2015 ವರ್ಷ ಭವಿಷ್ಯ : ಸಿಂಹ ರಾಶಿಗೆ ಪಾಠ ಕಲಿಯುವ ವರ್ಷ
ಮಘಾ, ಪೂರ್ವಫಾಲ್ಗುಣಿ, ಉತ್ತರಾಫಾಲ್ಗುಣಿ ನಕ್ಷತ್ರದ 1ನೇ ಚರಣದಲ್ಲಿ ಜನಿಸಿದವರದು ಸಿಂಹ ರಾಶಿ. ಈ ರಾಶಿಯವರಿಗೆ ಮ, ಮಿ, ಮು, ಮೆ, ಮಾ, ಟ, ಟಿ, ಟು, ಟೆ ಎಂಬ ಮೊದಲಕ್ಷರದಲ್ಲಿ ಜನ್ಮನಾಮ ಬರುತ್ತದೆ.
ಈ ರಾಶಿಯವರಿಗೆ 2015ನೇ ಹೊಸ ವರ್ಷವು ಹೊಸ ಭರವಸೆ ಏನೂ ತರುವುದಿಲ್ಲ. ಏಕೆಂದರೆ ಎಲ್ಲರೂ ವಕ್ಕರಿಸಿಕೊಂಡೇ ಬಂದಿದ್ದಾರೆ ಎನ್ನಬಹುದು. ಆದರೆ, ಒಂಥರಾ ಪಾಠ ಕಲಿಯುವ ವರ್ಷವಿದೆನ್ನಬಹುದು. "ಕೆಟ್ಟ ಮೇಲೆ ಬುದ್ಧಿ ಬಂತು" ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ ಸಿಂಹ ರಾಶಿಯವರೀಗ. ಏಕೆಂದರೆ ಇಷ್ಟು ದಿನ ಶನಿಬಲವಿತ್ತು. ಬಲ ನೀಡಿ ಹೋದ ಶನಿ ಮತ್ತೆ ಕೈ ಹಿಡಿಯಲ್ಲ. ಇದ್ದಬದ್ದದ್ದನ್ನು ಉಳಿಸಿಕೊಳ್ಳಲು ಗುದ್ದಾಡುವ ವರ್ಷವಿದು. ಭಾಗ್ಯಬಲಕ್ಕೆ ಬಲವಿಲ್ಲ ನಿಮಗೆ.
ಅಲ್ಲಾ ಸಾಮೀ, "ನಿಮ್ದುಕೆ ದೇವ್ರುಗೆ ನಿಮ್ದು ಜನಾನೇ ಬೈಯ್ತಾರೆ" ಎನ್ನುವವರಿಗೆ, "ನಿಮ್ದುಕೆ ದೇವ್ರುಗೆ ಬೈದರೆ ಅವ್ರುದುಕೆ ನಿಮ್ದು ಜನಾ ಕತ್ತರಿಸಿ ಖೀಮಾ ಮಾಡ್ತಾರೆ ಅಂತಾ ಗೊತ್ತು ತಮ್ಯಾ" ಅಂತಾರೆ ಸಾಮೇರು. ಇರಲಿ, ಅಂಗಿಂಗೆ ಅಂದ್ರವದು ಅವ್ರುದುಕೆ ಹೋಗತ್ತೆ. ಹೋದರೆ ಹೋಗ್ಲಿ ಬುಡಿ.
ಶಿಸ್ತುಬದ್ಧ ಜೀವನ ಮೂಲ ಮಂತ್ರವಾಗಲಿ : ಅವರಿವರ ಮಾತು ಕೇಳಿ ಸಿಂಹ ರಾಶಿಯವರು ಧೃತಿಗೆಡದೆ ಧೈರ್ಯವಾಗಿರಬೇಕು. ಈ ಹಿಂದಿನ ಮೂರು ವರ್ಷಗಳಂತೆ ಬದುಕಲು ಹೋದರೆ ಸ್ವಲ್ಪ ಪೆಟ್ಟೇ ಜಾಸ್ತಿ. ಅದಕ್ಕಾಗಿ ಬುದ್ಧಿವಂತರಾಗಿ ಸಂಪೂರ್ಣ ಬದಲಾಗಬೇಕು. ಜೀವನಶೈಲಿಯಲ್ಲೂ ಮತ್ತು ಗುಣಗಳಲ್ಲೂ. ರಾಜರಂತಿದ್ದವರು ಈಗ ರಂಕರಾಗಬಹುದು ಎಚ್ಚರಿಕೆಯಿಂದ ಜೀವನ ನಡೆಸಿಕೊಂಡು ಹೋಗಬೇಕು.
