2015 ವರ್ಷ ಭವಿಷ್ಯ : ಕನ್ಯಾ ರಾಶಿಗೆ ಭಾಗ್ಯದ ಬಾಗಿಲು
ಉತ್ತರಾಫಾಲ್ಗುಣಿಯ 2, 3, 4ನೇ ಚರಣದವರು ಮತ್ತು ಹಸ್ತ, ಚಿತ್ತ ನಕ್ಷತ್ರದ 1, 2ನೇ ಚರಣದಲ್ಲಿ ಜನಿಸಿದವರದು ಕನ್ಯಾ ರಾಶಿ. ಈ ರಾಶಿಯವರಿಗೆ ಟೊ, ಪ, ಪಿ, ಪು, ಷ, ಣ, ಠ, ಪೆ, ಪೋ ಎಂಬಕ್ಷರಗಳಲ್ಲಿ ಜನ್ಮನಾಮ ಇಡಬೇಕಾಗುತ್ತದೆ.
ಈ ರಾಶಿಯವರಿಗೆ 2015ನೇ ಹೊಸ ವರ್ಷವು ಭಾಗ್ಯದ ಬಾಗಿಲು ತೆರೆದಂತೆಯೇ ಸರಿ. ಇಷ್ಟು ದಿನ, ಅಂದರೆ ಸುಮಾರು 9 ವರ್ಷಗಳ ಕಾಲ ಶನಿಮಹಾತ್ಮನ ಚಕ್ರವ್ಯೂಹದಲ್ಲಿ ಸಿಲುಕಿ ಪಾರಾಗಿ ಬಂದ ಇವರಿಗೆ ಶನಿಪ್ರಭಾವ ಸಾಕಷ್ಟು ಗೊತ್ತಾಗಿದೆ. ಶನಿಕಾಟ ಅನುಭವಿಸಿದವರು ಸ್ವಲ್ಪ ಶನಿದೇವರಿಂದಾದ ಅನುಕೂಲ ಮತ್ತು ಅನಾನೂಕೂಲಗಳ ಬಗ್ಗೆ ಹೇಳಿ ನಾಸ್ತಿಕರ ಬಾಯಿ ಮುಚ್ಚಿಸಿ ಸಾಧ್ಯವಾದರೆ. ಏಕೆಂದರೆ ಎಲ್ಲ ಧರ್ಮಗಳವರಿಗಿಂತ ನಮ್ಮ ಧರ್ಮದವರೇನೂ ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಆದರೆ ಇಡೀ ವಿಶ್ವದ ಎಲ್ಲ ಧರ್ಮಗಳಲ್ಲಿಯೇ ಅತ್ಯಂತ ಪ್ರಾಚೀನ ಧರ್ಮ ನಮ್ಮದು ಎಂಬ ಹೆಮ್ಮೆ ನಮಗಿದೆ.
ಹೀಗಾಗಿ, "ಶನಿಕಾಟ"ದ ಬಗ್ಗೆ ತಿಳಿದುಕೊಳ್ಳಬೇಕೆಂದವರಿಗೆ ಕನ್ಯಾ ರಾಶಿಯವರು ಈಗ ಉತ್ತಮ ಉದಾಹರಣೆಯಾಗಿದ್ದಾರೆ. ಬೇಕಾದವರು ಈ ರಾಶಿಯವರನ್ನು ಕೇಳಿಕೊಂಡು ನಮ್ಮ "ಸಾಹೇಬ"ರ ಪ್ರಭಾವದ ಬಗ್ಗೆ ತಿಳಿದುಕೊಳ್ಳಬಹುದು. ಇಲ್ಲಾ ಬುಡಿ ಸಾಮೇರೆ, "ಅದೆಲ್ಲಾ ಬರೀ ಬೊಗಳೆ" ಎಂದವರಿಗೆ, "ಅಂಥವರ ಬೆನ್ನಿಗೆ ಚಪ್ಪರಿಸಿ ಚಪ್ಪರಿಸಿ ಚರ್ಮ ಸುಲಿದು ಚಪ್ಪಲಿ ಮಾಡಿಕೊಳ್ಳೋದು ಗೊತ್ತು ಶನಿದೇವರಿಗೆ" ಅಂತಾರೆ "ಜಂಗಮವಾಣಿ"ಯ ಸಾಮೇರು.
