ ಮುಗಿಸಿ ಮರಳಿ ಬರಲು ಆಜ್ಞಾಪಿಸುತ್ತಿದ್ದರು. ಅವಶ್ಯಕವಾದ ಹಣವನ್ನು ಬೃಂದಾವನ ಆಫೀಸಿನಿದ ಪಡೆಯಲೂ ಹೇಳುತ್ತಿದ್ದರಂತೆ. ಈ ಕಥೆಯನ್ನು ನಂಬುವುದೂ ಕಷ್ಟ, ಆದರೆ ಇದು ರಾಯರ ಮಹಿಮೆ ತಿಳಿಸುವ ಸತ್ಯ ಕಥೆ.
ಇವರು ತಮ್ಮ 37ನೆಯ ವರ್ಷ ಹಳ್ಳಿಗೆ ಮರಳಿದರು. ಸಂಬಂಧಿಕರು “ಯಾಕೆ ಬಂದಿ? ಉಳುವವರು ಹೊಲದೊಡೆಯರಾಗಿದ್ದಾರೆ. ಇಲ್ಲಿ ಉಪವಾಸ ಸಾಯಬೇಕಾದೀತು" ಎಂದರು. ರಾಯರನ್ನು ಸ್ಮರಿಸುತ್ತ ಹಾಳುಬಿದ್ದ ಮನೆಯ ಅಂಗಳದಲ್ಲಿ ಮಲಗಿದರು. ರೈತರು ಬಂದು ಹೊಲ ಮರಳಿಸಿದರು, “ನಿಮ್ಮಂತಹ ಸತ್ಪುರುಷರಿಗೆ ಮೋಸ ಮಾಡಿದರೆ ದೇವರು ಮೆಚ್ಚುವನೆ? ನಮ್ಮ ವಂಶ ನಾಶವಾಗದೇ ಉಳಿದೀತೇ?" ಎಂಬ ಉದ್ಗಾರ ತೆಗೆದಿದ್ದರಂತೆ. ಮುಂದೆ ಮದುವೆಯಾಯ್ತು. ನಾಲ್ಕು ಗಂಡು ಮಕ್ಕಳನ್ನು ಪಡೆದರು. ಎಲ್ಲರೂ ರಾಯರ ಕೃಪೆಯಿಂದ ಸಮೃದ್ಧರಾಗಿದ್ದಾರೆ.
ನನ್ನ ಅನುಭವ :
ನಾನು ಮೊದಲ ಸಲ ಮಂತ್ರಾಲಯಕ್ಕೆ ಹೋದದ್ದು 1954ರಲ್ಲಿ. ಆಗ ನಾನು ಇಂಟರ ಆರ್ಟ್ಸ್ನಲ್ಲಿ ಓದುತ್ತಿದ್ದೆ. ಮೆರಿಟ್ ಸ್ಕಾಲರ್ಶಿಪ್ ಇತ್ತು, ಅಭ್ಯಾಸದಷ್ಟೇ ಪಠ್ಯೇತರ ಚಟವಟಿಕೆಯಲ್ಲಿ ಕ್ರಿಯಾಶೀಲನಾಗಿದ್ದೆ. ನನ್ನ ಆರೋಗ್ಯ ಒಮ್ಮೆಲೇ ಕುಸಿಯಿತು. ಬಡವಾದೆ, ಗಂಟಲಲ್ಲಿ ಅನ್ನ ಇಳಿಯುತ್ತಿರಲಿಲ್ಲ. ಡಾಕ್ಟರರಿಗೆ ಬಗೆಹರಿಯಲಿಲ್ಲ. ಯಾರೋ ಮಾಡಿಸಿದ್ದಾರೆಂದು ಮೈಯಲ್ಲಿ ದೇವಿ ಬಂದವರೊಬ್ಬರು ನುಡಿದರು. ಉಪಾಯಗಾಣದೆ ಮಂತ್ರಾಲಯಕ್ಕೆ, ಸೋದರಮಾವನ ಬಳಿಗೆ ಹೋದೆ. ಅವರು 'ರಾಯರ ಸೇವೆ ಮಾಡಲು" ನನಗೆ ಹೇಳಿದರು, ಸೇವೆ ಮಾಡಿದೆ ಪೂರ್ತಿ ವಾಸಿಯಾಯ್ತು. ರಾಯರ ವಿಶೇಷ ದರ್ಶನ ಲಭಿಸಿತು, ಅವರ ಪರಮಭಕ್ತನಾದೆ.