ಸಿಂಹ ರಾಶಿಯವರು ಬೇರೆಯವರ ಎದುರಿಗಿದ್ದರೆಂದರೆ ಅವರ ಕಣ್ಣಿನ ನೋಟದಲ್ಲೇ ಅವರ ಮನಸ್ಸಿನಲ್ಲಿರುವುದನ್ನು ಅರ್ಥ ಮಾಡಿಕೊಳ್ಳುವಂಥ ಚಾಣಾಕ್ಷರು. ಗಿಲ್ಟ್ ಮಾಡೋಕೆ ಬರೋದಿಲ್ಲ ಇವರಿಗೆ. ['ಸಿಂಹಾ'ಸನದ ಅದೃಷ್ಟವಿರುವ ಮಘಾ ನಕ್ಷತ್ರ!]
ಆಸ್ತಿಗೆ ಸಂಬಂಧಪಟ್ಟಂತೆ ಏನಾದರೂ ಕಿರಿಕಿರಿಗಳಿದ್ದರೆ ನ್ಯಾಯಾಲಯಗಳಲ್ಲೇ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ನೀವೇ ಧೈರ್ಯವಿದೆಯೆಂದುಕೊಂಡು ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳಬಾರದು. ಮನೆಯವರೊಂದಿಗೆ ಸಾಧ್ಯವಾದಷ್ಟು ಹೊಂದಾಣಿಕೆಯಿಂದ ಇರಲು ಪ್ರಯತ್ನಿಸಿ. ಮನೆಯವರ ಮಾತು ಕೇಳುತ್ತಲಿದ್ದರೆ ಮನೆಯಲ್ಲಿ ಜಗಳವೇ ಹುಟ್ಟುವುದಿಲ್ಲ ಎಂಬ ಮಾತು ಗೊತ್ತಿರಲಿ. [ಹೆಂಡತಿ ಮಾತು ಕೇಳೋದು ತಪ್ಪಲ್ಲ ಕಣ್ರೀ]
ನೆನಪಿಡಿ, ಆರೋಗ್ಯವೇ ಭಾಗ್ಯ : ಮನೆಯ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ನಿರಂತರ ವಹಿಸಿಕೊಳ್ಳುತ್ತಿರಬೇಕು. ಮಕ್ಕಳ ಬಗ್ಗೆ ನಿಷ್ಕಾಳಜಿ ಮಾಡಬಾರದು. ಸಿಗುತ್ತದೆಯೆಂದು ಸಾಲ ಪಡೆದುಕೊಳ್ಳಬಾರದು. ಅತೀ ಅವಶ್ಯವೆಂದರೆ ಮಾತ್ರ ಸಾಲಕ್ಕೆ ಮೊರೆ ಹೋಗಬಹುದು. ಹೊತ್ತಿಗೆ ಸರಿಯಾಗಿ ಊಟ, ನಿದ್ರೆ ಮಾಡುತ್ತಲಿದ್ದರೆ ಹೊಟ್ಟೆಗೆ ಸಂಬಂಧಪಟ್ಟಂತೆ ಬರುವ ರೋಗಗಳನ್ನು ತಡೆಗಟ್ಟಬಹುದು.
ಐಷಾರಾಮಿ ಜೀವನಕ್ಕೆ ಈ ವರ್ಷ ಇತಿಶ್ರೀ ಹಾಡಬೇಕು. ಕೆಲ ಕೆಟ್ಟವರು ಹುರಿದುಂಬಿಸಿ ಬೆನ್ನು ಬಿದ್ದು ಮೋಜಿನ ಜೀವನದ ರುಚಿ ನೋಡೋಣ ಎನ್ನುತ್ತಿರುತ್ತಾರೆ. ಅಂಥವರನ್ನು ಸಿಂಹದಂತೆ ಘರ್ಜಿಸಿ ಓಡಿಸಿ. ಬಡವ ಮತ್ತು ಕೆಳವರ್ಗದವರನ್ನು ಕೀಳಾಗಿ ಕಾಣದೇ ಅವರೂ ಮನಷ್ಯರು ಅವರಲ್ಲಿಯೂ ನಮ್ಮಂತೆಯ ರಕ್ತ, ಮಾಂಸವಿದೆ ಎಂದು ಅರಿತುಕೊಂಡು ಅವರಿಗೆ ಅವಮರ್ಯಾದೆ ಮಾಡಬೇಡಿ.