ಯಾವುದಕ್ಕೂ ಶನಿಪ್ರಭಾವದಿಂದ ಪಾರಾದ ಕನ್ಯಾ ರಾಶಿಯವರು ಖುಷಿ ಪಡಬೇಕಾದ ವಿಷಯವೆಂದರೆ, ಇನ್ನು ಸಾಹೇಬರು ಸಾಡೇಸಾತಿಯಾಗಿ ಬರುವುದು ಮುಂದಿನ 30 ವರ್ಷಗಳ ನಂತರವೇ. ಅಲ್ಲಿಯವರೆಗೂ ಚಿಂತೆಯಿಲ್ಲ ನೆಮ್ಮದಿಯಿಂದಿರಬಹುದು. [ಪಾರದರ್ಶಕ ವ್ಯಕ್ತಿತ್ವದ ಚಿತ್ತಾ ನಕ್ಷತ್ರದವರು]
ಶ್ರಮಕ್ಕೆ ತಕ್ಕ ಫಲ ಸಿಗಲಿದೆ : ಈ ವರ್ಷ ಗುರುವು ಕನ್ಯಾ ರಾಶಿಯವರಿಗೆ ಭಾರಿ ಲಾಭಕರನಾಗಿದ್ದಾನೆ. ಇದು ಜುಲೈ ಮಧ್ಯ ಭಾಗದವರೆಗೂ ಫಲ ನೀಡುವುದರಿಂದ ಹೊಸ ಉದ್ಯೋಗಕ್ಕೆ ಪ್ರಯತ್ನಿಸುವವರು ಯಶಸ್ಸು ಹೊಂದುತ್ತಾರೆ. ಇದ್ದ ಉದ್ಯೋಗದಲ್ಲಿ ಭಡ್ತಿ ಸಿಗುತ್ತದೆ. ಕೆಲಸದಲ್ಲಿನ ಶ್ರಮಕ್ಕೆ ತಕ್ಕ ಪ್ರತಿಫಲ, ಹೊಗಳಿಕೆಯ ಸುರಿಮಳೆಯಾಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುತ್ತದೆ. ಹೇಗೆಂದರೆ, ಹೊಸ ಯೋಚನೆಗಳು ಹೊಳೆದು ಅದರಿಂದ ದುಡಿಮೆ ಮಾಡಿಕೊಳ್ಳಬಹುದು.
ಏಕೆಂದರೆ, ಈಗಾಗಲೇ ಜೀವನದ ಪಾಠವನ್ನು ಸಾಡೇಸಾತಿಯಲ್ಲಿ ಕಲಿತಿರುವುದರಿಂದ ಕನ್ಯಾ ರಾಶಿಯವರು ಪರಿಪಕ್ವವಾಗಿದ್ದಾರೆ. ಕಲಿತಿರದವರಿಗೆ ದರಿದ್ರ ಬಿಟ್ಟಿಲ್ಲ ಎನ್ನಬಹುದು. ಆದವರು ತಮ್ಮ ಅಭಿಪ್ರಾಯ ತಿಳಿಸಬಹುದು ಎಲ್ಲರಿಗೂ ಮರೆಯದೆ. ಕಂಕಣ ಮತ್ತು ಸಂತಾನ ಭಾಗ್ಯದ ಯೋಗವೀಗ ಬಂದಿದೆ. ಬಯಸಿದಂತೆಯೇ ಎಲ್ಲವನ್ನೂ ಖರೀದಿ ಮಾಡುವ ಸುಯೋಗ ಕೂಡ ಒಲಿದು ವಕ್ಕರಿಸಿಕೊಂಡು ಬಂದಿದೆ. ಆದರೆ ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಇದನ್ನು ಹೇಳುವ ಅವಶ್ಯಕತೆಯಿಲ್ಲವಾದರೂ ಹಣದ ಬೆಲೆ ಈಗಾಗಲೇ ಗೊತ್ತಾಗಿರುತ್ತದೆ.