ವರಕವಿ ಬೇಂದ್ರೆಯವರ ಸಾಮಿಪ್ಯದಲ್ಲಿ ಕವಿಯಾಗಿ ಅರಳುತ್ತಿದ್ದೆ. ನಾನು ಹಾಡು ಬರೆದರೆ ಹಾರ್ಮೋನಿಯಂ ಪಟು ವಾಸುದೇವ ಕನಕಾಪುರ್ ಸ್ವರಸಂಯೋಜನೆ ಮಾಡುತ್ತಿದ್ದ, ಆಗಿನ್ನೂ ಸ್ಕೂಲ್ ವಿದ್ಯಾರ್ಥಿಯಾಗಿದ್ದ ಮಾಧವ ಗುಡಿ ನನ್ನ ಹಾಡು ಹಾಡುತ್ತಿದ್ದ. ಕನಕಾಪುರ್ ಶಾಲೆ ಅರ್ಧಕ್ಕೆ ಬಿಟ್ಟಿದ್ದ, ಆದರೆ ಹಿರಿಯ ಗಾನಪಟುಗಳಿಗೆ (ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ, ಬಸವರಾಜ ರಾಜಗುರು ಮುಂತಾದವರಿಗೆ) ಹಾರ್ಮೋನಿಯಂ ಸಾಥ್ ಮಾಡುತ್ತಿದ್ದ. ಅವನೊಬ್ಬ 'ಚೈಲ್ಡ್ ಪ್ರಾಡಜಿ" ಆಗಿದ್ದ. ಐದು ವರ್ಷದ ಬಾಲಕನಾಗಿದ್ದಾಗ ಮದ್ರಾಸ್ ರೇಡಿಯೋದಲ್ಲಿ 'ಸೊಲೊ ಪರ್ಫಾರ್ಮನ್ಸ್" ನೀಡಿದ್ದ. ಅವನ ಬಗ್ಗೆ ಆ ಕಾಲದಲ್ಲಿ ಅ.ನ.ಕೃ. ಲೇಖನ ಬರೆದಿದ್ದರು.
ನಂತರ ರೇಡಿಯೋದಲ್ಲಿ ಕೆಲಕಾಲ ಹಾರ್ಮೋನಿಯಂ ವಾದ್ಯಕ್ಕೆ ನಿಷೇಧವಿತ್ತು. ಕನಕಾಪುರ್ ಆರ್ಥಿಕ ಸಂಕಷ್ಟದಲ್ಲಿದ್ದ. 'ಗಂಧರ್ವ ಮಹಾ ವಿದ್ಯಾಲಯ"ದ ಸಂಗೀತ ಪರೀಕ್ಷೆ (ಸಂಗೀತ ವಿಶಾರದ) ಪಾಸಾದರೆ ಅವನಿಗೆ 'ಮ್ಯುಜಿಕ್ ಟೀಚರ್" ಕೆಲಸ ದೊರೆಯಬಹುದಾಗಿತ್ತು. ಪರೀಕ್ಷೆ ಕಟ್ಟಲು ಹೆಣಗುತ್ತಿದ್ದ. ಅವನಿಗೆ ಮಂತ್ರಾಲಯಕ್ಕೆ ಹೋಗಿ ಬರಲು ನಾನು ಸೂಚಿಸಿದೆ. ಅಂದೇ ಸ್ವಪ್ನದಲ್ಲಿ, ರಾಯರು ಅವನಿಗೆ 'ಮಂತ್ರಲಯಕ್ಕೆ ಬಾ" ಎಂದು ಕರೆದಂತಾಯಿತು.
ಗುರು ರಾಘವೇಂದ್ರರ ಸ್ತುತಿಸುವ ಹಾಡು