ಬೇರೆ ಸ್ಥಳದಲ್ಲಿ ಕೆಲಸ ಮಾಡುವ ಶಿಕ್ಷೆ ಬಂದರೆ, ಅದನ್ನು ಶಿಕ್ಷೆಯೆಂದುಕೊಳ್ಳದೆ ಅವಕಾಶವೆಂದು ಬಳಸಿಕೊಳ್ಳಿ. ಕೋಪ-ತಾಪಕ್ಕೆ ಗುಡಬೈ ಹೇಳದಿದ್ದರೆ ಗಲ್ಲ ಉಬ್ಬಬಹುದು ಎಚ್ಚರಿಕೆಯಿರಲಿ. ಖರ್ಚಿನ ಹಿಡಿತವನ್ನು ಮಾಡಲೇಬೇಕು. ಒಂಥರಾ "ಕಾಸ್ಟ್ ಕಟಿಂಗ್ನಂಗೆ" ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಈ ವರ್ಷ. ಅಮವಾಸ್ಯೆ ಮತ್ತು ಶನಿವಾರಗಳಂದು ವಾಹನಗಳಲ್ಲಿ ಓಡಾಡುವಾಗ ಮತ್ತು ಓಡಿಸುವಾಗ ಮೈಮೇಲೆ ಎಚ್ಚರವಿರಲಿ.
ಸಾಮೇರು ಹೇಳೋದು "ಜಂಗಮವಾಣಿ" ಎಂಬುದು ನೆನಪಿಟ್ಟುಕೊಂಡು ಗುರುಬಲ ಮತ್ತು ಶನಿಬಲ ಎರಡೂ ಇಲ್ಲ ಎಂಬುದು ತಿಳಿದುಕೊಳ್ಳುವುದು ಉತ್ತಮ ಸಿಂಹರಾಶಿಯವರು.
ಶುಭ ದಿನಗಳು ಯಾವುವು? : ಆದರೂ ಯಶಸ್ಸಿನ ಮೆಟ್ಟಿಲು ಹತ್ತಬೇಕೆನ್ನುವವರು ಇಳಿಯಬೇಕಾಗಿಲ್ಲ ಪ್ರಯತ್ನಿಸುತ್ತಲೇ ಇರಬೇಕು. ಆದಷ್ಟು ಕೇಸರಿ, ಕೆಂಪು, ಗುಲಾಬಿ ಬಣ್ಣದ ವಸ್ತು ಮತ್ತು ವಸ್ತ್ರಗಳನ್ನು ಧರಿಸುವುದು ಸೂಕ್ತ. 1, 10, 19, 28 ನೇ ತಾರೀಖಿನ ದಿನಗಳಂದು ಮುಖ್ಯವಾದ ಕೆಲಸಕ್ಕೆ ಮುಂದಾಗಿ. ಬುಧವಾರ ಮತ್ತು ರವಿವಾರ ನೀವು ಖುಷಿ ಇರುವ ದಿನಗಳು. ಈ ದಿನಗಳಲ್ಲಿ ಕೆಲಸವಿದ್ದವರಲ್ಲಿ ಭೇಟಿಯಾಗಿ. ನನಗೆ ಒಳ್ಳೆಯ ಅಂಕಿ-ಸಂಖ್ಯೆ ಕೊಡಿ ಎನ್ನುವವರಿಗೆ 1, 5, 9 ಎನ್ನಬಹುದು.