ಸೂರಿಗಾಗಿ ಗುದ್ದಾಡಿದವರು ಈಗ ನೆರಳು ಮಾಡಿಕೊಳ್ಳಬಹುದು. ಏನೇ ಮಾಡಿದರೂ ಯಶಸ್ಸು ಸಿಗುವುದರಿಂದ ಮುಖ್ಯವಾದ ಕೆಲಸಗಳನ್ನು ಆದಷ್ಟು ಬೇಗ ಮಾಡಿಕೊಂಡು ಜೀವನವನ್ನು ಸದೃಢಗೊಳಿಸಿಕೊಳ್ಳುವ ಸಮಯವಿದು. ಆರೋಗ್ಯದ ಸಮಸ್ಯೆಗಳು ಮಂಗಮಾಯವಾಗುತ್ತವೆ. ಇದೇನು? ಇಷ್ಟು ದಿನ ಇದ್ದ ನೋವು ಈಗೆಲ್ಲಿ ಹೋಯಿತು ಎಂದು ತಮ್ಮನ್ನೆ ತಾವೇ ಪ್ರಶ್ನಿಸಿಕೊಳ್ಳುವಷ್ಟು ಆರೋಗ್ಯವಂತರಾಗುತ್ತಾರೆ.
ಆದರೆ, ಜುಲೈ ನಂತರ ಜೀವನ ಸ್ವಲ್ಪ ಮಂದಗತಿಯಲ್ಲಿ ಸಾಗಲಾರಂಭಿಸುತ್ತದೆ. ಇದು ಮೊದಲೇ ಗೊತ್ತಾಗಿರುವುದರಿಂದ ಕನ್ಯಾ ರಾಶಿಯವರು ಅದರ ಬಗ್ಗೆ ಯೋಚಿಸಿ ಆ ಸಮಯದಲ್ಲಿ ಜಾಗೃತರಾಗಿದ್ದುಕೊಂಡು ಮುಂದಿನ ದಿನಗಳ ಬಗ್ಗೆ ಈಗಲೇ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಆ ಸಮಯದಲ್ಲಿ ಆರೋಗ್ಯದಲ್ಲಿ ತೊಂದರೆ ಕಂಡು ಬರಬಹುದು ಅಥವಾ ಕುಟುಂಬದವರೊಂದಿಗೆ ಸೊಕ್ಕಿನಿಂದ ಮಾಡಿದ ತಪ್ಪಿಗೆ ವೈಮನಸ್ಸು ಅನುಭವಿಸಬೇಕಾಗಬಹುದು. ಆದ್ದರಿಂದ ಹುಷಾರಾಗಿರುವುದು ಆದ್ಯ ಕರ್ತವ್ಯ.
ದುಷ್ಟತನ ದುರ್ಬುದ್ಧಿ ಬಿಟ್ಟುಬಿಡಿ : ಗುರುಫಲವಿದಾದರೆ, ಶನಿಫಲ ಮಾತ್ರ ತುಂಬಾ ಚೆನ್ನಾಗಿದೆ ಇವರಿಗೆ. ಮೊದಲೇ ಹಿಗ್ಗಾಮುಗ್ಗಾ ನುಗ್ಗು ಮಾಡಿರುವ ಶನಿದೇವನ ಹೆಸರೇಳಿದರೆ ಸಾಕು ಕನ್ಯಾ ರಾಶಿಯವರು ಮೈಯೆಲ್ಲಾ ಬೆವರುತ್ತಾರೆ. ಆದರೆ ಈಗ ಬೆವರು ವರೆಸಿಕೊಂಡು ಎದೆಯುಬ್ಬಿಸಿ ಅಡ್ಡಾಡುವಂತೆ ಮಾಡುವವನು ಶನಿದೇವನೇ ನೆನಪಿರಲಿ.
ಅವನ ಹಿಡಿತದಲ್ಲಿ ಹೋಗಿದ್ದೆಲ್ಲವೂ ಮರಳಿ ದುಪ್ಪಟ್ಟು ಸಿಗುತ್ತದೀಗ. ಆದರೆ ಆಲಸ್ಯ, ಸೋಮಾರಿತನ ಬಿಟ್ಟು ಹೆಚ್ಚಿನ ಸಮಯ ಕೆಲಸ ಮಾಡಲಾರಂಭಿಸಬೇಕು. ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳಬೇಕು. ಕೆಲಸದಲ್ಲಿ ಹುರುಪಾಗಿರಬೇಕು. ಯಾರ್ಯಾರೋ ಬಂದು ಸಹಾಯ ಸಹಕಾರ ಮಾಡಬಹುದು. ಹೀಗಾಗಿ ಎಲ್ಲರೊಂದಿಗೂ ವಿಶ್ವಾಸ, ನಂಬಿಕೆ ಈಗ ಅತ್ಯವಶ್ಯ. ಎಲ್ಲ ಕಾಲಕೆಳಗೆ ಎಂಬಂತಿರುವ ಈ ಸಮಯದಲ್ಲಿ ದುಷ್ಟತನ ಮತ್ತು ದುರ್ಬುದ್ಧಿಯಿಂದಿರುವುದು ಮಾತ್ರ ಸಲ್ಲದು. ಸೊಕ್ಕು, ಸೆಡವು, ಕೋಪ, ತಾಪ ಈಗಾಗಲೇ ಬಿಟ್ಟೋಡಿಸಿದ್ದಾನೆ ಶನಿದೇವನು. ಈಗ ಅದರ ಬಳಕೆ ಮತ್ತೆ ಬೇಡ.
ಅಲ್ಪನಿಗೆ ಶ್ರೀಮಂತಿಕೆ ಬಂದರೆ---- ಎಂಬಂತೆ ಸಿರಿತನ ಬರುತ್ತಿದೆ, ಬಂದಿದೆ ಎಂದು ಕೊಬ್ಬಿಕೊಳ್ಳಬಾರದು ಈ ರಾಶಿಯವರು.
ಬಯಸದೆ ಬರಲಿದೆ ಭಾಗ್ಯ : ಇಷ್ಟೆಲ್ಲಾ ಶುಭಗಳಿದ್ದರೂ ಇನ್ನೂ ಹಲವಾರು ಶುಭಫಲಗಳಿವೆ ಅವುಗಳು ತಾನಾಗಿಯೇ ಅನುಭವಕ್ಕೆ ಬರಲಾರಂಭಿಸುತ್ತವೆ. ಹೇಗೆ ಕಷ್ಟಗಳು ಬಂದಿರುವುದು ಗೊತ್ತಾಗುವುದಿಲ್ಲವೋ ಶುಭಫಲಗಳು ಕೂಡ ತನ್ನಷ್ಟಕ್ಕೆ ತಾನಾಗಿಯೇ ಬರುವ ಸುಸಮಯವಿದು. ಹೇಗೆ ಕಹಿ ತಿಂದ ಮೇಲೆಯೆ ಸಿಹಿಯ ರುಚಿ ಅರ್ಥವಾಗುತ್ತದೆಯೋ ಅದೇ ರೀತಿ ಕನ್ಯಾ ರಾಶಿಯವರಿಗೀಗ ಜೀವನದ ಸಿಹಿ ರುಚಿಯನ್ನು ನೋಡುವ ಸಮಯ.