ಮೇಷ, ಮಿಥುನ ಮತ್ತು ಕನ್ಯಾ ರಾಶಿಯವರು ನಿಮಗೆ ಸಹಾಯ ಮತ್ತು ಸಹಕಾರ ನೀಡುತ್ತಾರೆ. ನಿಮ್ಮ ಒಡನಾಟವೂ ಈ ರಾಶಿಯವರೊಂದಿಗೇನೆ ಜಾಸ್ತಿ ಇರುತ್ತದೆ. ಆದರೆ ವೃಷಭ, ತುಲಾ ಮತ್ತು ಕುಂಭ ರಾಶಿಯವರಿಗೆ ಮತ್ತು ನಿಮಗೆ ಹೊಂದಾಣಿಕೆ ಆಗಲ್ಲ. ನಿಮಗನಿಸುತ್ತಿರುತ್ತದೆ ಯಾಕೋ ಅವರಗೂ ನನಗೂ ಆಗಿ ಬರಾಕಿಲ್ಲ ಎಂದು. ಅದಕ್ಕೆ ಇದೇ ಕಾರಣ.
ಸೊಕ್ಕು, ಅಹಂಕಾರ, ಅತಿಯಾದ ಆತ್ಮವಿಶ್ವಾಶ ನಿಮ್ಮಲ್ಲಿರುವ ಕೆಲವೊಂದು ಅವಗುಣಗಳು ಇವುಗಳನ್ನು ಹಿಡಿತಕ್ಕೆ ತಂದುಕೊಳ್ಳಿ. ಯಾಕೆಂದರೆ ಎಲ್ಲರೊಂದಿಗೂ ಸ್ನೇಹದಿಂದಿದ್ದು ಕೈಲಾದ ಸಹಾಯ ಮಾಡುವ ನಿಮ್ಮ ಗುಣ ಮತ್ತು ನಿಮ್ಮ ಉತ್ತಮ ಚಟುವಟಿಕೆಗಳಿಗೆ ತೊಂದರೆ ಬರುತ್ತದೆ ನಿಮ್ಮ ಕೆಲ ಅವಗುಣಗಳಿಂದ ನೆನಪಿರಲಿ.
ಬೇಕಾಬಿಟ್ಟಿ ಹಣ ಹೂಡಿಕೆ ಬೇಡ : ಸಾಧ್ಯವಾದರೆ ಶನಿಶಾಂತಿ ಮತ್ತು ಗುರುಶಾಂತಿ ಮಾಡಿಸಿ ಸುಖ, ಶಾಂತಿ, ನೆಮ್ಮದಿ ಬೇಕಿದ್ದರೆ. ಬೇಕಾಬಿಟ್ಟಿ ಹಣ ಹೂಡಿಕೆ ಈ ವರ್ಷ ಬೇಡ. ನಂಬಿಕೆ ಬಂದ ಮೇಲೆಯೇ ಹಣ ಹಾಕಿ ಅಂದರೆ ಮಾತ್ರ ಲಾಭ ಬರುತ್ತದೆ. ಇಲ್ಲಾಂದ್ರೆ ಅಸಲೂ ಇಲ್ಲ ಫಸಲೂ ಇಲ್ಲ ಎನ್ನುವಂತಾಗಿ ಗೊಣಕಿಕೊಳ್ಳಬೇಡಿ.
ಪ್ರತಿನಿತ್ಯ ಸೂರ್ಯನಮಸ್ಕಾರ ಮಾಡುವುದು ದೈನಂದಿನ ಚಟುವಟಿಕೆಯಾಗಿರಲಿ. ಸ್ವಲ್ಪ ಕ್ರೂರತನವಿದ್ದರೆ ಕಮ್ಮಿ ಮಾಡಿಕೊಂಡು ಶಂಭೋಲಿಂಗನಾರಾಧನೆ ಮಾಡುವುದು ಶುಭಕರ ನಿಮಗೆ.
ಹೊಸ ವರ್ಷವು ಸಿಂಹ ರಾಶಿಯವರಿಗೆ ನಿಂತ ನೀರಿದ್ದಂಗೆ. ಆದರೂ ಜೀವನದ ಬಂಡಿ ಸಾಗಿಸಲೇಬೇಕಿರುವುದರಿಂದ ಧೈರ್ಯದಿಂದ ಹೊಸ ವರ್ಷ ಸ್ವಾಗತಿಸಿ, ಆರಂಭಿಸಿ. ಹೊಸ ವರ್ಷದ ಶುಭಾಶಯಗಳೊಂದಿಗೆ ಶುಭವಾಗಲಿ ನಿಮಗೆ.