ಆದರೆ ರಾಹು-ಕೇತುಗಳು ಸ್ವಲ್ಪ ನಷ್ಟ ಮಾಡಲು ಬಂದರೂ ಶನಿದೇವನ ಮುಂದೆ ಅವರಾಟ ನಡೆಯೋದೂ ಇಲ್ಲ, ನಡೆಸಲು ಮಹಾತ್ಮನು ಬಿಡೋದು ಇಲ್ಲ. ಈಗ ಕನ್ಯಾ ರಾಶಿಯವರೇ ಅವರ ವಿರೋಧಿಗಳಿಗೆ ಶನಿಯಾಗಲಿದ್ದಾರೆ. ಶನಿಬಲವಿದೆಯೆಂದು ಈ ರಾಶಿಯವರು ಆಗದವರಿಗೆ ಶನಿಯಂತೆ ಮಾತ್ರ ಕಾಡಬೇಡಿ. ಕಾಡಲು ಶನಿದೇವನಿದ್ದಾನೆ. ನೀವ್ಯಾಕೆ "ಶನಿ ಗಂಟು ಬಿದ್ದಂಗೆ ಬೆನ್ನು ಬಿದ್ದನಲ್ಲಪ್ಪಾ" ಎನ್ನಿಸಿಕೊಳ್ಳಬೇಕು? ದಯವಿಟ್ಟು ಬೇಡ. ಒಂಥರಾ ಫಿನಿಕ್ಸ್ ಹಕ್ಕಿಯಂತೆ ಪುಟಿದೇಳುವ ಈ ಸಮಯದಲ್ಲಿ ಉತ್ಸಾಹದಿಂದ ಜೀವನದ ಬಂಡಿ ಓಡಿಸಿ ಶನಿಯಿದ್ದಾನೆ ಬೆನ್ನ ಹಿಂದೆ.
ಇನ್ನು, ಮತ್ತೊಬ್ಬರ ಬಗ್ಗೆ ಅತೀ ಹೆಚ್ಚು ತಲೆ ಕೆಡಿಸಿಕೊಳ್ಳುವ ಕೆಲ ದುರ್ಗುಣಗಳನ್ನು ಈ ಸಮಯದಲ್ಲಿ ಬಿಡಬೇಕು. ಅಲ್ಲದೇ ಆಗತ್ತೋ ಇಲ್ಲವೋ ಎಂಬ ನೆಗೆಟಿವ್ ಥಿಂಕಿಂಗ್ಗೆ ಈಗ ಬೈಬೈ ಹೇಳಿ. ಎಲ್ಲವೂ ಆಗುತ್ತದೆ ಎಂಬ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. ಪ್ರತಿಯೊಂದನ್ನೂ ವ್ಯವಹಾರದ ದೃಷ್ಟಿಯಿಂದ ನೋಡುವುದನ್ನು ಕಮ್ಮಿ ಮಾಡಿಕೊಂಡು ಚುರುಕನ್ನು ಹೆಚ್ಚಿಸಿಕೊಳ್ಳಿ.
ಆಗದವರೊಂದಿಗೆ ಕರುಣೆಯಿಂದ ಸಂಧಾನ ಮಾಡಿಕೊಳ್ಳುವ ನಿಮ್ಮ ಗುಣ ಕೆಲವರಿಗೆ ಮೆಚ್ಚುಗೆಯಾಗಬಹುದು. ಆದರೆ ಮೆಚ್ಚುಗೆ ಸಿಗುತ್ತದೆ ಎಂದು ದುರುಳರನ್ನು ಹತ್ತಿರ ಸೇರಿಸಬೇಡಿ. ಒದ್ದೋಡಿಸಿ "ಇಷ್ಟು ದಿನ ಎಲ್ಲಿದ್ದೀಲೇ" ಎಂದು. ಏಕೆಂದರೆ ಈ ಹಿಂದೆ ಶನಿಕಾಟದಲ್ಲಿ ಯಾರ್ಯಾರು ಏನೇನು ಅಂದಿದ್ದರು, ಏನೇನು ಮಾಡಿದ್ದರು ಎಂಬುದನ್ನು ಪಟ್ಟಿ ಮಾಡಿಕೊಂಡು ಅವರಿಂದ ದೂರವಿದ್ದರೆ ನಿಮಗೇ ಒಳ್ಳೇದು. ಇಲ್ಲಾಂದ್ರೆ ಬಂದಿರುವ ಈ ಅದೃಷ್ಟದ ದಿನಗಳನ್ನು ಅವರೇ ಹಾಳು ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡು ಸೂಕ್ಷ್ಮವಾಗಿರಬೇಕು.
ಯಾವ ದಿನ ಶುಭಕರ : ಈ ಸಮಯದಲ್ಲಿ ಹಸಿರು, ಹಳದಿ ಬಣ್ಣದ ವಸ್ತ್ರ ಮತ್ತು ವಸ್ತುಗಳನ್ನು ಹೆಚ್ಚಿಗೆ ಬಳಸಿ ಸಾಧ್ಯವಿದ್ದರೆ. 5, 14, 23ನೇ ತಾರೀಖಿನ ದಿನಗಳಂದು ಹೊಸ ಯೋಜನೆಗಳನ್ನು ಆರಂಭಿಸಿದರೆ ನಿಮಗೆ ಶುಭ. ಸೋಮವಾರ ಮತ್ತು ಬುಧವಾರಗಳಂದು ನಿಮ್ಮ ಹೆಚ್ಚಿನ ಕೆಲಸಗಳಿಗೆ ಯಶಸ್ಸು ಸಿಗುತ್ತದೆ. ಪ್ರಯತ್ನಿಸಿ ನೋಡಿ. 2, 3, 5, 6, 7 ಅಂಕಿಗಳು ಶುಭಕರ ನಿಮಗೆ. ನಂಬುವವರು ಇದನ್ನೂ ಪರೀಕ್ಷಿಸಬಹುದು. ಗಣಪನ ಆರಾಧನೆಯಿಂದ ನಿಮಗಾಗುವ ಖುಷಿ ಅಷ್ಟಿಷ್ಟಲ್ಲ ಆದ್ದರಿಂದ ಅವನಿಗೆ ಶರಣೆನ್ನಿರಿ ಪ್ರತಿನಿತ್ಯವೂ.
ಮೇಷ, ಮಿಥುನ ಮತ್ತು ಸಿಂಹ ರಾಶಿಯವರು ನಿಮಗೆ ಸಹಾಯ ಮಾಡುವರು ಏನನ್ನೂ ಆಪೇಕ್ಷಿಸದೇ. ನೀವೂ ಕೂಡ ಇವರಿಗೆ ಸಹಾಯ ಮಾಡುತ್ತಿರುತ್ತೀರಿ. ಆದರೆ ಕರ್ಕ ರಾಶಿಯವರಿಗೆ ಮತ್ತು ನಿಮಗೆ ಆಗಿ ಬರಾಕಿಲ್ಲ. ಅವರಿಂದ ನೀವು ಹುಷಾರಾಗಿರಿ ನಿಮ್ಮಿಂದ ಅವರಿಗೆ ಹುಷಾರಾಗಿರಲು ಎಚ್ಚರಿಕೆ ಕೊಡಿ.
ಈ ಸುವರ್ಷದಲ್ಲಿ ಆರೋಗ್ಯ ಸದೃಢವಾಗಿಟ್ಟುಕೊಳ್ಳಲು ಪ್ರತಿನಿತ್ಯ ಒಂದು ಗಂಟೆ ವ್ಯಾಯಾಮಕ್ಕೆಂದು ಮೀಸಲಿಡಿ. ದೈವಾರಾಧನೆಯನ್ನೂ ಬಿಡಂಗಿಲ್ಲ. ಈ ವರ್ಷ ಓಡುವ ಕುದುರೆಯಾಗಿರುವ ಕನ್ಯಾ ರಾಶಿಯವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.